المختصر المفيد للمسلم
ಮುಸಲ್ಮಾನರಿಗೆ ಸಂಕ್ಷಿಪ್ತ ಹಾಗೂ ಉಪಯುಕ್ತ ಕೈಪಿಡಿ
ಮುಸಲ್ಮಾನರಿಗೆ ಸಂಕ್ಷಿಪ್ತ ಹಾಗೂ ಉಪಯುಕ್ತ ಕೈಪಿಡಿ
ಪರಮ ದಯಾಮಯನೂ ಕರುಣಾಮಯಿಯೂ ಆದ ಅಲ್ಲಾಹನ ನಾಮದಿಂದ
ಮುನ್ನುಡಿ
ಸರ್ವಸ್ತುತಿಗಳು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಮೀಸಲು. ಪ್ರವಾದಿ ಮತ್ತು ಪೈಗಂಬರರಲ್ಲಿ ಸರ್ವಶ್ರೇಷ್ಠರಾದ ನಮ್ಮ ಪ್ರವಾದಿ ಮುಹಮ್ಮದ್(ಸ)ರ ಮೇಲೆ, ಅವರ ಕುಟುಂಬದ ಮೇಲೆ ಮತ್ತು ಅವರ ಸಹಚರರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ.
ಮುಂದುವರಿದು ಹೇಳುವುದೇನೆಂದರೆ:
ಮಾನವನಿಗೆ ಇಸ್ಲಾಮ್ ಧರ್ಮವನ್ನು ದಯಪಾಲಿಸಿ, ಅದರ ಮೇಲೆ ಅವನನ್ನು ದೃಢವಾಗಿ ನಿಲ್ಲಿಸಿ, ಅದರ ನಿಯಮ ಮತ್ತು ಕಾನೂನುಗಳಂತೆ ಜೀವಿಸಲು ಅವನಿಗೆ ಅನುವು ಮಾಡಿಕೊಟ್ಟಿರುವುದು ಅಲ್ಲಾಹು ಮಾನವನಿಗೆ ನೀಡಿದ ಅತಿದೊಡ್ಡ ಅನುಗ್ರಹವಾಗಿದೆ. ಗಾತ್ರದಲ್ಲಿ ಚಿಕ್ಕದಾದರೂ, ಇಸ್ಲಾಮ್ ಧರ್ಮದ ಎಲ್ಲಾ ಪ್ರಮುಖ ವಿಷಯಗಳನ್ನು ಒಳಗೊಂಡಿರುವ ಈ ಪುಸ್ತಕದ ಮೂಲಕ ಮುಸಲ್ಮಾನನು ತನ್ನ ಧರ್ಮದ ಮೂಲಭೂತ ವಿಷಯಗಳನ್ನು ಕಲಿಯಬಹುದು. ಇದರ ಮೂಲಕ ಮುಸಲ್ಮಾನನು ತನ್ನ ಸಂರಕ್ಷಕನ (ಅಲ್ಲಾಹನ) ಬಗ್ಗೆ, ಇಸ್ಲಾಮ್ ಧರ್ಮದ ಬಗ್ಗೆ ಹಾಗೂ ಪ್ರವಾದಿ ಮುಹಮ್ಮದ್(ﷺ)ರ ಬಗ್ಗೆ ತಿಳುವಳಿಕೆಯನ್ನು ಪಡೆದು, ಜ್ಞಾನ ಮತ್ತು ಒಳದೃಷ್ಟಿಯಿಂದ ಅಲ್ಲಾಹನನ್ನು ಆರಾಧಿಸಬಹುದು.
ಮಾನವ ಸೃಷ್ಟಿಯ ಉದ್ದೇಶ:
ಸರ್ವಶಕ್ತನಾದ ಅಲ್ಲಾಹು ನಮ್ಮನ್ನು ಒಂದು ಮಹಾನ್ ಉದ್ದೇಶಕ್ಕಾಗಿ, ಅಂದರೆ ಅವನನ್ನು ಮಾತ್ರ ಆರಾಧಿಸುವುದಕ್ಕಾಗಿ ಸೃಷ್ಟಿಸಿದ್ದಾನೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನನ್ನು ಆರಾಧಿಸುವುದಕ್ಕಾಗಿಯೇ ವಿನಾ ನಾನು ಜಿನ್ನ್ ಮತ್ತು ಮನುಷ್ಯರನ್ನು ಸೃಷ್ಟಿಸಿಲ್ಲ." [ಅದ್ದಾರಿಯಾತ್: 56] ನನ್ನನ್ನು ಆರಾಧಿಸುವುದಕ್ಕಾಗಿ ಎಂದರೆ, ಅಲ್ಲಾಹನಿಗೆ ಯಾವುದೇ ಸಹಭಾಗಿಗಳನ್ನು ಏರ್ಪಡಿಸದೆ ಆರಾಧನೆಗಳನ್ನು ಅವನಿಗೆ ಮಾತ್ರ ಅರ್ಪಿಸುವುದಕ್ಕಾಗಿ. ಇಹಲೋಕದಲ್ಲಿ ನಾವು ಮಾಡುವ ಎಲ್ಲಾ ಕರ್ಮಗಳು ಮತ್ತು ನಮ್ಮ ಎಲ್ಲಾ ಗುರಿಗಳು ಈ ಮಹಾ ಉದ್ದೇಶದ ಚೌಕಟ್ಟಿನಲ್ಲಿರಬೇಕು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ನಾವು ನಿಮ್ಮನ್ನು ಉದ್ದೇಶರಹಿತವಾಗಿ ಸೃಷ್ಟಿಸಿದೆವು ಮತ್ತು ನೀವು ನಮ್ಮ ಬಳಿಗೆ ಮರಳಿ ಬರಲಾರಿರಿ ಎಂದು ನೀವು ಭಾವಿಸಿದ್ದೀರಾ? ಪರಮೋಚ್ಛ ಅಧಿಪತಿ ಮತ್ತು ಪರಮ ಸತ್ಯನಾದ ಅಲ್ಲಾಹು ಅತ್ಯುನ್ನತನು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಆದರಣೀಯ ಸಿಂಹಾಸನದ ಒಡೆಯನಾಗಿದ್ದಾನೆ.” [ಅಲ್-ಮುಅ್ಮಿನೂನ್:115-116]
ನನ್ನ ರಬ್ಬ್ ಅಲ್ಲಾಹು.
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: "ಓ ಮನುಷ್ಯರೇ! ನಿಮ್ಮನ್ನು ಮತ್ತು ನಿಮ್ಮ ಪೂರ್ವಜರನ್ನು ಸೃಷ್ಟಿಸಿದ ನಿಮ್ಮ ಪ್ರಭುವನ್ನು ಆರಾಧಿಸಿರಿ. ನೀವು ಭಯಭಕ್ತಿಯಿಂದ ಜೀವಿಸುವುದಕ್ಕಾಗಿ." [ಅಲ್-ಬಕರ: 21].
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಅವನೇ ಅಲ್ಲಾಹು! ಅವನ ಹೊರತು ಅನ್ಯ ಆರಾಧ್ಯರಿಲ್ಲ.” [ಅಲ್-ಹಶ್ರ್:22].
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: "ಅವನಿಗೆ ಸಮಾನವಾಗಿ ಯಾವ ವಸ್ತುವೂ ಇಲ್ಲ. ಅವನು ಎಲ್ಲವನ್ನು ಆಲಿಸುವವನು ಮತ್ತು ಎಲ್ಲವನ್ನು ವೀಕ್ಷಿಸುವವನಾಗಿದ್ದಾನೆ." [ಅಶ್ಶೂರಾ:11].
ಅಲ್ಲಾಹು ನನ್ನ ರಬ್ಬ್ (ಪ್ರಭು, ಪರಿಪಾಲಕ, ಯಜಮಾನ). ಅವನು ಪ್ರತಿಯೊಂದು ವಸ್ತುವಿನ ರಬ್ಬ್. ಅವನು ಎಲ್ಲದರ ಯಜಮಾನ, ಸೃಷ್ಟಿಕರ್ತ, ಜೀವನೋಪಾಯವನ್ನು ಒದಗಿಸುವಾತ ಮತ್ತು ಎಲ್ಲದರ ಕಾರ್ಯನಿರ್ವಾಹಕ.
ಆರಾಧನೆಗೆ ಅರ್ಹನಾಗಿರುವುದು ಅವನು ಮಾತ್ರ. ಅವನಲ್ಲದೆ ಬೇರೆ ರಬ್ಬ್ ಇಲ್ಲ. ಅವನಲ್ಲದೆ ಬೇರೆ ಆರಾಧ್ಯನಿಲ್ಲ.
ಅವನು ಸ್ವತಃ ತನಗಾಗಿ ದೃಢೀಕರಿಸಿದ ಮತ್ತು ಅವನ ಪ್ರವಾದಿ(ಸ) ಅವನಿಗಾಗಿ ದೃಢೀಕರಿಸಿದ ಅತಿ ಸುಂದರವಾದ ಹೆಸರುಗಳು ಮತ್ತು ಅತ್ಯುನ್ನತ ಗುಣಲಕ್ಷಣಗಳು ಅವನಿಗಿವೆ. ಆ ಹೆಸರುಗಳು ಮತ್ತು ಗುಣಲಕ್ಷಣಗಳು ಪರಿಪೂರ್ಣತೆ ಮತ್ತು ಸೌಂದರ್ಯದಲ್ಲಿ ಪರಮೋಚ್ಛವಾಗಿವೆ. ಅವನಿಗೆ ಹೋಲಿಕೆಯಾಗಿ ಯಾವ ವಸ್ತುವೂ ಇಲ್ಲ. ಅವನು ಎಲ್ಲವನ್ನು ಆಲಿಸುವವನು ಮತ್ತು ಎಲ್ಲವನ್ನು ವೀಕ್ಷಿಸುವವನಾಗಿದ್ದಾನೆ.
ಅವನ ಅತಿ ಸುಂದರ ಹೆಸರುಗಳಲ್ಲಿ ಕೆಲವು ಹೀಗಿವೆ:
ಅರ್ರಝ್ಝಾಕ್ (ಅತ್ಯಧಿಕವಾಗಿ ಮತ್ತು ನಿರಂತರವಾಗಿ ಆಹಾರವನ್ನು ಒದಗಿಸುವವನು), ಅರ್ರಹ್ಮಾನ್ (ಸಮಗ್ರವಾಗಿ ಕರುಣೆ ತೋರುವವನು), ಅಲ್-ಕದೀರ್ (ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು), ಅಲ್-ಮಲಿಕ್ (ಸರ್ವಾಧಿಪತಿ), ಅಸ್ಸಮೀಅ್ (ಎಲ್ಲವನ್ನೂ ಕೇಳುವವನು), ಅಸ್ಸಲಾಮ್ (ಸರ್ವ ನ್ಯೂನತೆಗಳಿಂದ ಸುರಕ್ಷಿತನು), ಅಲ್-ಬಸೀರ್ (ಎಲ್ಲವನ್ನೂ ನೋಡುವವನು), ಅಲ್-ವಕೀಲ್ (ಹೊಣೆ ವಹಿಸಿಕೊಂಡವನು), ಅಲ್-ಖಾಲಿಕ್ (ಸೃಷ್ಟಿಕರ್ತ), ಅಲ್ಲತೀಫ್ (ಅತ್ಯಧಿಕ ಅನುಕಂಪವುಳ್ಳವನು, ಸೂಕ್ಷ್ಮಗ್ರಾಹಿ), ಅಲ್-ಕಾಫಿ (ಪರ್ಯಾಪ್ತನು), ಅಲ್-ಗಫೂರ್ (ಅತ್ಯಧಿಕ ಕ್ಷಮಿಸುವವನು).
ಅರ್ರಝ್ಝಾಕ್: ಸೃಷ್ಟಿಗಳ ಆತ್ಮ ಮತ್ತು ದೇಹಕ್ಕೆ ಅಗತ್ಯವಾದ ಜೀವನಾಧಾರವನ್ನು ಒದಗಿಸುವವನು.
ಅರ್ರಹ್ಮಾನ್: ಎಲ್ಲಾ ವಸ್ತುಗಳನ್ನೂ ಆವರಿಸಿಕೊಳ್ಳುವ ರೀತಿಯಲ್ಲಿ ವಿಶಾಲ ಮತ್ತು ಅಪಾರ ಕರುಣೆಯನ್ನು ಹೊಂದಿರುವವನು.
ಅಲ್-ಕದೀರ್: ವೈಫಲ್ಯ ಅಥವಾ ಕ್ಷೀಣಕ್ಕೆ ಒಳಗಾಗದ ರೀತಿಯಲ್ಲಿ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿರುವವನು.
ಅಲ್-ಮಲಿಕ್: ಮಹಾತ್ಮೆ, ಸರ್ವಾಧಿಕಾರ ಮತ್ತು ಕಾರ್ಯನಿರ್ವಹಣೆಯ ಎಲ್ಲಾ ಗುಣಗಳನ್ನು ಹೊಂದಿರುವವನು. ಎಲ್ಲಾ ವಸ್ತುಗಳ ಒಡೆಯನು ಮತ್ತು ಅವುಗಳಲ್ಲಿ ತನ್ನಿಚ್ಛೆಯಂತೆ ವ್ಯವಹರಿಸುವವನು.
ಅಸ್ಸಮೀಅ್: ರಹಸ್ಯ ಮತ್ತು ಬಹಿರಂಗವಾಗಿರುವ ಎಲ್ಲಾ ಧ್ವನಿಗಳನ್ನು ಕೇಳುವವನು. ಮನುಷ್ಯರು ಮಾಡುವ ಪ್ರಾರ್ಥನೆ ಮತ್ತು ವಿನಮ್ರತೆಗಳನ್ನು ಕೇಳುವವನು.
ಅಸ್ಸಲಾಮ್: ಎಲ್ಲಾ ರೀತಿಯ ನ್ಯೂನತೆಗಳು ಮತ್ತು ಕುಂದು-ಕೊರತೆಗಳಿಂದ ಮುಕ್ತನಾಗಿರುವವನು.
ಅಲ್-ಬಸೀರ್: ಎಲ್ಲಾ ವಸ್ತುಗಳನ್ನು – ಅವು ಎಷ್ಟೇ ಸೂಕ್ಷ್ಮವಾಗಿದ್ದರೂ – ತನ್ನ ದೃಷ್ಟಿಯ ಮೂಲಕ ಆವರಿಸಿಕೊಂಡವನು. ಪ್ರತ್ಯಕ್ಷವಾಗಿರುವ ಮತ್ತು ಪರೋಕ್ಷವಾಗಿರುವ ಎಲ್ಲಾ ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸುವವನು.
ಅಲ್-ವಕೀಲ್: ಸೃಷ್ಟಿಗಳಿಗೆ ಜೀವನೋಪಾಯ ಒದಗಿಸುವ ಹೊಣೆಯನ್ನು ವಹಿಸಿಕೊಂಡು, ಅವುಗಳ ಯೋಗಕ್ಷೇಮವನ್ನು ನೋಡಿಕೊಳ್ಳುವವನು. ತನ್ನ ನಿಷ್ಠಾವಂತ ದಾಸರನ್ನು ಸಂರಕ್ಷಿಸುತ್ತಾ ಅವರಿಗೆ ಎಲ್ಲಾ ವಿಷಯಗಳನ್ನೂ ಸುಲಭಗೊಳಿಸುವವನು ಮತ್ತು ಎಲ್ಲಾ ವಿಷಯಗಳಲ್ಲೂ ಅವರನ್ನು ಸಂರಕ್ಷಿಸುವವನು.
ಅಲ್-ಖಾಲಿಕ್: ಯಾವುದೇ ಪೂರ್ವ ಮಾದರಿಯಿಲ್ಲದೆ ವಸ್ತುಗಳನ್ನು ಸೃಷ್ಟಿಸಿ ಅಸ್ತಿತ್ವಕ್ಕೆ ತರುವವನು.
ಅಲ್ಲತೀಫ್: ದಾಸರನ್ನು ಗೌರವಿಸುವವನು, ಅವರ ಮೇಲೆ ಕರುಣೆ ತೋರುವವನು ಮತ್ತು ಅವರ ಬೇಡಿಕೆಗಳನ್ನು ಈಡೇರಿಸುವವನು.
ಅಲ್-ಕಾಫೀ: ದಾಸರಿಗೆ ಅಗತ್ಯವಿರುವ ಎಲ್ಲವನ್ನೂ ಒದಗಿಸುವವನು. ಇತರರ ಅಗತ್ಯ ಬರದ ರೀತಿಯಲ್ಲಿ ಸೃಷ್ಟಿಗಳ ಎಲ್ಲಾ ಆವಶ್ಯಕತೆಗಳನ್ನು ನೆರವೇರಿಸಿಕೊಡುವವನು.
ಅಲ್-ಗಫೂರ್: ದಾಸರನ್ನು ಅವರು ಮಾಡುವ ಪಾಪಗಳ ಕೇಡಿನಿಂದ ರಕ್ಷಣೆ ನೀಡುವವನು ಮತ್ತು ಆ ಪಾಪಗಳ ಕಾರಣದಿಂದ ಅವರನ್ನು ಶಿಕ್ಷೆಗೆ ಗುರಿಯಾಗಿಸದವನು.
ನನ್ನ ಪ್ರವಾದಿ ಮುಹಮ್ಮದ್(ﷺ)
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಖಂಡಿತವಾಗಿಯೂ ನಿಮ್ಮ ಬಳಿ ನಿಮ್ಮಿಂದಲೇ ಒಬ್ಬ ಸಂದೇಶವಾಹಕರು ಬಂದಿದ್ದಾರೆ. ನೀವು ಕಷ್ಟಪಡುವುದು ಅವರಿಗೆ ಸಹಿಸಲಾಗುವುದಿಲ್ಲ. ಅವರು ನಿಮ್ಮ ಬಗ್ಗೆ ಅತ್ಯಂತ ಆಸಕ್ತಿಯನ್ನು ಹೊಂದಿದ್ದಾರೆ. ಅವರು ಸತ್ಯವಿಶ್ವಾಸಿಗಳೊಂದಿಗೆ ಅಪಾರ ದಯೆ ಮತ್ತು ಕರುಣೆಯುಳ್ಳವರಾಗಿದ್ದಾರೆ.” [ಅತ್ತೌಬಾ:128]
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: “ಸರ್ವಲೋಕದವರಿಗೆ ಒಂದು ದಯೆಯಾಗಿಯೇ ವಿನಾಃ ನಾವು ನಿಮ್ಮನ್ನು ಕಳುಹಿಸಿಲ್ಲ.” [ಅಲ್-ಅಂಬಿಯಾ: 107]
ಮುಹಮ್ಮದ್(ಸ) — ಕರುಣೆಯ ಪ್ರತಿಭಾನ್ವಿತ ಪ್ರವಾದಿ
ಅವರ ಹೆಸರು ಮುಹಮ್ಮದ್ ಬಿನ್ ಅಬ್ದುಲ್ಲಾಹ್ ಬಿನ್ ಅಬ್ದುಲ್ ಮುತ್ತಲಿಬ್ ಬಿನ್ ಹಾಶಿಮ್. ಹಾಶಿಮ್ ಕುರೈಶ್ ಬುಡಕಟ್ಟಿಗೆ ಸೇರಿದವರು. ಕುರೈಶ್ ಅರಬಿಗಳ ಪೈಕಿ ಸೇರಿದವರು.
ಅವರ ತಾಯಿ ಆಮಿನ ಬಿಂತ್ ವಹಬ್. ಅವರಿಗೆ ಎದೆ ಹಾಲುಣಿಸಿದವರು ಹಲೀಮ ಸಅದಿಯ್ಯ. ಪ್ರವಾದಿಯವರಿಗೆ ಹನ್ನೊಂದು ಪತ್ನಿಯರಿದ್ದು, ಅವರ ಮರಣದ ವೇಳೆ ಒಂಬತ್ತು ಪತ್ನಿಯರು ಜೀವಂತವಾಗಿದ್ದರು.
ಪ್ರವಾದಿ(ಸ)ರಿಗೆ ಏಳು ಮಕ್ಕಳು. ಮೂರು ಗಂಡು ಮತ್ತು ನಾಲ್ಕು ಹೆಣ್ಣು. ಗಂಡು ಮಕ್ಕಳು: ಖಾಸಿಮ್, ಅಬ್ದುಲ್ಲಾಹ್ ಮತ್ತು ಇಬ್ರಾಹೀಮ್. ಹೆಣ್ಣು ಮಕ್ಕಳು: ಝೈನಬ್, ರುಕಯ್ಯ, ಉಮ್ಮು ಕುಲ್ಸೂಂ ಮತ್ತು ಫಾತಿಮ.
ಅವರ ಆಜ್ಞೆಗಳನ್ನು ಪಾಲಿಸುವುದು, ಅವರ ಮಾತುಗಳನ್ನು ಸತ್ಯವೆಂದು ನಂಬುವುದು, ಅವರು ವಿರೋಧಿಸಿದ ವಿಷಯಗಳಿಂದ ದೂರ ಸರಿಯುವುದು ಮತ್ತು ಅವರು ರೂಪಿಸಿದ ನಿಯಮಗಳಂತೆ ಮಾತ್ರ ಅಲ್ಲಾಹನನ್ನು ಆರಾಧಿಸುವುದು ಕಡ್ಡಾಯವಾಗಿದೆ.
ಅವರು ಮತ್ತು ಅವರಿಗಿಂತ ಮುಂಚೆ ಬಂದ ಪ್ರವಾದಿಗಳೆಲ್ಲರೂ ಅಲ್ಲಾಹನನ್ನು ಮಾತ್ರ ಆರಾಧಿಸಬೇಕು ಎಂಬ ಸಂದೇಶದೊಂದಿಗೆ ಬಂದಿದ್ದರು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ನನ್ನ ಹೊರತು ಅನ್ಯ ಆರಾಧ್ಯರಿಲ್ಲ; ಆದ್ದರಿಂದ ನನ್ನನ್ನು ಮಾತ್ರ ಆರಾಧಿಸಿರಿ ಎಂಬ ದೇವವಾಣಿಯೊಂದಿಗೆ ಹೊರತು ತಮಗಿಂತ ಮುಂಚೆ ನಾವು ಯಾವುದೇ ಸಂದೇಶವಾಹಕರನ್ನು ಕಳುಹಿಸಿಲ್ಲ.” [ಅಲ್-ಅಂಬಿಯಾ:25]
ಅವರು ಪ್ರವಾದಿಗಳ ಮತ್ತು ಸಂದೇಶವಾಹಕರ ಅಂತಿಮ ಕೊಂಡಿಯಾಗಿದ್ದಾರೆ. (ಅಂದರೆ ಅವರ ಬಳಿಕ ಬೇರೆ ಪ್ರವಾದಿ ಅಥವಾ ಸಂದೇಶವಾಹಕ ಬರಲಿಕ್ಕಿಲ್ಲ). ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಮುಹಮ್ಮದರು, ನಿಮ್ಮ ಪುರುಷರ ಪೈಕಿ ಯಾರ ತಂದೆಯೂ ಅಲ್ಲ. ಆದರೆ ಅವರು ಅಲ್ಲಾಹನ ಸಂದೇಶವಾಹಕರು ಮತ್ತು ಅಂತಿಮ ಪ್ರವಾದಿಯಾಗಿದ್ದಾರೆ. ಅಲ್ಲಾಹು ಎಲ್ಲ ವಿಷಯಗಳ ಬಗ್ಗೆಯೂ ಅರಿವುಳ್ಳವನಾಗಿದ್ದಾನೆ." [ಅಲ್-ಅಹ್ಝಾಬ್: 40]
ಅಲ್ಲಾಹು ಅವರನ್ನು ಇಸ್ಲಾಮ್ ಧರ್ಮದೊಂದಿಗೆ ಸಂಪೂರ್ಣ ಮನುಕುಲಕ್ಕೆ ಕಳುಹಿಸಿದ್ದಾನೆ. ಅಲ್ಲಾಹು ಹೇಳಿರುವಂತೆ : “ನಾವು ನಿಮ್ಮನ್ನು ಸಂಪೂರ್ಣ ಮಾನವ ಕುಲಕ್ಕೆ ಶುಭವಾರ್ತೆ ತಿಳಿಸುವವರು ಮತ್ತು ಎಚ್ಚರಿಕೆ ನೀಡುವವರು ಆಗಿ ಕಳುಹಿಸಿದ್ದೇವೆ. ಆದರೆ ಜನರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.” [ಸಬಅ್: 28]
ಅವರಿಗೆ ಕೆಲವು ಮಹತ್ವಪೂರ್ಣ ಹಕ್ಕುಗಳಿದ್ದು ಪ್ರತಿಯೊಬ್ಬ ಮುಸಲ್ಮಾನನು ಅವುಗಳನ್ನು ನೆರವೇರಿಸಿಕೊಡಬೇಕಾಗಿದೆ. ಆ ಹಕ್ಕುಗಳು ಹೀಗಿವೆ:
1. ಅವರ ಪ್ರವಾದಿತ್ವದಲ್ಲಿ ಮತ್ತು ಅವರ ಸತ್ಯಸಂಧತೆಯ ಮೇಲೆ ವಿಶ್ವಾಸವಿಡುವುದು, ಅವರು ತಂದ ನಿಯಮಗಳು ಸಂಪೂರ್ಣ ದೋಷಮುಕ್ತವೆಂದು ನಂಬುವುದು, ಅವರ ಆಜ್ಞೆಗಳನ್ನು ಪಾಲಿಸುವುದು ಮತ್ತು ಅವರನ್ನು ಅನುಸರಿಸುವುದು. ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: “ಅವರು ಅವರ ಇಷ್ಟದಂತೆ ಮಾತನಾಡುವುದಿಲ್ಲ. ಅವರು ಮಾತನಾಡುವುದು ಅವರಿಗೆ ನೀಡಿದ ದೇವವಾಣಿಯ ಆಧಾರದಲ್ಲಿ ಮಾತ್ರವಾಗಿದೆ.” [ಅನ್ನಜ್ಮ್: 3-4]
2. ಅವರನ್ನು ಪ್ರೀತಿಸುವುದು ಮತ್ತು ಸ್ವಂತ ದೇಹ, ತಂದೆ-ತಾಯಿ ಹಾಗೂ ಇತರೆಲ್ಲಾ ಜನರ ಮೇಲಿರುವ ಪ್ರೀತಿಗಿಂತಲೂ ಅವರಲ್ಲಿರುವ ಪ್ರೀತಿಗೆ ಆದ್ಯತೆ ನೀಡುವುದು ಕಡ್ಡಾಯವಾಗಿದೆ. ಅವರ ನಡವಳಿಕೆಗಳಿಗೆ ಹೊಂದಾಣಿಕೆಯಾಗುವುದು, ಅವರ ಆಜ್ಞೆಗಳನ್ನು ಪಾಲಿಸುವುದು ಮತ್ತು ಅವರು ವಿರೋಧಿಸಿದ ಕಾರ್ಯಗಳನ್ನು ತೊರೆಯುವುದು ಅವರಲ್ಲಿರುವ ಪ್ರೀತಿಯ ದ್ಯೋತಕಗಳಾಗಿವೆ.
3. ಅವರನ್ನು ಗೌರವಿಸುವುದು, ಬೆಂಬಲಿಸುವುದು ಮತ್ತು ಆದರಿಸುವುದು ಕಡ್ಡಾಯ.
4. ಅವರ ಮೇಲೆ ಸಲಾತ್ ಹೇಳುವುದು. ಸಲಾತ್ ಎಂದರೆ ಅವರನ್ನು ಪ್ರಶಂಸಿಸುವುದು ಮತ್ತು ಅವರ ಕೀರ್ತಿಯನ್ನು ಎತ್ತರಿಸಲು ಹಾಗೂ ಅವರ ಗೌರವ ಮತ್ತು ಶ್ರೇಷ್ಠತೆಯನ್ನು ಹೆಚ್ಚಿಸಲು ಅಲ್ಲಾಹನಲ್ಲಿ ಪ್ರಾರ್ಥಿಸುವುದು. ಪ್ರವಾದಿ(ﷺ )ರು ಹೇಳಿದರು: “ನನ್ನ ಮೇಲೆ ಒಂದು ಸಲಾತ್ ಹೇಳಿದವನಿಗೆ ಅಲ್ಲಾಹು ಹತ್ತು ಪ್ರತಿಫಲಗಳನ್ನು ದಯಪಾಲಿಸುವನು.” [ಮುಸ್ಲಿಮ್].
5. ಅವರ ವಿಷಯದಲ್ಲಿ ಹದ್ದುಮೀರದಿರುವುದು ಮತ್ತು ಅಲ್ಲಾಹು ಅವರಿಗೆ ನೀಡಿದ ಸ್ಥಾನಮಾನಕ್ಕಿಂತ ಮೇಲೆ ಅವರನ್ನು ಎತ್ತರಿಸದಿರುವುದು. ಈ ವಿಷಯದಲ್ಲಿ ಪ್ರವಾದಿ(ﷺ)ರು ಬಹಳ ಕಠಿಣವಾದ ಎಚ್ಚರಿಕೆಯನ್ನು ನೀಡಿದ್ದಾರೆ: ಅವರು ಹೇಳಿದರು: “ಕ್ರೈಸ್ತರು ಈಸಾರನ್ನು ಹದ್ದುಮೀರಿ ಪ್ರಶಂಸಿಸಿದಂತೆ ನೀವು ನನ್ನನ್ನು ಹದ್ದುಮೀರಿ ಪ್ರಶಂಸಿಸಬೇಡಿ. ನಾನು ಅಲ್ಲಾಹನ ಒಬ್ಬ ದಾಸ ಮಾತ್ರವಾಗಿದ್ದೇನೆ. ಆದ್ದರಿಂದ ಅಲ್ಲಾಹನ ದಾಸ ಮತ್ತು ಸಂದೇಶವಾಹಕ ಎಂದು ಹೇಳಿರಿ.” (ಬುಖಾರಿ)
ಅವರ ಕೆಲವು ಗುಣಲಕ್ಷಣಗಳು:
ಸತ್ಯಸಂಧತೆ, ಕರುಣೆ, ಸಹಿಷ್ಣುತೆ, ತಾಳ್ಮೆ, ಧೈರ್ಯ, ಉದಾರತನ, ಸದ್ಗುಣ, ನ್ಯಾಯಪಾಲನೆ, ವಿನಯ, ಕ್ಷಮಾಗುಣ.
ಪವಿತ್ರ ಕುರ್ಆನ್ ನನ್ನ ಪ್ರಭುವಿನ ಮಾತು.
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: “ಓ ಮನುಷ್ಯರೇ! ಖಂಡಿತವಾಗಿಯೂ ನಿಮಗೆ ನಿಮ್ಮ ಪ್ರಭುವಿನ ವತಿಯಿಂದ ಸ್ಪಷ್ಟವಾದ ಪುರಾವೆಯು ಬಂದಿದೆ. ನಾವು ನಿಮಗೆ ಸ್ಪಷ್ಟವಾದ ಒಂದು ಪ್ರಕಾಶವನ್ನು ಇಳಿಸಿ ಕೊಟ್ಟಿದ್ದೇವೆ.” [ಅನ್ನಿಸಾ: 174]
ಪವಿತ್ರ ಕುರ್ಆನ್ ಸರ್ವಶಕ್ತನಾದ ಅಲ್ಲಾಹನ ಮಾತಾಗಿರುತ್ತದೆ. ಅದು ಅವನ ಸತ್ಯದ ಮಾತುಗಳಾಗಿವೆ. ಜನರನ್ನು ಅಂಧಕಾರಗಳಿಂದ ಬೆಳಕಿಗೆ ತಂದು ನೇರ ಮಾರ್ಗದೆಡೆಗೆ ಮುನ್ನಡೆಸುವುದಕ್ಕಾಗಿ ಅವನು ಅದನ್ನು ಪ್ರವಾದಿ ಮುಹಮ್ಮದ್(ಸ)ರಿಗೆ ಅವತೀರ್ಣಗೊಳಿಸಿದನು. ಅದನ್ನು ಪಠಿಸುವವರಿಗೆ ಮಹಾ ಪ್ರತಿಫಲವಿದೆ. ಅದರ ಮಾರ್ಗದರ್ಶನದಂತೆ ನಡೆಯುವವರು ಸನ್ಮಾರ್ಗಿಗಳಾಗುತ್ತಾರೆ. ಅಬ್ದುಲ್ಲಾಹ್ ಬಿನ್ ಮಸ್ಊದ್(ರ)ರಿಂದ ವರದಿ. ಪ್ರವಾದಿ(ﷺ)ರು ಹೇಳಿದರು: “ಅಲ್ಲಾಹನ ಗ್ರಂಥದಿಂದ ಒಂದು ಅಕ್ಷರವನ್ನು ಪಠಿಸುವವರಿಗೆ ಒಂದು ಪುಣ್ಯವಿದೆ. ಪ್ರತಿಯೊಂದು ಪುಣ್ಯವು ಹತ್ತು ಪಟ್ಟು ಪ್ರತಿಫಲವಾಗಿ ವೃದ್ಧಿಸುತ್ತದೆ. ಅಲಿಫ್-ಲಾಮ್-ಮೀಮ್ ಒಂದೇ ಅಕ್ಷರವೆಂದು ನಾನು ಹೇಳಲಾರೆ. ಬದಲಾಗಿ, ಅಲಿಫ್ ಒಂದು ಅಕ್ಷರ, ಲಾಮ್ ಒಂದು ಅಕ್ಷರವಾಗಿದೆ ಮತ್ತು ಮೀಮ್ ಇನ್ನೊಂದು ಅಕ್ಷರವಾಗಿದೆ.” [ತಿರ್ಮಿದಿ].
ಅಲ್ಲಾಹು ಅದನ್ನು ತಿದ್ದುಪಡಿಗಳಿಂದ ಮತ್ತು ವಿರೂಪಗೊಳ್ಳುವುದರಿಂದ ರಕ್ಷಿಸಿ ಪುನರುತ್ಥಾನ ದಿನದ ತನಕ ನೆಲೆನಿಲ್ಲುವ ಒಂದು ಪವಾಡವನ್ನಾಗಿ ಮಾಡಿದ್ದಾನೆ. ಅಲ್ಲಾಹು ಹೇಳುತ್ತಾನೆ: “ಖಂಡಿತವಾಗಿಯೂ ಈ ಉಪದೇಶವನ್ನು (ಕುರ್ಆನನ್ನು) ನಾವೇ ಅವತೀರ್ಣಗೊಳಿಸಿದ್ದೇವೆ ಮತ್ತು ನಾವೇ ಅದನ್ನು ಸಂರಕ್ಷಿಸುತ್ತೇವೆ.” [ಅಲ್-ಹಿಜ್ರ್: 9] ಆದ್ದರಿಂದ ಅದರಲ್ಲಿ ದೋಷಗಳಿವೆ ಅಥವಾ ಅದು ವಿರೂಪಗೊಂಡಿದೆ ಎಂದು ವಾದಿಸುವವರೆಲ್ಲರೂ ಅಲ್ಲಾಹು ಮತ್ತು ಪ್ರವಾದಿ(ಸ)ರನ್ನು ನಿಷೇಧಿಸಿದವರೂ ಇಸ್ಲಾಮ್ ಧರ್ಮದಿಂದ ಹೊರಹೋದವರೂ ಆಗಿದ್ದಾರೆ.
ಪೂರ್ವ ಗ್ರಂಥಗಳಲ್ಲಿರುವುದೆಲ್ಲವೂ ಪವಿತ್ರ ಕುರ್ಆನ್ನಲ್ಲಿದೆ. ಅಷ್ಟೇ ಅಲ್ಲದೆ, ಅದು ಆಧ್ಯಾತ್ಮಿಕ ಗುರಿಗಳು ಮತ್ತು ಮಾನಸಿಕ ಗುಣಗಳನ್ನು ಹೆಚ್ಚುವರಿಯಾಗಿ ಒಳಗೊಂಡಿದೆ. ಅದು ಪೂರ್ವ ಗ್ರಂಥಗಳಲ್ಲಿ ಬಂದಿರುವ ಸತ್ಯಗಳನ್ನು ದೃಢೀಕರಿಸುತ್ತದೆ. ಈಗಿನ ಕಾಲದಲ್ಲಿ ಪವಿತ್ರ ಕುರ್ಆನಿನ ಹೊರತಾಗಿ, ಕಡ್ಡಾಯವಾಗಿ ಅನುಸರಿಸಬಹುದಾದ, ಪಾವಿತ್ರ್ಯತೆ ಕಲ್ಪಿಸಬಹುದಾದ, ಪಾರಾಯಣದ ಮೂಲಕ ಆರಾಧನೆ ಸಲ್ಲಿಸಬಹುದಾದ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಬೇರೊಂದು ಗ್ರಂಥವಿಲ್ಲ.
ನನ್ನ ಧರ್ಮ ಇಸ್ಲಾಮ್.
ಧರ್ಮಕ್ಕೆ ಮೂರು ಹಂತಗಳಿವೆ: ಇಸ್ಲಾಮ್, ಈಮಾನ್ ಮತ್ತು ಇಹ್ಸಾನ್.
ಮೊದಲನೆಯ ಹಂತ: ಇಸ್ಲಾಮ್
ಇಸ್ಲಾಮ್ ಎಂದರೆ ತೌಹೀದ್ (ಏಕದೇವವಿಶ್ವಾಸ) ನ ಮೂಲಕ ಅಲ್ಲಾಹನಿಗೆ ಸಂಪೂರ್ಣ ಶರಣಾಗುವುದು, ಅನುಸರಣೆಯ ಮೂಲಕ ಅವನಿಗೆ ವಿಧೇಯವಾಗಿರುವುದು ಮತ್ತು ಶಿರ್ಕ್ (ಬಹುದೇವ ವಿಶ್ವಾಸ) ಹಾಗೂ ಅದರ ಜನರಿಂದ ದೂರವಿರುವುದು.
ಇಸ್ಲಾಮಿನ ಸ್ತಂಭಗಳು
ಪ್ರವಾದಿ(ಸ)ರು ಹೇಳಿದರು: “ಇಸ್ಲಾಂ ಧರ್ಮವನ್ನು ಐದು ಸ್ತಂಭಗಳ ಮೇಲೆ ನಿರ್ಮಿಸಲಾಗಿದೆ. ಅವು: ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್(ಸ) ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷಿ ವಹಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಮತ್ತು ಹಜ್ಜ್ ನಿರ್ವಹಿಸುವುದು.” [ಬುಖಾರಿ ಮತ್ತು ಮುಸ್ಲಿಮ್].
ಇಸ್ಲಾಮಿನ ಸ್ತಂಭಗಳು ಎಂಬುದು ಪ್ರತಿಯೊಬ್ಬ ಮುಸಲ್ಮಾನನು ಕಡ್ಡಾಯವಾಗಿ ನಿರ್ವಹಿಸಬೇಕಾದ ಆರಾಧನೆಗಳಾಗಿವೆ. ಅವುಗಳನ್ನು ಕಡ್ಡಾಯವೆಂದು ನಂಬದ ಮತ್ತು ಅವುಗಳನ್ನು ನಿರ್ವಹಿಸದ ಯಾವುದೇ ವ್ಯಕ್ತಿ ಮುಸ್ಲಿಮನಾಗಲಾರನು. ಏಕೆಂದರೆ ಇಸ್ಲಾಂ ಧರ್ಮವನ್ನು ಆ ಸ್ತಂಭಗಳ ಮೇಲೆ ನಿರ್ಮಿಸಲಾಗಿದೆ. ಈ ಕಾರಣದಿಂದಲೇ ಅವುಗಳನ್ನು ಇಸ್ಲಾಮ್ ಧರ್ಮದ ಸ್ತಂಭಗಳು ಎಂದು ಕರೆಯಲಾಗಿದೆ.
ಅ ಸ್ಥಂಭಗಳು ಹೀಗಿವೆ:
ಮೊದಲನೆಯ ಸ್ತಂಭ: ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್(ಸ) ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷಿ ವಹಿಸುವುದು.
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: “ತಿಳಿದುಕೊಳ್ಳಿ! ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ”. [ಮುಹಮ್ಮದ್: 19]
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: “ಖಂಡಿತವಾಗಿಯೂ ನಿಮಗೆ ನಿಮ್ಮಿಂದಲೇ ಒಬ್ಬ ಸಂದೇಶವಾಹಕರು ಬಂದಿದ್ದಾರೆ. ನೀವು ಕಷ್ಟಪಡುವುದು ಅವರಿಗೆ ಸಹಿಸಲಾಗುವುದಿಲ್ಲ. ಅವರು ನಿಮ್ಮ ಬಗ್ಗೆ ಅತ್ಯಂತ ಆಸಕ್ತಿಯನ್ನು ಹೊಂದಿದ್ದಾರೆ. ಅವರು ಸತ್ಯವಿಶ್ವಾಸಿಗಳೊಂದಿಗೆ ಅಪಾರ ದಯೆ ಮತ್ತು ಕರುಣೆಯುಳ್ಳವರಾಗಿದ್ದಾರೆ.” [ಅತ್ತೌಬಾ: 128]
ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ ಎಂದರೆ ಅಲ್ಲಾಹನ ಹೊರತು ಆರಾಧನೆಗೆ ಯಾರೂ ನೈಜ ಹಕ್ಕುದಾರರಲ್ಲ.
ಮುಹಮ್ಮದ್(ಸ) ಅಲ್ಲಾಹನ ಸಂದೇಶವಾಹಕರು ಎಂದರೆ ಅವರ ಆಜ್ಞೆಗಳನ್ನು ಪಾಲಿಸುವುದು, ಅವರ ಮಾತುಗಳನ್ನು ಸತ್ಯವೆಂದು ನಂಬುವುದು, ಅವರು ವಿರೋಧಿಸಿದ ವಿಷಯಗಳಿಂದ ದೂರ ಸರಿಯುವುದು ಮತ್ತು ಅವರು ರಚಿಸಿದ ನಿಯಮಗಳಂತೆ ಮಾತ್ರ ಅಲ್ಲಾಹನನ್ನು ಆರಾಧಿಸುವುದು.
ಎರಡನೆಯ ಸ್ತಂಭ: ನಮಾಝ್ ಸಂಸ್ಥಾಪಿಸುವುದು.
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: “ನೀವು ನಮಾಝ್ ಸಂಸ್ಥಾಪಿಸಿರಿ.” [ಅಲ್-ಬಕರ: 110].
ನಮಾಝ್ ಸಂಸ್ಥಾಪಿಸುವುದು ಎಂದರೆ ಅತ್ಯುನ್ನತನಾದ ಅಲ್ಲಾಹು ಸೂಚಿಸಿದ ನಿಯಮಗಳಿಗೆ ಬದ್ದವಾಗಿ ಮತ್ತು ಪ್ರವಾದಿ ಮುಹಮ್ಮದ್(ಸ)ರು ಕಲಿಸಿದಂತೆ ನಮಾಝ್ ನಿರ್ವಹಿಸುವುದು.
ಮೂರನೆಯ ಸ್ಥಂಭ: ಝಕಾತ್ ನೀಡುವುದು.
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: “ಮತ್ತು ಝಕಾತ್ ನೀಡಿರಿ.” [ಅಲ್-ಬಕರ: 110].
ಮುಸಲ್ಮಾನನ ವಿಶ್ವಾಸವನ್ನು ಪರೀಕ್ಷಿಸುವುದಕ್ಕಾಗಿ ಮತ್ತು ಅಲ್ಲಾಹು ತನಗೆ ದಯಪಾಲಿಸಿದ ಸಂಪತ್ತಿಗಾಗಿ ದಾಸನು ಅವನಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಹಾಗೂ ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಹಸ್ತವಾಗಿ ಅತ್ಯುನ್ನತನಾದ ಅಲ್ಲಾಹು ಝಕಾತ್ ಅನ್ನು ಕಡ್ಡಾಯಗೊಳಿಸಿದನು.
ಝಕಾತ್ ನೀಡುವುದೆಂದರೆ ಅದನ್ನು ಅದರ ಹಕ್ಕುದಾರರಿಗೆ ನೀಡುವುದಾಗಿದೆ.
ಸಂಪತ್ತು ಒಂದು ನಿರ್ದಿಷ್ಟ ಮೊತ್ತವನ್ನು ತಲುಪಿದರೆ ಝಕಾತ್ ನೀಡುವುದು ಕಡ್ಡಾಯವಾಗಿದೆ. ಬಡವರು ಮತ್ತು ನಿರ್ಗತಿಕರು ಸೇರಿದಂತೆ ಅಲ್ಲಾಹು ಪವಿತ್ರ ಕುರ್ಆನ್ನಲ್ಲಿ ಹೇಳಿದ ಜನರ ಎಂಟು ವಿಭಾಗಗಳಿಗೆ ಇದನ್ನು ವಿತರಿಸಬೇಕಾಗಿದೆ.
ಝಕಾತ್ ನೀಡುವುದರಿಂದ ದಯೆ ಮತ್ತು ಅನುಕಂಪವು ಉಂಟಾಗುತ್ತದೆ. ಅದು ಮುಸಲ್ಮಾನನ ಸ್ವಭಾವ ಮತ್ತು ಸಂಪತ್ತನ್ನು ಶುದ್ಧೀಕರಿಸುತ್ತದೆ. ಬಡವರು ಮತ್ತು ನಿರ್ಗತಿಕರ ಮನಸ್ಸಿಗೆ ಸಂತೃಪ್ತಿಯನ್ನು ನೀಡುತ್ತದೆ. ಮುಸ್ಲಿಮ್ ಸಮುದಾಯದಲ್ಲಿ ಪ್ರೀತಿ ಮತ್ತು ಸಾಹೋದರತೆಯ ಸಂಬಂಧಗಳನ್ನು ಬಲಪಡಿಸುತ್ತದೆ. ಆದ್ದರಿಂದಲೇ ಮುಸಲ್ಮಾನರ ಪೈಕಿ ಸಜ್ಜನರು ಇದನ್ನು ಆತ್ಮತೃಪ್ತಿಯಿಂದ ಮತ್ತು ಸಂತೋಷದಿಂದ ನೀಡುತ್ತಾರೆ. ಏಕೆಂದರೆ ಅದರಿಂದ ಇತರರಿಗೆ ಸಂತೋಷವನ್ನು ನೀಡಿದಂತಾಗುತ್ತದೆ.
ಝಕಾತ್ನ ಪ್ರಮಾಣವು 2.5% ಆಗಿದ್ದು, ದಾಸ್ತಾನಿಟ್ಟ ಚಿನ್ನ, ಬೆಳ್ಳಿ, ನಗದು, ಲಾಭದ ಉದ್ದೇಶದಿಂದ ಮಾರಲು ಅಥವಾ ಖರೀದಿಸಲು ತೆಗೆದಿಟ್ಟ ವಾಣಿಜ್ಯ ಸರಕುಗಳು — ಮುಂತಾದವುಗಳ ಮೌಲ್ಯವು ಒಂದು ನಿರ್ದಿಷ್ಠ ಮೊತ್ತವನ್ನು ತಲುಪಿ ಅದಕ್ಕೆ ಒಂದು ವರ್ಷ ಪೂರ್ತಿಯಾದರೆ ಝಕಾತ್ ನೀಡುವುದು ಕಡ್ಡಾಯವಾಗಿದೆ.
ಒಂಟೆ, ಹಸು, ಕುರಿ ಮುಂತಾದ ಒಂದು ನಿರ್ದಿಷ್ಟ ಸಂಖ್ಯೆಯ ಜಾನುವಾರುಗಳಿಗೆ – ಅವುಗಳ ಯಜಮಾನನು ಅವುಗಳಿಗೆ ಮೇವು ನೀಡದೆ ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ಅವು ಸ್ವಯಂ ಮೇಯುತ್ತಿದ್ದರೆ – ಅವುಗಳಿಗೆ ಝಕಾತ್ ನೀಡುವುದು ಕಡ್ಡಾಯವಾಗಿದೆ.
ಧಾನ್ಯ, ಹಣ್ಣು, ಖನಿಜ ಮುಂತಾದ ಭೂಮಿಯ ಉತ್ಪಾದನೆಗಳಿಗೆ – ಅವು ನಿರ್ದಿಷ್ಟ ಪ್ರಮಾಣವನ್ನು ತಲುಪಿದರೆ – ಅವುಗಳಿಗೂ ಝಕಾತ್ ಕಡ್ಡಾಯವಾಗಿದೆ.
ನಾಲ್ಕನೆಯ ಸ್ಥಂಭ: ರಮದಾನ್ ತಿಂಗಳ ಉಪವಾಸ.
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: “ಓ ಸತ್ಯವಿಶ್ವಾಸಿಗಳೇ! ನಿಮಗಿಂತ ಮುಂಚಿನವರ ಮೇಲೆ ವಿಧಿಸಲಾದಂತೆ ನಿಮ್ಮ ಮೇಲೂ ಉಪವಾಸ ಆಚರಿಸುವುದನ್ನು ಕಡ್ಡಾಯವಾಗಿ ವಿಧಿಸಲಾಗಿದೆ. ನೀವು ಭಯಭಕ್ತಿ ಪಾಲಿಸುವ ಸಲುವಾಗಿ.” [ಅಲ್-ಬಕರ: 110].
ರಮದಾನ್ ಹಿಜರಿ ಕ್ಯಾಲೆಂಡರ್ನ 9ನೇ ತಿಂಗಳು. ಅದನ್ನು ಮುಸಲ್ಮಾನರು ಬಹಳಷ್ಟು ಗೌರವಿಸುತ್ತಾರೆ. ವರ್ಷದ ಇತರ ತಿಂಗಳುಗಳಿಗೆ ಹೋಲಿಸಿದರೆ ಇದಕ್ಕೆ ವಿಶೇಷ ಸ್ಥಾನಮಾನಗಳಿವೆ. ಈ ತಿಂಗಳಲ್ಲಿ ಪೂರ್ತಿಯಾಗಿ ಉಪವಾಸ ಆಚರಿಸುವುದು ಇಸ್ಲಾಮ್ ಧರ್ಮದ ಸ್ತಂಭಗಳಲ್ಲಿ ಒಂದಾಗಿದೆ.
ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಎಂದರೆ – ಅನುಗ್ರಹೀತ ರಮದಾನ್ ತಿಂಗಳ ಎಲ್ಲಾ ದಿನಗಳಲ್ಲೂ ಪ್ರಭಾತದಿಂದ ಸೂರ್ಯಾಸ್ತಮಾನದ ತನಕ ಆಹಾರ, ಪಾನೀಯ ಮತ್ತು ಲೈಂಗಿಕ ಸಂಭೋಗ ಮುಂತಾದ ಉಪವಾಸ ಮುರಿಯುವ(ಭಂಗವಾಗುವ) ಕಾರ್ಯಗಳಿಂದ ಸಂಪೂರ್ಣವಾಗಿ ಬಿಟ್ಟು ನಿಲ್ಲುವುದು.
ಐದನೆಯ ಸ್ತಂಭ: ಅಲ್ಲಾಹನ ಪವಿತ್ರ ಭವನದಲ್ಲಿ ಹಜ್ಜ್ ನಿರ್ವಹಿಸುವುದು.
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: "(ಅಲ್ಲಾಹನ) ಭವನದಲ್ಲಿ ಅವನಿಗಾಗಿ ಹಜ್ಜ್ ನಿರ್ವಹಿಸುವುದು ಅಲ್ಲಿಗೆ ತೆರಳಲು ಸಾಧ್ಯವಿರುವವರ ಮೇಲಿರುವ ಕಡ್ಡಾಯ ಬಾಧ್ಯತೆಯಾಗಿದೆ." [ಆಲು ಇಮ್ರಾನ್: 97]
ಅಲ್ಲಾಹನ ಭವನಕ್ಕೆ ತೆರಳಲು ಸಾಧ್ಯವಿರುವವರಿಗೆ ಜೀವನದಲ್ಲಿ ಒಮ್ಮೆಯಾದರೂ ಹಜ್ಜ್ ನಿರ್ವಹಿಸುವುದು ಕಡ್ಡಾಯವಾಗಿದೆ. ಹಜ್ಜ್ ನಿರ್ವಹಿಸುವುದು ಎಂದರೆ – ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಆರಾಧನೆಗಳನ್ನು ನಿರ್ವಹಿಸುವುದಕ್ಕಾಗಿ ಮಕ್ಕಾದಲ್ಲಿರುವ ಪವಿತ್ರ ಕಅಬಾಲಯ ಹಾಗೂ ಇತರ ಪವಿತ್ರ ಸ್ಥಳಗಳಿಗೆ ತೆರಳುವುದು. ಪ್ರವಾದಿ(ಸ)ರು ಹಜ್ಜ್ ನಿರ್ವಹಿಸಿದ್ದಾರೆ. ಅವರಿಗಿಂತ ಮುಂಚಿನ ಪ್ರವಾದಿಗಳೂ ಹಜ್ಜ್ ನಿರ್ವಹಿಸಿದ್ದಾರೆ. ಹಜ್ಜ್ ಕರೆ ನೀಡುವಂತೆ ಅಲ್ಲಾಹು ಇಬ್ರಾಹೀಂ(ಅ)ರಿಗೆ ಆಜ್ಞಾಪಿಸಿದ್ದನು. ಇದನ್ನು ಅತ್ಯುನ್ನತನಾದ ಅಲ್ಲಾಹು ಪವಿತ್ರ ಕುರ್ಆನಿನಲ್ಲಿ ತಿಳಿಸಿದ್ದಾನೆ: “ಜನರಿಗೆ ಹಜ್ಜ್ನ ಬಗ್ಗೆ ಘೋಷಿಸಿರಿ. ಅವರು ಪಾದಚಾರಿಗಳಾಗಿ, ದೂರದ ಎಲ್ಲಾ ಪರ್ವತ ಕಣಿವೆಗಳಿಂದ, ಎಲ್ಲ ಸಣಕಲು ಒಂಟೆಗಳ ಮೇಲೇರಿ ತಮ್ಮ ಬಳಿಗೆ ಬರುವರು.” [ಅಲ್-ಹಜ್ಜ್: 27]
ಎರಡನೆಯ ಹಂತ: ಈಮಾನ್
ಈಮಾನ್ ಎಂದರೆ ಅಲ್ಲಾಹು ಮತ್ತು ಪ್ರವಾದಿ(ಸ)ರು ಏನೆಲ್ಲಾ ಆಜ್ಞಾಪಿಸಿದ್ದಾರೋ ಅವುಗಳನ್ನು ಅಂಗೀಕರಿಸುವುದು, ನಿಸ್ಸಂದೇಹವಾಗಿ ಅವು ಸತ್ಯವೆಂದು ನಂಬುವುದು ಮತ್ತು ಅವುಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದು ಮತ್ತು ಅವುಗಳಲ್ಲಿ ವಿಶ್ವಾಸವಿಟ್ಟು ಅವುಗಳಿಗೆ ಬಾಹ್ಯವಾಗಿಯೂ ಆಂತರಿಕವಾಗಿ ಸಂಪೂರ್ಣ ಶರಣಾಗುವುದು. ಈಮಾನ್ ಎಂಬುದು ಹೃದಯದ ನಂಬಿಕೆಯಾಗಿದ್ದು, ಆ ನಂಬಿಕೆಯು ಹೃದಯದಿಂದ ಮತ್ತು ದೇಹದಿಂದ ಮಾಡುವ ಕರ್ಮಗಳನ್ನು ಒಳಗೊಳ್ಳುತ್ತದೆ. ಅದು ಧರ್ಮದ ಸಂಪೂರ್ಣ ಆಚರಣೆಯಲ್ಲಿ ಒಳಪಡುತ್ತದೆ. ಅದು ಸತ್ಕರ್ಮಗಳ ಮೂಲಕ ಹೆಚ್ಚುತ್ತದೆ ಮತ್ತು ದುಷ್ಕರ್ಮಗಳ ಮೂಲಕ ಕಡಿಮೆಯಾಗುತ್ತದೆ.
ಈಮಾನಿನ ಸ್ತಂಭಗಳು
ಈಮಾನಿನ ಬಗ್ಗೆ ಪ್ರವಾದಿ(ಸ)ರೊಂದಿಗೆ ಕೇಳಲಾದಾಗ ಅವರು ಹೀಗೆ ಉತ್ತರಿಸಿದರು: “ಈಮಾನ್ ಎಂದರೆ – ಅಲ್ಲಾಹನಲ್ಲಿ, ಅವನ ಮಲಕ್ಗಳಲ್ಲಿ, ಅವನ ಗ್ರಂಥಗಳಲ್ಲಿ, ಅವನ ಪ್ರವಾದಿಗಳಲ್ಲಿ, ಅಂತ್ಯ ದಿನದಲ್ಲಿ ಮತ್ತು ವಿಧಿಯಲ್ಲಿ – ಅದರ ಒಳಿತು ಮತ್ತು ಕೆಡುಕಿನಲ್ಲಿ ವಿಶ್ವಾಸವಿಡುವುದು.”
ಈಮಾನಿನ ಸ್ತಂಭಗಳು ಎಂಬುದು ಪ್ರತಿಯೊಬ್ಬ ಮುಸಲ್ಮಾನನು ಅನಿವಾರ್ಯವಾಗಿ ನಿರ್ವಹಿಸಬೇಕಾದ ಹೃದಯಕ್ಕೆ ಸಂಬಂಧಿಸಿದ ಆರಾಧನೆಗಳಾಗಿವೆ. ಅವುಗಳಲ್ಲಿ ವಿಶ್ವಾಸವಿಟ್ಟು ಅವುಗಳ ಬೇಡಿಕೆಯಂತೆ ಕಾರ್ಯನಿರ್ವಹಿಸದಿದ್ದರೆ ಯಾವುದೇ ವ್ಯಕ್ತಿಯೂ ಸತ್ಯವಿಶ್ವಾಸಿಯಾಗುವುದಿಲ್ಲ. ಈ ಕಾರಣದಿಂದಲೇ ಇವುಗಳನ್ನು ಈಮಾನಿನ (ವಿಶ್ವಾಸದ) ಸ್ತಂಭಗಳು ಎಂದು ಕರೆಯಲಾಗಿದೆ. ಈಮಾನಿನ ಸ್ತಂಭಗಳು ಮತ್ತು ಇಸ್ಲಾಮಿನ ಸ್ತಂಭಗಳ ನಡುವಿನ ವ್ಯತ್ಯಾಸವೇನೆಂದರೆ – ಇಸ್ಲಾಮಿನ ಸ್ತಂಭಗಳು ಬಾಹ್ಯ ಕರ್ಮಗಳಾಗಿದ್ದು ಅವುಗಳನ್ನು ಅಂಗಾಂಗಗಳ ಮೂಲಕ ನಿರ್ವಹಿಸಲಾಗುತ್ತದೆ. ಉದಾಹರಣೆಗೆ, ಸತ್ಯಸಾಕ್ಷ್ಯವನ್ನು ಉಚ್ಛರಿಸುವುದು, ನಮಾಝ್ ನಿರ್ವಹಿಸುವುದು, ಝಕಾತ್ ನೀಡುವುದು ಇತ್ಯಾದಿ. ಈಮಾನಿನ ಸ್ತಂಭಗಳು ಆಂತರಿಕ ಕರ್ಮಗಳಾಗಿದ್ದು ಅವುಗಳನ್ನು ಹೃದಯದ ಮೂಲಕ ನಿರ್ವಹಿಸಲಾಗುತ್ತದೆ. ಉದಾಹರಣೆಗೆ, ಅಲ್ಲಾಹನಲ್ಲಿ, ಅವನ ದೇವದೂತರಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವುದು ಇತ್ಯಾದಿ.
ಮೊದಲನೆಯ ಸ್ತಂಭ: ಅಲ್ಲಾಹನಲ್ಲಿ ವಿಶ್ವಾಸವಿಡುವುದು
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: “ಅಲ್ಲಾಹನಲ್ಲಿ ವಿಶ್ವಾಸವಿಟ್ಟವರಾರೋ ಅವರೇ ಸತ್ಯವಿಶ್ವಾಸಿಗಳು.” [ಅನ್ನೂರ್: 62].
ನಾವು ಅಲ್ಲಾಹನ ಅಸ್ತಿತ್ವದಲ್ಲಿ ವಿಶ್ವಾಸವಿಡುತ್ತೇವೆ ಮತ್ತು ಪ್ರಭುತ್ವದಲ್ಲಿ, ಆರಾಧನೆಯಲ್ಲಿ ಹಾಗೂ ನಾಮ ಮತ್ತು ಗುಣವಿಶೇಷಣಗಳಲ್ಲಿ ಅವನು ಏಕೈಕನೆಂದು ನಂಬುತ್ತೇವೆ. ಅಲ್ಲಾಹನಲ್ಲಿರುವ ವಿಶ್ವಾಸವು ಈ ಕೆಳಗಿನ ವಿಷಯಗಳನ್ನು ಒಳಗೊಳ್ಳುತ್ತದೆ:
- ಅತ್ಯುನ್ನತನಾದ ಅಲ್ಲಾಹನ ಅಸ್ತಿತ್ವದಲ್ಲಿ ವಿಶ್ವಾಸವಿಡುವುದು.
- ಸರ್ವಶಕ್ತನಾದ ಅಲ್ಲಾಹನ ಪ್ರಭುತ್ವದಲ್ಲಿ ವಿಶ್ವಾಸವಿಡುವುದು. ಅಂದರೆ ಅವನು ಎಲ್ಲಾ ವಸ್ತುಗಳ ಒಡೆಯ, ಸೃಷ್ಟಿಕರ್ತ, ಅನ್ನದಾತ ಮತ್ತು ಕಾರ್ಯನಿರ್ವಾಹಕ ಎಂದು ವಿಶ್ವಾಸವಿಡುವುದು.
- ಅಲ್ಲಾಹನ ದೈವಿಕತೆಯಲ್ಲಿ ವಿಶ್ವಾಸವಿಡುವುದು. ಅಂದರೆ ಆರಾಧನೆಯ ಹಕ್ಕಿರುವುದು ಅವನಿಗೆ ಮಾತ್ರ. ಅದರಲ್ಲಿ ಅವನಿಗೆ ಯಾವುದೇ ಸಹಭಾಗಿಗಳಿಲ್ಲ. ಉದಾಹರಣೆಗೆ, ನಮಾಝ್, ಪ್ರಾರ್ಥನೆ, ಹರಕೆ, ಬಲಿ, ಸಹಾಯಯಾಚನೆ, ಅಭಯ ಯಾಚನೆ ಮುಂತಾದ ಆರಾಧನೆಗಳು ಅವನಿಗೆ ಮಾತ್ರ ಸಲ್ಲತಕ್ಕದ್ದು.
- ಅಲ್ಲಾಹು ಸ್ವತಃ ತನಗಾಗಿ ದೃಢೀಕರಿಸಿದ ಮತ್ತು ಅವನ ಪ್ರವಾದಿ(ﷺ)ರು ಅವನಿಗಾಗಿ ದೃಢೀಕರಿಸಿದ ಅವನ ನಾಮ ಮತ್ತು ಗುಣವಿಶೇಷಣಗಳಲ್ಲಿ ವಿಶ್ವಾಸವಿಡುವುದು. ಅವನು ಸ್ವತಃ ತನಗೆ ನಿಷೇಧಿಸಿದ ಮತ್ತು ಅವನ ಪ್ರವಾದಿ(ﷺ)ರು ಅವನಿಗೆ ನಿಷೇಧಿಸಿದ ನಾಮ ಮತ್ತು ಗುಣವಿಶೇಷಣಗಳನ್ನು ನಿಷೇಧಿಸುವುದು. ಅದೇ ರೀತಿ, ಅವನ ಹೆಸರುಗಳು ಮತ್ತು ಗುಣವಿಶೇಷಣಗಳು ಸಂಪೂರ್ಣತೆಯ ಮತ್ತು ಸೌಂದರ್ಯದ ಪರಾಕಾಷ್ಠೆಯನ್ನು ತಲುಪಿದೆ ಹಾಗೂ ಅವನಿಗೆ ಹೋಲಿಕೆಯಾಗಿ ಯಾವುದೂ ಇಲ್ಲ. ಅವನು ಎಲ್ಲವನ್ನು ಆಲಿಸುವವನು ಮತ್ತು ಎಲ್ಲವನ್ನು ವೀಕ್ಷಿಸುವವನಾಗಿದ್ದಾನೆ ಎಂದು ವಿಶ್ವಾಸವಿಡುವುದು.
ಎರಡನೆಯ ಸ್ತಂಭ: ದೇವದೂತರಲ್ಲಿ ವಿಶ್ವಾಸವಿಡುವುದು
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: “ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದ ಮತ್ತು ಎರಡು, ಮೂರು ಅಥವಾ ನಾಲ್ಕು ರೆಕ್ಕೆಗಳಿರುವ ದೇವದೂತರನ್ನು ಸಂದೇಶವಾಹಕರನ್ನಾಗಿ ಮಾಡಿದ ಅಲ್ಲಾಹನಿಗೆ ಸರ್ವಸ್ತುತಿ. ಅವನು ಸೃಷ್ಟಿಯಲ್ಲಿ ತಾನಿಚ್ಚಿಸಿದ್ದನ್ನು ಹೆಚ್ಚಿಸುತ್ತಾನೆ. ಖಂಡಿತವಾಗಿಯೂ ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.” [ಫಾತಿರ್: 1].
ದೇವದೂತರು ಅಗೋಚರ ಜೀವಿಗಳು, ಅವರು ಅಲ್ಲಾಹನ ದಾಸರು, ಅಲ್ಲಾಹು ಅವರನ್ನು ಬೆಳಕಿನಿಂದ ಸೃಷ್ಟಿಸಿದನು ಮತ್ತು ಅವರನ್ನು ತನ್ನ ಆಜ್ಞಾಪಾಲಕರನ್ನಾಗಿ ಮಾಡಿದನು ಎಂದು ನಾವು ವಿಶ್ವಾಸವಿಡುತ್ತೇವೆ.
ಅವರು ಮಹಾ ಸೃಷ್ಟಿಗಳಾಗಿದ್ದು, ಅವರ ನಿಜವಾದ ಶಕ್ತಿ ಮತ್ತು ಸಂಖ್ಯೆಯನ್ನು ಅಲ್ಲಾಹನ ಹೊರತು ಯಾರೂ ತಿಳಿದಿಲ್ಲ. ಅವರಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ವಿಶೇಷ ಗುಣಗಳು, ಹೆಸರುಗಳು ಮತ್ತು ಕರ್ತವ್ಯಗಳಿವೆ. ಅವರಲ್ಲೊಬ್ಬರು ಜಿಬ್ರೀಲ್(ﷺ). ಪ್ರವಾದಿಗಳಿಗೆ ಅಲ್ಲಾಹನಿಂದ ದೇವವಾಣಿಯನ್ನು ತಲುಪಿಸಿ ಕೊಡುವ ಕೆಲಸವನ್ನು ಅವರಿಗೆ ವಹಿಸಿಕೊಡಲಾಗಿದೆ.
ಮೂರನೆಯ ಸ್ತಂಭ: ಗ್ರಂಥಗಳಲ್ಲಿ ವಿಶ್ವಾಸವಿಡುವುದು.
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: “ಹೇಳಿರಿ: ನಾವು ಅಲ್ಲಾಹನಲ್ಲಿ, ಅವನಿಂದ ನಮಗೆ ಅವತೀರ್ಣವಾಗಿರುವುದರಲ್ಲಿ, ಇಬ್ರಾಹೀಮ್ರಿಗೆ, ಇಸ್ಮಾಈಲ್ರಿಗೆ, ಇಸ್ಹಾಕ್ರಿಗೆ, ಯಅ್ಕೂಬ್ರಿಗೆ ಮತ್ತು ಯಅ್ಕೂಬ್ರ ಸಂತತಿಗೆ ಅವತೀರ್ಣವಾಗಿರುವುದರಲ್ಲಿ, ಮೂಸಾ ಮತ್ತು ಈಸಾರಿಗೆ ನೀಡಲಾಗಿರುವುದರಲ್ಲಿ, ಸರ್ವ ಪ್ರವಾದಿಗಳಿಗೆ ಅವರ ಸಂರಕ್ಷಕನಿಂದ ನೀಡಲಾಗಿರುವುದರಲ್ಲಿ (ಸಂದೇಶದಲ್ಲಿ) ನಾವು ವಿಶ್ವಾಸವಿಟ್ಟಿದ್ದೇವೆ. ಅವರ ಪೈಕಿ ಯಾರ ನಡುವೆಯೂ ನಾವು ತಾರತಮ್ಯ ಮಾಡುವುದಿಲ್ಲ. ನಾವು ಅವನಿಗೆ (ಅಲ್ಲಾಹನಿಗೆ) ಸಂಪೂರ್ಣ ಶರಣಾದವರಾಗಿದ್ದೇವೆ.” [ಅಲ್-ಬಕರ: 136].
ಜನರಿಗೆ ಪುರಾವೆಯಾಗಿ ಮತ್ತು ಕರ್ಮವೆಸಗುವವರಿಗೆ ಮಾರ್ಗದರ್ಶಿಯಾಗಿ ಅಲ್ಲಾಹು ಅವನ ಪ್ರವಾದಿಗಳಿಗೆ ಗ್ರಂಥಗಳನ್ನು ಅವತೀರ್ಣಗೊಳಿಸಿದ್ದಾನೆ ಎಂದು ನಾವು ವಿಶ್ವಾಸವಿಡುತ್ತೇವೆ.
ಅವರು ಆ ಗ್ರಂಥಗಳಲ್ಲಿರುವ ಜ್ಞಾನಗಳನ್ನು ಜನರಿಗೆ ಕಲಿಸಿಕೊಟ್ಟು ಅವರನ್ನು ಸಂಸ್ಕರಿಸುತ್ತಿದ್ದರು.
ಅಲ್ಲಾಹು ಮುಹಮ್ಮದ್(ಸ)ರನ್ನು ಸಂಪೂರ್ಣ ಜಗತ್ತಿಗೆ ಕಳುಹಿಸಿದ್ದಾನೆ ಮತ್ತು ಅವರ ಧರ್ಮಶಾಸ್ತ್ರದ ಮೂಲಕ ಹಿಂದಿನ ಎಲ್ಲಾ ಧರ್ಮಶಾಸ್ತ್ರಗಳನ್ನು ರದ್ದುಗೊಳಿಸಿದ್ದಾನೆ ಎಂದು ನಾವು ವಿಶ್ವಾಸವಿಡುತ್ತೇವೆ. ಹಾಗೆಯೇ ಅವನು ಪವಿತ್ರ ಕುರ್ಆನ್ ಅನ್ನು ಎಲ್ಲಾ ದೈವಿಕ ಗ್ರಂಥಗಳ ಮೇಲ್ವಿಚಾರಣೆ ಮತ್ತು ರದ್ದು ಮಾಡುವ ಗ್ರಂಥವನ್ನಾಗಿ ಮಾಡಿದ್ದಾನೆ. ಪವಿತ್ರ ಕುರ್ಆನನ್ನು ಯಾವುದೇ ರೀತಿಯ ಬದಲಾವಣೆ ಅಥವಾ ತಿದ್ದುಪಡಿಗೆ ಒಳಗಾಗದಂತೆ ಸಂರಕ್ಷಿಸಿದ್ದಾನೆ. ಅತ್ಯುನ್ನತನಾದ ಅಲ್ಲಾಹನು ಹೇಳುತ್ತಾನೆ: “ಖಂಡಿತವಾಗಿಯೂ ಈ ಉಪದೇಶವನ್ನು (ಕುರ್ಆನನ್ನು) ನಾವೇ ಅವತೀರ್ಣಗೊಳಿಸಿದ್ದೇವೆ ಮತ್ತು ಖಂಡಿತವಾಗಿಯೂ ನಾವೇ ಅದನ್ನು ಸಂರಕ್ಷಿಸುತ್ತೇವೆ.” [ಅಲ್-ಹಿಜ್ರ್: 9] ಏಕೆಂದರೆ ಪವಿತ್ರ ಕುರ್ಆನ್ ಮಾನವ ಕುಲಕ್ಕೆ ಅವತೀರ್ಣವಾದ ಕೊನೆಯ ದೈವಿಕ ಗ್ರಂಥವಾಗಿದೆ ಮತ್ತು ಮುಹಮ್ಮದ್(ಸ)ರು ಮಾನವ ಕುಲಕ್ಕೆ ಕಳುಹಿಸಲಾದ ಕೊನೆಯ ಪ್ರವಾದಿಯಾಗಿದ್ದಾರೆ. ಇಸ್ಲಾಮ್ ಧರ್ಮವು ಪುನರುತ್ಥಾನ ದಿನದ ತನಕ ಅಲ್ಲಾಹು ಮನುಷ್ಯರಿಗಾಗಿ ತೃಪ್ತಿಯಿಂದ ಅಂಗೀಕರಿಸಿದ ಧರ್ಮವಾಗಿದೆ. ಅತ್ಯುನ್ನತನಾದ ಅಲ್ಲಾಹನು ಹೇಳುತ್ತಾನೆ: “ಖಂಡಿತವಾಗಿಯೂ ಅಲ್ಲಾಹನ ಬಳಿ ಧರ್ಮವೆಂದರೆ ಇಸ್ಲಾಮ್ ಮಾತ್ರವಾಗಿದೆ.” [ಆಲು ಇಮ್ರಾನ್: 19].
ಅಲ್ಲಾಹು ಪವಿತ್ರ ಕುರ್ಆನ್ನಲ್ಲಿ ತಿಳಿಸಿದ ದೈವಿಕ ಗ್ರಂಥಗಳು ಹೀಗಿವೆ:
ಪವಿತ್ರ ಕುರ್ಆನ್: ಅಲ್ಲಾಹು ಇದನ್ನು ಪ್ರವಾದಿ ಮುಹಮ್ಮದ್(ಸ)ರಿಗೆ ಅವತೀರ್ಣಗೊಳಿಸಿದನು.
ತೌರಾತ್: ಅಲ್ಲಾಹು ಇದನ್ನು ಪ್ರವಾದಿ ಮೂಸಾ(ಅ)ರಿಗೆ ಅವತೀರ್ಣಗೊಳಿಸಿದನು.
ಇಂಜೀಲ್: ಅಲ್ಲಾಹು ಇದನ್ನು ಪ್ರವಾದಿ ಈಸಾ(ಅ)ರಿಗೆ ಅವತೀರ್ಣಗೊಳಿಸಿದನು.
ಝಬೂರ್: ಅಲ್ಲಾಹು ಇದನ್ನು ಪ್ರವಾದಿ ದಾವೂದ್(ಅ)ರಿಗೆ ಅವತೀರ್ಣಗೊಳಿಸಿದನು.
ಇಬ್ರಾಹೀಮರ ಗ್ರಂಥ ಸುರುಳಿಗಳು: ಅಲ್ಲಾಹು ಇದನ್ನು ಪ್ರವಾದಿ ಇಬ್ರಾಹೀಮ್(ಅ)ರಿಗೆ ಅವತೀರ್ಣಗೊಳಿಸಿದನು.
ನಾಲ್ಕನೆಯ ಸ್ತಂಭ: ಸಂದೇಶವಾಹಕರಲ್ಲಿ ವಿಶ್ವಾಸವಿಡುವುದು
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: “ಅಲ್ಲಾಹನನ್ನು ಆರಾಧಿಸಿರಿ ಮತ್ತು ತಾಗೂತ್ಗಳನ್ನು ವರ್ಜಿಸಿರಿ ಎಂಬ ಸಂದೇಶದೊಂದಿಗೆ ನಾವು ಎಲ್ಲಾ ಸಮುದಾಯಗಳಿಗೂ ಪ್ರವಾದಿಯನ್ನು ಕಳುಹಿಸಿದ್ದೇವೆ.” [ಅನ್ನಹ್ಲ್: 36].
ಅಲ್ಲಾಹನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡದೆ ಅವನನ್ನು ಮಾತ್ರ ಆರಾಧಿಸಬೇಕು ಹಾಗೂ ಅಲ್ಲಾಹನ ಹೊರತು ಆರಾಧಿಸಲಾಗುತ್ತಿರುವ ಎಲ್ಲವನ್ನೂ ನಿಷೇಧಿಸಬೇಕು ಎಂದು ಜನರಿಗೆ ಕರೆ ನೀಡುವುದಕ್ಕಾಗಿ ಅಲ್ಲಾಹು ಎಲ್ಲಾ ಸಮುದಾಯಗಳಿಗೂ ಸಂದೇಶವಾಹಕರನ್ನು ಕಳುಹಿಸಿದ್ದಾನೆ ಎಂದು ನಾವು ವಿಶ್ವಾಸವಿಡುತ್ತೇವೆ.
ಸಂದೇಶವಾಹಕರೆಲ್ಲರೂ ಮನುಷ್ಯರು, ಪುರುಷರು ಮತ್ತು ಅಲ್ಲಾಹನ ದಾಸರೆಂದು ನಾವು ವಿಶ್ವಾಸವಿಡುತ್ತೇವೆ. ಅವರೆಲ್ಲರೂ ಸತ್ಯಸಂಧರು ಮತ್ತು ವಿಶ್ವಾಸಯೋಗ್ಯರು, ದೈವಭಕ್ತರು ಮತ್ತು ನಂಬಿಕೆಗೆ ಅರ್ಹರು, ಸನ್ಮಾರ್ಗ ತೋರಿಸುವವರು ಮತ್ತು ಸನ್ಮಾರ್ಗದಲ್ಲಿರುವವರು, ಅವರ ನೈಜತೆಯನ್ನು ಸಾಬೀತುಪಡಿಸುವ ಪವಾಡಗಳ ಮೂಲಕ ಅಲ್ಲಾಹು ಅವರನ್ನು ಬೆಂಬಲಿಸಿದ್ದಾನೆ, ಅಲ್ಲಾಹು ತಲುಪಿಸಬೇಕೆಂದು ಹೇಳಿದ ಎಲ್ಲವನ್ನೂ ಅವರು ಜನರಿಗೆ ತಲುಪಿಸಿಕೊಟ್ಟಿದ್ದಾರೆ ಮತ್ತು ಅವರೆಲ್ಲರೂ ಸ್ಫುಟವಾದ ಸತ್ಯದಲ್ಲಿ ಹಾಗೂ ಸ್ಪಷ್ಟ ಮಾರ್ಗದರ್ಶನದಲ್ಲಿದ್ದರು ಎಂದು ನಾವು ವಿಶ್ವಾಸವಿಡುತ್ತೇವೆ.
ಅವರಲ್ಲಿ ಮೊದಲನೆಯ ಸಂದೇಶವಾಹಕರಿಂದ ತೊಡಗಿ ಕೊನೆಯ ಸಂದೇಶವಾಹಕರ ತನಕ ಎಲ್ಲರೂ ಧರ್ಮದ ಮೂಲತತ್ವವನ್ನೇ ಬೋಧಿಸಿದ್ದರು. ಆರಾಧನೆಗಳು ಅಲ್ಲಾಹನಿಗೆ ಮಾತ್ರ ಸಲ್ಲತಕ್ಕದ್ದು ಹಾಗೂ ಅವನೊಂದಿಗೆ ಯಾವುದನ್ನೂ ಸಹಭಾಗಿಯಾಗಿ ಮಾಡತಕ್ಕದ್ದಲ್ಲ ಎಂಬುದೇ ಆ ಮೂಲತತ್ವ.
ಐದನೆಯ ಸ್ತಂಭ: ಅಂತ್ಯದಿನದಲ್ಲಿ ವಿಶ್ವಾಸವಿಡುವುದು
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: “ಅಲ್ಲಾಹು — ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ನಿಮ್ಮೆಲ್ಲರನ್ನೂ ಪುನರುತ್ಥಾನ ದಿನಕ್ಕಾಗಿ (ವಿಚಾರಣೆಗೆ) ಒಟ್ಟುಗೂಡಿಸುವನು. ಅದರಲ್ಲಿ ಅನುಮಾನವೇ ಇಲ್ಲ. ಸತ್ಯ ನುಡಿಯುವುದರಲ್ಲಿ ಅಲ್ಲಾಹನಿಗಿಂತಲೂ ಸತ್ಯಸಂಧರು ಯಾರಿದ್ದಾರೆ?” [ಅನ್ನಿಸಾ: 87].
ನಾವು ಅಂತ್ಯದಿನದಲ್ಲಿ ವಿಶ್ವಾಸವಿಡುತ್ತೇವೆ. ಅಂತ್ಯದಿನ ಎಂದರೆ ಪುನರುತ್ಥಾನ ದಿನವಾಗಿದ್ದು ಅದರ ನಂತರ ಬೇರೆ ದಿನವಿಲ್ಲ. ಆ ದಿನಕ್ಕೆ ಸಂಬಂಧಿಸಿ ಅಲ್ಲಾಹು ಪವಿತ್ರ ಕುರ್ಆನ್ನಲ್ಲಿ ಮತ್ತು ಪ್ರವಾದಿ(ಸ)ರು ಹದೀಸಿನಲ್ಲಿ ಹೇಳಿದ ಮನುಷ್ಯನ ಮರಣ, ಪುನರುತ್ಥಾನ, ಶಿಫಾರಸ್ಸು, ತಕ್ಕಡಿ, ವಿಚಾರಣೆ, ಸ್ವರ್ಗ, ನರಕ ಮುಂತಾದ ಎಲ್ಲದರಲ್ಲೂ ನಾವು ವಿಶ್ವಾಸವಿಡುತ್ತೇವೆ.
ಆರನೆಯ ಸ್ತಂಭ: ವಿಧಿಯಲ್ಲಿ – ಒಳಿತು ಕೆಡುಕುಗಳಲ್ಲಿ – ವಿಶ್ವಾಸವಿಡುವುದು.
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: "ನಾವು ಎಲ್ಲವನ್ನೂ ಒಂದು ಪೂರ್ವ ನಿರ್ಧಾರದೊಂದಿಗೆ ಸೃಷ್ಟಿಸಿದ್ದೇವೆ." [ಅಲ್-ಕಮರ್: 49]
ನಾವು ವಿಧಿಯಲ್ಲಿ – ಅದರ ಒಳಿತು ಮತ್ತು ಕೆಡುಕುಗಳಲ್ಲಿ – ವಿಶ್ವಾಸವಿಡುತ್ತೇವೆ. ವಿಧಿ ಎಂದರೆ ಅಲ್ಲಾಹು ತನ್ನ ಪೂರ್ವ ಜ್ಞಾನ ಮತ್ತು ಯುಕ್ತಿಯ ಆಧಾರದಲ್ಲಿ ಸೃಷ್ಟಿಗಳ ಬಗ್ಗೆ ತೆಗೆದುಕೊಳ್ಳುವ ನಿರ್ಣಯಗಳು. ಇಹಲೋಕದಲ್ಲಿ ಸೃಷ್ಟಿಗಳಿಗೆ ಸಂಭವಿಸುವುದೆಲ್ಲವೂ ಏಕೈಕನೂ ಸಹಭಾಗಿರಹಿತನೂ ಆದ ಅಲ್ಲಾಹನ ಜ್ಞಾನ, ವಿಧಿ ಮತ್ತು ಕಾರ್ಯನಿರ್ವಹಣೆಯ ಮೂಲಕವೇ ಸಂಭವಿಸುತ್ತದೆ ಮತ್ತು ಈ ವಿಧಿಗಳನ್ನು ಮನುಷ್ಯ ಸೃಷ್ಟಿಗೆ ಮುಂಚೆಯೇ ಲಿಖಿತಗೊಳಿಸಲಾಗಿದೆ ಎಂದು ನಾವು ವಿಶ್ವಾಸವಿಡುತ್ತೇವೆ. ಅದೇ ರೀತಿ ಮನುಷ್ಯನಿಗೆ ಇಚ್ಛಾ ಸ್ವಾತಂತ್ರ್ಯವಿದೆ ಮತ್ತು ಅವನು ಮಾಡುವ ಕರ್ಮಗಳೆಲ್ಲವೂ ಅವನಿಂದಲೇ ಸಂಭವಿಸುತ್ತದೆ ಎಂದು ನಾವು ವಿಶ್ವಾಸವಿಡುತ್ತೇವೆ. ಆದರೆ ಆ ಕರ್ಮಗಳು ಅಲ್ಲಾಹನ ಜ್ಞಾನ, ಇರಾದೆ ಮತ್ತು ಇಚ್ಛೆಗಳಿಗೆ ಹೊರತಾಗಿಲ್ಲ.
ವಿಧಿಯಲ್ಲಿರುವ ವಿಶ್ವಾಸವು ನಾಲ್ಕು ಹಂತಗಳನ್ನು ಒಳಗೊಂಡಿದೆ:
ಒಂದು: ಎಲ್ಲವನ್ನೂ ಪೂರ್ಣವಾಗಿ ಆವರಿಸಿಕೊಂಡಿರುವ ಅಲ್ಲಾಹನ ಜ್ಞಾನದಲ್ಲಿ ವಿಶ್ವಾಸವಿಡುವುದು
ಎರಡು: ಪುನರುತ್ಥಾನ ದಿನದ ತನಕ ಅಸ್ತಿತ್ವದಲ್ಲಿರುವ ಎಲ್ಲವನ್ನೂ ಅಲ್ಲಾಹು ಲಿಖಿತಗೊಳಿಸಿದ್ದಾನೆ ಎಂದು ವಿಶ್ವಾಸವಿಡುವುದು.
ಮೂರು: ಅಲ್ಲಾಹನ ಕಾರ್ಯರೂಪಕ್ಕೆ ಬರುವ ಇಚ್ಛೆ ಮತ್ತು ಸರ್ವ ಸಾಮರ್ಥ್ಯದ ಮೇಲೆ ವಿಶ್ವಾಸವಿಡುವುದು. ಅವನು ಬಯಸಿದ್ದು ಉಂಟಾಗುತ್ತದೆ ಮತ್ತು ಅವನು ಬಯಸದೇ ಇರುವುದು ಉಂಟಾಗುವುದಿಲ್ಲ.
ನಾಲ್ಕು: ಎಲ್ಲವನ್ನೂ ಸೃಷ್ಟಿಸಿದವನು ಅಲ್ಲಾಹು ಮತ್ತು ಸೃಷ್ಟಿಯಲ್ಲಿ ಅವನಿಗೆ ಯಾವುದೇ ಸಹಭಾಗಿಗಳಿಲ್ಲ ಎಂದು ವಿಶ್ವಾಸವಿಡುವುದು.
ಮೂರನೆಯ ಹಂತ: ಇಹ್ಸಾನ್
ಇಹ್ಸಾನ್ ಎಂದರೆ, ನೀನು ಅಲ್ಲಾಹನನ್ನು ನೋಡುತ್ತಿರುವಂತೆ ಅವನನ್ನು ಆರಾಧಿಸುವುದು. ನೀನು ಅವನನ್ನು ನೋಡುವುದಿಲ್ಲವಾದರೂ ಅವನು ನಿನ್ನನ್ನು ನೋಡುತ್ತಿದ್ದಾನೆ. ಅತ್ಯುನ್ನತನಾದ ಅಲ್ಲಾಹನು ಹೇಳುತ್ತಾನೆ: "ಖಂಡಿತವಾಗಿಯೂ ಅಲ್ಲಾಹು ಅವನನ್ನು ಭಯಪಟ್ಟು ಜೀವಿಸುವವರೊಂದಿಗೆ ಮತ್ತು ಇಹ್ಸಾನ್ ಮಾಡುವವರೊಂದಿಗೆ ಇದ್ದಾನೆ." [ಅನ್ನಹ್ಲ್: 128].
ಶುದ್ಧೀಕರಣ
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: "ಖಂಡಿತವಾಗಿಯೂ ಅಲ್ಲಾಹು ನಿರಂತರ ಪಶ್ಚಾತ್ತಾಪ ಮಾಡುವವರನ್ನು ಮತ್ತು ಶುಚಿತ್ವ ಪಾಲಿಸುವವರನ್ನು ಪ್ರೀತಿಸುತ್ತಾನೆ." [ಅಲ್-ಬಕರ: 22].
ಪ್ರವಾದಿ(ﷺ)ರು ಹೇಳಿದರು: “ನನ್ನ ಈ ವುಝುವಿನಂತೆ ವುಝು ನಿರ್ವಹಿಸಿ, ನಂತರ ಯಾವುದೇ ಮಾತನ್ನಾಡದೆ ಎರಡು ರಕಅತ್ ನಮಾಝ್ ನಿರ್ವಹಿಸುವವರಿಗೆ ಅಲ್ಲಾಹು ಅವರ ಗತ ಪಾಪಗಳನ್ನು ಕ್ಷಮಿಸುತ್ತಾನೆ.” [ಬುಖಾರಿ].
ನಮಾಝ್ಗೆ ಬಹಳ ಪ್ರಾಮುಖ್ಯತೆಯಿರುವುದರಿಂದ ಅದನ್ನು ನಿರ್ವಹಿಸುವುದಕ್ಕೆ ಮುಂಚೆ ವುಝು ನಿರ್ವಹಿಸಲು ಅಲ್ಲಾಹು ಆಜ್ಞಾಪಿಸಿದ್ದಾನೆ ಮತ್ತು ವುಝುವನ್ನು ನಮಾಝ್ನ ಸಿಂಧುತ್ವಕ್ಕೆ ಷರತ್ತಾಗಿ ನಿರ್ಣಯಿಸಿದ್ದಾನೆ. ವುಝು ನಮಾಝ್ನ ಕೀಲಿಕೈಯಾಗಿದ್ದು, ಅದರ ಶ್ರೇಷ್ಠತೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಹೆಚ್ಚು ಹೆಚ್ಚು ನಮಾಝ್ ನಿರ್ವಹಿಸಲು ಮನಸ್ಸಿನಲ್ಲಿ ಪ್ರೇರಣೆಯುಂಟಾಗುತ್ತದೆ. ಪ್ರವಾದಿ(ಸ)ರು ಹೇಳಿದರು: “ಶುದ್ಧೀಕರಣ ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ. ಅಲ್-ಹಮ್ದುಲಿಲ್ಲಾ ಎಂಬ ವಚನವು ತಕ್ಕಡಿಯನ್ನು ತುಂಬುತ್ತದೆ. ಸುಬ್ಹಾನಲ್ಲಾಹ್ ಮತ್ತು ಅಲ್-ಹಮ್ದುಲಿಲ್ಲಾಹ್ ಎಂಬ ಎರಡು ವಚನಗಳು ಭೂಮ್ಯಾಕಾಶಗಳ ನಡುವಿನ ಭಾಗವನ್ನು ತುಂಬುತ್ತವೆ. ನಮಾಝ್ ಬೆಳಕಾಗಿದೆ, ದಾನ ಪುರಾವೆಯಾಗಿದೆ, ಸಹನೆ ಪ್ರಕಾಶವಾಗಿದೆ ಮತ್ತು ಪವಿತ್ರ ಕುರ್ಆನ್ ನಿಮ್ಮ ಪರವಾಗಿ ಅಥವಾ ನಿಮಗೆ ವಿರುದ್ಧವಾಗಿರುವ ಪುರಾವೆಯಾಗಿದೆ. ಎಲ್ಲಾ ಮನುಷ್ಯರೂ ಬೆಳಗ್ಗೆ ತಮ್ಮ ದೇಹಗಳನ್ನು ಮಾರಾಟ ಮಾಡುತ್ತಾರೆ. ನಂತರ ಅವರು ಅದನ್ನು ಒಂದೋ ಸ್ವತಂತ್ರಗೊಳಿಸುತ್ತಾರೆ ಅಥವಾ ನಾಶಗೊಳಿಸುತ್ತಾರೆ.” [ಮುಸ್ಲಿಮ್].
ಪ್ರವಾದಿ(ಸ)ರು ಹೇಳಿದರು: “ಯಾರು ಅತ್ಯುತ್ತಮವಾಗಿ ವುಝು ನಿರ್ವಹಿಸುತ್ತಾರೋ ಅವರ ದೇಹದಿಂದ ಪಾಪಗಳು ಹೊರಹೋಗುತ್ತವೆ. ಎಲ್ಲಿಯವರೆಗೆಂದರೆ ಅವರ ಉಗುರುಗಳ ಅಡಿಭಾಗಗಳಿಂದಲೂ ಕೂಡ.” [ಮುಸ್ಲಿಮ್].
ಹೀಗೆ, ವುಝು ನಿರ್ವಹಿಸುವ ಮೂಲಕ ಭೌತಿಕ ಶುದ್ಧೀಕರಣ ಮತ್ತು (ವುಝು ಎಂಬ) ಈ ಆರಾಧನೆಯನ್ನು ನಿರ್ವಹಿಸುವ ಮೂಲಕ ಆಧ್ಯಾತ್ಮಿಕ ಶುದ್ಧೀಕರಣದ ಮೂಲಕ, ಅಲ್ಲಾಹನಲ್ಲಿರುವ ನಿಷ್ಕಳಂಕತೆ ಹಾಗೂ ಪ್ರವಾದಿ(ಸ)ರ ಚರ್ಯೆಯನ್ನು ಅನುಸರಿಸಿ ಮುಸಲ್ಮಾನನು ಅಲ್ಲಾಹನ ಮುಂದೆ ನಿಲ್ಲುತ್ತಾನೆ.
ವುಝು ಕಡ್ಡಾಯವಾಗಿರುವ ಆರಾಧನೆಗಳು:
1. ನಮಾಝ್. ಅದು ಕಡ್ಡಾಯ ಅಥವಾ ಐಚ್ಛಿಕ ನಮಾಝ್ ಆಗಿದ್ದರೂ ವುಝು ಕಡ್ಡಾಯವಾಗಿದೆ.
2. ಕಅಬಾಲಯದ ಪ್ರದಕ್ಷಿಣೆ (ತವಾಫ್) ಮಾಡುವುದು.
3. ಪವಿತ್ರ ಕುರ್ಆನ್ ಸ್ಪರ್ಶಿಸುವುದು.
ನಾನು ಶುದ್ಧ ನೀರಿನಿಂದ ವುಝು ಮತ್ತು ಸ್ನಾನ ಮಾಡುತ್ತೇನೆ:
ಶುದ್ಧ ನೀರು ಎಂದರೆ ಆಕಾಶದಿಂದ ಸುರಿಯುವ ಅಥವಾ ಭೂಮಿಯಿಂದ ಚಿಮ್ಮುವ ಮೂಲರೂಪದಲ್ಲಿರುವ, ಅಂದರೆ ಅದರ ಬಣ್ಣ, ರುಚಿ ಮತ್ತು ಪರಿಮಳ ಎಂಬ ಮೂರು ಗುಣಗಳ ಪೈಕಿ ಯಾವುದಕ್ಕೂ ಬದಲಾವಣೆ ಉಂಟಾಗದ ನೀರು.
ವುಝು
ಹಂತ 1: ಹೃದಯದಲ್ಲಿ ನಿಯ್ಯತ್ (ಉದ್ದೇಶ) ಮಾಡುವುದು. ನಿಯ್ಯತ್ ಮಾಡುವುದು ಎಂದರೆ ಅಲ್ಲಾಹನ ಸಾಮಿಪ್ಯ ಗಳಿಸುವ ಉದ್ದೇಶದಿಂದ ಆರಾಧನೆ ಮಾಡಲು ಹೃದಯದಲ್ಲಿ ದೃಢ ನಿರ್ಧಾರ ಮಾಡಿಕೊಳ್ಳುವುದು.
ಹಂತ 2: ಬಿಸ್ಮಿಲ್ಲಾಹ್ ಎಂದು ಹೇಳುವುದು.
ಹಂತ 3: ಎರಡು ಅಂಗೈಗಳನ್ನು ಮೂರು ಬಾರಿ ತೊಳೆಯುವುದು.
ಹಂತ 4: ಮೂರು ಬಾರಿ ಮದ್ಮದಃ ಮಾಡುವುದು (ಬಾಯಿ ಮುಕ್ಕಳಿಸುವುದು).
ಮದ್ಮದಃ ಎಂದರೆ ನೀರನ್ನು ಬಾಯಿಗೆ ಹಾಕಿ ಮುಕ್ಕಳಿಸಿ ನಂತರ ಹೊರಕ್ಕೆ ಉಗುಳುವುದು.
ಹಂತ 5: ಮೂರು ಬಾರಿ ಇಸ್ತಿನ್ಶಾಕ್ ಮತ್ತು ಇಸ್ತಿನ್ಸಾರ್ ಮಾಡುವುದು. ಇಸ್ತಿನ್ಶಾಕ್ ಎಂದರೆ ಶ್ವಾಸದೊಂದಿಗೆ ನೀರನ್ನು ಮೂಗಿನ ತುದಿಯ ತನಕ ಎಳೆಯುವುದು.
ಇಸ್ತಿನ್ಶಾರ್ ಎಂದರೆ ಶ್ವಾಸ ಬಿಡುವುದರೊಂದಿಗೆ ಮೂಗಿನೊಳಗಿರುವ ಮಾಲಿನ್ಯ ಮುಂತಾದವುಗಳನ್ನು ಹೊರ ತಳ್ಳುವುದು.
ಹಂತ 6: ಮುಖವನ್ನು ಮೂರು ಬಾರಿ ತೊಳೆಯುವುದು.
ಮುಖದ ವ್ಯಾಪ್ತಿ:
ಮುಖ ಎಂದರೆ ನಾವು ಮುಖಾಮುಖಿಯಾಗುವಾಗ ಕಾಣುವ ಭಾಗ.
ಅಗಲದಲ್ಲಿ ಅದರ ವ್ಯಾಪ್ತಿ : ಒಂದು ಕಿವಿಯಿಂದ ಇನ್ನೊಂದು ಕಿವಿಯವರೆಗೆ.
ಉದ್ದದಲ್ಲಿ ಅದರ ವ್ಯಾಪ್ತಿ: ಹಣೆಯಲ್ಲಿ ಕೂದಲು ಬೆಳೆಯುವ ಸ್ಥಳದಿಂದ ಗಡ್ಡದ ಅಡಿಯವರೆಗೆ.
ಮುಖದಲ್ಲಿರುವ ತೆಳು ರೋಮಗಳು, ಬಯಾದ್ ಮತ್ತು ಇಝಾರ್ ಎಲ್ಲವೂ ಮುಖವನ್ನು ತೊಳೆಯುವುದರಲ್ಲಿ ಒಳಪಡುತ್ತವೆ.
ಬಯಾದ್ ಎಂದರೆ: ಇಝಾರ್ ಮತ್ತು ಕಿವಿಯ ಹಾಳೆಗಳ ನಡುವಿನ ಸ್ಥಳ.
ಇಝಾರ್ ಎಂದರೆ: ಮುಖದ ಉಬ್ಬಿದ ಎಲುಬಿನಲ್ಲಿರುವ, ತಲೆಯ ಒಳಭಾಗಕ್ಕೆ ಹೋಗುವ ಮತ್ತು ಅಲ್ಲಿಂದ ಕಿವಿಯ ಗೂಟಕ್ಕೆ ಇಳಿದ ಕೂದಲು (ಗಿರಿಜಾ ಮೀಸೆ).
ಅದರಂತೆಯೇ, ಗಡ್ಡದಲ್ಲಿ ಗೋಚರಿಸುವ ಮತ್ತು ಮುಖದಿಂದ ಕೆಳಗೆ ಇಳಿದಿರುವ ಎಲ್ಲಾ ದಪ್ಪ ಕೂದಲುಗಳು ಕೂಡ ಮುಖವನ್ನು ತೊಳೆಯುವುದರಲ್ಲಿ ಒಳಪಡುತ್ತವೆ.
ಹಂತ 7: ಬೆರಳುಗಳ ತುದಿಯಿಂದ ಮೊಣಕೈಗಳವರೆಗೆ ಕೈಗಳನ್ನು ಮೂರು ಬಾರಿ ತೊಳೆಯುವುದು.
ಕೈಗಳಲ್ಲಿ ಕಡ್ಡಾಯವಾಗಿ ತೊಳೆಯಬೇಕಾದ ಭಾಗದಲ್ಲಿ ಮೊಣಕೈಗಳು ಕೂಡ ಒಳಪಡುತ್ತವೆ.
ಹಂತ 8. ಎರಡು ಕಿವಿಗಳ ಜೊತೆಗೆ ಸಂಪೂರ್ಣ ತಲೆಯನ್ನು ಒಂದು ಬಾರಿ ಸವರುವುದು.
ತಲೆಯ ಮುಂಭಾಗದಿಂದ ಪ್ರಾರಂಭಿಸಿ, ಕತ್ತಿನ ಹಿಂಭಾಗಕ್ಕೆ ತಲುಪಿ ಅಲ್ಲಿಂದ ಪುನಃ ಮುಂಭಾಗಕ್ಕೆ ತರುವುದು.
ತೋರುಬೆರಳುಗಳನ್ನು ಕಿವಿಗಳ ಒಳಭಾಗದಲ್ಲಿ ಮತ್ತು ಹೆಬ್ಬೆರಳುಗಳನ್ನು ಕಿವಿಗಳ ಹೊರಭಾಗದಲ್ಲಿಟ್ಟು, ಅವುಗಳಿಂದ ಕಿವಿಯ ಹೊರಭಾಗ ಮತ್ತು ಒಳಭಾಗವನ್ನು ಸವರುವುದು.
ಹಂತ 9. ಕಾಲುಗಳ ಬೆರಳುಗಳಿಂದ ತೊಡಗಿ ಹರಡುಗಂಟುಗಳ ತನಕ ಕಾಲುಗಳನ್ನು ತೊಳೆಯುವುದು. ಕಾಲುಗಳಲ್ಲಿ ಕಡ್ಡಾಯವಾಗಿ ತೊಳೆಯಬೇಕಾದ ಭಾಗಗಳಲ್ಲಿ ಹರಡುಗಂಟುಗಳು ಕೂಡ ಒಳಪಡುತ್ತವೆ.
ಹರಡುಗಂಟುಗಳು ಎಂದರೆ ಕಣಕಾಲುಗಳ ಬುಡದಲ್ಲಿ ಉಬ್ಬಿಕೊಂಡಿರುವ ಮೂಳೆಗಳು.
ಹಂತ 10: ವುಝು ನಿರ್ವಹಿಸಿದ ನಂತರ ಈ ಪ್ರಾರ್ಥನೆಯನ್ನು ಪಠಿಸುವುದು ಸುನ್ನತ್ತಾಗಿದೆ: “ಅಶ್ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ವಅಶ್ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು. ಅಲ್ಲಾಹುಮ್ಮಜ್ಅಲ್ನೀ ಮಿನ ತ್ತವ್ವಾಬೀನ, ವಜ್ಅಲ್ನೀ ಮಿನಲ್ ಮುತತಹ್ಹಿರೀನ್.” (ಅರ್ಥ: ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್(ಸ) ಅಲ್ಲಾಹನ ದಾಸ ಮತ್ತು ಸಂದೇಶವಾಹಕರು ಎಂದು ನಾನು ಸಾಕ್ಷಿ ವಹಿಸುತ್ತೇನೆ. ಓ ಅಲ್ಲಾಹ್! ನನ್ನನ್ನು ನಿರಂತರ ಪಶ್ಚಾತ್ತಾಪಪಡುವವರೊಡನೆ ಮತ್ತು ಸದಾ ಶುಚಿತ್ವ ಪಾಲಿಸುವವರೊಂದಿಗೆ ಸೇರಿಸು). ಇದಕ್ಕೆ ಆಧಾರ ಪ್ರವಾದಿ(ಸ)ರ ಈ ವಚನ: “ಯಾರು ಅತ್ಯುತ್ತಮವಾಗಿ ವುಝು ನಿರ್ವಹಿಸಿ, ನಂತರ, ಅಶ್ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ವಅಶ್ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು. ಅಲ್ಲಾಹುಮ್ಮಜ್ಅಲ್ನೀ ಮಿನ ತ್ತವ್ವಾಬೀನ, ವಜ್ಅಲ್ನೀ ಮಿನಲ್ ಮುತತಹ್ಹಿರೀನ್ ಎಂದು ಹೇಳುತ್ತಾರೋ, ಅವರಿಗೆ ಸ್ವರ್ಗದ ಎಂಟು ಬಾಗಿಲುಗಳು ತೆರೆಯುತ್ತವೆ. ಯಾವುದೇ ಬಾಗಿಲಿನಿಂದಲೂ ಅವರಿಗೆ ಸ್ವರ್ಗ ಪ್ರವೇಶಿಸಬಹುದು.” [ತಿರ್ಮಿದಿ]
ಇವುಗಳಿಂದ ವುಝು ಅಸಿಂಧುವಾಗುತ್ತದೆ:
1. ವಿಸರ್ಜನಾ ದ್ವಾರಗಳಿಂದ ಮಲ, ಮೂತ್ರ, ವಾಯು, ವೀರ್ಯ, ಬಿಳಿದ್ರವ ಮುಂತಾದವುಗಳು ಹೊರಬರುವುದು.
2. ಗಾಢ ನಿದ್ದೆ, ಮೂರ್ಛೆ, ಅಮಲು ಪದಾರ್ಥ ಸೇವನೆ, ಬುದ್ಧಿಭ್ರಮಣೆ ಮುಂತಾದವುಗಳಿಂದ ಪ್ರಜ್ಞೆ ಕಳೆದುಕೊಳ್ಳುವುದು.
3. ಜನಾಬತ್ (ದೊಡ್ಡ ಅಶುದ್ಧಿ), ಋತುಸ್ರಾವ, ಹೆರಿಗೆಸ್ರಾವ ಮುಂತಾದ ಸ್ನಾನ ಕಡ್ಡಾಯವಾಗುವುಗಳು ಉಂಟಾಗುವುದು.
ಮಲಮೂತ್ರ ವಿಸರ್ಜನೆ ಮಾಡಿದರೆ ಆ ಹೊಲಸನ್ನು ಶುದ್ಧ ನೀರಿನಿಂದ ಶುಚಿಗೊಳಿಸಬೇಕು. ಇದು ಅತ್ಯುತ್ತಮ ವಿಧಾನವಾಗಿದೆ. ಶುದ್ಧ ನೀರು ಲಭ್ಯವಿಲ್ಲದಿದ್ದರೆ, ಹೊಲಸನ್ನು ನಿವಾರಿಸುವಂತಹ ಕಲ್ಲು, ಕಾಗದ, ಬಟ್ಟೆ ಮುಂತಾದವುಗಳಿಂದ ಶುಚಿಗೊಳಿಸಬೇಕು. ನೀರಲ್ಲದ ವಸ್ತುಗಳನ್ನು ಶುಚಿತ್ವಕ್ಕೆ ಬಳಸುವುದಾದರೆ, ಮೂರು ಸಲ ಅಥವಾ ಅದಕ್ಕಿಂತ ಹೆಚ್ಚು ಬಾರಿ ಬಳಸಿ ಶುಚಿಗೊಳಿಸಬೇಕು. ಹಾಗೆಯೇ ಅವು ಶುದ್ಧ ಮತ್ತು ಧರ್ಮಸಮ್ಮತ ವಸ್ತುಗಳಾಗಿರಬೇಕು.
ಖುಫ್ಫ್ ಮತ್ತು ಜೌರಬ್ಗಳ ಮೇಲೆ ಸವರುವುದು.
ಖುಫ್ಫ್ ಅಥವಾ ಜೌರಬ್ಗಳನ್ನು ಧರಿಸಿದ್ದರೆ, ಕಾಲುಗಳನ್ನು ತೊಳೆಯಲು ಕೆಲವು ಷರತ್ತುಗಳ ಮೇರೆಗೆ ಅವುಗಳನ್ನು ಕಳಚದೆ, ಅವುಗಳ ಮೇಲೆ ಸವರಬಹುದು. ಆ ಷರತ್ತುಗಳು ಹೀಗಿವೆ:
1. ಚಿಕ್ಕ ಅಶುದ್ಧಿ ಮತ್ತು ದೊಡ್ಡ ಅಶುದ್ಧಿಯಿಂದ ಸಂಪೂರ್ಣ ಶುದ್ಧವಾದ ನಂತರ ಅವುಗಳನ್ನು ಧರಿಸಿರಬೇಕು.
2. ಖುಫ್ಫ್ ಅಥವಾ ಜೌರಬ್ಗಳು ಯಾವುದೇ ಹೊಲಸುಗಳಿಲ್ಲದೆ ಶುಚಿಯಾಗಿರಬೇಕು.
3. ನಿಗದಿತ ಅವಧಿಯೊಳಗೆ ಸವರಬೇಕು.
4. ಖುಫ್ಫ್ ಅಥವಾ ಜೌರಬ್ಗಳು ಧರ್ಮಸಮ್ಮತ ಮೂಲದ್ದಾಗಿರಬೇಕು. ಕಳ್ಳತನ ಮಾಡಿದ್ದೋ ಬಲವಂತದಿಂದ ವಶಪಡಿಸಿದ್ದೋ ಆಗಿರಬಾರದು.
ಖುಫ್ಫ್ ಎಂದರೆ ತೆಳುವಾದ ಚರ್ಮದಿಂದ ತಯಾರಿಸಲಾದ ಪಾದರಕ್ಷೆ. ಪಾದಗಳನ್ನು ಮುಚ್ಚುವ ಶೂಗಳಿಗೂ ಇದೇ ನಿಯಮ ಅನ್ವಯವಾಗುತ್ತದೆ. ಜೌರಬ್ ಎಂದರೆ ಪಾದಗಳಿಗೆ ಧರಿಸುವ ಬಟ್ಟೆಯಿಂದ ತಯಾರಿಸಲಾದ ವಸ್ತು. ಇದನ್ನು ಕಾಲ್ಚೀಲ (ಸಾಕ್ಸ್) ಎಂದು ಕರೆಯಲಾಗುತ್ತದೆ.
ಪಾದರಕ್ಷೆಗಳ ಮೇಲೆ ಸವರುವುದರ ಹಿಂದಿರುವ ಯುಕ್ತಿ: ಸುಲಭ ಮತ್ತು ಸರಳಗೊಳಿಸುವುದು. ಏಕೆಂದರೆ ಖುಫ್ಫ್ ಅಥವಾ ಜೌರಬ್ಗಳನ್ನು ಕಳಚಿ ಕಾಲುಗಳನ್ನು ತೊಳೆಯುವುದು ಮುಸ್ಲಿಮರಿಗೆ ಬಹಳ ಕಷ್ಟವಾಗುತ್ತದೆ. ವಿಶೇಷವಾಗಿ ಚಳಿಗಾಲ, ತೀವ್ರ ಚಳಿಯಿರುವಾಗ ಮತ್ತು ಪ್ರಯಾಣದ ಸಂದರ್ಭಗಳಲ್ಲಿ.
ಸವರುವ ಅವಧಿ: ನಿವಾಸಿಗಳು (ಪ್ರಯಾಣಿಕರಲ್ಲದವರು): ಒಂದು ದಿನ ರಾತ್ರಿ (24 ತಾಸು). ಪ್ರಯಾಣಿಕರು: ಮೂರು ದಿನ ರಾತ್ರಿಗಳು (72 ತಾಸು).
ವುಝು ಅಸಿಂಧುವಾದ ನಂತರ ಮೊದಲ ಬಾರಿ ಖುಫ್ಫ್ ಅಥವಾ ಜೌರಬ್ಗಳ ಮೇಲೆ ಸವರುವಾಗ ಸವರುವ ಅವಧಿ ಆರಂಭವಾಗುತ್ತದೆ.
ಖುಫ್ಫ್ ಅಥವಾ ಜೌರಬ್ಗಳ ಮೇಲೆ ಸವರುವ ವಿಧಾನ:
1. ಕೈಗಳನ್ನು ಒದ್ದೆ ಮಾಡುವುದು.
2. ಪಾದದ ಮೇಲ್ಭಾಗವನ್ನು ಸವರುವುದು (ಕಾಲು ಬೆರಳುಗಳ ತುದಿಯಿಂದ ಕಣಕಾಲಿನ ಬುಡದ ತನಕ).
3. ಬಲಗೈಯಿಂದ ಬಲಗಾಲನ್ನು ಮತ್ತು ಎಡಗೈಯಿಂದ ಎಡಗಾಲನ್ನು ಸವರುವುದು.
ಸವರುವುದನ್ನು ಅಸಿಂಧುಗೊಳಿಸುವ ವಿಷಯಗಳು: 1. ಸ್ನಾನವನ್ನು ಕಡ್ಡಾಯಗೊಳಿಸುವಂತದ್ದು ಉಂಟಾಗುವುದು. 2. ಸವರುವ ಅವಧಿ ಮುಕ್ತಾಯವಾಗುವುದು.
ಸ್ನಾನ
ಪುರುಷ ಅಥವಾ ಮಹಿಳೆ ಸಂಭೋಗ ಮಾಡಿದರೆ (ಸಂಭೋಗದ ನಂತರ ವೀರ್ಯ ಸ್ಖಲನವಾಗದಿದ್ದರೂ ಸಹ), ಅಥವಾ ಎಚ್ಚರವಾಗಿರುವಾಗ ಕಾಮೋದ್ರೇಕದಿಂದ ವೀರ್ಯ ಸ್ಖಲನವಾದರೆ, ಅಥವಾ ಸ್ವಪ್ನಸ್ಖಲನವಾದರೆ, ನಮಾಝ್'ನಂತಹ ಶುದ್ಧಿಯು ಕಡ್ಡಾಯವಾಗಿರುವ ಆರಾಧನೆಗಳನ್ನು ನಿರ್ವಹಿಸಲು ಸ್ನಾನ ಮಾಡುವುದು ಕಡ್ಡಾಯವಾಗಿದೆ. ಅದೇ ರೀತಿ ಮಹಿಳೆಗೆ ಋತುಸ್ರಾವ ಅಥವಾ ಹೆರಿಗೆಸ್ರಾವವಾಗಿ ನಂತರ ಶುದ್ಧಿಯಾದರೆ, ನಮಾಝ್ ಮುಂತಾದ ಶುದ್ಧಿಯು ಕಡ್ಡಾಯವಾಗಿರುವ ಆರಾಧನೆಗಳನ್ನು ನಿರ್ವಹಿಸಲು ಸ್ನಾನ ಮಾಡುವುದು ಕಡ್ಡಾಯವಾಗಿದೆ.
ಸ್ನಾನ ಮಾಡುವ ವಿಧಾನ:
ಯಾವುದೇ ವಿಧದಲ್ಲಾದರೂ ಮುಸಲ್ಮಾನನು ತನ್ನ ಸಂಪೂರ್ಣ ದೇಹವನ್ನು ನೀರಿನಿಂದ ಒದ್ದೆ ಮಾಡಬೇಕು. ಬಾಯಿ ಮುಕ್ಕಳಿಸುವುದು ಮತ್ತು ಮೂಗಿನ ಹೊರಳೆಗಳನ್ನು ಶುಚಿಗೊಳಿಸುವುದು ಕೂಡ ಇದರಲ್ಲಿ ಒಳಪಡುತ್ತದೆ. ದೇಹದ ಎಲ್ಲಾ ಭಾಗಗಳಿಗೂ ನೀರು ತಲುಪಿದರೆ ದೊಡ್ಡ ಅಶುದ್ಧಿ ನಿವಾರಣೆಯಾಗಿ ಶುದ್ಧೀಕರಣವು ಪೂರ್ಣವಾಗುತ್ತದೆ.
ಪ್ರವಾದಿ(ಸ)ರು ಸ್ನಾನ ಮಾಡುತ್ತಿದ್ದ ಇನ್ನೊಂದು ಪೂರ್ಣರೂಪವು ಹೀಗಿದೆ:
01. ಅಶುದ್ಧಿಯನ್ನು ನಿವಾರಿಸುತ್ತೇನೆಂದು ನಿಯ್ಯತ್ ಮಾಡುವುದು.
02. ಬಿಸ್ಮಿಲ್ಲಾಹ್ ಹೇಳುವುದು, ಕೈಗಳನ್ನು ಮೂರು ಬಾರಿ ತೊಳೆಯುವುದು, ನಂತರ ಗುಹ್ಯಭಾಗವನ್ನು ತೊಳೆಯುವುದು.
03. ನಮಾಝ್ಗೆ ವುಝು ಮಾಡುವಂತೆ ಪೂರ್ಣವಾಗಿ ವುಝು ಮಾಡುವುದು.
04. ಮೂರು ಬಾರಿ ತಲೆಯ ಮೇಲೆ ನೀರು ಸುರಿಯುವುದು ಮತ್ತು ತಲೆಗೂದಲ ಬುಡವನ್ನು ನೀರಿನಿಂದ ಒದ್ದೆ ಮಾಡುವುದು.
05. ದೇಹಕ್ಕೆ ಪೂರ್ಣವಾಗಿ ನೀರು ಹಾಯಿಸುವುದು. ಮೊದಲು ಬಲಭಾಗದಿಂದ ಪ್ರಾರಂಭಿಸಿ ನಂತರ ಎಡಭಾಗಕ್ಕೆ ನೀರು ಸುರಿಯುವುದು. ನೀರು ದೇಹದ ಎಲ್ಲಾ ಭಾಗಗಳನ್ನು ತಲುಪುವಂತೆ ದೇಹವನ್ನು ತಿಕ್ಕಿ ತೊಳೆಯುವುದು.
ದೊಡ್ಡ ಅಶುದ್ಧಿಯಿರುವವರು ಸ್ನಾನ ಮಾಡುವವರೆಗೆ ಈ ಕೆಳಗಿನವುಗಳನ್ನು ಮಾಡುವುದು ನಿಷಿದ್ಧವಾಗಿದೆ:
1. ನಮಾಝ್.
2. ಕಅಬಾಲಯಕ್ಕೆ ಪ್ರದಕ್ಷಿಣೆ (ತವಾಫ್).
3. ಮಸೀದಿಯಲ್ಲಿ ತಂಗುವುದು. ಮಸೀದಿಯಲ್ಲಿ ತಂಗದೆ ದಾಟಿ ಹೋಗುವುದು ನಿಷಿದ್ಧವಲ್ಲ.
4. ಪವಿತ್ರ ಕುರ್ಆನ್ ಸ್ಪರ್ಶಿಸುವುದು.
5. ಕುರ್ಆನ್ ಪಾರಾಯಣ.
ತಯಮ್ಮುಮ್:
ಮುಸಲ್ಮಾನನಿಗೆ ಶುಚಿಗೊಳಿಸಲು ನೀರು ದೊರೆಯದಿದ್ದರೆ, ಅಥವಾ ರೋಗ ಮುಂತಾದ ಕಾರಣಗಳಿಂದ ನೀರನ್ನು ಬಳಸಲು ಸಾಧ್ಯವಿಲ್ಲದಿದ್ದರೆ ಮತ್ತು ನಮಾಝಿನ ಸಮಯ ಕಳೆದುಹೋಗಬಹುದೆಂದು ಭಯವಾದರೆ, ಮಣ್ಣಿನಿಂದ ತಯಮ್ಮುಮ್ ಮಾಡಬೇಕು.
ತಯಮ್ಮುಮ್ ಮಾಡುವ ವಿಧಾನ: ಎರಡೂ ಕೈಗಳಿಂದ ನೆಲಕ್ಕೆ ಒಂದು ಬಾರಿ ಹೊಡೆದು, ನಂತರ ಅದರಿಂದ ಮುಖ ಮತ್ತು ಅಂಗೈಗಳನ್ನು ಮಾತ್ರ ಸವರುವುದು. ಮಣ್ಣು ಸ್ವಚ್ಛವಾಗಿರಬೇಕು ಎಂಬ ನಿಬಂಧನೆಯಿದೆ.
ತಯಮ್ಮುಮ್ ಅಸಿಂಧುವಾಗುವ ಕಾರ್ಯಗಳು:
1. ವುಝು ಅಸಿಂಧುವಾಗುವ ಎಲ್ಲದರಿಂದಲೂ ತಯಮ್ಮುಮ್ ಅಸಿಂಧುವಾಗುತ್ತದೆ.
2. ಯಾವ ಆರಾಧನೆಗಾಗಿ ತಯಮ್ಮುಮ್ ಮಾಡಲಾಯಿತೋ ಆ ಆರಾಧನೆಯನ್ನು ಪ್ರಾರಂಭಿಸುವುದಕ್ಕಿಂತ ಮುಂಚೆ ನೀರು ಲಭ್ಯವಾದರೆ.
ನಮಾಝ್
ಅಲ್ಲಾಹನು ಮುಸಲ್ಮಾನರಿಗೆ ಎಲ್ಲಾ ದಿನ-ರಾತ್ರಿಗಳಲ್ಲಿ ಐದು ಹೊತ್ತಿನ ನಮಾಝ್ಗಳನ್ನು ಕಡ್ಡಾಯಗೊಳಿಸಿದ್ದಾನೆ. ಅವು: ಫಜ್ರ್, ಝುಹರ್, ಅಸರ್, ಮಗ್ರಿಬ್ ಮತ್ತು ಇಶಾ.
ನಮಾಝ್ಗಾಗಿ ಸಿದ್ಧವಾಗುವುದು
ನಮಾಝ್ನ ಸಮಯ ಆರಂಭವಾಗುವಾಗ, ಮುಸಲ್ಮಾನನು ಸಣ್ಣ ಅಶುದ್ಧಿಯಿಂದ ಮತ್ತು ದೊಡ್ಡ ಅಶುದ್ಧಿಯಿಂದ ತನ್ನನ್ನು ಶುದ್ಧೀಕರಿಸಿರಬೇಕು.
ಯಾವುದಕ್ಕೆ ಸ್ನಾನ ಕಡ್ಡಾಯವೋ ಅದು ದೊಡ್ಡ ಅಶುದ್ಧಿಯಾಗಿದೆ.
ಯಾವುದಕ್ಕೆ ವುಝು ಕಡ್ಡಾಯವೋ ಅದು ಸಣ್ಣ ಅಶುದ್ಧಿಯಾಗಿದೆ.
ಮುಸಲ್ಮಾನನು ತನ್ನ ಔರಹ್ (ಕಡ್ಡಾಯವಾಗಿ ಮುಚ್ಚಬೇಕಾದ ಭಾಗಗಳು) ಮುಚ್ಚಿ, ಯಾವುದೇ ಕಲ್ಮಶಗಳಿಲ್ಲದ ಶುದ್ಧವಾದ ಸ್ಥಳದಲ್ಲಿ, ಶುದ್ಧ ಬಟ್ಟೆ ಧರಿಸಿ ನಮಾಝ್ ನಿರ್ವಹಿಸುವುದು.
ಮುಸಲ್ಮಾನನು ನಮಾಝ್ನ ಸಮಯದಲ್ಲಿ ತನ್ನ ದೇಹವನ್ನು ಮುಚ್ಚುವ ಸೂಕ್ತ ಬಟ್ಟೆಗಳನ್ನು ಧರಿಸುವುದು. ನಮಾಝ್ನ ಸಮಯದಲ್ಲಿ ಹೊಕ್ಕುಳ ಮತ್ತು ಮಂಡಿಯ ನಡುವಿನ ಯಾವುದೇ ಭಾಗವನ್ನು ಪ್ರದರ್ಶಿಸುವುದು ಪುರುಷರಿಗೆ ನಿಷಿದ್ಧವಾಗಿದೆ.
ಮಹಿಳೆಯರು ನಮಾಝ್ ಮಾಡುವಾಗ ಮುಖ ಮತ್ತು ಮುಂಗೈಗಳನ್ನು ಬಿಟ್ಟು ದೇಹದ ಎಲ್ಲಾ ಭಾಗಗಳನ್ನು ಮುಚ್ಚಿಕೊಳ್ಳಬೇಕು.
ಮುಸಲ್ಮಾನನು ನಮಾಝ್ ಮಾಡುವಾಗ ಅದರಲ್ಲಿ ಹೇಳಬೇಕಾದ ನಿರ್ದಿಷ್ಟ ವಚನಗಳನ್ನು ಬಿಟ್ಟು ಬೇರೇನೂ ಮಾತನಾಡುವಂತಿಲ್ಲ. ಇಮಾಮ್'ನ ಪಾರಾಯಣವನ್ನು ಕಿವಿಗೊಟ್ಟು ಆಲಿಸಬೇಕು ಮತ್ತು ನಮಾಝ್ ಮಾಡುವಾಗ ಅತ್ತಿತ್ತ ತಿರುಗಿ ನೋಡಬಾರದು. ನಮಾಝ್ನ ನಿರ್ದಿಷ್ಟ ವಚನಗಳನ್ನು ಕಂಠಪಾಠ ಮಾಡಿರದಿದ್ದರೆ, ನಮಾಝ್ ಮುಗಿಯುವ ತನಕ ಅಲ್ಲಾಹನನ್ನು ಸ್ಮರಿಸುತ್ತಲೂ ಸ್ತುತಿಸುತ್ತಲೂ ಇರುವುದು. ನಮಾಝ್ ಮತ್ತು ಅದರಲ್ಲಿ ಹೇಳಬೇಕಾದ ವಚನಗಳನ್ನು ಆದಷ್ಟು ಬೇಗ ಕಲಿಯುವುದು ಮುಸಲ್ಮಾನನಿಗೆ ಕಡ್ಡಾಯವಾಗಿದೆ.
ಸರಿಯಾದ ವಿಧಾನದಲ್ಲಿ ನಮಾಝ್ ನಿರ್ವಹಿಸುವುದಕ್ಕಾಗಿ ನಾವು ಈ ಕೆಳಗಿನ ಹಂತಗಳನ್ನು ವಿಶೇಷ ಗಮನದೊಂದಿಗೆ ನಿರ್ವಹಿಸಬೇಕು.
ಹಂತ 1. ನಿರ್ವಹಿಸಲು ಉದ್ದೇಶಿಸುವ ಕಡ್ಡಾಯ ನಮಾಝ್ಗೆ ಹೃದಯದಲ್ಲಿ ನಿಯ್ಯತ್ ಮಾಡುವುದು.
ವುಝು ನಿರ್ವಹಿಸಿದ ನಂತರ, ಕಿಬ್ಲಾದ ದಿಕ್ಕಿಗೆ ತಿರುಗಿ, ನಿಲ್ಲಲು ಸಾಧ್ಯವಾದರೆ ನಿಂತುಕೊಂಡೇ ನಮಾಝ್ ನಿರ್ವಹಿಸುವುದು.
ಹಂತ 2. ಭುಜಗಳಿಗೆ ಸಮಾನಾಂತರವಾಗಿ ಕೈಗಳನ್ನು ಎತ್ತಿ, ನಮಾಝನ್ನು ಪ್ರವೇಶಿಸುತ್ತೇನೆಂದು ನಿಯ್ಯತ್ ಮಾಡಿ, “ಅಲ್ಲಾಹು ಅಕ್ಬರ್” ಎಂದು ಹೇಳುವುದು.
ಹಂತ 3. ಹದೀಸಿನಲ್ಲಿ ಬಂದಿರುವ ಪ್ರಾರಂಭದ ಪ್ರಾರ್ಥನೆಯನ್ನು ಪಠಿಸುವುದು. ಆ ಪ್ರಾರ್ಥನೆಗಳಲ್ಲಿ ಒಂದು ಹೀಗಿದೆ: “ಸುಬ್ಹಾನಕಲ್ಲಾಹುಮ್ಮ ವಬಿಹಮ್ದಿಕ, ವತಬಾರಕಸ್ಮುಕ, ವತಆಲಾ ಜದ್ದುಕ, ವಲಾಇಲಾಹ ಗೈರುಕ” (ಅರ್ಥ: ಓ ಅಲ್ಲಾಹ್! ನಿನ್ನ ಪರಿಶುದ್ಧತೆಯನ್ನು ಕೊಂಡಾಡುತ್ತಾ ನಿನ್ನನ್ನು ಸ್ತುತಿಸುತ್ತೇನೆ. ನಿನ್ನ ನಾಮವು ಅನುಗ್ರಹೀತವಾಗಿದೆ. ನಿನ್ನ ಮಹಿಮೆಯು ಅತ್ಯುನ್ನತವಾಗಿದೆ. ನೀನಲ್ಲದೆ ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯನಿಲ್ಲ.)
ಹಂತ 4. ಈ ಕೆಳಗಿನ ವಚನವನ್ನು ಪಾರಾಯಣ ಮಾಡಿ ಶಪಿಸಲ್ಪಟ್ಟ ಶೈತಾನನಿಂದ ಅಲ್ಲಾಹನಲ್ಲಿ ಅಭಯ ಕೋರುತ್ತೇನೆ: “ಅಊದು ಬಿಲ್ಲಾಹಿ ಮಿನ ಶ್ಶೈತಾನಿ ರ್ರಜೀಮ್” (ಅರ್ಥ: ಶಪಿಸಲ್ಪಟ್ಟ ಶೈತಾನನಿಂದ ನಾನು ಅಲ್ಲಾಹನಲ್ಲಿ ರಕ್ಷಣೆ ಕೋರುತ್ತೇನೆ.)
ಹಂತ 5. ಎಲ್ಲಾ ರಕಅತ್ಗಳಲ್ಲೂ ಸೂರ ಫಾತಿಹ ಪಠಿಸುವುದು. ಅದು ಹೀಗಿದೆ: “ಅಲ್-ಹಮ್ದುಲಿಲ್ಲಾಹಿ ರಬ್ಬಿಲ್ ಆಲಮೀನ್” (ಅರ್ಥ: ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ.) “ಅರ್ರಹ್ಮಾನಿರ್ರಹೀಮ್” (ಅರ್ಥ: ಪರಮ ದಯಾಮಯ ಮತ್ತು ಕರುಣಾಮಯಿಯಾದ) “ಮಾಲಿಕಿ ಯೌಮಿದ್ದೀನ್” (ಅರ್ಥ: ಪ್ರತಿಫಲ ದಿನದ ಒಡೆಯನಾದ) “ಇಯ್ಯಾಕ ನಅ್ಬುದು ವಇಯ್ಯಾಕ ನಸ್ತಈನ್” (ಅರ್ಥ: ನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ ಮತ್ತು ನಿನ್ನೊಂದಿಗೆ ಮಾತ್ರ ಸಹಾಯ ಬೇಡುತ್ತೇವೆ.) “ಇಹ್ದಿನ ಸ್ಸಿರಾತಲ್ ಮುಸ್ತಕೀಮ್” (ಅರ್ಥ: ನಮ್ಮನ್ನು ನೇರವಾದ ಮಾರ್ಗದಲ್ಲಿ ಮುನ್ನಡೆಸು.) “ಸಿರಾತಲ್ಲದೀನ ಅನ್ಅಮ್ತ ಅಲೈಹಿಮ್ ಗೈರಿಲ್ ಮಗ್ದೂಬಿ ಅಲೈಹಿಮ್ ವಲದ್ದಾಲ್ಲೀನ್” (ಅರ್ಥ: ನೀನು ಅನುಗ್ರಹಿಸಿದವರ ಮಾರ್ಗದಲ್ಲಿ; ನಿನ್ನ ಕ್ರೋಧಕ್ಕೆ ಪಾತ್ರರಾದವರ ಮಾರ್ಗದಲ್ಲಲ್ಲ. ಪಥಭ್ರಷ್ಟರಾದವರ ಮಾರ್ಗದಲ್ಲೂ ಅಲ್ಲ.)
ನಂತರ “ಆಮೀನ್” (ಓ ಅಲ್ಲಾಹ್! ಉತ್ತರ ನೀಡು) ಎಂದು ಹೇಳಬೇಕು.
ಎಲ್ಲಾ ನಮಾಝ್ಗಳ ಪ್ರಥಮ ಮತ್ತು ದ್ವಿತೀಯ ರಕಅತ್ಗಳಲ್ಲಿ ಸೂರ ಫಾತಿಹದೊಂದಿಗೆ ಪವಿತ್ರ ಕುರ್ಆನಿನ ಬೇರೆ ಯಾವುದಾದರೂ ಭಾಗವನ್ನು ಪಠಿಸುವುದು. ಇದು ಕಡ್ಡಾಯವಲ್ಲದಿದ್ದರೂ ಇದನ್ನು ಪಠಿಸುವುದರಿಂದ ಬಹಳ ದೊಡ್ಡ ಪ್ರತಿಫಲವಿದೆ.
ಹಂತ 6. ನಂತರ “ಅಲ್ಲಾಹು ಅಕ್ಬರ್” ಎಂದು ಹೇಳುತ್ತಾ, ಬೆನ್ನು ನೇರವಾಗುವವರೆಗೆ ಬಾಗಿ, ಕೈ ಬೆರಳುಗಳನ್ನು ಅಗಲವಾಗಿಸಿ ಮೊಣಕಾಲುಗಳ ಮೇಲಿಟ್ಟು ರುಕೂ ಮಾಡುವುದು. ನಂತರ ರುಕೂನಲ್ಲಿ “ಸುಬ್ಹಾನ ರಬ್ಬಿಯಲ್-ಅಝೀಮ್” (ಅರ್ಥ: ಮಹಾಮಹಿಮನಾದ ನನ್ನ ರಬ್ಬ್ ಪರಮ ಪರಿಶುದ್ಧನು) ಎಂದು ಹೇಳುವುದು.
ಹಂತ 7. ನಂತರ “ಸಮಿಅಲ್ಲಾಹು ಲಿಮನ್ ಹಮಿದ” (ಅರ್ಥ: ತನ್ನನ್ನು ಸ್ತುತಿಸಿದವನಿಗೆ ಅಲ್ಲಾಹು ಉತ್ತರಿಸಲಿ) ಎಂದು ಹೇಳುತ್ತಾ, ಕೈಗಳನ್ನು ಭುಜಗಳಿಗೆ ಸಮಾನಾಂತರವಾಗಿ ಎತ್ತಿ, ರುಕೂನಿಂದ ತಲೆ ಎತ್ತುವುದು. ದೇಹವು ನೇರವಾಗಿ ನಿಂತಾಗ “ರಬ್ಬನಾ ವ ಲಕಲ್ ಹಮ್ದ್” (ಅರ್ಥ: ಓ ನಮ್ಮ ಸಂರಕ್ಷಕನೇ! ನಿನಗೆ ಸ್ತುತಿ) ಎಂದು ಹೇಳುವುದು.
ಹಂತ 8. ನಂತರ ನಾನು “ಅಲ್ಲಾಹು ಅಕ್ಬರ್” ಎಂದು ಹೇಳುತ್ತಾ, ಎರಡು ಕೈಗಳು, ಎರಡು ಮೊಣಕಾಲುಗಳು, ಎರಡು ಪಾದಗಳು, ಹಣೆ ಮತ್ತು ಮೂಗಿನ ಮೇಲೆ ಸುಜೂದ್ ಮಾಡುವುದು. ಸುಜೂದ್ನಲ್ಲಿ “ಸುಬ್ಹಾನ ರಬ್ಬಿಯಲ್-ಅಅ್ಲಾ” (ಅರ್ಥ: ಅತ್ಯುನ್ನತನಾದ ನನ್ನ ರಬ್ಬ್ ಪರಮ ಪರಿಶುದ್ಧನು) ಎಂದು ಹೇಳುವುದು.
ಹಂತ 9. ನಂತರ “ಅಲ್ಲಾಹು ಅಕ್ಬರ್” ಎಂದು ಹೇಳುತ್ತಾ ಸುಜೂದ್ನಿಂದ ತಲೆ ಎತ್ತಿ ಬೆನ್ನು ನೇರವಾಗಿರುವ ಸ್ಥಿತಿಯಲ್ಲಿ, ಬಲಗಾಲನ್ನು ನೆಟ್ಟಗೆ ನಿಲ್ಲಿಸಿ ಎಡಗಾಲಿನ ಮೇಲೆ ಕೂರುವುದು. ಈ ಸ್ಥಿತಿಯಲ್ಲಿ “ರಬ್ಬಿಗ್ ಫಿರ್ ಲೀ” (ಅರ್ಥ: ಓ ನನ್ನ ಪ್ರಭೂ! ನನ್ನನ್ನು ಕ್ಷಮಿಸು) ಎಂದು ಹೇಳುವುದು.
10. ನಂತರ “ಅಲ್ಲಾಹು ಅಕ್ಬರ್” ಎಂದು ಹೇಳುತ್ತಾ ಈ ಮೊದಲು ಸುಜೂದ್ ಮಾಡಿದಂತೆ ಮತ್ತೊಮ್ಮೆ ಸುಜೂದ್ ಮಾಡುವುದು.
11. ನಂತರ “ಅಲ್ಲಾಹು ಅಕ್ಬರ್” ಎಂದು ಹೇಳುತ್ತಾ ಸುಜೂದ್ನಿಂದ ತಲೆಯೆತ್ತಿ ನೇರವಾಗಿ ನಿಲ್ಲುವುದು. ನಮಾಝ್ನ ಉಳಿದ ರಕಅತ್ಗಳಲ್ಲಿ ಮೊದಲ ರಕಅತ್ನಲ್ಲಿ ಮಾಡಿದಂತೆಯೇ ಮಾಡುವುದು.
ಝುಹರ್, ಅಸರ್, ಮಗ್ರಿಬ್ ಮತ್ತು ಇಶಾ ನಮಾಝ್ಗಳ ಎರಡನೇ ರಕ್ಅತ್ ನಿರ್ವಹಿಸಿದ ನಂತರ, ಮೊದಲ ತಶಹ್ಹುದ್ ಪಠಿಸಲು ಕುಳಿತುಕೊಳ್ಳುವುದು. ಅದು ಹೀಗಿದೆ: “ಅತ್ತಹಿಯ್ಯಾತು ಲಿಲ್ಲಾಹಿ ವಸ್ಸಲವಾತು ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವ ರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಾಹಿಸ್ಸಾಲಿಹೀನ್, ಅಶ್ಹದು ಅನ್ ಲಾ ಇಲಾಹ ಇಲ್ಲಲ್ಲಾಹು, ವಅಶ್ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು.” (ಅರ್ಥ: ಅಭಿವಂದನೆಗಳು, ಆರಾಧನೆಗಳು ಮತ್ತು ಸತ್ಕರ್ಮಗಳು ಅಲ್ಲಾಹನಿಗೆ ಮೀಸಲು. ಓ ಪ್ರವಾದಿಯವರೇ! ನಿಮ್ಮ ಮೇಲೆ ಅಲ್ಲಾಹನ ಶಾಂತಿ, ಕರುಣೆ ಮತ್ತು ಅನುಗ್ರಹಗಳಿರಲಿ. ನಮ್ಮ ಮೇಲೆ ಮತ್ತು ಅಲ್ಲಾಹನ ಸಜ್ಜನ ದಾಸರ ಮೇಲೆ ಶಾಂತಿಯಿರಲಿ. ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ ಎಂದು ನಾನು ಸಾಕ್ಷಿ ವಹಿಸುತ್ತೇನೆ ಮತ್ತು ಮುಹಮ್ಮದ್(ಸ) ಅಲ್ಲಾಹನ ದಾಸ ಮತ್ತು ಸಂದೇಶವಾಹಕರೆಂದು ಸಾಕ್ಷಿ ವಹಿಸುತ್ತೇನೆ.) ನಂತರ ಮೂರನೇ ರಕ್ಅತ್ ನಿರ್ವಹಿಸಲು ಎದ್ದು ನಿಲ್ಲುವುದು.
ಎಲ್ಲಾ ನಮಾಝ್ಗಳಲ್ಲೂ ಕೊನೆಯ ರಕ್ಅತ್ ನಿರ್ವಹಿಸಿದ ಬಳಿಕ, ಕೊನೆಯ ತಶಹ್ಹುದ್ ಪಠಿಸಲು ಕುಳಿತುಕೊಳ್ಳುವುದು. ಅದು ಹೀಗಿದೆ: “ಅತ್ತಹಿಯ್ಯಾತು ಲಿಲ್ಲಾಹಿ ವಸ್ಸಲವಾತು ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹ ನ್ನಬಿಯ್ಯು ವ ರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಾಹಿಸ್ಸಾಲಿಹೀನ್, ಅಶ್ಹದು ಅನ್ ಲಾ ಇಲಾಹ ಇಲ್ಲಲ್ಲಾಹು, ವಅಶ್ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು. ಅಲ್ಲಾಹುಮ್ಮ ಸ್ವಲ್ಲಿ ಅಲಾ ಮುಹಮ್ಮದಿನ್ ವಅಲಾ ಆಲಿ ಮುಹಮ್ಮದ್, ಕಮಾ ಸ್ವಲ್ಲೈತ ಅಲಾ ಇಬ್ರಾಹೀಮ ವ ಅಲಾ ಆಲಿ ಇಬ್ರಾಹೀಮ, ಇನ್ನಕ ಹಮೀದುನ್ ಮಜೀದ್. ಅಲ್ಲಾಹುಮ್ಮ ಬಾರಿಕ್ ಅಲಾ ಮುಹಮ್ಮದಿನ್ ವಅಲಾ ಆಲಿ ಮುಹಮ್ಮದ್, ಕಮಾ ಬಾರಕ್ತ ಅಲಾ ಇಬ್ರಾಹೀಮ ವ ಅಲಾ ಆಲಿ ಇಬ್ರಾಹೀಮ, ಇನ್ನಕ ಹಮೀದುನ್ ಮಜೀದ್. (ಅರ್ಥ: ಅಭಿವಂದನೆಗಳು, ಆರಾಧನೆಗಳು ಮತ್ತು ಸತ್ಕರ್ಮಗಳು ಅಲ್ಲಾಹನಿಗೆ ಮೀಸಲು. ಓ ಪ್ರವಾದಿಯವರೇ! ನಿಮ್ಮ ಮೇಲೆ ಅಲ್ಲಾಹನ ಶಾಂತಿ, ಕರುಣೆ ಮತ್ತು ಅನುಗ್ರಹಗಳಿರಲಿ. ನಮ್ಮ ಮೇಲೆ ಮತ್ತು ಅಲ್ಲಾಹನ ಸಜ್ಜನ ದಾಸರ ಮೇಲೆ ಶಾಂತಿಯಿರಲಿ. ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ ಎಂದು ನಾನು ಸಾಕ್ಷಿ ವಹಿಸುತ್ತೇನೆ ಮತ್ತು ಮುಹಮ್ಮದ್(ಸ) ಅಲ್ಲಾಹನ ದಾಸ ಹಾಗೂ ಸಂದೇಶವಾಹಕರೆಂದು ಸಾಕ್ಷಿ ವಹಿಸುತ್ತೇನೆ. ಓ ಅಲ್ಲಾಹ್! ಇಬ್ರಾಹೀಮ್(ಅ)ರ ಮೇಲೆ ಮತ್ತು ಅವರ ಕುಟುಂಬದ ಮೇಲೆ ಕೃಪೆಯನ್ನು ವರ್ಷಿಸಿದಂತೆ ಮುಹಮ್ಮದ್(ಸ)ರ ಮೇಲೂ ಮತ್ತು ಅವರ ಕುಟುಂಬದ ಮೇಲೂ ಕೃಪೆಯನ್ನು ವರ್ಷಿಸು. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಮಹತ್ವಪೂರ್ಣನೂ ಆಗಿರುವೆ. ಓ ಅಲ್ಲಾಹ್! ಇಬ್ರಾಹೀಮ್(ಅ)ರ ಮೇಲೆ ಮತ್ತು ಅವರ ಕುಟುಂಬದ ಮೇಲೆ ಅನುಗ್ರಹಗಳನ್ನು ವರ್ಷಿಸಿದಂತೆ ಮುಹಮ್ಮದ್(ಸ)ರ ಮೇಲೂ ಮತ್ತು ಅವರ ಕುಟುಂಬದ ಮೇಲೂ ಅನುಗ್ರಹಗಳನ್ನು ವರ್ಷಿಸು. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಮಹತ್ವಪೂರ್ಣನೂ ಆಗಿರುವೆ.)
ಹಂತ 12. ನಂತರ ನಮಾಝ್ನಿಂದ ನಿರ್ಗಮಿಸುತ್ತೇನೆ ಎಂಬ ನಿಯ್ಯತ್ತಿನೊಂದಿಗೆ, ಬಲಭಾಗಕ್ಕೆ ತಿರುಗಿ “ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹ್” (ಅರ್ಥ: ನಿಮ್ಮ ಮೇಲೆ ಅಲ್ಲಾಹನ ಶಾಂತಿ ಮತ್ತು ಕರುಣೆಯಿರಲಿ) ಎಂದು ಹೇಳುವುದು. ಆಮೇಲೆ ಎಡಭಾಗಕ್ಕೆ ತಿರುಗಿ “ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹ್” (ಅರ್ಥ: ನಿಮ್ಮ ಮೇಲೆ ಅಲ್ಲಾಹನ ಶಾಂತಿ ಮತ್ತು ಕರುಣೆಯಿರಲಿ) ಎಂದು ಹೇಳುವುದು. ಇಷ್ಟು ಮಾಡಿದರೆ ನಮಾಝ್ ನಿರ್ವಹಿಸಿದವನಾಗುತ್ತಾನೆ.
ಮುಸ್ಲಿಮ್ ಮಹಿಳೆಯರ ಹಿಜಾಬ್ (ಪರ್ದಾ)
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: “ಓ ಪ್ರವಾದಿಯವರೇ! ನಿಮ್ಮ ಪತ್ನಿಯರಿಗೆ, ಹೆಣ್ಣುಮಕ್ಕಳಿಗೆ ಮತ್ತು ಸತ್ಯವಿಶ್ವಾಸಿ ಮಹಿಳೆಯರಿಗೆ, ಅವರ ಹೊರವಸ್ತ್ರವನ್ನು(ಜಲಾಬೀಬನ್ನು) ಅವರ ದೇಹದ ಮೇಲೆ ಇಳಿಬಿಡುವಂತೆ ಹೇಳಿರಿ. ಅವರನ್ನು ಗುರುತಿಸಲು ಮತ್ತು ಅವರಿಗೆ ಕಿರುಕುಳ ಉಂಟಾಗದಿರಲು ಅದು ಹೆಚ್ಚು ಸೂಕ್ತವಾಗಿದೆ. ಅಲ್ಲಾಹು ಎಲ್ಲವನ್ನೂ ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.” [ಅಲ್-ಅಹ್ಝಾಬ್: 59]
ತಮ್ಮ ದೇಶದ ಸಾಂಪ್ರದಾಯಿಕ ಉಡುಪುಗಳ ಮೂಲಕ ತಮ್ಮ ಔರಹ್ (ದೇಹದಲ್ಲಿ ಕಡ್ಡಾಯವಾಗಿ ಮುಚ್ಚಬೇಕಾದ ಭಾಗಗಳು) ಅನ್ನು ಮುಚ್ಚಬೇಕು ಮತ್ತು ಅನ್ಯ ಪುರುಷರ ಮುಂದೆ ತಮ್ಮ ದೇಹವನ್ನು ಪ್ರದರ್ಶಿಸಬಾರದು ಎಂದು ಅಲ್ಲಾಹು ಮುಸ್ಲಿಮ್ ಮಹಿಳೆಯರಿಗೆ ಕಡ್ಡಾಯಗೊಳಿಸಿದ್ದಾನೆ. ಆದ್ದರಿಂದ ತನ್ನ ಪತಿ, ಅಥವಾ ರಕ್ತಸಂಬಂಧಿಗಳ ಮುಂದೆ ವಿನಾಃ ಆಕೆ ತನ್ನ ಹಿಜಾಬನ್ನು ಕಳಚಬಾರದು. ರಕ್ತಸಂಬಂಧಿಗಳು ಎಂದರೆ ವಿವಾಹ ನಿಷಿದ್ಧವಾದ ಪುರುಷರು. ಅವರು: ತಂದೆ, ಅಜ್ಜ, ಮುತ್ತಜ್ಜ ಹೀಗೆ ಮೇಲಿನವರೆಗೆ, ಮಗ, ಮೊಮ್ಮಗ, ಮರಿಮೊಮ್ಮಗ ಹೀಗೆ ಕೆಳಗಿನವರೆಗೆ, ತಂದೆಯ ಸಹೋದರರು, ತಾಯಿಯ ಸಹೋದರರು, ಸ್ವಂತ ಸಹೋದರ, ಸಹೋದರನ ಮಗ, ಸಹೋದರಿಯ ಮಗ, ತಾಯಿಯ ಗಂಡ, ಗಂಡನ ತಂದೆ, ಅವರ ತಂದೆ, ಹೀಗೆ ಮೇಲಿನವರೆಗೆ, ಗಂಡನ ಮಗ, ಅವನ ಮಗ, ಹೀಗೆ ಕೆಳಗಿನವರೆಗೆ, ಸ್ತನಪಾನ ಸಂಬಂಧದ ಸಹೋದರ, ಎದೆಹಾಲು ಕೊಟ್ಟ ಮಹಿಳೆಯ ಗಂಡ, ರಕ್ತ ಸಂಬಂಧದಿಂದ ವಿವಾಹ ನಿಷಿದ್ಧವಾಗುವವರೆಲ್ಲರೂ ಸ್ತನಪಾನ ಸಂಬಂಧದಿಂದಲೂ ನಿಷಿದ್ಧರಾಗುತ್ತಾರೆ.
ಹಿಜಾಬ್ ಧರಿಸುವಾಗ ಮುಸ್ಲಿಮ್ ಮಹಿಳೆಯರು ಈ ನಿಯಮಗಳನ್ನು ಪಾಲಿಸಬೇಕಾಗಿದೆ:
ಒಂದು: ಸಂಪೂರ್ಣ ದೇಹವನ್ನು ಮುಚ್ಚುವುದು.
ಎರಡು: ಅದು ಅಲಂಕಾರಕ್ಕಾಗಿ ಧರಿಸುವ ಉಡುಪಾಗಿರಬಾರದು. ವಿಶೇಷವಾಗಿ ಅನ್ಯ ಪುರುಷರ ಸಮ್ಮುಖದಲ್ಲಿ.
ಮೂರು: ಅದು ದೇಹ ಪ್ರದರ್ಶನವಾಗುವ ರೀತಿಯದ್ದಾಗಿರಬಾರದು.
ನಾಲ್ಕು: ಅದು ಸಡಿಲವಾಗಿರಬೇಕು. ದೇಹದ ಉಬ್ಬು-ತಗ್ಗನ್ನು ಪ್ರದರ್ಶಿಸುವ ರೀತಿಯಲ್ಲಿ ಬಿಗಿಯಾಗಿರಬಾರದು.
ಐದು: ಸುಗಂಧ ಹಚ್ಚಿರಬಾರದು. ವಿಶೇಷವಾಗಿ ಅನ್ಯ ಪುರುಷರ ಸಮ್ಮುಖದಲ್ಲಿ ನಡೆಯುವಾಗ ಅವರು ಆಕೆಯ ಪರಿಮಳವನ್ನು ಆಸ್ವಾದಿಸುವಂತಿರಬಾರದು.
ಆರು: ಅದು ಪುರುಷರ ಉಡುಪುಗಳನ್ನು ಹೋಲುವಂತಿರಬಾರದು.
ಏಳು: ಅದು ಮುಸ್ಲಿಮೇತರ ಮಹಿಳೆಯರು ಅವರ ಪೂಜೆ ಮತ್ತು ಹಬ್ಬ-ಹರಿದಿನಗಳಲ್ಲಿ ಧರಿಸುವ ಉಡುಪುಗಳನ್ನು ಹೋಲುವಂತಿರಬಾರದು.
ಎಂಟು: ಅದು ಜಂಭ ಪ್ರದರ್ಶಿಸುವ ಉಡುಪಾಗಿರಬಾರದು.
ಸತ್ಯವಿಶ್ವಾಸಿಯ ಕೆಲವು ಗುಣಲಕ್ಷಣಗಳು:
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: “ಅಲ್ಲಾಹನ ಬಗ್ಗೆ ಪ್ರಸ್ತಾಪಿಸಲಾಗುವಾಗ ಹೃದಯಗಳು ಭಯದಿಂದ ನಡುಗುವವರು, ಅವನ ದೃಷ್ಟಾಂತಗಳನ್ನು(ಸೂಕ್ತಗಳನ್ನು) ಓದಿಕೊಡಲಾದರೆ ವಿಶ್ವಾಸವು ಅಧಿಕಗೊಳ್ಳುವವರು ಮತ್ತು ತಮ್ಮ ಪ್ರಭುವಿನ ಮೇಲೆ ಭರವಸೆಯಿಡುವವರು ಯಾರೋ ಅವರೇ ನಿಜವಾದ ಸತ್ಯವಿಶ್ವಾಸಿಗಳು.” [ಅಲ್-ಅನ್ಫಾಲ್: 2]
- ಮಾತಿನಲ್ಲಿ ಪ್ರಾಮಾಣಿಕತೆ ಮತ್ತು ಸುಳ್ಳು ಹೇಳದಿರುವುದು.
- ಒಪ್ಪಂದ ಮತ್ತು ಕರಾರುಗಳನ್ನು ಈಡೇರಿಸುವುದು.
- ಜಗಳವಾಡಿದರೆ ಕೆಟ್ಟ ಮಾತುಗಳಿಂದ ನಿಂದಿಸದಿರುವುದು.
- ವಿಶ್ವಾಸವಿಟ್ಟರೆ ಅದನ್ನು ನೆರವೇರಿಸುವುದು.
- ತನಗೆ ಇಷ್ಟಪಡುವುದನ್ನು ತನ್ನ ಸಹೋದರನಿಗೂ ಇಷ್ಟಪಡುವುದು.
- ಉದಾರಿ.
- ಜನರಿಗೆ ಸಹಾಯ ಮಾಡುವುದು.
- ಕುಟುಂಬ ಸಂಬಂಧಗಳನ್ನು ಸೇರಿಸುವುದು.
- ಅಲ್ಲಾಹನ ವಿಧಿಯಲ್ಲಿ ತೃಪ್ತನಾಗುವುದು, ಸಂತೋಷವಾಗುವಾಗ ಅಲ್ಲಾಹನನ್ನು ಸ್ತುತಿಸುವುದು ಮತ್ತು ಕಷ್ಟ ಬರುವಾಗ ತಾಳ್ಮೆ ವಹಿಸುವುದು.
- ಸಂಕೋಚ ಸ್ವಭಾವದವನು.
- ಸೃಷ್ಟಿಗಳಿಗೆ ದಯೆ ತೋರುವುದು.
- ಹೃದಯವು ಅಸೂಯೆ ಮುಕ್ತವಾಗಿರುವುದು, ಇತರ ಜನರಿಗೆ ಯಾವುದೇ ರೀತಿಯಲ್ಲೂ ತೊಂದರೆ ಕೊಡದಿರುವುದು.
- ಜನರನ್ನು ಕ್ಷಮಿಸುವುದು.
- ಬಡ್ಡಿ ತಿನ್ನದಿರುವುದು, ಬಡ್ಡಿಯ ಜೊತೆಗೆ ವ್ಯವಹರಿಸದಿರುವುದು.
- ವ್ಯಭಿಚಾರ ಮಾಡದಿರುವುದು.
- ಮದ್ಯಪಾನ ಮಾಡದಿರುವುದು.
- ನೆರೆಯವರಿಗೆ ಸಹಾಯ ಮಾಡುವುದು.
- ಅನ್ಯಾಯ ಮಾಡದಿರುವುದು, ವಂಚಿಸದಿರುವುದು.
- ಕಳ್ಳತನ ಮಾಡದಿರುವುದು, ಮೋಸ ಮಾಡದಿರುವುದು.
- ತಂದೆ-ತಾಯಿಗೆ ಅವರು ಮುಸ್ಲಿಮರಲ್ಲದಿದ್ದರೂ ಸಹ ಒಳಿತು ಮಾಡುವುದು, ಉತ್ತಮ ವಿಚಾರಗಳಲ್ಲಿ ಅವರನ್ನು ಅನುಸರಿಸುವುದು.
- ಮಕ್ಕಳನ್ನು ಶ್ರೇಷ್ಠ ರೀತಿಯಲ್ಲಿ ಬೆಳೆಸುವುದು, ಅವರಿಗೆ ಧಾರ್ಮಿಕ ಕರ್ತವ್ಯಗಳ ಬಗ್ಗೆ ಆದೇಶಿಸುವುದು ಮತ್ತು ಕೆಟ್ಟ ಹಾಗೂ ನಿಷಿದ್ಧ ಕಾರ್ಯಗಳನ್ನು ವಿರೋಧಿಸುವುದು.
- ಮುಸ್ಲಿಮೇತರರ ಧಾರ್ಮಿಕ ಚಿಹ್ನೆಗಳಾಗಿರುವ ಅವರ ಧಾರ್ಮಿಕ ಆಚರಣೆ ಮತ್ತು ರೂಢಿಗಳನ್ನು ಅನುಕರಿಸುವುದು.
- ಅಲ್ಲಾಹನೆಡೆಗೆ ಪಶ್ಚಾತ್ತಾಪ ಪಟ್ಟು ಮರಳುವುದು, ತನ್ನ ಕುಂದು-ಕೊರತೆ ಹಾಗೂ ತಪ್ಪುಗಳಿಗೆ ಕ್ಷಮೆ ಕೇಳುವುದು.
ಮುಸಲ್ಮಾನನ ವಿಶ್ವಾಸಕ್ಕೆ ಸಂಬಂಧಿಸಿದ ಪ್ರಮುಖ ತತ್ವಗಳು:
01. ನಮ್ಮ ಪ್ರಭು ಅಲ್ಲಾಹು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ಅವನ ಹೊರತು ಬೇರೆ ರಬ್ಬ್ ಇಲ್ಲ. ಅವನ ಹೊರತು ಬೇರೆ ರಕ್ಷಕನಿಲ್ಲ. ಅವನಿಗೆ ಹೋಲಿಕೆಯಾಗಿ ಯಾವುದೂ ಇಲ್ಲ. ಅವನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅವನು ಎಲ್ಲವನ್ನು ಆಲಿಸುವವನು ಮತ್ತು ವೀಕ್ಷಿಸುವವನಾಗಿದ್ದಾನೆ.
02. ಅತ್ಯುನ್ನತನಾದ ಅಲ್ಲಾಹು ಆಕಾಶದಲ್ಲಿ ಅವನ ಎಲ್ಲಾ ಸೃಷ್ಟಿಗಳ ಮೇಲಿದ್ದಾನೆ. ಅವನು ಸೃಷ್ಟಿಗಳಿಂದ ಸಂಪೂರ್ಣ ಬೇರ್ಪಟ್ಟಿದ್ದಾನೆ. ಅವನ ಔನ್ನತ್ಯವು ಎಲ್ಲದಕ್ಕೂ ಅನ್ವಯಿಸುತ್ತದೆ. ಅವನು ತನ್ನ ಅಸ್ತಿತ್ವದಲ್ಲೂ, ಶ್ರೇಷ್ಠತೆಯಲ್ಲೂ, ನಿರಂಕುಶತೆಯಲ್ಲೂ ಉನ್ನತನಾಗಿದ್ದಾನೆ. ಪರಿಪಾವನನಾದ ಅಲ್ಲಾಹು ಎಲ್ಲವನ್ನೂ ಆವರಿಸಿಕೊಂಡಿದ್ದಾನೆ.
03. ಅಲ್ಲಾಹು ಸ್ವತಃ ತನ್ನ ಬಗ್ಗೆ ದೃಢೀಕರಿಸಿದ ಮತ್ತು ಅವನ ಪ್ರವಾದಿ(ﷺ)ರು ಅವನಿಗೆ ದೃಢೀಕರಿಸಿದ ಅವನ ಎಲ್ಲಾ ನಾಮ ಮತ್ತು ಗುಣವಿಶೇಷಣಗಳನ್ನು ನಾವು ಕೂಡ ದೃಢೀಕರಿಸುತ್ತೇವೆ. ಅವನು ಸ್ವತಃ ತನಗೆ ನಿರಾಕರಿಸಿದ ಮತ್ತು ಅವನ ಪ್ರವಾದಿ(ﷺ) ಅವನಿಗೆ ನಿರಾಕರಿಸಿದ ಎಲ್ಲಾ ನಾಮ ಮತ್ತು ಗುಣವಿಶೇಷಣಗಳನ್ನು ನಾವು ಕೂಡ ನಿರಾಕರಿಸುತ್ತೇವೆ.
04. ಅತ್ಯುನ್ನತನಾದ ಅಲ್ಲಾಹು ಪ್ರಾರ್ಥನೆಗಳಿಗೆ ಉತ್ತರಿಸುತ್ತಾನೆ ಮತ್ತು ಬೇಡಿಕೆಗಳನ್ನು ಈಡೇರಿಸುತ್ತಾನೆ. ಎಲ್ಲವೂ ಅವನ ಅಧೀನದಲ್ಲಿದೆ. ಅವನ ಹೊರತು ಲಾಭ ಅಥವಾ ಹಾನಿ ಮಾಡುವವರಿಲ್ಲ. ದಾಸನಿಗೆ ಅಲ್ಲಾಹನನ್ನು ಅವಲಂಬಿಸದೆ ಒಂದು ಕ್ಷಣ ಕೂಡ ಜೀವಿಸಲು ಸಾಧ್ಯವಿಲ್ಲ. ಪ್ರಾರ್ಥನೆ, ನಮಾಝ್, ಹರಕೆ, ಬಲಿ, ಭಯ, ನಿರೀಕ್ಷೆ, ಭರವಸೆ ಮುಂತಾದ ಬಾಹ್ಯ ಅಥವಾ ಆಂತರಿಕ ಆರಾಧನೆಗಳಲ್ಲಿ ಯಾವುದೇ ಒಂದನ್ನು ಕೂಡ ಅಲ್ಲಾಹು ಅಲ್ಲದವರಿಗೆ ಅರ್ಪಿಸುವುದು ಮುಸಲ್ಮಾನನಿಗೆ ಧರ್ಮಸಮ್ಮತವಲ್ಲ. ಯಾವುದೇ ಒಂದು ಆರಾಧನೆಯನ್ನು ಅಲ್ಲಾಹು ಅಲ್ಲದವರಿಗೆ ಅರ್ಪಿಸಿದವನು ಅಲ್ಲಾಹನಲ್ಲಿ ಶಿರ್ಕ್ (ಸಹಭಾಗಿತ್ವ) ಮಾಡಿದವನಾಗುತ್ತಾನೆ.
05. ಅಲ್ಲಾಹನೊಡನೆ ಶಿರ್ಕ್ (ಸಹಭಾಗಿತ್ವ) ಮಾಡುವುದು ಅತಿದೊಡ್ಡ ಮಹಾಪಾಪವಾಗಿದೆ. ಶಿರ್ಕ್ ಮಾಡಿದ ಸ್ಥಿತಿಯಲ್ಲಿ ಮೃತಪಡುವವರಿಗೆ ಅಲ್ಲಾಹು ಸ್ವರ್ಗವನ್ನು ನಿಷಿದ್ಧಗೊಳಿಸಿದ್ದಾನೆ. ಅವರ ವಾಸಸ್ಥಳವು ನರಕಾಗ್ನಿಯಾಗಿದೆ. ಅಲ್ಲಾಹನಲ್ಲಿ ಕ್ಷಮೆಯಾಚನೆ ಮಾಡದೆ ಶಿರ್ಕ್ನ ಸ್ಥಿತಿಯಲ್ಲೇ ಮೃತಪಡುವವರಿಗೆ ಅಲ್ಲಾಹು ಎಂದಿಗೂ ಕ್ಷಮಿಸುವುದಿಲ್ಲ.
06. ಅಲ್ಲಾಹು ಮನುಷ್ಯನ ವಿಧಿಯಲ್ಲಿ ಬರೆಯದ ಯಾವುದೂ ಅವನಿಗೆ ಸಂಭವಿಸುವುದಿಲ್ಲ ಮತ್ತು ಅವನ ವಿಧಿಯಲ್ಲಿ ಬರೆದ ಯಾವುದೂ ಅವನಿಂದ ತಪ್ಪಿಹೋಗುವುದಿಲ್ಲ. ಅಲ್ಲಾಹನ ತೀರ್ಮಾನ ಮತ್ತು ವಿಧಿಯಲ್ಲಿ ವಿಶ್ವಾಸವಿಡುವುದು ಕಡ್ಡಾಯವಾಗಿದೆ. ಅಲ್ಲಾಹನ ವಿಧಿ ನಿರ್ಣಯದ ಬಗ್ಗೆ ಸಂತೃಪ್ತಿ ಹೊಂದುತ್ತಾ, ಎಲ್ಲಾ ಸ್ಥಿತಿಯಲ್ಲೂ ಅಲ್ಲಾಹನನ್ನು ಪ್ರಶಂಸಿಸುತ್ತಾ ಅವನಿಗೆ ಕೃತಜ್ಞತೆ ಸಲ್ಲಿಸುತ್ತಿರಬೇಕಾಗಿದೆ.
07. ಮುಹಮ್ಮದ್(ಸ) ನಮ್ಮ ಪ್ರವಾದಿಯಾಗಿದ್ದಾರೆ. ಅವರು ಮನುಷ್ಯರಲ್ಲೇ ಶ್ರೇಷ್ಠರು ಮತ್ತು ಅಂತಿಮ ಪ್ರವಾದಿಯಾಗಿದ್ದಾರೆ. ಅವರು ಪುನರುತ್ಥಾನ ದಿನದಂದು ಶಿಫಾರಸ್ಸು ಮಾಡುವವರೂ ಶಿಫಾರಸ್ಸು ಸ್ವೀಕರಿಸಲ್ಪಡುವವರೂ ಆಗಿದ್ದಾರೆ. ಅಲ್ಲಾಹು ಇಬ್ರಾಹೀಮ್(ಅ)ರನ್ನು ಆಪ್ತಮಿತ್ರನಾಗಿ ಮಾಡಿಕೊಂಡಂತೆ ಮುಹಮ್ಮದ್(ಸ)ರನ್ನೂ ಆಪ್ತಮಿತ್ರನಾಗಿ ಮಾಡಿಕೊಂಡಿದ್ದಾನೆ.
10. ಪವಿತ್ರ ಕುರ್ಆನ್ ನಮ್ಮ ಗ್ರಂಥವಾಗಿದೆ. ಅದೊಂದು ಪವಾಡವಾಗಿದ್ದು, ಅದರ ಅಧಿಕೃತತೆಯ ಬಗ್ಗೆ ಯಾವುದೇ ತಕರಾರಿಲ್ಲ. ಅದರ ಪಾರಾಯಣ ಮೂಲಕ ಅಲ್ಲಾಹನನ್ನು ಆರಾಧಿಸಲಾಗುತ್ತದೆ. ಅಲ್ಲಾಹು ಅದನ್ನು ಮಲಕ್ಗಳಲ್ಲಿ ಶ್ರೇಷ್ಠರಾದ ಜಿಬ್ರೀಲ್(ಅ)ರ ಮೂಲಕ ಪ್ರವಾದಿ ಮುಹಮ್ಮದ್(ಸ) ರಿಗೆ ಅವತೀರ್ಣಗೊಳಿಸಿದನು. ಅದು ತಿದ್ದುಪಡಿ ಮತ್ತು ಬದಲಾವಣೆಗೆ ಒಳಗಾಗದಂತೆ ಅಲ್ಲಾಹು ಅದನ್ನು ಸಂರಕ್ಷಿಸುತ್ತಾನೆ. “ಖಂಡಿತವಾಗಿಯೂ ಈ ಉಪದೇಶವನ್ನು (ಕುರ್ಆನನ್ನು) ನಾವೇ ಅವತೀರ್ಣಗೊಳಿಸಿದ್ದೇವೆ. ಖಂಡಿತವಾಗಿಯೂ ನಾವೇ ಅದನ್ನು ಸಂರಕ್ಷಿಸುತ್ತೇವೆ.” [ಅಲ್-ಹಿಜ್ರ್:9].
11. ಅಲ್ಲಾಹನ ಆಜ್ಞೆಗಳನ್ನು ಅತ್ಯಧಿಕ ಪಾಲನೆ ಮಾಡುವವರು, ಅವನ ನಿಯಮಗಳನ್ನು ಅತಿ ಹೆಚ್ಚು ಅನುಸರಿಸುವವರು ಅವನಿಗೆ ಅತ್ಯಂತ ನಿಕಟರಾಗಿದ್ದಾರೆ. ಅರಬಿಗೆ ಅರಬೇತರನ ಮೇಲೆ ಅಥವಾ ಅರಬೇತರನಿಗೆ ಅರಬಿಯ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. ಬಿಳಿಯನಿಗೆ ಕರಿಯನ ಮೇಲೆ ಅಥವಾ ಕರಿಯನಿಗೆ ಬಿಳಿಯನ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. ದೇವಭಕ್ತಿಯ ಮಾನದಂಡದಿಂದಲೇ ಹೊರತು. ಎಲ್ಲಾ ಮನುಷ್ಯರೂ ಆದಮರ ಮಕ್ಕಳು. ಆದಮರನ್ನು ಅಲ್ಲಾಹು ಮಣ್ಣಿನಿಂದ ಸೃಷ್ಟಿಸಿದನು. ಪರಿಪಾವನನಾದ ಅಲ್ಲಾಹು ಹೇಳುತ್ತಾನೆ: “ಖಂಡಿತವಾಗಿಯೂ ನಿಮ್ಮಲ್ಲಿ ಅತ್ಯಧಿಕ ದೇವಭಕ್ತಿಯುಳ್ಳವನು ಯಾರೋ ಅವನೇ ಅಲ್ಲಾಹನ ಬಳಿ ಅತ್ಯಂತ ಗೌರವವಿರುವವನು.” [ಅಲ್-ಹುಜುರಾತ್:13].
12. ಮುಸಲ್ಮಾನನು ಗೌರವಾನ್ವಿತ ಬರಹಗಾರರಾದ ಮಲಕ್ಗಳ ಮೇಲೆ ವಿಶ್ವಾಸವಿಡುತ್ತಾನೆ. ಮಲಕ್ಗಳ ಅಸ್ತಿತ್ವದಲ್ಲಿ ವಿಶ್ವಾಸವಿಡುತ್ತಾನೆ. ಅವರು ಅಲ್ಲಾಹು ಸೃಷ್ಟಿಸಿದ ಸೃಷ್ಟಿಗಳು. ಅಲ್ಲಾಹು ಅವರನ್ನು ಬೆಳಕಿನಿಂದ ಸೃಷ್ಟಿಸಿದನು. ದೇವವಾಣಿಯನ್ನು ತಲುಪಿಸುವ ಹೊಣೆಯನ್ನು ವಹಿಸಿಕೊಡಲಾದ ಜಿಬ್ರೀಲ್(ಅ), ಮಳೆಯನ್ನು ವಹಿಸಿಕೊಡಲಾದ ಮೀಕಾಈಲ್(ಅ), ಕಹಳೆಯಲ್ಲಿ ಊದುವ ಕರ್ತವ್ಯವನ್ನು ವಹಿಸಿಕೊಡಲಾದ ಇಸ್ರಾಫೀಲ್(ಅ), ಮನುಷ್ಯರ ಆತ್ಮಗಳನ್ನು ವಶಪಡಿಸುವ ಕೆಲಸವನ್ನು ವಹಿಸಿಕೊಡಲಾದ ಮಲಕುಲ್ ಮೌತ್ ಮುಂತಾದ ಅನೇಕ ಮಲಕ್ಗಳಿದ್ದಾರೆ.
13. ಮುಸಲ್ಮಾನನು ಅಂತ್ಯದಿನದ ಕುರುಹುಗಳಲ್ಲಿ – ಅಂದರೆ ದಜ್ಜಾಲ್ ಬರುವುದರಲ್ಲಿ, ಕೊನೆಯ ಕಾಲದಲ್ಲಿ ಈಸಾ(ಅ) ಆಕಾಶದಿಂದ ಇಳಿದು ಬರುವುದರಲ್ಲಿ ಮತ್ತು ಸೂರ್ಯ ಪಶ್ಚಿಮದಿಂದ ಉದಯವಾಗುವುದರಲ್ಲಿ ವಿಶ್ವಾಸವಿಡುತ್ತಾನೆ.
14. ಗೋರಿಯ ಶಿಕ್ಷೆಗೆ ಅರ್ಹರಾದವರಿಗೆ ಗೋರಿಯಲ್ಲಿ ಶಿಕ್ಷೆಯಿದೆ ಮತ್ತು ಸಮಾಧಿಯ ಅನುಗ್ರಹಕ್ಕೆ ಅರ್ಹರಾದವರಿಗೆ ಸಮಾಧಿಯಲ್ಲಿ ಅನುಗ್ರಹವಿದೆ, ಸಮಾಧಿಯಲ್ಲಿ ಮುಂಕರ್ ಮತ್ತು ನಕೀರ್ ಎಂಬ ಎರಡು ಮಲಕ್ಗಳು ಬಂದು ನಿನ್ನ ರಬ್ಬ್ ಯಾರು, ನಿನ್ನ ದೀನ್ ಯಾವುದು ಮತ್ತು ನಿನ್ನ ನಬಿ ಯಾರು ಎಂದು ಕೇಳುತ್ತಾರೆ, ಸಮಾಧಿಯು ಸ್ವರ್ಗದ ಉದ್ಯಾನಗಳಲ್ಲಿ ಒಂದು ಉದ್ಯಾನವಾಗಿ ಅಥವಾ ನರಕದ ಪ್ರಪಾತಗಳಲ್ಲಿ ಒಂದು ಪ್ರಪಾತವಾಗಿ ಮಾರ್ಪಡುತ್ತದೆ ಮುಂತಾದ ಎಲ್ಲದರಲ್ಲೂ ಮುಸಲ್ಮಾನನು ವಿಶ್ವಾಸವಿಡುತ್ತಾನೆ.
15. ಮುಸಲ್ಮಾನನು ಮರಣಾನಂತರ ಜೀವನವಿದೆ ಎಂದು, ಪುನರುತ್ಥಾನ ದಿನದಂದು ಕರ್ಮಗಳಿಗೆ ಪ್ರತಿಫಲ ದೊರೆಯುತ್ತದೆ ಎಂದು ಮತ್ತು ಸ್ವರ್ಗ ಹಾಗೂ ನರಕವು ಈಗಾಗಲೇ ಸೃಷ್ಟಿಯಾಗಿದ್ದು ಅವು ಎಂದೆಂದಿಗೂ ನಾಶವಾಗುವುದಿಲ್ಲ ಎಂದು ವಿಶ್ವಾಸವಿಡುತ್ತಾನೆ.
16. ಮಾಟ ಮಾಡುವುದು ಅಲ್ಲಾಹನನ್ನು ನಿಷೇಧಿಸುವುದಾಗಿದೆ. ಮಾಟ-ಮಂತ್ರವನ್ನು ಕಲಿಯುವುದು, ಮಾಟ ಮಾಡುವವರು ಮತ್ತು ಜ್ಯೋತಿಷಿಗಳ ಬಳಿಗೆ ಹೋಗಿ ಅವರು ಹೇಳಿದ್ದನ್ನು ನಂಬುವುದು ನಿಷಿದ್ಧವಾಗಿದೆ. ಅವರ ಮಾತುಗಳನ್ನು ನಂಬುವವರು ಪ್ರವಾದಿ ಮುಹಮ್ಮದ್(ಸ) ರಿಗೆ ಅವತೀರ್ಣವಾದ ಸಂದೇಶವನ್ನು ನಿಷೇಧಿಸಿದವರಾಗಿದ್ದಾರೆ.
ಮುಸಲ್ಮಾನನು ಪ್ರವಾದಿ(ಸ)ರ ಸಹಚರರನ್ನು (ಸಹಾಬಿಗಳನ್ನು) ಪ್ರೀತಿಸುತ್ತಾನೆ. ಅವರನ್ನು ಪ್ರೀತಿಸುವವರನ್ನು ಪ್ರೀತಿಸುತ್ತಾನೆ ಮತ್ತು ಅವರನ್ನು ದ್ವೇಷಿಸುವವರನ್ನು ದ್ವೇಷಿಸುತ್ತಾನೆ. ಏಕೆಂದರೆ ಅವರನ್ನು ಪ್ರೀತಿಸುವುದು ಧರ್ಮದ ಒಂದು ಭಾಗವಾಗಿದೆ. ಅವರನ್ನು ದ್ವೇಷಿಸುವುದು ಸತ್ಯನಿಷೇಧ ಮತ್ತು ಕಾಪಟ್ಯವಾಗಿದೆ. ಪ್ರವಾದಿ(ಸ)ರು ಹೇಳಿದರು: “ನನ್ನ ಸಹಚರರನ್ನು ದೂಷಿಸಬೇಡಿ.”(ಮುಸ್ಲಿಮ್ ). ಸಹಾಬಿಗಳ (ಅಲ್ಲಾಹು ಅವರ ಬಗ್ಗೆ ಸಂತೃಪ್ತನಾಗಲಿ) ಪೈಕಿ ಯಾರಾದರೊಬ್ಬರನ್ನು ಟೀಕಿಸುವವರು, ಅವರ ಬಗ್ಗೆ ಕುಂದು-ಕೊರತೆಗಳನ್ನು ಹೇಳುವವರು ಪಥಭ್ರಷ್ಟರು ಮತ್ತು ನೂತನವಾದಿಗಳಾಗಿದ್ದಾರೆ.
16. ಪ್ರವಾದಿ(ಸ)ರ ಮರಣಾನಂತರದ ಖಿಲಾಫತ್ ವ್ಯವಸ್ಥೆಯನ್ನು ಮುಸಲ್ಮಾನನು ದೃಢೀಕರಿಸುತ್ತಾನೆ. ಪ್ರಪ್ರಥಮ ಖಲೀಫ ಸ್ಥಾನ ಅಬೂಬಕರ್(ರ)ರದ್ದಾಗಿದೆ. ಏಕೆಂದರೆ ಅವರ ಶ್ರೇಷ್ಠತೆ ಮತ್ತು ಸಮುದಾಯದಾದ್ಯಂತ ಅವರಿಗೆ ಮೊದಲನೆಯ ಸ್ಥಾನವಿದೆ. ಎರಡನೇ ಖಲೀಫ ಉಮರ್ ಬಿನ್ ಖತ್ತಾಬ್(ರ), ಮೂರನೇ ಖಲೀಫ ಉಸ್ಮಾನ್ ಬಿನ್ ಅಫ್ಫಾನ್(ರ) ಮತ್ತು ನಾಲ್ಕನೇ ಖಲೀಫ ಅಲಿ ಬಿನ್ ಅಬೂ ತಾಲಿಬ್(ರ) ಆಗಿದ್ದಾರೆ. ಇವರು ನಾಲ್ವರು ಸನ್ಮಾರ್ಗದಲ್ಲಿದ್ದ ಖಲೀಫರು ಮತ್ತು ಮಾರ್ಗದರ್ಶನ ನೀಡುವ ಮುಖಂಡರಾಗಿದ್ದಾರೆ.
17. ಆರಾಧನೆಗಳೆಲ್ಲವೂ ತೌಕೀಫೀ (ಅಂದರೆ ಅಲ್ಲಾಹು ಮತ್ತು ಪ್ರವಾದಿ(ಸ) ಹೇಗೆ ಕಲಿಸಿದರೋ ಹಾಗೆಯೇ ನಿರ್ವಹಿಸಬೇಕಾದದ್ದು) ಆಗಿದೆ. ಪವಿತ್ರ ಕುರ್ಆನ್ ಅಥವಾ ಪ್ರವಾದಿ ಸುನ್ನತ್ನಲ್ಲಿ ದೃಢಪಡದ ಯಾವುದೇ ಆರಾಧನೆಯನ್ನು ನಿರ್ವಹಿಸುವುದು ಮುಸಲ್ಮಾನನಿಗೆ ಧರ್ಮಸಮ್ಮತವಲ್ಲ. ಪ್ರವಾದಿ(ಸ)ರ ಮಾರ್ಗದರ್ಶನವಿಲ್ಲದೆ ಅವರ ಮರಣಾನಂತರ ಹೊಸದಾಗಿ ಆವಿಷ್ಕರಿಸಲಾದ ಆರಾಧನೆಗಳೆಲ್ಲವೂ ಬಿದ್ಅತ್ ಆಗಿದ್ದು ತಿರಸ್ಕೃತವಾಗಿವೆ. ಪ್ರವಾದಿ(ಸ)ರು ಹೇಳಿದರು: “ನಮ್ಮ ಈ ಧರ್ಮದಲ್ಲಿಲ್ಲದ ಹೊಸ ಆರಾಧನೆಯನ್ನು ಯಾರಾದರೂ ಸೇರ್ಪಡೆಗೊಳಿಸಿದರೆ ಅದು ತಿರಸ್ಕೃತವಾಗಿದೆ.” [ಬುಖಾರಿ]
18. ಕರ್ಮಗಳ ಸ್ವೀಕಾರವು ಎರಡು ಮೂಲಭೂತ ಸ್ತಂಭಗಳನ್ನು ಅವಲಂಬಿಸಿಕೊಂಡಿದೆ. ಒಂದು: ಆ ಕರ್ಮವನ್ನು ನಿಷ್ಕಳಂಕವಾಗಿ ಅಲ್ಲಾಹನಿಗಾಗಿ ನಿರ್ವಹಿಸಿರಬೇಕು. ಎರಡು: ಪ್ರವಾದಿ(ﷺ) ತೋರಿಸಿದ ಮಾದರಿಯಂತೆ ಆ ಕರ್ಮವನ್ನು ನಿರ್ವಹಿಸಿರಬೇಕು. ಆರಾಧನೆಯು ಅಲ್ಲಾಹನಿಗಾಗಿ ನಿಷ್ಕಳಂಕವಾಗಿರದಿದ್ದರೆ ಅದು ಸ್ವೀಕರಿಸಲಾಗುವುದಿಲ್ಲ. ಅದೇ ರೀತಿ ಪ್ರವಾದಿ(ﷺ)ರ ಮಾದರಿಯನ್ನು ಅನುಸರಿಸಿ ನಿರ್ವಹಿಸದಿದ್ದರೆ ಅದು ಸ್ವೀಕೃತವಾಗುವುದಿಲ್ಲ.
ನನ್ನ ಸಂತೋಷವು ನನ್ನ ಧರ್ಮವಾದ ಇಸ್ಲಾಮ್ನಲ್ಲಿದೆ
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: "ಗಂಡಾಗಲಿ, ಹೆಣ್ಣಾಗಲಿ ಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮಗಳನ್ನು ಮಾಡುವವರು ಯಾರೋ ಖಂಡಿತವಾಗಿಯೂ ನಾವು ಅವರಿಗೆ ಅತ್ಯುತ್ತಮವಾದ ಬದುಕನ್ನು ನೀಡುವೆವು. ಅವರು ಮಾಡುತ್ತಿರುವ ಕರ್ಮಗಳಲ್ಲಿ ಅತ್ಯುತ್ತಮವಾಗಿರುವುದಕ್ಕೆ ಅನುಗುಣವಾಗಿ ನಾವು ಅವರಿಗೆ ಪ್ರತಿಫಲವನ್ನು ದಯಪಾಲಿಸುವೆವು." [ಅನ್ನಹ್ಲ್: 97].
ಮುಸಲ್ಮಾನನ ಹೃದಯಕ್ಕೆ ಸಂತೋಷ ಮತ್ತು ಸಮಾಧಾನವನ್ನು ನೀಡುವ ಒಂದು ವಿಷಯವೇನೆಂದರೆ ಜೀವಂತ ಅಥವಾ ಮೃತ ಮಹಾ ಪುರುಷರು, ಅಥವಾ ವಿಗ್ರಹಗಳನ್ನು ಮಧ್ಯವರ್ತಿಯನ್ನಾಗಿ ಮಾಡದೆ ನೇರವಾಗಿ ಅಲ್ಲಾಹನೊಡನೆ ಸಂಪರ್ಕ ಸ್ಥಾಪಿಸುವುದಾಗಿದೆ. ಅಲ್ಲಾಹು ಅವನ ದಾಸರ ಪ್ರಾರ್ಥನೆಗಳನ್ನು ಕೇಳುತ್ತಾ, ಅವುಗಳಿಗೆ ಉತ್ತರಕೊಡುತ್ತಾ ಸದಾಕಾಲ ಅವರಿಗೆ ಬಹಳ ನಿಕಟವಾಗಿದ್ದೇನೆಂದು ಪವಿತ್ರ ಕುರ್ಆನ್ನಲ್ಲಿ ತಿಳಿಸಿದ್ದಾನೆ. ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: “ನನ್ನ ದಾಸರು ತಮ್ಮೊಂದಿಗೆ ನನ್ನ ಬಗ್ಗೆ ಕೇಳಿದರೆ ಖಂಡಿತವಾಗಿಯೂ ನಾನು (ಅವರಿಗೆ ಅತಿ) ನಿಕಟವಾಗಿರುವೆನು (ಎಂದು ಹೇಳಿರಿ). ಪ್ರಾರ್ಥಿಸುವವನು ನನ್ನನ್ನು ಕರೆದು ಪ್ರಾರ್ಥಿಸಿದರೆ ನಾನು ಆ ಪ್ರಾರ್ಥನೆಗೆ ಉತ್ತರವನ್ನು ನೀಡುವೆನು. ಆದ್ದರಿಂದ ಅವರು ನನ್ನ ಕರೆಗೆ ಓಗೊಡಲಿ ಮತ್ತು ನನ್ನ ಮೇಲೆ ವಿಶ್ವಾಸವಿಡಲಿ. ಅವರು ಸನ್ಮಾರ್ಗ ಪಡೆದವರಾಗಲೂಬಹುದು.” [ಅಲ್-ಬಕರ: 186]. ಅಲ್ಲಾಹನೊಡನೆ ಪ್ರಾರ್ಥಿಸಲು ಅಲ್ಲಾಹು ನಮಗೆ ಆದೇಶಿಸಿದ್ದಾನೆ. ಪ್ರಾರ್ಥನೆಯನ್ನು ಅವನಿಗೆ ನಿಕಟವಾಗುವ ಅತಿದೊಡ್ಡ ಆರಾಧನೆಯನ್ನಾಗಿ ಮಾಡಿದ್ದಾನೆ. ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: “ನಿಮ್ಮ ರಬ್ಬ್ ಹೇಳುತ್ತಾನೆ: ನೀವು ನನ್ನನ್ನು ಕರೆದು ಪ್ರಾರ್ಥಿಸಿರಿ. ನಾನು ನಿಮಗೆ ಉತ್ತರ ನೀಡುವೆನು. ನನ್ನನ್ನು ಆರಾಧಿಸದೆ ಅಹಂಕಾರ ಪಡುವವರಾರೋ ಅವರು ಖಂಡಿತವಾಗಿಯೂ ಸದ್ಯದಲ್ಲೇ ಅಪಮಾನಿತರಾಗಿ ನರಕಾಗ್ನಿಯನ್ನು ಪ್ರವೇಶಿಸುವರು.” [ಗಾಫಿರ್: 60] ಸಜ್ಜನ ಮುಸಲ್ಮಾನರು ಯಾವಾಗಲೂ ಅಲ್ಲಾಹನನ್ನು ಅವಲಂಬಿಸುತ್ತಾರೆ, ಸದಾ ಅವನಲ್ಲಿ ಪ್ರಾರ್ಥಿಸುತ್ತಾರೆ ಮತ್ತು ಉತ್ತಮ ಆರಾಧನೆಗಳ ಮೂಲಕ ಅವನಿಗೆ ನಿಕಟವಾಗಲು ಪ್ರಯತ್ನಿಸುತ್ತಾರೆ.
ಅತ್ಯುನ್ನತನಾದ ಅಲ್ಲಾಹು ನಮ್ಮನ್ನು ಈ ಜಗತ್ತಿನಲ್ಲಿ ಒಂದು ಮಹಾ ಉದ್ದೇಶಕ್ಕಾಗಿಯೇ ಹೊರತು ವ್ಯರ್ಥವಾಗಿ ಸೃಷ್ಟಿಸಲಿಲ್ಲ. ಯಾವುದೇ ಸಹಭಾಗಿಯಿಲ್ಲದ ಅಲ್ಲಾಹನನ್ನು ಮಾತ್ರ ಆರಾಧಿಸುವುದು ಆ ಉದ್ದೇಶವಾಗಿದೆ. ನಮ್ಮ ಖಾಸಗಿ ಹಾಗೂ ಸಾರ್ವಜನಿಕ ಜೀವನದ ಎಲ್ಲಾ ವ್ಯವಹಾರಗಳನ್ನು ವ್ಯವಸ್ಥಿತಗೊಳಿಸುವ ಸಮಗ್ರವಾದ ದೈವಿಕ ಧರ್ಮವನ್ನು ಅವನು ನಮಗೆ ದಯಪಾಲಿಸಿದ್ದಾನೆ. ಈ ಧರ್ಮದ ಮೂಲಕ ಅವನು ನಮ್ಮ ಜೀವನದ ಐದು ಆವಶ್ಯಕತೆಗಳನ್ನು ಸಂರಕ್ಷಿಸಿದ್ದಾನೆ. ಅವು: ಧರ್ಮ, ಪ್ರಾಣ, ಗೌರವ, ಬುದ್ಧಿ ಮತ್ತು ಸಂಪತ್ತು. ಧಾರ್ಮಿಕ ಕಾನೂನನ್ನು ಅನುಸರಿಸಿ, ನಿಷಿದ್ಧ ಕಾರ್ಯಗಳಿಂದ ದೂರ ಸರಿದು ಜೀವಿಸುವವರು ನಿಸ್ಸಂಶಯವಾಗಿಯೂ ಈ ಐದು ಆವಶ್ಯಕತೆಗಳನ್ನು ಸಂರಕ್ಷಿಸುತ್ತಾರೆ ಮತ್ತು ಸಂತೋಷ ಹಾಗೂ ನೆಮ್ಮದಿಯ ಜೀವನವನ್ನು ನಡೆಸುತ್ತಾರೆ.
ಮುಸಲ್ಮಾನನಿಗೆ ಅವನ ಪ್ರಭುವಿನೊಂದಿಗಿರುವ ಸಂಬಂಧವು ಅತ್ಯಂತ ಆಳವಾಗಿದ್ದು, ಅದು ಸಮಾಧಾನ, ಮಾನಸಿಕ ನೆಮ್ಮದಿ, ಶಾಂತಿ ಮತ್ತು ನಿರ್ಭೀತಿ, ಸಂತೋಷ, ಅಲ್ಲಾಹು ತನ್ನ ಜೊತೆಗಿದ್ದಾನೆ ಎಂಬ ಪ್ರಜ್ಞೆ, ಸತ್ಯವಿಶ್ವಾಸಿ ದಾಸನಿಗೆ ಅವನು ನೀಡುವ ಕಾಳಜಿ ಮತ್ತು ಸಂರಕ್ಷಣೆ ಮುಂತಾದವುಗಳನ್ನು ಒದಗಿಸುತ್ತದೆ. ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: “ಅಲ್ಲಾಹು ಸತ್ಯವಿಶ್ವಾಸಿಗಳ ಸಂರಕ್ಷಕನಾಗಿದ್ದು, ಅವರನ್ನು ಅಂಧಕಾರಗಳಿಂದ ಬೆಳಕಿಗೆ ತರುತ್ತಾನೆ.” [ಅಲ್-ಬಕರ: 257].
ಈ ಮಹಾ ಸಂಬಂಧವು ಒಂದು ಆಧ್ಯಾತ್ಮಿಕ ಭಾವವಾಗಿದ್ದು ಅದರ ಮೂಲಕ ದಾಸನು ಅಲ್ಲಾಹನ ಆರಾಧನೆಯಲ್ಲಿ ಆನಂದವನ್ನು ಪಡೆಯುತ್ತಾನೆ ಮತ್ತು ಅವನನ್ನು ಭೇಟಿಯಾಗಲು ಹಂಬಲಿಸುತ್ತಾನೆ. ಸತ್ಯವಿಶ್ವಾಸದ ಮಾಧುರ್ಯವನ್ನು ಅನುಭವಿಸುವಾಗ ಹೃದಯವು ಸಂತೋಷದಿಂದ ತುಂಬಿ ಆನಂದಿಸುತ್ತದೆ.
ಸತ್ಕರ್ಮಗಳನ್ನು ಮಾಡುವ ಮೂಲಕ ಮತ್ತು ದುಷ್ಕೃತ್ಯಗಳನ್ನು ತೊರೆಯುವ ಮೂಲಕ ಆ ಮಾಧುರ್ಯವನ್ನು ಅನುಭವಿಸಿದವನಿಗಲ್ಲದೆ ಅದರ ನಿಜವಾದ ರುಚಿಯನ್ನು ವಿವರಿಸಲು ಸಾಧ್ಯವಿಲ್ಲ. ಈ ಕಾರಣದಿಂದಲೇ ಪ್ರವಾದಿ(ﷺ)ರು ಹೇಳಿದರು: “ಅಲ್ಲಾಹನನ್ನು ರಬ್ಬ್ ಎಂದು, ಇಸ್ಲಾಮನ್ನು ದೀನ್ ಎಂದು ಮತ್ತು ಮುಹಮ್ಮದ್(ಸ)ರನ್ನು ಸಂದೇಶವಾಹಕರೆಂದು ತೃಪ್ತರಾದವರು ಸತ್ಯವಿಶ್ವಾಸದ ರುಚಿಯನ್ನು ಆಸ್ವಾದಿಸುತ್ತಾರೆ.” [ಮುಸ್ಲಿಮ್].
ಹೌದು, ಮನುಷ್ಯನು ತಾನು ಸದಾ ತನ್ನ ಸೃಷ್ಟಿಕರ್ತನ ಮುಂದೆ ಉಪಸ್ಥಿತನಾಗಿದ್ದೇನೆಂದು ತಿಳಿದರೆ, ಅವನನ್ನು ಅವನ ಹೆಸರುಗಳ ಮತ್ತು ಗುಣವಿಶೇಷಣಗಳ ಮೂಲಕ ಅರ್ಥ ಮಾಡಿಕೊಂಡರೆ, ಅವನನ್ನು ಕಣ್ಮುಂದೆ ನೋಡುತ್ತಿರುವಂತೆ ಆರಾಧಿಸಿದರೆ, ಆರಾಧನೆಗಳ ಮೂಲಕ ಅಲ್ಲಾಹನ ಸಂತೃಪ್ತಿಯನ್ನಲ್ಲದೆ ಇನ್ನಾರ ಸಂತೃಪ್ತಿಯನ್ನೂ ಬಯಸದಿದ್ದರೆ, ಅವನು ಇಹಲೋಕದಲ್ಲಿ ಅತ್ಯುತ್ತಮವಾದ ಮತ್ತು ಸಂತೋಷದ ಜೀವನವನ್ನು ಅನುಭವಿಸುತ್ತಾನೆ ಹಾಗೂ ಪರಲೋಕದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆಯುತ್ತಾನೆ.
ಎಲ್ಲಿಯವರೆಗೆಂದರೆ, ಸತ್ಯವಿಶ್ವಾಸಿಗೆ ಇಹಲೋಕದಲ್ಲಿ ಯಾವುದೇ ಅನಾಹುತ ಸಂಭವಿಸಿದರೂ ದೃಢವಿಶ್ವಾಸ, ಅಲ್ಲಾಹನ ವಿಧಿಯಲ್ಲಿರುವ ತೃಪ್ತಿ, ಒಳಿತಿನ ಅಥವಾ ಕೆಡುಕಿನ ವಿಧಿ ಸಂಭವಿಸುವಾಗಲೆಲ್ಲಾ ಅಲ್ಲಾಹನನ್ನು ಸ್ತುತಿಸುವುದು, ಮತ್ತು ಅದರ ಬಗ್ಗೆ ಸಂಪೂರ್ಣ ಸಂತೃಪ್ತಿ ಹೊಂದುವುದು ಆ ಅನಾಹುತದ ತೀವ್ರತೆಯನ್ನು ಸಂಪೂರ್ಣವಾಗಿ ನಿವಾರಿಸಿ ಬಿಡುತ್ತದೆ.
ಸಂತೋಷ ಮತ್ತು ನೆಮ್ಮದಿಯನ್ನು ಹೆಚ್ಚಿಸಲು ಮುಸಲ್ಮಾನನು ಮಾಡಬೇಕಾದ ಅಗತ್ಯ ಕೆಲಸವೆಂದರೆ ಅಲ್ಲಾಹನನ್ನು ಹೆಚ್ಚು ಹೆಚ್ಚಾಗಿ ಸ್ಮರಿಸುವುದು ಮತ್ತು ಕುರ್ಆನ್ ಪಾರಾಯಣ ಮಾಡುವುದು. ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ: “ವಿಶ್ವಾಸವಿಟ್ಟವರು ಮತ್ತು ಅಲ್ಲಾಹನ ಸ್ಮರಣೆಯು ಹೃದಯಗಳನ್ನು ಶಾಂತಗೊಳಿಸುತ್ತದೆ. ತಿಳಿಯಿರಿ! ಅಲ್ಲಾಹನ ಸ್ಮರಣೆಯಿಂದಲೇ ಹೃದಯಗಳು ಶಾಂತವಾಗುತ್ತವೆ.” [ಅರ್ರಅ್ದ್: 28] ಮುಸಲ್ಮಾನನು ಅಲ್ಲಾಹನನ್ನು ಸ್ಮರಿಸುವುದು ಮತ್ತು ಕುರ್ಆನ್ ಪಾರಾಯಣ ಮಾಡುವುದನ್ನು ಹೆಚ್ಚಿಸಿದಾಗಲೆಲ್ಲಾ ಅಲ್ಲಾಹನೊಂದಿಗಿರುವ ಅವನ ಸಂಬಂಧವು ಹೆಚ್ಚುತ್ತಾ ಹೋಗುತ್ತದೆ, ಅವನ ಆತ್ಮವು ಶುದ್ಧವಾಗುತ್ತದೆ ಮತ್ತು ಅವನ ವಿಶ್ವಾಸವು ಪ್ರಬಲವಾಗುತ್ತದೆ.
ಅದೇ ರೀತಿ ಮುಸಲ್ಮಾನನು ಧಾರ್ಮಿಕ ವಿಷಯಗಳನ್ನು ಅಧಿಕೃತ ಮೂಲಗಳಿಂದ ಕಲಿಯಬೇಕು. ಇದರಿಂದ ಅಲ್ಲಾಹನನ್ನು ಒಳದೃಷ್ಟಿಯಿಂದ ಆರಾಧಿಸಲು ಸಾಧ್ಯವಾಗುತ್ತದೆ. ಪ್ರವಾದಿ(ಸ) ರವರು ಹೇಳುತ್ತಾರೆ: “ಜ್ಞಾನವನ್ನು ಅರಸುವುದು ಪ್ರತಿಯೊಬ್ಬ ಮುಸಲ್ಮಾನನಿಗೂ ಕಡ್ಡಾಯವಾಗಿದೆ.” [ಇಬ್ನ್ ಮಾಜಃ] ಅದೇ ರೀತಿ, ತನ್ನ ಸೃಷ್ಟಿಕರ್ತನಾದ ಅಲ್ಲಾಹನ ಆಜ್ಞೆಗೆ ಶರಣಾಗಿ ಶ್ರದ್ಧೆಯಿಂದ ನಿರ್ವಹಿಸಬೇಕು. ಅದರ ಹಿಂದಿರುವ ಯುಕ್ತಿಯನ್ನು ತಿಳಿದರೂ ತಿಳಿಯದಿದ್ದರೂ ಸರಿಯೇ. ಅತ್ಯುನ್ನತನಾದ ಅಲ್ಲಾಹು ಪವಿತ್ರ ಕುರ್ಆನ್ನಲ್ಲಿ ಹೇಳುತ್ತಾನೆ: “ಅಲ್ಲಾಹು ಮತ್ತು ಅವನ ಸಂದೇಶವಾಹಕರು ಒಂದು ವಿಷಯವನ್ನು ತೀರ್ಮಾನಿಸಿದರೆ, ನಂತರ ಸತ್ಯವಿಶ್ವಾಸಿಗೆ ಅಥವಾ ಸತ್ಯವಿಶ್ವಾಸಿನಿಗೆ ತಮ್ಮ ವಿಷಯದಲ್ಲಿ ಯಾವುದೇ ಸ್ವತಂತ್ರ ಅಭಿಪ್ರಾಯ ಇರತಕ್ಕದ್ದಲ್ಲ. ಯಾರು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಧಿಕ್ಕರಿಸುತ್ತಾರೋ ಅವರು ಸ್ಪಷ್ಟವಾದ ದುರ್ಮಾರ್ಗದಲ್ಲಾಗಿದ್ದಾರೆ.” [ಅಲ್-ಅಹ್ಝಾಬ್: 36]
ನಮ್ಮ ಪ್ರವಾದಿ ಮುಹಮ್ಮದ್(ಸ)ರ ಮೇಲೆ, ಅವರ ಕುಟುಂಬದ ಮೇಲೆ ಮತ್ತು ಅವರ ಸಹಾಬಾಗಳೆಲ್ಲರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ.