الدروس المهمة لعامة الأمة

الدروس المهمة لعامة الأمة

يهدف الكتاب إلى تعليم المسلمين أساسيات دينهم بطريقة مبسطة وشاملة. يتناول مجموعة من الدروس المهمة مثل قراءة الفاتحة وقصار السور، وأركان الإسلام والإيمان، وأقسام التوحيد والشرك، وشروط وأركان وواجبات الصلاة، بالإضافة إلى مبطلاتها، مع بيان مختصر لشروط الوضوء وفروضه ونواقضه. كما يسلط الضوء على التحلي بالأخلاق الإسلامية والآداب الشرعية، ويقدم إرشادات لطيفة حول تجهيز الميت والصلاة عليه ودفنه.

Language: lang_kn
Prepared by: ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾ ಬಿನ್ ಬಾಝ್
Version: 2.1
Translations 35
Afrikanns Bulgarian Bengali Jola +31
Attachments 7
PDF
Audio
Video
+3

ಮುಸ್ಲಿಂ ಬಾಂಧವರಿಗಾಗಿ ಇಸ್ಲಾಮಿನ ಮೂಲಭೂತ ಪಾಠಗಳು

ಗೌರವಾನ್ವಿತ ಶೈಖ್ ಅಲ್-ಅಲ್ಲಾಮಾ

ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾ ಬಿನ್ ಬಾಝ್

ರಹಿಮಹುಲ್ಲಾಹ್

ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ

ಅಲ್ಲಾಹನಿಗೆ ಸರ್ವಸ್ತುತಿ. ಸುಖಾಂತ್ಯವಿರುವುದು ದೇವಭಯವುಳ್ಳವರಿಗೆ ಮಾತ್ರ. ಅಲ್ಲಾಹನು ಅವನ ದಾಸ ಮತ್ತು ಸಂದೇಶವಾಹಕರಾದ ಪ್ರವಾದಿ ಮುಹಮ್ಮದ್ ﷺ ರ ಮೇಲೆ, ಅವರ ಕುಟುಂಬ ಹಾಗೂ ಅವರ ಎಲ್ಲಾ ಸಹಚರರ ಮೇಲೆ ಕೃಪೆ ಮತ್ತು ಶಾಂತಿಯನ್ನು ವರ್ಷಿಸಲಿ.

ಮುಂದುವರಿದು ಹೇಳುವುದೇನೆಂದರೆ:

ಇದು ಪವಿತ್ರ ಇಸ್ಲಾಂ ಧರ್ಮದ ಕುರಿತು ಮುಸ್ಲಿಂ ಜನಸಾಮಾನ್ಯರು ಕಡ್ಡಾಯವಾಗಿ ತಿಳಿದಿರಲೇಬೇಕಾದ ಕೆಲವು ಕಾರ್ಯಗಳ ಒಂದು ಸಂಕ್ಷಿಪ್ತ ವಿವರಣೆಯಾಗಿದೆ. ನಾನು ಇದಕ್ಕೆ (ಮುಸ್ಲಿಂ ಬಾಂಧವರಿಗಾಗಿ ಇಸ್ಲಾಮಿನ ಮೂಲಭೂತ ಪಾಠಗಳು) ಎಂದು ನಾಮಕರಣ ಮಾಡಿದ್ದೇನೆ.

ಈ ಪುಸ್ತಕವು ಮುಸ್ಲಿಮರಿಗೆ ಪ್ರಯೋಜನಕಾರಿಯಾಗಲಿ ಮತ್ತು ಅಲ್ಲಾಹು ಇದನ್ನು ನನ್ನಿಂದ ಸ್ವೀಕರಿಸಲಿ ಎಂದು ನಾನು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ. ನಿಸ್ಸಂದೇಹವಾಗಿಯೂ ಅವನು ಅತ್ಯಂತ ಉದಾರನೂ ಗೌರವಾನ್ವಿತನೂ ಆಗಿದ್ದಾನೆ.

- ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾ ಬಿನ್ ಬಾಝ್ ಮುಸ್ಲಿಮ್ ಬಾಂಧವರಿಗಾಗಿ ಇಸ್ಲಾಮಿನ ಮೂಲಭೂತ ಪಾಠಗಳು [1] [1] ಮಜ್ಮೂಅ' ಫತಾವಾ ವ ಮಕಾಲಾತ್ ಮುತನವ್ವಿಅ (3/ 288- 298).

ಮೊದಲನೇ ಪಾಠ: ಸೂರ ಅಲ್-ಫಾತಿಹಾ ಮತ್ತು ಸಣ್ಣ ಸೂರಗಳು

ಸೂರ ಅಲ್-ಫಾತಿಹಾ ಮತ್ತು ಸೂರ ಅಝ್ಝ್‌ಲ್‌ಝಲಾದಿಂದ ಸೂರ ಅನ್ನಾಸ್ ವರೆಗೆ ಸಾಧ್ಯವಾದಷ್ಟು ಚಿಕ್ಕ ಸೂರಗಳನ್ನು ಕಲಿಸುವುದು, ಅವುಗಳನ್ನು ಸರಿಯಾಗಿ ಪಠಿಸುವಂತೆ ನೋಡುವುದು, ಕಂಠಪಾಠ ಮಾಡಿಸುವುದು ಮತ್ತು ಅದರಲ್ಲಿ ಅರ್ಥಮಾಡಿಕೊಳ್ಳಲು ಅಗತ್ಯವಾದವುಗಳನ್ನು ವಿವರಿಸಿ ಕೊಡುವುದು.

ಎರಡನೇ ಪಾಠ : ಇಸ್ಲಾಮಿನ ಸ್ತಂಭಗಳು

ಇಸ್ಲಾಮಿನ ಐದು ಆಧಾರ ಸ್ತಂಭಗಳ ವಿವರಣೆ. ಅವುಗಳಲ್ಲಿ ಮೊದಲನೆಯದು ಮತ್ತು ಶ್ರೇಷ್ಠವಾದದು: "ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದುನ್ ರಸೂಲುಲ್ಲಾಹ್” (ಅಲ್ಲಾಹನಲ್ಲದೆ ಬೇರೆ ನೈಜ ಆರಾಧ್ಯನಿಲ್ಲ ಹಾಗೂ ಮುಹಮ್ಮದ್ ﷺ ಅಲ್ಲಾಹನ ಸಂದೇಶವಾಹಕರು). ಇವುಗಳ ಅರ್ಥಗಳನ್ನು ಕಲಿಸುವುದು ಮತ್ತು ಅದರ ಷರತ್ತುಗಳನ್ನು ಪಾಲಿಸುವುದು. "ಲಾ ಇಲಾಹ" ಎಂದರೆ ಅಲ್ಲಾಹನ ಹೊರತು ಜನರು ಆರಾಧಿಸುತ್ತಿರುವ ಎಲ್ಲಾ ದೇವರುಗಳನ್ನು ನಿಷೇಧಿಸುವುದು. "ಇಲ್ಲಲ್ಲಾಹ್" ಎಂದರೆ ಅಲ್ಲಾಹನೊಂದಿಗೆ ಯಾರನ್ನೂ ಭಾಗೀದಾರರನ್ನಾಗಿ ಮಾಡದೆ ಆರಾಧನೆಯನ್ನು ಅವನಿಗೆ ಮಾತ್ರ ಸೀಮಿತಗೊಳಿಸುವುದು. 'ಲಾ ಇಲಾಹ ಇಲ್ಲಲ್ಲಾಹ್' ಇದರ ಷರತ್ತುಗಳು: 1. ಅಜ್ಞಾನಕ್ಕೆ ವಿರುದ್ಧವಾದ ಜ್ಞಾನ. 2. ಸಂಶಯಕ್ಕೆ ವಿರುದ್ಧವಾದ ಖಾತ್ರಿ. 3. ಶಿರ್ಕ್‌ಗೆ ವಿರುದ್ಧವಾದ ನಿಷ್ಕಳಂಕತೆ. 4. ಸುಳ್ಳಿಗೆ ವಿರುದ್ಧವಾದ ಸತ್ಯ. 5. ದ್ವೇಷಕ್ಕೆ ವಿರುದ್ಧವಾದ ಪ್ರೀತಿ. 6. ಶಿರ್ಕ್‌ಗೆ ವಿರುದ್ಧವಾದ ಶರಣಾಗತಿ, 7. ತಿರಸ್ಕಾರಕ್ಕೆ ವಿರುದ್ಧವಾದ ಸ್ವೀಕಾರ. 8. ಅಲ್ಲಾಹನನ್ನು ಹೊರತುಪಡಿಸಿ ಇತರ ಎಲ್ಲಾ ಮಿಥ್ಯ ದೇವರುಗಳ ನಿಷೇಧ. ಈ ಎಲ್ಲಾ ಷರತ್ತುಗಳನ್ನು ಈ ಕಳೆಗಿನ ಎರಡು ದ್ವಿಪದಿಗಳಲ್ಲಿ ಉಲ್ಲೇಖಿಸಲಾಗಿದೆ:

ಅಲ್ಲಾಹನೊಂದಿಗೆ ನಿಮ್ಮ ಜ್ಞಾನ, ನಿಷ್ಠೆ, ಸತ್ಯಸಂಧತೆ, ಪ್ರೀತಿ, ವಿಧೇಯತೆ ಮತ್ತು ಸ್ವೀಕಾರವು ಇರಲಿ. ಮತ್ತು ಎಂಟನೆಯದಾಗಿ, ಅಲ್ಲಾಹುವಿನ ಹೊರತು ಆರಾಧಿಸಲ್ಪಡುವ ಎಲ್ಲಾ ವಸ್ತುಗಳನ್ನು ನೀನು ನಿರಾಕರಿಸುವುದು.

ಇದರ ಜೊತೆಗೆ ಮುಹಮ್ಮದ್ ﷺ ಅಲ್ಲಾಹನ ಸಂದೇಶವಾಹಕರಾಗಿದ್ದಾರೆಂದು ವಿವರಿಸುವುದು. ಇದರ ಅರ್ಥವೇನೆಂದರೆ: ಪ್ರವಾದಿಯವರು ತಿಳಿಸಿಕೊಟ್ಟಿರುವುದೆಲ್ಲವೂ ಸತ್ಯವೆಂದು ನಂಬುವುದು, ಅವರು ಆಜ್ಞಾಪಿಸಿದ ಕಾರ್ಯಗಳನ್ನು ಅನುಸರಿಸುವುದು, ಅವರು ನಿಷೇಧಿಸಿದ ಮತ್ತು ಗದರಿಸಿದ ಕಾರ್ಯಗಳಿಂದ ದೂರವಿರುವುದು ಮತ್ತು ಅಲ್ಲಾಹು ಹಾಗೂ ಅವನ ಪ್ರವಾದಿ ﷺ ಕಲಿಸಿಕೊಟ್ಟ ರೀತಿಯಲ್ಲೇ ಅಲ್ಲಾಹನನ್ನು ಆರಾಧಿಸುವುದು. ನಂತರ ವಿದ್ಯಾರ್ಥಿಗಳಿಗೆ ಇಸ್ಲಾಮಿನ ಉಳಿದ ಸ್ತಂಭಗಳನ್ನು ವಿವರಿಸಿಕೊಡಬೇಕು. ಅವು: ನಮಾಝ್, ಝಕಾತ್, ರಮದಾನ್ ತಿಂಗಳ ಉಪವಾಸ, ಮತ್ತು ಸಾಮರ್ಥ್ಯವಿರುವವರು ಅಲ್ಲಾಹನ ಭವನಕ್ಕೆ ತೆರಳಿ ಹಜ್ಜ್ ನಿರ್ವಹಿಸುವುದು.

ಮೂರನೇ ಪಾಠ: ಈಮಾನಿನ (ವಿಶ್ವಾಸ) ಸ್ತಂಭಗಳು

ಇವು ಒಟ್ಟು ಆರು ಸ್ತಂಭಗಳಿವೆ: 1. ಅಲ್ಲಾಹನಲ್ಲಿ ವಿಶ್ವಾಸವಿಡುವುದು. 2. ಅವನ ಮಲಕ್ (ದೇವದೂತ)ರಲ್ಲಿ ವಿಶ್ವಾಸವಿಡುವುದು. 3. ಅವನು ಅವತೀರ್ಣಗೊಳಿಸಿದ ಗ್ರಂಥಗಳಲ್ಲಿ ವಿಶ್ವಾಸವಿಡುವುದು. 4. ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವುದು. 5. ಅಂತ್ಯ ದಿನದಲ್ಲಿ ವಿಶ್ವಾಸವಿಡುವುದು. 6. ವಿಧಿಯಲ್ಲಿ - ಅಂದರೆ ಒಳಿತು ಮತ್ತು ಕೆಡುಕುಗಳೆಲ್ಲವೂ ಅಲ್ಲಾಹನಿಂದಲೇ ಎಂದು ವಿಶ್ವಾಸವಿಡುವುದು.

ನಾಲ್ಕನೇ ಪಾಠ: ತೌಹೀದ್ ಮತ್ತು ಶಿರ್ಕ್‌ನ ವಿಧಗಳು

ತೌಹೀದ್‌ನ ವಿಧಗಳನ್ನು ವಿವರಿಸುವುದು. ಅವು ಒಟ್ಟು ಮೂರು ವಿಧಗಳಿವೆ: ತೌಹೀದುರ್ರುಬೂಬಿಯ್ಯ, ತೌಹೀದುಲ್ ಉಲೂಹಿಯ್ಯ, ಮತ್ತು ತೌಹೀದುಲ್ ಅಸ್ಮಾವಸ್ಸಿಫಾತ್.

1. ತೌಹೀದುರ್ರುಬೂಬಿಯ್ಯ ಎಂದರೆ, ಸರ್ವ ವಸ್ತುಗಳ ಸೃಷ್ಟಿಕರ್ತ ಮತ್ತು ಎಲ್ಲಾ ಕಾರ್ಯಗಳ ನಿಯಂತ್ರಕ ಅಲ್ಲಾಹನಾಗಿದ್ದಾನೆ ಮತ್ತು ಅದರಲ್ಲಿ ಅವನಿಗೆ ಯಾವುದೇ ಸಹಭಾಗಿಗಳಿಲ್ಲವೆಂದು ವಿಶ್ವಾಸವಿಡುವುದು.

2. ತೌಹೀದುಲ್ ಉಲೂಹಿಯ್ಯ ಎಂದರೆ, ಆರಾಧನೆಗೆ ಅರ್ಹನಾಗಿರುವುದು ಅಲ್ಲಾಹನು ಮಾತ್ರ ಮತ್ತು ಅವನಿಗೆ ಯಾವುದೇ ಭಾಗಿದಾರರಿಲ್ಲವೆಂದು ವಿಶ್ವಾಸವಿಡುವುದು. ಇದು "ಲಾ ಇಲಾಹ ಇಲ್ಲಲ್ಲಾಹ್"ಎಂಬ ವಚನದ ಅರ್ಥವಾಗಿದೆ. "ಲಾ ಇಲಾಹ ಇಲ್ಲಲ್ಲಾಹ್" ಎಂದರೆ, ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಎಂದಾಗಿದೆ. ಆದ್ದರಿಂದ ನಮಾಝ್, ಉಪವಾಸ ಮುಂತಾದ ಸರ್ವ ಆರಾಧನಾ ಕರ್ಮಗಳನ್ನು ಅಲ್ಲಾಹನಿಗೆ ಮಾತ್ರ ಸಲ್ಲಿಸಬೇಕಾಗಿದೆ. ಅವುಗಳ ಪೈಕಿ ಯಾವುದನ್ನೂ ಇತರರಿಗೆ ಸಲ್ಲಿಸಬಾರದು.

3. ತೌಹೀದುಲ್ ಅಸ್ಮಾವಸ್ಸಿಫಾತ್ ಎಂದರೆ, ಪವಿತ್ರ ಕುರ್‌ಆನ್ ಮತ್ತು ದೃಡಪಟ್ಟ ಹದೀಸ್‌ಗಳಲ್ಲಿ ಉಲ್ಲೇಖಿಸಲಾಗಿರುವ ಅಲ್ಲಾಹನ ಹೆಸರು ಮತ್ತು ಗುಣವಿಶೇಷಣಗಳಲ್ಲಿ ವಿಶ್ವಾಸವಿಡುವುದು ಮತ್ತು ಅವುಗಳನ್ನು ಅಲ್ಲಾಹನ ಸಾರ್ವಭೌಮತೆಗೆ ಹೊಂದಿಕೆಯಾಗುವ ರೀತಿಯಲ್ಲಿ ಯಾವುದೇ ದುರ್ವ್ಯಾಖ್ಯಾನ, ನಿರಾಕರಣೆ, ವಿಧಾನ ಮತ್ತು ಹೋಲಿಕೆಗಳಿಲ್ಲದೆ ದೃಢೀಕರಿಸುವುದು. ಅಲ್ಲಾಹನ ಈ ಮಾತಿಗೆ ಅನುಗುಣವಾಗಿ: "(ಓ ಪ್ರವಾದಿಯವರೇ! ) ಹೇಳಿರಿ: ʼಅವನು ಅಲ್ಲಾಹು! ಏಕೈಕನು. (1) ಅಲ್ಲಾಹನು ನಿರಪೇಕ್ಷನು ಅವನಿಗೆ ಯಾವುದೇ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ. (3) ಮತ್ತು ಅವನಿಗೆ ಸರಿಸಾಟಿಯಾಗಿ ಯಾರೂ ಇಲ್ಲ." [ಅಲ್-ಇಖ್ಲಾಸ್:1-4] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಅವನಿಗೆ ಸರಿಸಮಾನವಾದ ಯಾವುದೂ ಇಲ್ಲ. ಮತ್ತು ಅವನೇ ಎಲ್ಲವನ್ನೂ ಕೇಳುವವನು, ನೋಡುವವನು." [ಅಶ್ಶೂರಾ:11]. ಕೆಲವು ವಿದ್ವಾಂಸರು ತೌಹೀದನ್ನು ಎರಡು ವಿಧಗಳಾಗಿ ವಿಂಗಡಿಸಿ, ತೌಹೀದುಲ್ ಅಸ್ಮಾವಸ್ಸಿಫಾತ್ ಅನ್ನು ತೌಹೀದುರ್ರುಬೂಬಿಯ್ಯದ ಅಡಿಯಲ್ಲಿ ಸೇರಿಸಿದ್ದಾರೆ. ಇದರಲ್ಲಿ ತೊಂದರೆಯೇನಿಲ್ಲ. ಏಕೆಂದರೆ ಎರಡು ರೀತಿಯ ವಿಂಗಡನೆಗಳ ಉದ್ದೇಶವು ಸ್ಪಷ್ಟವಾಗಿದೆ.

ಶಿರ್ಕ್‌ನಲ್ಲಿ ಮೂರು ವಿಧಗಳಿವೆ: ಶಿರ್ಕ್ ಅಕ್ಬರ್ (ದೊಡ್ಡ ಶಿರ್ಕ್), ಶಿರ್ಕ್ ಅಸ್ಗರ್ (ಸಣ್ಣ ಶಿರ್ಕ್) ಮತ್ತು ಶಿರ್ಕ್ ಖಫಿ (ಗೂಢ ಶಿರ್ಕ್).

ಶಿರ್ಕ್ ಅಕ್ಬರ್ (ದೊಡ್ಡ ಶಿರ್ಕ್): ಇದು ಮನುಷ್ಯನ ಎಲ್ಲಾ ಕರ್ಮಗಳನ್ನು ನಾಶಪಡಿಸುತ್ತದೆ ಮತ್ತು ಇದೇ ಸ್ಥಿತಿಯಲ್ಲಿ ಮರಣಹೊಂದುವವನನ್ನು ಇದು ಶಾಶ್ವತ ನರಕವಾಸಿಯನ್ನಾಗಿ ಮಾಡುತ್ತದೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ಅವರೇನಾದರೂ (ಅಲ್ಲಾಹುವಿನೊಂದಿಗೆ) ಸಹಭಾಗಿತ್ವ ಮಾಡಿರುತ್ತಿದ್ದರೆ ಅವರು ಮಾಡಿರುವುದೆಲ್ಲವೂ ಅವರ ಪಾಲಿಗೆ ನಿಷ್ಫಲವಾಗಿ ಬಿಡುತ್ತಿದ್ದವು." [ಅಲ್-ಅನ್ಆಮ್: 88]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಸತ್ಯನಿಷೇಧಕ್ಕೆ ಸ್ವಯಂ ಸಾಕ್ಷಿಗಳಾಗಿರುತ್ತಾ ಅಲ್ಲಾಹನ ಮಸೀದಿಗಳ ನಿರ್ವಹಣೆ ಮಾಡುವುದು ಬಹುದೇವಾರಾಧಕರಿಗೆ ಸರಿಹೊಂದುವುದಿಲ್ಲ. ಅವರ ಕರ್ಮಗಳು ನಿಷ್ಫಲವಾಗಿವೆ. ಅವರು ನರಕದಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ. [ಅತ್ತೌಬಾ:17] ಒಬ್ಬನು ಈ ಸ್ಥಿತಿಯಲ್ಲಿ ಮರಣಹೊಂದಿದರೆ, ಅವನ ಪಾಪಗಳು ಕ್ಷಮಿಸಲಾಗುವುದಿಲ್ಲ ಮತ್ತು ಅವನಿಗೆ ಸ್ವರ್ಗವು ನಿಷಿದ್ಧವಾಗಿದೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ತನ್ನೊಂದಿಗೆ ಸಹಭಾಗಿತ್ವ ಮಾಡಲಾಗುವುದನ್ನು ಅಲ್ಲಾಹು ಎಂದಿಗೂ ಕ್ಷಮಿಸುವುದಿಲ್ಲ. ಅದರ ಹೊರತಾಗಿರುವುದನ್ನು ಅವನು ಇಚ್ಛಿಸುವವರಿಗೆ ಕ್ಷಮಿಸುತ್ತಾನೆ.” [ಅನ್ನಿಸಾ:48] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಯಾರು ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುತ್ತಾನೋ, ಅವನಿಗೆ ಅಲ್ಲಾಹು ಸ್ವರ್ಗವನ್ನು ಖಂಡಿತ ನಿಷೇಧಿಸಿದ್ದಾನೆ. ಅವನ ವಾಸಸ್ಥಳ ನರಕಾಗ್ನಿಯಾಗಿದೆ. ಅಕ್ರಮಿಗಳಿಗೆ ಯಾವುದೇ ಸಹಾಯಕರಿಲ್ಲ. [ಅಲ್-ಮಾಇದ:72]

ಮೃತರು ಮತ್ತು ವಿಗ್ರಹಗಳೊಂದಿಗೆ ಮಾಡುವ ಪ್ರಾರ್ಥನೆ, ಸಹಾಯಯಾಚನೆ ಮತ್ತು ಅವರಿಗೆ ಸಲ್ಲಿಸಲಾಗುವ ಹರಕೆ, ಬಲಿಗಳೆಲ್ಲವೂ ದೊಡ್ಡ ಶಿರ್ಕ್ ನಲ್ಲಿ ಒಳಪಡುತ್ತವೆ.

ಶಿರ್ಕ್ ಅಸ್ಗರ್ (ಸಣ್ಣ ಶಿರ್ಕ್): ಕುರ್‌ಆನ್ ಮತ್ತು ಸುನ್ನತ್‌ನಲ್ಲಿ ಶಿರ್ಕ್ ಎಂದು ಉಲ್ಲೇಖಿಸಲಾದ ಕಾರ್ಯಗಳು. ಆದರೆ ಅವು ದೊಡ್ಡ ಶಿರ್ಕ್‌ನ ಗುಂಪಿನಲ್ಲಿ ಸೇರುವುದಿಲ್ಲ. ಉದಾಹರಣೆಗೆ, ತೋರಿಕೆಗಾಗಿ ಮಾಡುವ ಕರ್ಮಗಳು, ಅಲ್ಲಾಹೇತರರ ಮೇಲೆ ಆಣೆ ಮಾಡುವುದು, ಅಲ್ಲಾಹು ಮತ್ತು ಇಂತಿಂತಹ ವ್ಯಕ್ತಿ ಇಚ್ಛಿಸಿದ್ದು ಸಂಭವಿಸುತ್ತದೆ ಎಂದು ಹೇಳುವುದು ಇತ್ಯಾದಿ. ಪ್ರವಾದಿ (ಸ) ರವರು ಹೇಳುತ್ತಾರೆ: "ನಾನು ನಿಮ್ಮ ಮಟ್ಟಿಗೆ ಅತ್ಯಂತ ಹೆಚ್ಚು ಭಯಪಡುವುದು ಸಣ್ಣ ಶಿರ್ಕ್‌ನ ಕುರಿತಾಗಿದೆ." ಅದು ಏನೆಂದು ಕೇಳಲಾದಾಗ ಅವರು ಅದು "ತೋರಿಕೆ" ಎಂದು ಉತ್ತರಿಸಿದರು. [2] ಈ ಹದೀಸನ್ನು ಮಹ್ಮೂದ್ ಬಿನ್ ಲುಬೈದ್ ಅಲ್-ಅನ್ಸಾರಿ ಅವರಿಂದ ಇಮಾಮ್ ಅಹ್ಮದ್, ತಬ್ರಾನಿ ಮತ್ತು ಅಲ್-ಬೈಹಖಿ ರವರು ಉತ್ತಮ ಸನದಿನೊಂದಿಗೆ ವರದಿ ಮಾಡಿದ್ದಾರೆ. ತಬ್ರಾನಿ ಉತ್ತಮ ಸನದ್‌ಗಳೊಂದಿಗೆ, ಮಹ್ಮೂದ್ ಬಿನ್ ಲುಬೈದ್ ರಿಂದ, ಅವರು ರಾಫಿಅ ಬಿನ್ ಖದೀಜ್ ರಿಂದ, ಅವರು ಪ್ರವಾದಿ(ಸ) ರಿಂದ ವರದಿ ಮಾಡಿದ್ದಾರೆ. [2] ಇದನ್ನು ಇಮಾಮ್ ಅಹ್ಮದ್ (5/428), ಅತ್ತಬರಾನಿ 'ಅಲ್-ಕಬೀರ್' ನಲ್ಲಿ (4/338), ಮತ್ತು ಅಲ್-ಬೈಹಕಿ 'ಶುಅಬುಲ್ ಈಮಾನ್' ನಲ್ಲಿ (14/355) ವರದಿ ಮಾಡಿದ್ದಾರೆ. 'ಮಜ್‌ಮಉ-ಝ್ಝವಾಯಿದ್' (1/121) ನಲ್ಲಿ ಹೀಗೆ ಹೇಳಲಾಗಿದೆ: 'ಇದನ್ನು ಅಹ್ಮದ್ ವರದಿ ಮಾಡಿದ್ದಾರೆ ಮತ್ತು ಇದರ ವರದಿಗಾರರು ಸಹೀಹ್ (ಪ್ರಬಲ) ಹದೀಸ್‌ನ ವರದಿಗಾರರಾಗಿದ್ದಾರೆ.'

ಮತ್ತು ಪ್ರವಾದಿ (ﷺ) ರವರು ಹೇಳಿದರು: “ಅಲ್ಲಾಹೇತರರ ಮೇಲೆ ಆಣೆ ಮಾಡಿದವನು ಶಿರ್ಕ್ ಮಾಡಿದನು.”[3] ಇದನ್ನು ಇಮಾಮ್ ಅಹ್ಮದ್ ಸಹೀಹ್ ಸನದಿನೊಂದಿಗೆ ಉಮರ್ ಬಿನ್ ಖತ್ತಾಬ್ (ರ) ರಿಂದ ವರದಿ ಮಾಡಿದ್ದಾರೆ. ಇಬ್ನ್ ಉಮರ್ ರಿಂದ ಅಬೂ ದಾವೂದ್, ತಿರ್ಮಿದಿ ಸಹೀಹ್ ಸನದಿನೊಂದಿಗೆ ವರದಿ ಮಾಡಿದ್ದಾರೆ. ಅಲ್ಲಾಹನ ಪ್ರವಾದಿ (ಸ) ಹೇಳಿದರು: “ಯಾರು ಅಲ್ಲಾಹು ಅಲ್ಲದವರ ಮೇಲೆ ಆಣೆ (ಪ್ರಮಾಣ) ಮಾಡುತ್ತಾನೋ; ಅವನು ಸತ್ಯನಿಷೇಧಿಯಾದನು ಅಥವಾ ಬಹುದೇವವಿಶ್ವಾಸಿಯಾದನು.” [4] ಮತ್ತು ಪ್ರವಾದಿ (ﷺ) ರವರು ಹೇಳಿದರು: "ನೀವು ಅಲ್ಲಾಹ್ ಮತ್ತು ಇಂತಿಂತಹ ವ್ಯಕ್ತಿ ಇಚ್ಚಿಸಿದರೆ ನಡೆಯುತ್ತದೆ ಎಂದು ಹೇಳಬೇಡಿ. ಬದಲಿಗೆ ಅಲ್ಲಾಹು ಇಚ್ಛಿಸಿದ ನಂತರ ಇಂತಿಂತಹ ವ್ಯಕ್ತಿ ಇಚ್ಚಿಸಿದರೆ ನಡೆಯುತ್ತದೆ ಎಂದು ಹೇಳಿರಿ." [5] ಹುದೈಫಾ ಬಿನ್ ಯಮಾನ್ (ರ) ರ ವರದಿಯನ್ನು ಅಬೂ ದಾವೂದ್ ಸಹೀಹ್ ಸನದಿನೊಂದಿಗೆ ವರದಿ ಮಾಡಿದ್ದಾರೆ. [3] ಇದನ್ನು ಇಮಾಮ್ ಅಹ್ಮದ್ (1/47) ವರದಿ ಮಾಡಿದ್ದಾರೆ [4] ಅಬೂ ದಾವೂದ್, ಸಂಖ್ಯೆ (3251) ಅತ್ತಿರ್ಮಿದಿ, ಸಂಖ್ಯೆ (1535). [5] ಅಬೂ ದಾವೂದ್, ಸಂಖ್ಯೆ (4980) ಅಹ್ಮದ್‌ (5/ 384).

ಈ ವಿಧವು (ಸಣ್ಣ ಶಿರ್ಕ್) ಒಬ್ಬ ವ್ಯಕ್ತಿಯನ್ನು ಇಸ್ಲಾಂ ಧರ್ಮದಿಂದ ಹೊರತಾಗಿಸುವುದಿಲ್ಲ ಮತ್ತು ನರಕದಲ್ಲಿ ಶಾಶ್ವತವಾಸವನ್ನು ಕಡ್ಡಾಯಗೊಳಿಸುವುದಿಲ್ಲ. ಆದರೆ ಇದು ತೌಹೀದಿನ ಪರಿಪೂರ್ಣತೆಗೆ ವಿರುದ್ಧವಾಗಿದೆ.

ಶಿರ್ಕ್ ಖಫಿ (ಗೂಢ ಶಿರ್ಕ್): ಇದಕ್ಕೆ ಪುರಾವೆ ಪ್ರವಾದಿ (ಸ) ರವರ ಈ ಹದೀಸ್: "ನಾನು ನಿಮಗೆ ಒಂದು ವಿಷಯವನ್ನು ತಿಳಿಸಲೇ? ಅದು ನನ್ನ ದೃಷ್ಟಿಯಲ್ಲಿ ಮಸೀಹು ದ್ದಜ್ಜಾಲ್‌ಗಿಂತಲೂ ಹೆಚ್ಚು ಅಪಾಯಕರವಾಗಿದೆ." ಜನರು ಹೇಳಿದರು: "ಹೌದು ಹೇಳಿರಿ." ಅವರು (ಪ್ರವಾದಿ ಮುಹಮ್ಮದ್ ﷺ) ಹೇಳಿದರು: "ಅದು ಶಿರ್ಕ್ ಖಫೀ (ಗೋಪ್ಯ ಶಿರ್ಕ್) ಆಗಿದೆ. ವ್ಯಕ್ತಿಯೊಬ್ಬನು ನಮಾಜಿಗೆ ನಿಲ್ಲುತ್ತಾನೆ, ಆಗ ಯಾರಾದರೂ ಅವನನ್ನು ನೋಡುತ್ತಿರುವುದನ್ನು ಕಂಡು, ಅವನು ತನ್ನ ನಮಾಜನ್ನು ಅಲಂಕಾರಗೊಳಿಸುತ್ತಾನೆ." [6] ಇದನ್ನು ಇಮಾಮ್ ಅಹ್ಮದ್ ತನ್ನ ಮುಸ್ನದ್ ನಲ್ಲಿ ಅಬೂ ಸಯೀದ್ ಅಲ್ ಖುದ್ರಿ (ರ) ರಿಂದ ಉಲ್ಲೇಖಿಸಿದ್ದಾರೆ. [6] ಇಬ್ನ್ ಮಾಜ, ಸಂಖ್ಯೆ (4204) ಇಮಾಮ್ ಅಹ್ಮದ್ (3/ 30).

ಶಿರ್ಕ್ ಅನ್ನು ಎರಡು ವಿಧವಾಗಿ ಮಾತ್ರ ವಿಭಜಿಸಬಹುದು:

ದೊಡ್ಡದು (ಅಕ್ಬರ್) ಮತ್ತು ಚಿಕ್ಕದು (ಅಸ್ಗರ್) — ಆದರೆ 'ಗೋಪ್ಯ ಶಿರ್ಕ್' (ಶಿರ್ಕ್ ಖಫೀ) ಈ ಎರಡನ್ನೂ ಒಳಗೊಂಡಿರುತ್ತದೆ. ಅದು (ಅಂದರೆ ಶಿರ್ಕ್ ಖಫೀ) ದೊಡ್ಡ ಶಿರ್ಕ್ ಆಗಿ ಪರಿಗಣಿಸಲ್ಪಡುತ್ತದೆ. ಉದಾಹರಣೆಗೆ, ಕಪಟವಿಶ್ವಾಸಿಗಳ ಶಿರ್ಕ್. ಏಕೆಂದರೆ, ಅವರು ಜೀವ ಭಯದಿಂದ ತಮ್ಮ ತಪ್ಪಾದ ನಂಬಿಕೆಗಳನ್ನು ಗುಪ್ತವಾಗಿಡುತ್ತಿದ್ದರು, ಮತ್ತು ಇಸ್ಲಾಂನ ಅನುಯಾಯಿಗಳಂತೆ ತೋರಿಸುತ್ತಿದ್ದರು.

"ಅದು (ಶಿರ್ಕ್ ಖಫೀ) ಶಿರ್ಕ್ ಅಸ್ಗರ್ ನಲ್ಲಿಯೂ ಇರಬಹುದು. ಉದಾಹರಣೆಗೆ ರಿಯಾ (ತೋರಿಕೆ). ಮಹ್ಮೂದ್ ಬಿನ್ ಲಬೀದ್ ಅಲ್-ಅನ್ಸಾರಿ ರವರ ಹದೀಸ್‌ನಲ್ಲಿ, ಮತ್ತು ಮೇಲೆ ಉಲ್ಲೇಖಿಸಲಾದ ಅಬೂ ಸಈದ್ ರವರ ಹದೀಸ್‌ನಲ್ಲಿ ಇದನ್ನು ಕಾಣಬಹುದು. ಅಲ್ಲಾಹನೇ ಯಶಸ್ಸು ನೀಡುವವನು.

ಐದನೇ ಪಾಠ: ಇಹ್ಸಾನ್

ಇಹ್ಸಾನ್ ಎಂದರೆ, ನೀವು ಅಲ್ಲಾಹನನ್ನು ನೋಡುವಂತೆ ಅವನನ್ನು ಆರಾಧಿಸುವುದು. ನೀವು ಅವನನ್ನು ನೋಡುವುದಿಲ್ಲವಾದರೂ ಅವನು ನಿಮ್ಮನ್ನು ನೋಡುತ್ತಿದ್ದಾನೆಂದು ಭಾವಿಸಿ ಆರಾಧಿಸುವುದು.

ಆರನೇ ಪಾಠ: ನಮಾಝ್‌ನ ಷರತ್ತುಗಳು

ನಮಾಝ್‌ಗೆ ಒಂಬತ್ತು ಷರತ್ತುಗಳಿವೆ:

ಇಸ್ಲಾಂನಲ್ಲಿರುವುದು, ಬುದ್ಧಿಸ್ತಿಮಿತದಲ್ಲಿರುವುದು, ವಿವೇಚನೆಯನ್ನು ಹೊಂದಿರುವುದು, ಚಿಕ್ಕ ಅಶುದ್ಧಿಯನ್ನು ನಿವಾರಿಸಲು ವುದೂ ನಿರ್ವಹಿಸಿರುವುದು, ಖಾಸಗಿ ಭಾಗಗಳನ್ನು ಮುಚ್ಚುವುದು, ಸಮಯ ಪ್ರಾರಂಭವಾಗುವುದು, ಕಿಬ್ಲಾ ಕಡೆಗೆ ಮುಖ ಮಾಡುವುದು, ಸಂಕಲ್ಪ (ನಿಯ್ಯತ್) ಮಾಡುವುದು.

ಏಳನೇ ಪಾಠ: ನಮಾಝ್‌ನ ಸ್ತಂಭಗಳು

ನಮಾಝ್‌ಗೆ ಹದಿನಾಲ್ಕು ಸ್ತಂಭಗಳಿವೆ:

ನಿಲ್ಲುವ ಸಾಮರ್ಥ್ಯವಿರುವವರು ನಿಂತು ನಿರ್ವಹಿಸುವುದು, ನಮಾಝನ್ನು ಪ್ರವೇಶಿಸುವಾಗ ತಕ್ಬೀರ್ (ಅಲ್ಲಾಹು ಅಕ್ಬರ್) ಹೇಳುವುದು, ಸೂರಃ ಅಲ್-ಫಾತಿಹಾ ಪಠಿಸುವುದು, ರುಕೂ ನಿರ್ವಹಿಸುವುದು, ರುಕೂನಿಂದ ಎದ್ದು ನೇರವಾಗಿ ನಿಲ್ಲುವುದು, ಏಳು ಅಂಗಾಂಗಗಳ ಮೇಲೆ ಸುಜೂದ್ ಮಾಡುವುದು, ಸುಜೂದ್‌ನಿಂದ ತಲೆ ಎತ್ತುವುದು, ಎರಡು ಸುಜೂದ್‌ಗಳ ನಡುವೆ ಕುಳಿತುಕೊಳ್ಳುವುದು, ಈ ಎಲ್ಲಾ ಕ್ರಿಯೆಗಳನ್ನು ಮಾಡುವಾಗ ತಟಸ್ಥತೆಯನ್ನು ಪಾಲಿಸುವುದು, ಎಲ್ಲಾ ಸ್ತಂಭಗಳನ್ನು ಕ್ರಮಪ್ರಕಾರ ನಿರ್ವಹಿಸುವುದು, ಕೊನೆಯ ತಶಹ್ಹುದ್ ನಿರ್ವಹಿಸುವುದು, ಅದಕ್ಕಾಗಿ ಕುಳಿತುಕೊಳ್ಳುವುದು, ಪ್ರವಾದಿ (ಸ) ರವರ ಮೇಲೆ ಸ್ವಲಾತ್ ಹೇಳುವುದು ಮತ್ತು ಕೊನೆಗೆ ಎರಡು ಸಲಾಮ್ ಹೇಳಿ ನಮಾಝ್ ಮುಕ್ತಾಯಗೊಳಿಸುವುದು.

ಎಂಟನೇ ಪಾಠ: ನಮಾಝ್‌‌ನ ಕಡ್ಡಾಯ ಕಾರ್ಯಗಳು

ನಮಾಝ್‌‌ಗೆ ಎಂಟು ಕಡ್ಡಾಯ ಕಾರ್ಯಗಳಿವೆ. ಅವು:

ನಮಾಝ್ ಪ್ರಾರಂಭಿಸುವಾಗ ಹೇಳುವ ತಕ್ಬೀರ್‌ನ ಹೊರತಾದ ಇತರ ತಕ್ಬೀರ್‌ಗಳು, ಇಮಾಮರು ಮತ್ತು ಏಕಾಂಗಿಯಾಗಿ ನಮಾಝ್ ನಿರ್ವಹಿಸುವವರು "ಸಮಿಅಲ್ಲಾಹು ಲಿಮನ್ ಹಮಿದ" ಎಂದು ಹೇಳುವುದು, ಎಲ್ಲರೂ "ರಬ್ಬನಾ ವಲಕಲ್ ಹಮ್ದ್" ಎಂದು ಹೇಳುವುದು, ರುಕೂನಲ್ಲಿ "ಸುಬ್‌ಹಾನ ರಬ್ಬಿಯಲ್ ಅಝೀಮ್" ಎಂದು ಹೇಳುವುದು, ಸುಜೂದಿನಲ್ಲಿ "ಸುಬ್‌ಹಾನ ರಬ್ಬಿಯಲ್ ಅಅಲಾ" ಎಂದು ಹೇಳುವುದು, ಎರಡು ಸುಜೂದ್‌ಗಳ ನಡುವೆ “ರಬ್ಬಿಗ್‌ಫಿರ್ ಲೀ” ಎಂದು ಹೇಳುವುದು, ಮೊದಲ ತಶಹ್ಹುದ್ ನಿರ್ವಹಿಸುವುದು ಮತ್ತು ಮೊದಲ ತಶಹ್ಹುದ್‌ಗಾಗಿ ಕುಳಿತುಕೊಳ್ಳುವುದು.

ಒಂಬತ್ತನೇ ಪಾಠ: ತಶಹ್ಹುದ್‌ನ ವಿವರಣೆ

ತಶಹ್ಹುದ್ ಪಠಿಸುವ ವಿಧಾನ:

"ಅತ್ತಹಿಯ್ಯಾತು ಲಿಲ್ಲಾಹಿ, ವಸ್ಸಲವಾತು ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹ ನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ, ವಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್, ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹು, ವಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು". (ಅರ್ಥ: ಅಭಿವಂದನೆಗಳು, ಆರಾಧನೆಗಳು ಮತ್ತು ಸತ್ಕರ್ಮಗಳು ಅಲ್ಲಾಹನಿಗೆ ಮೀಸಲು. ಓ ಪ್ರವಾದಿಯವರೇ! ನಿಮ್ಮ ಮೇಲೆ ಅಲ್ಲಾಹನ ಶಾಂತಿ, ಕರುಣೆ ಮತ್ತು ಅನುಗ್ರಹಗಳಿರಲಿ. ನಮ್ಮ ಮೇಲೆ ಮತ್ತು ಅಲ್ಲಾಹನ ಸಜ್ಜನ ದಾಸರ ಮೇಲೆ ಶಾಂತಿಯಿರಲಿ. ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ ಎಂದು ನಾನು ಸಾಕ್ಷಿ ವಹಿಸುತ್ತೇನೆ ಮತ್ತು ಮುಹಮ್ಮದ್(ಸ) ಅಲ್ಲಾಹನ ದಾಸ ಮತ್ತು ಸಂದೇಶವಾಹಕರೆಂದು ಸಾಕ್ಷಿ ವಹಿಸುತ್ತೇನೆ.)

ನಂತರ ಪ್ರವಾದಿಯ ಮೇಲೆ ದರೂದ್ ಹೇಳುವ ವಿಧಾನ: "ಅಲ್ಲಾಹುಮ್ಮ ಸಲ್ಲಿ ಅಲಾ ಮುಹಮ್ಮದಿನ್ ವಅಲಾ ಆಲಿ ಮುಹಮ್ಮದಿನ್ ಕಮಾ ಸಲ್ಲೈತ ಅಲಾ ಇಬ್ರಾಹೀಮ ವಅಲಾ ಆಲಿ ಇಬ್ರಾಹೀಮ ಇನ್ನಕ ಹಮೀದುನ್ ಮಜೀದ್, ಅಲ್ಲಾಹುಮ್ಮ ಬಾರಿಕ್ ಅಲಾ ಮುಹಮ್ಮದಿನ್ ವಅಲಾ ಆಲಿ ಮುಹಮ್ಮದಿನ್ ಕಮಾ ಬಾರಕ್ತ ಅಲಾ ಇಬ್ರಾಹೀಮ ವಅಲಾ ಆಲಿ ಇಬ್ರಾಹೀಮ ಇನ್ನಕ ಹಮೀದುನ್ ಮಜೀದ್" (ಅರ್ಥ - ಓ ಅಲ್ಲಾಹ್! ನೀನು ಇಬ್ರಾಹೀಮ್‌ರವರ ಕುಟುಂಬದ ಮೇಲೆ ಕೃಪೆ ವರ್ಷಸಿದಂತೆ ಮುಹಮ್ಮದ್(ಸ) ರವರ ಮೇಲೆ ಮತ್ತು ಅವರ ಪತ್ನಿಯರ ಹಾಗೂ ಅವರ ಸಂತಾನದ ಮೇಲೆ ಕೃಪೆ ವರ್ಷಿಸು. ನೀನು ಇಬ್ರಾಹೀಮ್‌ರವರ ಕುಟುಂಬದ ಮೇಲೆ ಬರ್ಕತ್ ಸುರಿಸಿದಂತೆ ಮುಹಮ್ಮದ್(ಸ) ರವರ ಮೇಲೆ ಮತ್ತು ಅವರ ಪತ್ನಿಯರ ಹಾಗೂ ಸಂತಾನದ ಮೇಲೆ ಬರ್ಕತ್ ಸುರಿಸು. ಖಂಡಿತವಾಗಿಯು ನೀನು ಸ್ತುತ್ಯರ್ಹನೂ ಪ್ರಶಂಸನೀಯನೂ ಆಗಿರುವೆ.)

ನಂತರ ಕೊನೆಯ ತಶಹ್ಹುದ್‌ನಲ್ಲಿ , ನರಕದ ಶಿಕ್ಷೆಯಿಂದ, ಸಮಾಧಿಯ ಶಿಕ್ಷೆಯಿಂದ, ಜೀವನ ಮತ್ತು ಮರಣದ ಪರೀಕ್ಷೆಯಿಂದ ಹಾಗೂ ಮಸೀಹ್ ದಜ್ಜಾಲನ ಆಮಿಷದಿಂದ ಅಲ್ಲಾಹನಲ್ಲಿ ರಕ್ಷೆ ಬೇಡಬೇಕು. ನಂತರ ಇಷ್ಟವಾದ ಯಾವುದೇ ಪ್ರಾರ್ಥನೆಯನ್ನು ಪ್ರಾರ್ಥಿಸಬಹುದು. ವಿಶೇಷವಾಗಿ ಸುನ್ನತ್ತಿನಲ್ಲಿ ಸಾಬೀತಾದ ಪ್ರಾರ್ಥನೆಗಳು. ಉದಾಹರಣೆಗೆ:

“ಓ ಅಲ್ಲಾಹ್! ನಾನು ನನ್ನ ಶರೀರವನ್ನು ಅತ್ಯಧಿಕವಾಗಿ ಅಕ್ರಮಿಸಿರುವೆನು ಮತ್ತು ನೀನಲ್ಲದೆ ಪಾಪಗಳನ್ನು ಕ್ಷಮಿಸುವವರಿಲ್ಲ. ಆದ್ದರಿಂದ ನಿನ್ನ ಬಳಿಯ ಕ್ಷಮೆಯಿಂದ ನನ್ನನ್ನು ಕ್ಷಮಿಸು. ನನಗೆ ದಯತೋರು. ಖಂಡಿತವಾಗಿ ನೀನು ಕ್ಷಮಿಸುವನೂ ದಯೆ ತೋರುವವನೂ ಆಗಿರುವೆ”

ಅವರು ಝುಹರ್, ಅಸರ್, ಮಗ್ರಿಬ್ ಮತ್ತು ಇಶಾ ನಮಾಝ್‌ಗಳಲ್ಲಿ‌ ಮೊದಲ ತಶಹ್ಹುದ್‌ನಲ್ಲಿ, ಶಹಾದತೈನ್ ಹೇಳಿದ ನಂತರ, ನಿಂತು ಕಿಯಾಮ್‌ ಮಾಡಿ, ಮೂರನೇ ರಕಅತ್ತಿಗೆ ಹೋಗಬೇಕು. ಪ್ರವಾದಿ ಮುಹಮ್ಮದ್ ﷺ ರ ಮೇಲೆ ದುರೂದ್ (ಸಲಾತ್) ಹೇಳಿದರೆ ಅದು ಅತ್ಯುತ್ತಮ. ಏಕೆಂದರೆ ಈ ಬಗ್ಗೆ ಹಲವಾರು ಹದೀಸ್‌ಗಳು ಬಂದಿವೆ. ನಂತರ ಮೂರನೇ ರಕಅತ್ತಿಗಾಗಿ ನಿಲ್ಲಬೇಕು.

ಹತ್ತನೇ ಪಾಠ: ನಮಾಝಿನ ಸುನ್ನತ್ತುಗಳು

ಮತ್ತು ಅವುಗಳಲ್ಲಿ:

1. ಆರಂಭಿಕ ಪ್ರಾರ್ಥನೆ. (ನಮಾಝ್ ಆರಂಭಿಸುವಾಗ ಹೇಳುವ ಪ್ರಾರ್ಥನೆ)

2. ರುಕೂ ಮಾಡುವ ಮೊದಲು ಮತ್ತು ನಂತರ ಕಿಯಾಮ್‌ ಸ್ಥಿತಿಯಲ್ಲಿರುವಾಗ ಬಲಗೈಯನ್ನು ಎಡಗೈಯ ಮೇಲಿಟ್ಟು ಎದೆಯ ಮೇಲೆ ಇರಿಸಬೇಕು.

3. ಪ್ರಾರಂಭದ ತಕ್ಬೀರ್ ಹೇಳುವಾಗ, ರುಕೂ ಮಾಡುವಾಗ, ರುಕೂನಿಂದ ಮೇಲೇಳುವಾಗ, ಮತ್ತು ಮೊದಲ ತಶಹ್ಹುದ್‌ನಿಂದ ಮೂರನೇ ರಕಅತ್ತಿಗೆ ಏಳುವಾಗ, ಎರಡೂ ಕೈಗಳನ್ನು ಭುಜಗಳ ಅಥವಾ ಕಿವಿಗಳ ಸಮೀಪವಾಗಿ ಎತ್ತಬೇಕು. ಕೈಬೆರಳುಗಳು ಜೋಡಿಸಿಕೊಂಡಿರಬೇಕು ಮತ್ತು ನೇರವಾಗಿರಬೇಕು.

4. ರುಕೂ ಮಾತ್ತು ಸುಜೂದ್‌ ನಲ್ಲಿ ಒಂದಕ್ಕಿಂತ ಅಧಿಕ ತಸ್ಬೀಹ್‌ ಹೇಳುವುದು.

5. ರುಕೂವಿನಿಂದ ಎದ್ದ ನಂತರ ‘ರಬ್ಬನಾ ವ ಲಕಲ್ ಹಮ್ದ್’ ಗಿಂತ ಹೆಚ್ಚುವರಿಯಾದ ದುಆಗಳನ್ನು ಮತ್ತು ಎರಡೂ ಸಜ್ದಾಗಳ ನಡುವೆ ಕ್ಷಮೆ ಯಾಚಿಸುವ ಪ್ರಾರ್ಥನೆಯನ್ನು ಒಂದಕ್ಕಿಂತ ಹೆಚ್ಚು ಸಲ ಓದುವುದು.

6. ರುಕೂ ಮಾಡುವಾಗ ತಲೆ ಮತ್ತು ಬೆನ್ನು ಸಮಾನಾಂತರವಾಗಿ ಇಡಬೇಕು.

7. ಸಜ್ದಾ ಮಾಡುವಾಗ ಕೈಗಳನ್ನು ಭುಜಗಳಿಂದ, ಹೊಟ್ಟೆಯನ್ನು ತೊಡೆಗಳಿಂದ ಮತ್ತು ತೊಡೆಗಳನ್ನು ಕಾಲುಗಳಿಂದ ದೂರವಿಡಬೇಕು.

8. ಸಜ್ದಾ ಮಾಡುವ ಸಮಯದಲ್ಲಿ ತೋಳುಗಳನ್ನು ನೆಲಕ್ಕೆ ತಗಲದಂತೆ ಎತ್ತಿಕೊಂಡಿರಬೇಕು.

9. ಮೊದಲ ತಷಹ್ಹುದ್ ಮತ್ತು ಎರಡು ಸಜ್ದಾಗಳ ಮಧ್ಯದಲ್ಲಿ, ಎಡಗಾಲನ್ನು ಹಾಸಿ ಅದರ ಮೇಲೆ ಕುಳಿತುಕೊಳ್ಳುವುದು ಹಾಗೂ ಬಲಗಾಲನ್ನು ನೇರವಾಗಿ ನಿಲ್ಲಿಸುವುದು.

10. ನಾಲ್ಕು ರಕಅತ್ ಮತ್ತು ಮೂರು ರಕಅತ್ ಗಳಿರುವ ನಮಾಝ್‌ಗಳಲ್ಲಿ ಕೊನೆಯ ತಶಹ್ಹುದ್‌ನಲ್ಲಿ ತವರ್ರುಕ್ ಮಾಡುವುದು. ತವರ್ರುಕ್ ಎಂದರೆ: ನೆಲದ ಮೇಲೆ ಕುಳಿತುಕೊಳ್ಳುವುದು ಮತ್ತು ಎಡಗಾಲನ್ನು ಬಲಗಾಲಿನ ಕೆಳಗೆ ಇಡುವುದು ಹಾಗೂ ಬಲಗಾಲನ್ನು ನಾಟಿ ನಿಲ್ಲಿಸುವುದು.

11. ಮೊದಲ ಮತ್ತು ಎರಡನೇ ತಶಹ್ಹುದ್‌ಗಳಲ್ಲಿ, ಕುಳಿತುಕೊಳ್ಳುವ ಸಮಯದಿಂದ ಕೊನೆಯವರೆಗೂ ತೋರುಬೆರಳಿನಿಂದ ಸಂಜ್ಞೆ ಮಾಡುವುದು ಮತ್ತು ಪ್ರಾರ್ಥನೆಯ ಸಮಯದಲ್ಲಿ ಅದನ್ನು ಅಲ್ಲಾಡಿಸುವುದು.

12. ಮೊದಲ ತಶಹ್ಹುದ್‌ನಲ್ಲಿ ಮುಹಮ್ಮದ್ ﷺ ರ ಮೇಲೆ, ಅವರ ಕುಟುಂಬದ ಮೇಲೆ, ಹಾಗು ಇಬ್ರಾಹೀಮ್ (ಅ) ಮತ್ತು ಅವರ ಕುಟುಂಬದ ಮೇಲೆ ಸಲಾತ್ ಮತ್ತು ಬರಕತ್‌ಗಾಗಿ ಪ್ರಾರ್ಥಿಸುವುದು (ದರೂದ್ ಇಬ್ರಾಹೀಮ್ ಓದುವುದು).

13- ಕೊನೆಯ ತಶಹ್ಹುದ್‌ನಲ್ಲಿ ಪ್ರಾರ್ಥಿಸುವುದು.

14. ಫಜರ್, ಜುಮಾ, ಎರಡು ಈದ್‌ಗಳು, ಇಸ್ತಿಸ್ಕಾ (ಮಳೆಗಾಗಿ ಪ್ರಾರ್ಥನೆ ಮಾಡುವ ನಮಾಝ್) ಮಗ್ರಿಬ್ ಮತ್ತು ಇಶಾ ನಮಾಝ್‌ಗಳ ಪ್ರಥಮ ಎರಡು ರಕಅತ್‌ಗಳಲ್ಲಿ ಜಹರಿ (ಗಟ್ಟಿ ಧ್ವನಿಯಲ್ಲಿ) ಕುರ್‌ಆನ್ ಓದುವುದು.

15. ಝುಹರ್, ಅಸರ್, ಮಗ್ರಿಬ್‌ನ ಮೂರನೇ ರಕಅತ್ ಮತ್ತು ಇಶಾ‌ದ ಕೊನೆಯ ಎರಡು ರಕಅತ್‌ಗಳಲ್ಲಿ ಸಿರ್ರಿ (ಮೆತ್ತಗಿನ ಧ್ವನಿಯಲ್ಲಿ) ಕುರ್‌ಆನ್ ಓದುವುದು.

16. ಫಾತಿಹಾ ಅಲ್ಲದೆ ಬೇರೆ ಕೆಲವು ಆಯತ್‌ಗಳನ್ನು ಪಠಿಸುವುದು. ಮೇಲೆ ಉಲ್ಲೇಖಿಸಿದ ಸುನ್ನತ್‌ಗಳ ಹೊರತಾಗಿ ಇನ್ನೂ ಕೆಲವು ಸುನ್ನತ್‌ಗಳನ್ನೂ ಪಾಲಿಸಬೇಕಾಗಿದೆ. ಉದಾಹರಣೆಗೆ ರುಕೂನಿಂದ ಎದ್ದ ನಂತರ 'ರಬ್ಬನಾ ವಲಕಲ್ ಹಮ್ದ್' ಎಂದು ಹೆಚ್ಚಿಗೆ ಹೇಳುವುದು. ಇದನ್ನು ಇಮಾಮ್, ಮುಕ್ತದೀ (ಇಮಾಮ್‌ ಹಿಂದೆ ನಮಾಝ್ ಮಾಡುವವನು) ಮತ್ತು ಒಬ್ಬಂಟಿಯಾಗಿ ನಮಾಝ್‌ ಮಾಡುವವನು ಎಲ್ಲರೂ ಹೇಳುವುದು ಸುನ್ನತ್ತಾಗಿದೆ. ಹಾಗೆಯೇ, ರುಕೂ ಮಾಡುವಾಗ ಕೈ ಬೆರಳುಗಳನ್ನು ಅಗಲಗೊಳಿಸಿ ಮೊಣಕಾಲಿನ ಮೇಲೆ ಇಡುವುದು ಕೂಡ ಸುನ್ನತ್ತಾಗಿದೆ.

ಪಾಠ ಹನ್ನೊಂದು: ನಮಾಝನ್ನು ಅಸಿಂಧುಗೊಳಿಸುವ ಕಾರ್ಯಗಳು

ಇವು ಎಂಟು ಕಾರ್ಯಗಳಿವೆ:

1. ಉದ್ದೇಶಪೂರ್ವಕ ಮಾತನಾಡುವುದು. ಮರೆವಿನಿಂದ ಅಥವಾ ಅರಿವಿಲ್ಲದೆ ಮಾತನಾಡಿದರೆ ನಮಾಝ್ ಅಸಿಂಧುವಾಗುವುದಿಲ್ಲ.

2. ನಗುವುದು.

3. ತಿನ್ನುವುದು.

4. ಕುಡಿಯುವುದು.

5. ಖಾಸಗಿ ಭಾಗಗಳನ್ನು ಸರಿಯಾಗಿ ಮುಚ್ಚದಿರುವುದು.

6- ಕಿಬ್ಲಾದ ದಿಕ್ಕಿನಿಂದ ಸರಿಯುವುದು.

7-ನಮಾಝಿನಲ್ಲಿ ಎಡೆಬಿಡದೆ ಅನಗತ್ಯ ಕೆಲಸಗಳನ್ನು ಮಾಡುವುದು.

8-ವುದೂ ಮುರಿಯುವುದು

ಪಾಠ ಹನ್ನೆರಡು : ವುದೂವಿನ ಷರತ್ತುಗಳು

ಇವು ಒಟ್ಟು ಹತ್ತು ಷರತ್ತುಗಳಿವೆ:

ಮುಸ್ಲಿಂ ಆಗಿರುವುದು, ಮಾನಸಿಕ ಸ್ಥಿಮಿತವನ್ನು ಹೊಂದಿರುವುದು, ಒಳಿತು-ಕೆಡುಕುಗಳನ್ನು ಬೇರ್ಪಡಿಸಿ ತಿಳಿಯುವ ಶಕ್ತಿಯಿರುವುದು, ನಿಯ್ಯತ್‌ ಮಾಡುವುದು, ವುದೂ ಸಂಪೂರ್ಣವಾಗುವವರೆಗೆ ನಿಯ್ಯತ್ತನ್ನು (ಉದ್ದೇಶವನ್ನು) ಸ್ಥಿರವಾಗಿರಿಸುವುದು, ವುದೂ ಕಡ್ಡಾಯವಾಗುವ ಕಾರಣ (ಅಶುದ್ಧತೆ) ಅಳಿದುಹೋಗಿರಬೇಕು, ವುದೂ ಮಾಡುವ ಮೊದಲು ನೀರು ಅಥವಾ ಕಲ್ಲು ಇತ್ಯಾದಿಯಿಂದ ಇಸ್ತಿಂಜಾ (ಶೌಚ ಶುದ್ಧತೆ) ಮಾಡಿರುವುದು, ಬಳಸುವ ನೀರು ಶುದ್ಧವಾಗಿರುವುದು ಮತ್ತು ಇಸ್ಲಾಮೀ ನಿಯಮದ ಪ್ರಕಾರ ಬಳಸಲು ಅನುಮತಿಯಿರುವುದು, ನೀರು ಚರ್ಮಕ್ಕೆ ತಲುಪುವುದನ್ನು ತಡೆಯುವ ವಸ್ತುವನ್ನು ತೆಗೆದುಹಾಕುವುದು, ನಿರಂತರ ಅಶುದ್ಧಿ ಇರುವ ವ್ಯಕ್ತಿಗೆ ನಮಾಝ್‌ನ ಸಮಯವಾಗಿರುವುದು.

ಪಾಠ ಹದಿಮೂರು : ವುದೂವಿನ ಕಡ್ಡಾಯ ಕಾರ್ಯಗಳು

ಇವು ಒಟ್ಟು ಆರು ಇವೆ:

ಮುಖವನ್ನು ತೊಳೆಯುವುದು, ಬಾಯಿ ಮುಕ್ಕಳಿಸುವುದು ಮತ್ತು ಮೂಗಿನಲ್ಲಿ ನೀರೆಳೆದು ಶುಚಿಗೊಳಿಸುವುದು ಇದರಲ್ಲಿ ಸೇರುತ್ತದೆ, ಮೊಣಕೈಗಳವರೆಗೆ ಕೈಗಳನ್ನು ತೊಳೆಯುವುದು, ತಲೆಯನ್ನು ಸಮಗ್ರವಾಗಿ ಸವರುವುದು ಮತ್ತು ಎರಡು ಕಿವಿಗಳನ್ನು ಸವರುವುದು ಇದರಲ್ಲಿ ಸೇರುತ್ತದೆ, ಕಾಲುಗಳನ್ನು ಹರಡುಗಂಟುಗಳವರೆಗೆ ತೊಳೆಯುವುದು, ಇವುಗಳನ್ನು ಕ್ರಮಪ್ರಕಾರ ನಿರ್ವಹಿಸುವುದು, ಮತ್ತು ಇವುಗಳನ್ನು ನಡುವೆ ಹೆಚ್ಚು ಅಂತರವಿಲ್ಲದ ರೀತಿಯಲ್ಲಿ ನಿರ್ವಹಿಸುವುದು. ಮುಖ ಮತ್ತು ಕೈಕಾಲುಗಳನ್ನು ಮೂರು ಬಾರಿ ತೊಳೆಯುವುದು ಅಪೇಕ್ಷಣೀಯವಾಗಿದೆ. ಅದೇ ರೀತಿ ಬಾಯಿ ಮುಕ್ಕಳಿಸುವುದು ಹಾಗೂ ಮೂಗಿನ ಹೊಳ್ಳೆಗಳನ್ನು ಶುಚಿಗೊಳಿಸುವುದನ್ನು ಮೂರು ಬಾರಿ ಮಾಡುವುದು ಆಪೇಕ್ಷಣೀಯವಾಗಿದೆ. ಇವುಗಳನ್ನು ಒಂದು ಬಾರಿ ನಿರ್ವಹಿಸುವುದು ಮಾತ್ರ ಕಡ್ಡಾಯವಾಗಿದೆ. ಆದರೆ ತಲೆ ಸವರುವುದನ್ನು ಒಂದಕ್ಕಿಂತ ಹೆಚ್ಚು ಬಾರಿ ಪುನರಾವರ್ತಿಸಬಾರದು. ಪ್ರಬಲ ಹದೀಸ್‌ಗಳು ಇದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ಹದಿನಾಲ್ಕನೇ ಪಾಠ: ವುದೂವನ್ನು ಅಸಿಂಧುಗೊಳಿಸುವ ಕಾರ್ಯಗಳು

ಇವು ಒಟ್ಟು ಆರು ಕಾರ್ಯಗಳಿವೆ:

ಮಲಮೂತ್ರ ವಿಸರ್ಜನಾ ದ್ವಾರಗಳಿಂದ ಮೂತ್ರ, ಮಲ ಅಥವಾ ವಾಯು ಹೊರಬರುವುದು, ದೇಹದಿಂದ ಅಶುದ್ಧ ಮತ್ತು ಕಲ್ಮಶ ಪದಾರ್ಥ ಹೊರಬರುವುದು, ನಿದ್ರೆ ಮುಂತಾದ ಕಾರಣದಿಂದ ಪ್ರಜ್ಞೆಯನ್ನು ಕಳೆದುಕೊಳ್ಳುವುದು, ಕೈಯಿಂದ ಮೂತ್ರದ್ವಾರ ಅಥವಾ ಗುದದ್ವಾರವನ್ನು ಪರದೆಯಿಲ್ಲದೆ ಸ್ಪರ್ಶಿಸುವುದು, ಒಂಟೆ ಮಾಂಸ ಸೇವಿಸುವುದು ಮತ್ತು ಇಸ್ಲಾಮ್ ಧರ್ಮವನ್ನು ತೊರೆಯುವುದು (ಅಲ್ಲಾಹು ನಮ್ಮನ್ನು ಮತ್ತು ಎಲ್ಲಾ ಮುಸ್ಲಿಮರನ್ನು ಅದರಿಂದ ರಕ್ಷಿಸಲಿ).

ಪ್ರಮುಖ ಸೂಚನೆ: ಸರಿಯಾದ ಅಭಿಪ್ರಾಯದ ಪ್ರಕಾರ ಮೃತರಿಗೆ ಗುಸ್ಲ್ (ಸ್ನಾನ) ಮಾಡಿಸುವುದರಿಂದ ವುದೂ ಮುರಿಯುವುದಿಲ್ಲ. ಇದು ಬಹುತೇಕ ವಿದ್ವಾಂಸರ ಅಭಿಪ್ರಾಯವಾಗಿದೆ. ಏಕೆಂದರೆ ಇದಕ್ಕೆ ಯಾವುದೇ ಪುರಾವೆಯಿಲ್ಲ. ಆದರೆ, ಯಾವುದೇ ಪರದೆಯಿಲ್ಲದೆ ಮೃತ ವ್ಯಕ್ತಿಯ ಗುಪ್ತಾಂಗಕ್ಕೆ ಕೈ ತಾಗಿದರೆ ಪುನಃ ವುದೂ ಮಾಡುವುದು ಕಡ್ಡಾಯವಾಗುತ್ತದೆ.

ಮೃತನ ಗುಪ್ತಾಂಗವನ್ನು ಯಾವುದೇ ಪರದೆಯಿಲ್ಲದೆ ಸ್ಪರ್ಶಿಸದಿರುವುದು ಕಡ್ಡಾಯವಾಗಿದೆ. ಅದೇ ರೀತಿ, ಮಹಿಳೆಯನ್ನು ಸ್ಪರ್ಶಿಸಿದರೂ ವುದೂ ಮುರಿಯುವುದಿಲ್ಲ. ಅದು ಕಾಮದ್ರೇಕದಿಂದಾಗಿರಲಿ ಅಥವಾ ಇಲ್ಲದೇ ಇರಲಿ. ಆದರೆ ಅದರಿಂದಾಗಿ ವೀರ್ಯ ಸ್ಖಲನವಾಗಬಾರದು. ಇದು ವಿದ್ವಾಂಸರ ಎರಡು ಅಭಿಪ್ರಾಯಗಳಲ್ಲಿ ಅತ್ಯಂತ ಪ್ರಬಲ ಅಭಿಪ್ರಾಯವಾಗಿದೆ. ಏಕೆಂದರೆ ಪ್ರವಾದಿ ﷺ ರವರು ತಮ್ಮ ಪತ್ನಿಯನ್ನು ಚುಂಬಿಸಿ, ವುದೂ ಮಾಡದೆ ನೇರವಾಗಿ ನಮಾಝ್ ಮಾಡಿದ್ದರು.

ಅನ್ನಿಸಾ ಮತ್ತು ಅಲ್-ಮಾಇದ ಸೂರಾಗಳಲ್ಲಿ ಸರ್ವಶಕ್ತನಾದ ಅಲ್ಲಾಹನ ಈ ಕೆಳಗಿನ ವಚನದ ಬಗ್ಗೆ ಹೇಳುವುದಾದರೆ: ಅಥವಾ ಮಹಿಳೆಯರನ್ನು ಸ್ಪರ್ಶಿಸಿದ್ದರೆ [ಅನ್ನಿಸಾ: 43] [ಅಲ್-ಮಾಇದ:6] ಅದರ ಉದ್ದೇಶ ಲೈಂಗಿಕ ಸಂಭೋಗವಾಗಿದೆ. ಇದು ವಿದ್ವಾಂಸರ ಎರಡು ಅಭಿಪ್ರಾಯಗಳಲ್ಲಿ ಅತ್ಯಂತ ಪ್ರಬಲ ಅಭಿಪ್ರಾಯವಾಗಿದೆ. ಇದು ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಂದ ಸಂಪ್ರೀತನಾಗಲಿ) ರವರ ಮತ್ತು ಪೂರ್ವಿಕ ಹಾಗೂ ನಂತರದ ವಿದ್ವಾಂಸರಲ್ಲಿ ಸೇರಿದ ಒಂದು ಗುಂಪಿನ ಅಭಿಪ್ರಾಯವಾಗಿದೆ. ಅಲ್ಲಾಹನೇ ತೌಫೀಕ್ ದಯಪಾಲಿಸುವವನು.

ಹದಿನೈದನೇ ಪಾಠ: ಪ್ರತಿಯೊಬ್ಬ ಮುಸ್ಲಿಮನು ವಿಧ್ಯುಕ್ತ ಸ್ವಭಾವಗಳನ್ನು ಅಳವಡಿಸಿಕೊಳ್ಳುವುದು

ಅವುಗಳಲ್ಲಿ ಕೆಲವು ಹೀಗಿವೆ: ಸತ್ಯವಂತಿಕೆ, ಪ್ರಾಮಾಣಿಕತೆ, ಶುದ್ಧತೆ, ಸಂಕೋಚ, ಧೈರ್ಯ, ಉದಾರತೆ, ನಿಷ್ಠೆ, ಅಲ್ಲಾಹು ನಿಷಿದ್ಧಗೊಳಿಸಿದ ಎಲ್ಲಾ ಕಾರ್ಯಗಳಿಂದ ದೂರವಿರುವುದು, ನೆರೆಹೊರೆಯವರೊಂದಿಗೆ ಉತ್ತಮವಾಗಿ ವರ್ತಿಸುವುದು, ನಿರ್ಗತಿಕರಿಗೆ ಸಾಧ್ಯವಾದಷ್ಟು ಸಹಾಯ ಮಾಡುವುದು, ಮುಂತಾದ ಅಲ್ಲಾಹನ ಗ್ರಂಥ ಅಥವಾ ಅಧಿಕೃತ ಹದೀಸ್‌ಗಳು ಸೂಚಿಸಿದ ಸ್ವಭಾವಗಳು.

ಹದಿನಾರನೇಯ ಪಾಠ: ಇಸ್ಲಾಮಿ ಶಿಷ್ಟಾಚಾರಗಳನ್ನು ಅಳವಡಿಸಿಕೊಳ್ಳುವುದು

ಅವುಗಳಲ್ಲಿ ಕೆಲವು ಹೀಗಿವೆ: ಸಲಾಂ ಹೇಳುವುದು, ಮುಗುಳ್ನಗುವುದು, ಬಲಗೈಯಿಂದ ತಿನ್ನುವುದು ಮತ್ತು ಕುಡಿಯುವುದು, ಆಹಾರ-ಪಾನೀಯ ಸೇವಿಸುವಾಗ 'ಬಿಸ್ಮಿಲ್ಲಾಹ್' ಎಂದು ಹೇಳುವುದು ಮತ್ತು ಮುಗಿಸುವಾಗ 'ಅಲ್-ಹಮ್ದು ಲಿಲ್ಲಾಹ್' ಎಂದು ಹೇಳುವುದು, ಸೀನಿದ ನಂತರ 'ಅಲ್-ಹಮ್ದು ಲಿಲ್ಲಾಹ್' ಎಂದು ಹೇಳುವುದು, ಸೀನಿದವನು 'ಅಲ್-ಹಮ್ದು ಲಿಲ್ಲಾಹ್' ಹೇಳಿದ್ದನ್ನು ಕೇಳಿದರೆ 'ಯರ್ಹಮುಕಲ್ಲಾಹ್' ಎಂದು ಹೇಳುವುದು, ರೋಗಿಯನ್ನು ನೋಡಲು ಹೋಗುವುದು, ಜನಾಝ ನಮಾಝ್ ಮತ್ತು ದಫನ ಮಾಡುವ ತನಕ ಮೃತದೇಹವನ್ನು ಹಿಂಬಾಲಿಸುವುದು, ಮಸೀದಿ ಅಥವಾ ಮನೆಯನ್ನು ಪ್ರವೇಶಿಸುವಾಗ ಮತ್ತು ನಿರ್ಗಮಿಸುವಾಗ ಇಸ್ಲಾಮೀ ಶಿಷ್ಟಾಚಾರಗಳನ್ನು ಪಾಲಿಸುವುದು, ಹಾಗೆಯೇ ಪ್ರಯಾಣದ ಸಮಯದಲ್ಲಿ, ತಂದೆ-ತಾಯಿ, ಸಂಬಂಧಿಕರು, ನೆರೆಹೊರೆಯವರು, ಕಿರಿಯರು ಮತ್ತು ಹಿರಿಯರೊಂದಿಗೆ ಶಿಷ್ಟಾಚಾರ ಪಾಲಿಸುವುದು, ಮಗುವಿನ ಜನನಕ್ಕೆ ಶುಭಾಶಯ ಕೋರುವುದು, ನವ ವಿವಾಹಿತರಿಗೆ ಪ್ರಾರ್ಥಿಸುವುದು, ದುಃಖದಲ್ಲಿರುವವರಿಗೆ ಸಾಂತ್ವನ ಹೇಳುವುದು, ಬಟ್ಟೆ-ಬರೆಗಳನ್ನು ಮತ್ತು ಪಾದರಕ್ಷೆಗಳನ್ನು ಧರಿಸುವಾಗ ಮತ್ತು ಕಳಚುವಾಗ ಇಸ್ಲಾಮೀ ಶಿಷ್ಟಾಚಾರಗಳನ್ನು ಪಾಲಿಸುವುದು.

ಹದಿನೇಳನೇ ಪಾಠ: ಶಿರ್ಕ್ ಮತ್ತು ವಿವಿಧ ಪಾಪಗಳ ಬಗ್ಗೆ ಎಚ್ಚರವಹಿಸುವುದು

ಅವುಗಳಲ್ಲಿ ಕೆಲವು ಹೀಗಿವೆ: ಏಳು ವಿನಾಶಕಾರಿ ಪಾಪಗಳು, ಅವು: ಅಲ್ಲಾಹನೊಂದಿಗೆ ಶಿರ್ಕ್ ಮಾಡುವುದು, ಮಾಟ ಮಾಡುವುದು, ಅಲ್ಲಾಹು ಪವಿತ್ರಗೊಳಿಸಿರುವ ಜೀವವನ್ನು ಅನ್ಯಾಯವಾಗಿ ಕೊಲ್ಲುವುದು, ಬಡ್ಡಿ ತಿನ್ನುವುದು, ಅನಾಥನ ಸಂಪತ್ತನ್ನು ಕಬಳಿಸುವುದು, ರಣರಂಗದಿಂದ ಪಾಲಾಯನ ಮಾಡುವುದು, ಸುಶೀಲೆಯರಾದ ಮುಗ್ಧ ಸತ್ಯವಿಶ್ವಾಸಿ ಮಹಿಳೆಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುವುದು.

ಅವುಗಳಲ್ಲಿ ಈ ಪಾಪಗಳೂ ಸೇರುತ್ತವೆ: ತಂದೆ ತಾಯಿಯರಿಗೆ ಅವಿದೇಯತೆ ತೋರುವುದು, ಸಂಬಂಧಗಳನ್ನು ಮುರಿಯುವುದು, ಸುಳ್ಳು ಸಾಕ್ಷಿ ಹೇಳುವುದು, ಸುಳ್ಳು ಆಣೆಗಳನ್ನು ಇಡುವುದು, ನೆರೆಹೊರೆಯವರಿಗೆ ತೊಂದರೆ ಕೊಡುವುದು, ಜನರ ಪ್ರಾಣ, ಸಂಪತ್ತು ಮತ್ತು ಗೌರವಕ್ಕೆ ಧಕ್ಕೆ ತರುವುದು, ಮಾದಕ ದ್ರವ್ಯ ಸೇವಿಸುವುದು, ಜೂಜಾಡುವುದು, ಪರದೂಷಣೆ ಮಾಡುವುದು, ಚಾಡಿ ಹೇಳುವುದು ಮುಂತಾದ ಅಲ್ಲಾಹು ಅಥವಾ ಅವನ ಸಂದೇಶವಾಹಕರು ನಿಷಿದ್ಧವೆಂದು ಹೇಳಿರುವ ವಿಷಯಗಳು.

ಹದಿನೆಂಟನೇ ಪಾಠ: ಮೃತರನ್ನು ಸಿದ್ಧಗೊಳಿಸುವುದು, ಅವರಿಗೆ ಜನಾಝ ನಮಾಝ್ ಮಾಡುವುದು ಮತ್ತು ದಫನ ಮಾಡುವುದು

ಇದರ ವಿವರ ಈ ಕೆಳಗಿನಂತಿದೆ:

ಒಂದು: ಮರಣಾಸನ್ನ ವ್ಯಕ್ತಿಗೆ لا إله إلا الله ಕಲಿಮಾ ಬೋಧಿಸುವುದು. ಏಕೆಂದರೆ ಪ್ರವಾದಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲಿ ಮೃತರಾದವರಿಗೆ لا إله إلا الله ಕಲಿಮಾ ಬೋಧಿಸಿರಿ." [7] ಸಹೀಹ್ ಮುಸ್ಲಿಮ್ "ಈ ಹದೀಸ್‌ನಲ್ಲಿ 'ಮೃತರಾದವರು' ಎಂದರೆ ಮರಣಾಸನ್ನರು. ಅಂದರೆ, ಮರಣದ ಲಕ್ಷಣಗಳು ಸ್ಪಷ್ಟವಾಗಿ ಕಂಡುಬರುವ ಜನರು. [7] ಮುಸ್ಲಿಮ್ (ಹದೀಸ್ ಸಂಖ್ಯೆಗಳು 916-917).

ಎರಡನೆಯದಾಗಿ: ಅವನ ಮರಣವು ಖಚಿತವಾದರೆ, ಸುನ್ನತ್‌ನಲ್ಲಿ ಬಂದಿರುವಂತೆ ಅವನ ಕಣ್ಣುಗಳನ್ನು ಮುಚ್ಚಬೇಕು ಮತ್ತು ದವಡೆಯನ್ನು ಕಟ್ಟಬೇಕು.

ಮೂರು: ಮುಸ್ಲಿಂ ಮೃತದೇಹವನ್ನು ಸ್ನಾನ ಮಾಡಿಸುವುದು ಕಡ್ಡಾಯವಾಗಿದೆ. ಆದರೆ ಅವನು ಯುದ್ಧರಂಗದಲ್ಲಿ ಕೊಲ್ಲಲ್ಪಟ್ಟ ಶಹೀದ್ (ಹುತಾತ್ಮ) ಆಗಿದ್ದರೆ, ಅವನನ್ನು ಸ್ನಾನ ಮಾಡಿಸಲಾಗುವುದಿಲ್ಲ ಮತ್ತು ಅವನಿಗೆ (ಜನಾಝ) ನಮಾಝ್ ನಿರ್ವಹಿಸಲಾಗುವುದಿಲ್ಲ. ಬದಲಾಗಿ, ಅವನನ್ನು ಅವನ ಬಟ್ಟೆಗಳಲ್ಲೇ ದಫನ್ ಮಾಡಲಾಗುತ್ತದೆ. ಏಕೆಂದರೆ, ಪ್ರವಾದಿ ﷺ ಅವರು ಉಹುದ್ ಯುದ್ಧದಲ್ಲಿ ಕೊಲ್ಲಲ್ಪಟ್ಟವರನ್ನು ಸ್ನಾನ ಮಾಡಿಸಲಿಲ್ಲ ಮತ್ತು ಅವರಿಗೆ (ಜನಾಝ) ನಮಾಝ್ ನಿರ್ವಹಿಸಲಿಲ್ಲ.

ನಾಲ್ಕು: ಮೃತರಿಗೆ ಸ್ನಾನ ಮಾಡಿಸುವ ವಿಧಾನ ಮೃತರನ್ನು ಸ್ನಾನ ಮಾಡಿಸುವಾಗ ಅವರ ಗುಪ್ತಭಾಗವನ್ನು ಮರೆಮಾಡಬೇಕು ಮತ್ತು ಅವರನ್ನು ಸ್ವಲ್ಪ ಎತ್ತಿ ಹೊಟ್ಟೆಯನ್ನು ಮೆದುವಾಗಿ ಒತ್ತಬೇಕು. ನಂತರ, ಸ್ನಾನ ಮಾಡಿಸುವವನು ತನ್ನ ಕೈಗೆ ಬಟ್ಟೆ ಅಥವಾ ಅದರಂತಿರುವ ಯಾವುದೇ ವಸ್ತುವನ್ನು ಸುತ್ತಿಕೊಂಡು ಮೃತರಿಂದ ಮಾಲಿನ್ಯವನ್ನು ಸ್ವಚ್ಛಗೊಳಿಸಬೇಕು. ಬಳಿಕ ಅವರಿಗೆ ನಮಾಝ್ ಮಾಡುವಾಗ ಮಾಡುವಂತೆ ವುದೂ ಮಾಡಿಸಿ, ಅವರ ತಲೆ ಮತ್ತು ದಾಡಿಯನ್ನು ನೀರು ಮತ್ತು ಬೋರೆ ಮರದ ಎಲೆಗಳಿಂದ ಅಥವಾ ಬೇರೆ ಯಾವುದೇ ವಸ್ತುವಿನಿಂದ ತೊಳೆಯಬೇಕು. ನಂತರ ಅವರ ಬಲಭಾಗ ಮತ್ತು ಎಡಭಾಗವನ್ನು ತೊಳೆಯಬೇಕು. ಎರಡನೇ ಹಾಗೂ ಮೂರನೇ ಬಾರಿ ಇದೇ ರೀತಿ ಸ್ನಾನ ಮಾಡಿಸಬೇಕು. ಪ್ರತೀ ಬಾರಿ ಅವರ ಹೊಟ್ಟೆಯ ಮೇಲೆ ಕೈಯಿಂದ ಸವರಬೇಕು. ಏನಾದರೂ ಹೊರಬಂದರೆ, ಅದನ್ನು ತೊಳೆಯಬೇಕು ಮತ್ತು ಆ ಸ್ಥಳವನ್ನು ಹತ್ತಿ ಅಥವಾ ಇನ್ನಾವುದಾದರೂ ವಸ್ತುವಿನಿಂದ ಮುಚ್ಚಬೇಕು. ಹಾಗೆಯೇ, ಹೊರಬರುವುದು ನಿಲ್ಲದಿದ್ದರೆ ಬಯಲು ಮಣ್ಣನ್ನು ಅಥವಾ ಆಧುನಿಕ ವೈದ್ಯಕೀಯ ಸಲಕರಣೆಗಳನ್ನು (ಪ್ಲಾಸ್ಟರ್, ಟೇಪ್ ಇತ್ಯಾದಿ) ಉಪಯೋಗಿಸಿ ಮುಚ್ಚಬೇಕು.

ಮೃತರಿಗೆ ಮತ್ತೊಮ್ಮೆ ವುದೂ ಮಾಡಿಸಬೇಕು. ಮೂರು ಬಾರಿ ತೊಳೆಯುವುದರಿಂದ ಶುದ್ಧಿ ಉಂಟಾಗದಿದ್ದರೆ, ಐದು ಅಥವಾ ಏಳು ಬಾರಿ ತೊಳೆಯಬೇಕು. ನಂತರ ದೇಹವನ್ನು ಬಟ್ಟೆಯಿಂದ ಒರೆಸಬೇಕು. ಪಾರ್ಶ್ವಗಳಲ್ಲಿ ಮತ್ತು ಸಜ್ದಾ ಮಾಡುವ ಸ್ಥಳಗಳಲ್ಲಿ ಸುಗಂಧವನ್ನು ಹಚ್ಚಬೇಕು. ಇಡೀ ದೇಹಕ್ಕೆ ಸುಗಂಧ ಹಚ್ಚಿದರೆ ಅದು ಅತ್ಯುತ್ತಮ. ಕಫನ್ ಬಟ್ಟೆಗಳಿಗೆ ಧೂಪ ಹಾಕಬೇಕು. ಮೀಸೆ ಅಥವಾ ಉಗುರುಗಳು ಉದ್ದವಾಗಿದ್ದರೆ ಕತ್ತರಿಸಬೇಕು. ಅವುಗಳನ್ನು ಹಾಗೆಯೇ ಬಿಟ್ಟುಬಿಟ್ಟರೂ ತೊಂದರೆಯಿಲ್ಲ. ಕೂದಲು ಕತ್ತರಿಸಬಾರದು, ಮತ್ತು ಜನನಾಂಗದ ಕೂದಲುಗಳನ್ನು ಬೊಳಿಸಬಾರದು. ಸುನ್ನತಿ ಮಾಡಿಸಬಾರದು. ಏಕೆಂದರೆ ಇದಕ್ಕೆ ಯಾವುದೇ ದೃಢವಾದ ಪುರಾವೆಯಿಲ್ಲ. ಮಹಿಳೆಯ ಕೂದಲನ್ನು ಮೂರು ಜಡೆಗಳಾಗಿ ಹೆಣೆದು ಅವಳ ಬೆನ್ನಿನ ಹಿಂಭಾಗದಲ್ಲಿ ಬಿಟ್ಟುಬಿಡಬೇಕು.

ಐದು: ಮೃತರಿಗೆ ಕಫನ್ ಮಾಡುವುದು:

ಪುರುಷರಿಗೆ ಮೂರು ಬಟ್ಟೆಗಳಲ್ಲಿ ಕಫನ್ ಮಾಡುವುದು ಶ್ರೇಷ್ಠವಾಗಿದೆ. ಆ ಬಟ್ಟೆಗಳಲ್ಲಿ ಖಮೀಸ್ (ಅಂಗಿ) ಅಮಾಮಾ (ಪಗಡಿ) ಇರಬಾರದು. ಪ್ರವಾದಿ (ಸ) ರೊಡನೆ ಹೀಗೆಯೇ ಮಾಡಲಾಯಿತು. ಮೃತದೇಹವನ್ನು ಆ ಬಟ್ಟೆಗಳಲ್ಲಿ ಚೆನ್ನಾಗಿ ಸುತ್ತಬೇಕು. ಆದರೆ ಯಾರಿಗಾದರೂ ಖಮೀಸ್, ಧೋತಿ (ಸೊಂಟಕ್ಕೆ ಕಟ್ಟುವ ಬಟ್ಟೆ), ಮತ್ತು ಚಾದರಿನಲ್ಲಿ ಕಫನ್ ಮಾಡಲಾದರೆ, ಅದರಲ್ಲಿ ಯಾವುದೇ ತೊಂದರೆ ಇಲ್ಲ.

ಮಹಿಳೆಗೆ ಐದು ಬಟ್ಟೆಗಳಲ್ಲಿ ಕಫನ್ ಮಾಡಬೇಕು — ಅವುಗಳಲ್ಲಿ: ಖಮೀಸ್ (ಅಂಗಿ), ದುಪ್ಪಟ್ಟಿ (ತಲೆಯ ಬಟ್ಟೆ), ಧೋತಿ (ಸೊಂಟದ ಬಟ್ಟೆ), ದೇಹವನ್ನೆಲ್ಲಾ ಮುಚ್ಚುವ ಎರಡು ಬಟ್ಟೆಗಳು ಇರುತ್ತವೆ. ಮಗುವಿಗೆ ಒಂದು, ಎರಡು ಅಥವಾ ಮೂರು ಬಟ್ಟೆಗಳಲ್ಲಿ ಕಫನ್‌ ಹೊದಿಸಬೇಕು ಮತ್ತು ಚಿಕ್ಕ ಹೆಣ್ಣು ಮಗಳಿಗೆ, ಒಂದು ಖಮೀಸ್ ಮತ್ತು ದೇಹವನ್ನೆಲ್ಲಾ ಮುಚ್ಚುವ ಎರಡು ಬಟ್ಟೆಗಳಲ್ಲಿ ಕಫನ್ ಹೊದಿಸಲಾಗುತ್ತದೆ.

ಪುರುಷ, ಮಹಿಳೆ ಮತ್ತು ಮಗು — ಎಲ್ಲರಿಗೂ ಸಂಪೂರ್ಣ ದೇಹವನ್ನು ಮುಚ್ಚುವಷ್ಟು ಒಂದು ಬಟ್ಟೆಯಲ್ಲಿ ಕಫನ್ ಮಾಡುವುದು ಕಡ್ಡಾಯವಾಗಿದೆ. ಆದರೆ, ಮೃತರು ಇಹ್‌ರಾಮ್‌ (ಹಜ್ಜ್ ಅಥವಾ ಉಮ್ರಾ) ನ ಸ್ಥಿತಿಯಲ್ಲಿ ಇದ್ದರೆ, ಅವರಿಗೆ ನೀರು ಮತ್ತು ಬೋರೆ ಮರದ ಎಲೆಗಳಿಂದ ಸ್ನಾನ ಮಾಡಿಸಬೇಕು ಮತ್ತು ಅವರ ಧೋತಿ (ಸೊಂಟದ ಬಟ್ಟೆ) ಮತ್ತು ಚಾದರಿನಲ್ಲಿ ಕಫನ್ ಮಾಡಬೇಕು.‌ ಅವರ ತಲೆ ಮತ್ತು ಮುಖವನ್ನು ಮುಚ್ಚಬಾರದು ಹಾಗೂ ಸುಗಂಧವನ್ನೂ ಹಚ್ಚಬಾರದು. ಏಕೆಂದರೆ ಅವರನ್ನು ಕಿಯಾಮತ್‌ (ಅಂತ್ಯದಿನ) ದಿನ "ಲಬ್ಬೈಕ್ ಅಲ್ಲಾಹುಮ್ಮ ಲಬ್ಬೈಕ್" (ಓ ಅಲ್ಲಾಹ್! ನಾನಿಲ್ಲಿ ಸಿದ್ಧನಿದ್ದೇನೆ) ಎಂದು ಧ್ವನಿಸುತ್ತಾ ಪುನರುತ್ಥಾನಗೊಳಿಸಲಾಗುತ್ತದೆ ಎಂದು ಅಲ್ಲಾಹನ ಪ್ರವಾದಿ ಮುಹಮ್ಮದ್ (ಸ) ರವರ ಸಹೀಹ್ ಹದೀಸ್ ಮೂಲಕ ಸಾಬೀತಾಗಿದೆ. ಆದರೆ, ಇಹ್‌ರಾಮ್‌ನ ಸ್ಥಿತಿಯಲ್ಲಿ ಮರಣಹೊಂದಿದ ಮಹಿಳೆಗೆ, ಸಾಧಾರಣ ಮಹಿಳೆಯರಿಗೆ ಮಾಡುವಂತೆಯೇ ಐದು ಬಟ್ಟೆಗಳಲ್ಲಿ ಕಫನ್ ಮಾಡಲಾಗುತ್ತದೆ. ಆದರೆ, ಅವಳಿಗೆ ಸುಗಂಧ ಹಚ್ಚಬಾರದು, ಹಾಗೂ ಮುಖವನ್ನು ನಕಾಬ್ (ಮುಖ ಮುಚ್ಚುವ ಬಟ್ಟೆ) ಇಟ್ಟು ಮುಚ್ಚಬಾರದು, ಮತ್ತು ಅವಳ ಕೈಗಳಿಗೆ ಕವಚ (ಗ್ಲೌಸ್) ಹಾಕಬಾರದು. ಆದರೆ, ಅವಳ ಮುಖ ಮತ್ತು ಕೈಗಳನ್ನು ಕಫನಿನ ಬಟ್ಟೆಯಿಂದ ಮುಚ್ಚಬಹುದು, ಇದರ ವಿವರವನ್ನು ಹಿಂದೆಯೇ ನೀಡಲಾಗಿದೆ.

ಆರನೇಯ ವಿಷಯ: ಮೃತನಿಗೆ ಗುಸ್ಲ್ ಮಾಡುವುದು, ಅವನಿಗೆ ಜನಾಜಾ ನಮಾಜ್ ಸಲ್ಲಿಸುವುದು ಮತ್ತು ಅವನನ್ನು ದಫನ ಮಾಡುವುದಕ್ಕೆ ಹೆಚ್ಚಿನ ಹಕ್ಕು ಹೊಂದಿರುವ ವ್ಯಕ್ತಿ?

ಆತನು ವಸಿಯ್ಯತ್ ಮಾಡಿದ ವ್ಯಕ್ತಿ, ನಂತರ ತಂದೆ, ನಂತರ ತಾತ, ನಂತರ ಪುರುಷನ ‘ಅಸಬಾ’ಗಳಲ್ಲಿ ಹತ್ತಿರದವರು, ನಂತರ ಅವರ ನಂತರದವರು.

ಮಹಿಳೆಗೆ ಸ್ನಾನ ಮಾಡಿಸುವುದಕ್ಕೆ ಅತ್ಯಂತ ಹೆಚ್ಚು ಹಕ್ಕು ಹೊಂದಿರುವವಳು ಮೃತಳಿಂದ ವಸೀಯತ್ ಪಡೆದ ಮಹಿಳೆ, ನಂತರ ತಾಯಿ, ನಂತರ ಅಜ್ಜಿ, ಮತ್ತು ನಂತರ ಮಹಿಳೆಯರ ನಡುವೆ ಹತ್ತಿರದ ಸಂಬಂಧಿ ಮಹಿಳೆ ಹಕ್ಕು ಹೊಂದಿರುತ್ತಾಳೆ. ಪತಿ ಮತ್ತು ಪತ್ನಿಗೆ ಪರಸ್ಪರ ಸ್ನಾನ ಮಾಡಿಸುವ ಹಕ್ಕು ಇರುತ್ತದೆ, ಏಕೆಂದರೆ ಅಬೂ ಬಕರ್ ಸಿದ್ದೀಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರ ಪತ್ನಿ ಅವರಿಗೆ ಸ್ನಾನ ಮಾಡಿಸಿದ್ದರು, ಹಾಗೆಯೇ ಅಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರು ತಮ್ಮ ಪತ್ನಿ ಫಾತಿಮಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಗೆ ಸ್ನಾನ ಮಾಡಿಸಿದ್ದರು.

ಏಳನೇಯ ವಿಷಯ: ಜನಾಜಾ ನಮಾಝ್ ನ ವಿಧಾನ

ಜನಾಜಾ ನಮಾಝ್‌ನಲ್ಲಿ ನಾಲ್ಕು ತಕ್ಬೀರ್‌ಗಳನ್ನು ಹೇಳಲಾಗುತ್ತದೆ:ಮೊದಲನೇ ತಕ್ಬೀರ್ ಹೇಳಿದ ನಂತರ ಸೂರ ಅಲ್-ಫಾತಿಹಾ ಓದಬೇಕು.ಈ ನಂತರ ಒಂದು ಚಿಕ್ಕ ಸೂರಾ ಅಥವಾ ಒಂದು-ಎರಡು ಆಯತ್‌ಗಳನ್ನು ಓದಿದರೆ ಉತ್ತಮ, ಏಕೆಂದರೆ ಈ ಕುರಿತು ಇಬ್ನು ಅಬ್ಬಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರಿಂದ ಸಹೀಹ್ ಹದೀಸ್ ಇದೆ.ಎರಡನೇ ತಕ್ಬೀರ್ ಹೇಳಿದ ಮೇಲೆ, ತಶಹ್ಹುದ್‌ನಲ್ಲಿ ದರೂದ್ ಓದುವ ರೀತಿಯಲ್ಲಿ,ಅಲ್ಲಾಹನ ಪ್ರವಾದಿ ಮುಹಮ್ಮದ್ ﷺ ರ ಮೇಲೆ ದರೂದ್ ಇಬ್ರಾಹೀಮ್ ಅನ್ನು ಓದಬೇಕು.ಮೂರನೇ ತಕ್ಬೀರ್ ಹೇಳಿದ ನಂತರ, ಈ ದುಆ ಓದಬೇಕು: ಹೇ ಅಲ್ಲಾಹ್! ನಮ್ಮ ಜೀವಂತರು, ನಮ್ಮ ಮೃತರು, ನಮ್ಮ ಹಾಜರಿರುವವರು, ನಮ್ಮ ಗೈರುಹಾಜರಿರುವವರು, ನಮ್ಮ ಸಣ್ಣವರು, ನಮ್ಮ ದೊಡ್ಡವರು, ನಮ್ಮ ಪುರುಷರು ಮತ್ತು ನಮ್ಮ ಮಹಿಳೆಯರು –ಎಲ್ಲರನ್ನೂ ಕ್ಷಮಿಸು.ಹೇ ಅಲ್ಲಾಹ್! ನಮ್ಮೊಳಗಿಂದ ಯಾರನ್ನು ನೀನು ಬದುಕಿಡುತ್ತೀಯೋ, ಅವನನ್ನು ಇಸ್ಲಾಮಿನ ಸ್ಥಿತಿಯಲ್ಲಿ ಬದುಕಿಡು, ಮತ್ತು ಯಾರನ್ನು ನೀನು ಮರಣ ಕೊಡುತ್ತೀಯೋ, ಅವನನ್ನು ಈಮಾನಿನ ಸ್ಥಿತಿಯಲ್ಲಿ ಮರಣಹೊಂದಿಸು.ಹೇ ಅಲ್ಲಾಹ್! ಈ ಮೃತ ವ್ಯಕ್ತಿಯನ್ನು ಕ್ಷಮಿಸು, ಅವನ ಮೇಲೆ ಕರುಣೆ ತೋರು, ಅವನಿಗೆ ನಿತ್ಯ ಶಾಂತಿ (ಆಫಿಯತ್) ನೀಡು, ಅವನ ದೋಷಗಳನ್ನು ಮನ್ನಿಸು, ಅವನಿಗೆ ಮಾನ್ಯತೆಯೊಂದಿಗೆ ಆತಿಥ್ಯ ವಹಿಸು, ಅವನ ಗೋರಿಯನ್ನು ವಿಶಾಲಗೊಳಿಸು, ಅವನನ್ನು ನೀರು, ಹಿಮ ಮತ್ತು ಗಾಳಿಯಿಂದ (ಒಲೆಗಳಿಂದ) ಶುಭ್ರಗೊಳಿಸು,ಬಿಳಿ ಬಟ್ಟೆಯನ್ನು ಕೊಳೆಯಿಂದ ಶುದ್ಧಪಡಿಸುವಂತೆ,ಅವನನ್ನು ಪಾಪಗಳು ಮತ್ತು ಪ್ರಮಾದಗಳಿಂದ ಶುದ್ಧಗೊಳಿಸು,ಅವನಿಗೆ ಅವನ ಮನೆಗೆ ಬದಲಾಗಿ ಒಂದು ಉತ್ತಮವಾದ ಮನೆ ನೀಡು, ಅವನ ಪತ್ನಿಗೆ ಬದಲಾಗಿ ಉತ್ತಮ ಪತ್ನಿಯನ್ನು ನೀಡು, ಅವನನ್ನು ಸ್ರರ್ಗಕ್ಕೆ ಪ್ರವೇಶಿಸು, ಅವನನ್ನು ಗೋರಿ ಶಿಕ್ಷೆಯಿಂದ ಮತ್ತು ನರಕದ ಶಿಕ್ಷೆಯಿಂದ ರಕ್ಷಿಸು,ಅವನ ಗೋರಿಯನ್ನು ವಿಶಾಲಗೊಳಿಸು ಮತ್ತು ಅದರೊಳಗೆ ಬೆಳಕು ತುಂಬು.ಹೇ ಅಲ್ಲಾಹ್! ನಾವು ಈ ಮೃತನ ಪ್ರತಿಫಲದಿಂದ ವಂಚಿತರಾಗದಂತೆ ಮಾಡು, ಮತ್ತು ಅವನ ಮರಣದ ನಂತರ ನಮ್ಮನ್ನು ದಾರಿಗೆಟ್ಟವರಾಗಿಸಬೇಡ. ನಂತರ ನಾಲ್ಕನೇ ತಕ್ಬೀರ್ ಹೇಳಿ, ತನ್ನ ಬಲಭಾಗಕ್ಕೆ ಒಂದು ಸಲಾಮ್ ಮಾಡಬೇಕು.

ಪ್ರತಿಯೊಂದು ತಕ್ಬೀರ್‌ ಸಮಯದಲ್ಲೂ ಕೈಗಳನ್ನು ಎತ್ತುವುದು ಮುಸ್ತಹಬ್ ಆಗಿದೆ. ಮೃತಳು ಮಹಿಳೆಯಾಗಿದ್ದರೆ: ಮೂರನೇ ತಕ್ಬೀರ್‌ನಲ್ಲಿ ಈ ದುವಾ ಹೇಳಬೇಕು – "ಅಲ್ಲಾಹುಮ್ಮಘ್ಫಿರ್ ಲಹಾ... (ಅಂತ್ಯದವರೆಗೆ) ಮೃತರು ಇಬ್ಬರಾಗಿದ್ದರೆ:ಈ ರೀತಿ ಹೇಳಬೇಕು – "ಅಲ್ಲಾಹುಮ್ಮಘ್ಫಿರ್ ಲಹುಮಾ..." (ಅಂತ್ಯದವರೆಗೆ) ಮೃತರು ಇಬ್ಬರಿಗಿಂತ ಹೆಚ್ಚಿನವರಾಗಿದ್ದರೆ:ಈ ರೀತಿ ಹೇಳಬೇಕು –"ಅಲ್ಲಾಹುಮ್ಮಘ್ಫಿರ್ ಲಹುಮ್..." (ಅಂತ್ಯದವರೆಗೆ) ಮೃತನು ಶಿಶುವಾಗಿದ್ದರೆ :ಮೂರನೇ ತಕ್ಬೀರ್‌ನಲ್ಲಿ ಸಾಮಾನ್ಯ ಕ್ಷಮೆಯ ಪ್ರಾರ್ಥನೆಯ ಬದಲು,ಈ ದುಆ ಅನ್ನು ಓದಬೇಕು: ಹೇ ಅಲ್ಲಾಹ್! ಈ ಮಗುವನ್ನು (ತಂದೆ-ತಾಯಿಗಾಗಿ) ಒಂದು ಮುನ್ನಡೆಸಿದ ಪುಣ್ಯಕರ್ಮವಾಗಿ, ಒಂದು ಖಜಾನೆಯಂತೆ, ಮತ್ತು ಒಂದು ಶಿಫಾರಸು ಮಾಡುವವನೆಂದು ಮಾಡು —ಅವನ ಶಿಫಾರಸನ್ನು ನೀನು ಸ್ವೀಕರಿಸು.ಹೇ ಅಲ್ಲಾಹ್! ಈ ಮಗುವಿನ ಮೂಲಕ ಅವನ ತಾಯಿ-ತಂದೆಯರ ಸತ್ಕರ್ಮಗಳ ತೂಕವನ್ನು ಹೆಚ್ಚಿಸು, ಅವರ ಪ್ರತಿಫಲವನ್ನು ಮಹದಾಗಿಸು, ಅವನನ್ನು ಗತಿಸಿ ಹೊದ ನಿಸ್ವಾರ್ಥ ಮೂಮಿನ್‌ಗಳೊಂದಿಗೆ ಸೇರಿಸು,ಅವನನ್ನು ಇಬ್ರಾಹೀಮ್ عليهم السلام ಅವರ ಸಂರಕ್ಷಣೆಯಲ್ಲಿ ಇಡು,ಮತ್ತು ನಿನ್ನ ಕರುಣೆಯಿಂದ ನರ್ಕದ ಶಿಕ್ಷೆಯಿಂದ ಅವನನ್ನು ರಕ್ಷಿಸು.

ಸುನ್ನತ್ ಎಂದರೆ ಇಮಾಮ್ ಪುರುಷನ ತಲೆಯ ಮುಂದೆ ಮತ್ತು ಮಹಿಳೆಯ ಮಧ್ಯದಲ್ಲಿ ನಿಂತು ಇರುತ್ತಾನೆ. ಹಲವು ಶವಗಳು ಇದ್ದರೆ, ಪುರುಷ ಇಮಾಮ್ ಹತ್ತಿರವಾಗಿ ಇರಬೇಕು ಮತ್ತು ಮಹಿಳೆಯು ಕಿಬ್ಲಾ ದಿಕ್ಕಿಗೆ ಮುಖ ಮಾಡಿರಬೇಕು. ಅವರ ಜೊತೆಗೆ ಮಕ್ಕಳು ಇದ್ದರೆ, ಹುಡುಗನ ಜನಾಜಾ ಮಹಿಳೆಯ ಮೊದಲು ಇರಬೇಕು, ನಂತರ ಮಹಿಳೆಯು ಮತ್ತು ಕೊನೆಗೆ ಹುಡುಗಿಯು. ಹುಡುಗನ ತಲೆ ಪುರುಷನ ತಲೆಯ ಮುಂದೆ ಇರಬೇಕು, ಮತ್ತು ಮಹಿಳೆಯ ಮಧ್ಯವು ಪುರುಷನ ತಲೆಯ ಮುಂದೆ ಇರಬೇಕು. ಹಾಗೆಯೇ, ಹುಡುಗಿಯ ತಲೆ ಮಹಿಳೆಯ ತಲೆಯ ಮುಂದೆ ಮತ್ತು ಅವಳ ಮಧ್ಯವು ಪುರುಷನ ತಲೆಯ ಮುಂದೆ ಇರಬೇಕು. ಎಲ್ಲಾ ನಮಾಜ್‌ ನಿರ್ವಹಿಸುವವರು ಇಮಾಮ್ ನ ಹಿಂದಿನಿಂದ ನಿಂತಿರುತ್ತಾರೆ, ಆದರೆ ಒಬ್ಬನೇ ಇದ್ದು, ಅವನಿಗೆ ಇಮಾಮ್ ಹಿಂಭಾಗದಲ್ಲಿ ಸ್ಥಳವಿಲ್ಲದಿದ್ದರೆ, ಅವನು ಇಮಾಮ್‌ನ ಬಲಭಾಗದಲ್ಲಿ ನಿಂತಿರುತ್ತಾನೆ.

ಎಂಟನೇಯ ವಿಷಯ: ಮೃತರನ್ನು ದಫನ್ ಮಾಡುವ ವಿಧಾನ

ಮನುಷ್ಯನ ಕಬ್ರನ್ನು ಸೊಂಟದಷ್ಟು ಆಳವಾಗಿ ಮಾಡಬೇಕು, ಮತ್ತು ಅದರಲ್ಲಿಯೇ ಕಿಬ್ಲಾ ದಿಕ್ಕಿನಲ್ಲಿ ಲಹದ್ (ಒಂದು ಬದಿಯ ಕೋಣೆ) ಇರಬೇಕು. ಮೃತರನ್ನು ಲಹದ್‌ನಲ್ಲಿ ಅವನ ಬಲಹಸ್ತದ ಮೇಲೆ ಇಡಬೇಕು, ಮತ್ತು ಅವನ ಕಫನ್‌ನ ಮುದುರಿಗಳನ್ನು ತೆರವುಗೊಳಿಸಬೇಕು, ಆದರೆ ಅವುಗಳನ್ನು ತೆಗೆದುಹಾಕಬಾರದು. ಮೃತಕ ಪುರುಷನಾಗಲಿ ಅಥವಾ ಮಹಿಳೆಯಾಗಲಿ, ಮುಖವನ್ನು ತೆರವುಗೊಳಿಸಬೇಡಿ, ನಂತರ ಲಹದ್ ಮೇಲೆ ಇಟ್ಟಿಗೆಗಳನ್ನು ಹಾಕಿ, ಮಣ್ಣಿನಿಂದ ಲೇಪಿಸಿ ಅದರ ಮೇಲೆ ಸೀಲ ಮಾಡಬೇಕು. ಇದರಿಂದ ಅದು ಸ್ಥಿರವಾಗಿರುತ್ತದೆ ಮತ್ತು ಕೆಳಗಿನ ಮಣ್ಣು ಬೀರುವುದನ್ನು ತಡೆಯುತ್ತದೆ. ಇಟ್ಟಿಗೆಗಳು ಲಭ್ಯವಿಲ್ಲದಿದ್ದರೆ, ಪ್ಲೈವುಡ್‌, ಕಲ್ಲು, ಮರ ಅಥವಾ ಇತರ ಸಾಮಗ್ರಿಗಳನ್ನು ಬಳಸಬಹುದು. ನಂತರ, ಅದರ ಮೇಲೆ ಮಣ್ಣು ಹಾಕಬೇಕು. ಈ ಸಮಯದಲ್ಲಿ "ಬಿಸ್ಮಿಲ್ಲಾಹಿ, ವ ಅಲಾ ಮಿಲ್ಲತಿ ರಸೂಲಿಲ್ಲಾಹಿ" ಎಂದು ಹೇಳುವುದು ಮುಸ್ತಹಬ್ ಆಗಿರುತ್ತದೆ. ಕಬ್ರ್ ಅನ್ನು ಒಂದು ಬಾಲಿಶ್ತ್ (ಅಡಿ) ಎತ್ತರದಷ್ಟು ಎತ್ತಬೇಕು, ಮತ್ತು ಲಭ್ಯವಿದ್ದರೆ, ಅದರ ಮೇಲೆ ಚಿಕ್ಕ ಚಿಕ್ಕ ಕಲ್ಲುಗಳನ್ನು ಇಡಿ, ಮತ್ತು ನೀರಿನಿಂದ ಸಿಂಪಡಿಸಿ.

ಜನಾಜಾ ಜೊತೆಯಲ್ಲಿ ಹೋಗುವವರು, ಸಮಾಧಿಯ ಬಳಿ ನಿಂತು ಮೃತಕನಿಗಾಗಿ ಪ್ರಾರ್ಥನೆ ಮಾಡುವುದು ಮುಖ್ಯವಾಗಿದೆ. ಕಾರಣವೆಂದರೆ ಪ್ರವಾದಿ ﷺ ಅವರು ಮೃತಕನನ್ನು ಸಮಾಧಿಯಲ್ಲಿ ಇಟ್ಟ ನಂತರ ಸಮಾಧಿಯ ಬಳಿ ನಿಂತು ಹೀಗೆ ಹೇಳುತ್ತಿದ್ದರು: {ನಿಮ್ಮ ಸಹೋದರನಿಗಾಗಿ ಕ್ಷಮೆ ಕೇಳಿ ಮತ್ತು ಅವನು ಪ್ರಶ್ನೆಗಳ ಉತ್ತರವನ್ನು ನೀಡಲು ಸಾಮರ್ಥ್ಯ ಮತ್ತು ಸ್ಥಿರತೆಯನ್ನು ಹೊಂದಲಿ ಎಂದು ಪ್ರಾರ್ಥನೆ ಮಾಡಿ, ಏಕೆಂದರೆ ಅವನಿಂದ ಈಗ ಪ್ರಶ್ನೆಗಳು ಕೇಳಲಾಗುತ್ತವೆ} [8]. [8]‌ ಅಬೂ ದಾವೂದ್, ಸಂಖ್ಯೆ(3221) ಹಾಕೀಮ್ (3/ 399).

ಒಂಭತ್ತನೇಯ ವಿಷಯ: ಯಾರಾದರೂ ಜನಾಜಾ ನಮಾಜಿನಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ, ಅವರು ದಫನದ ನಂತರ ಜನಾಜಾ ನಮಾಜನ್ನು ಓದುವುದು ಅನುಮತಿಸಲ್ಪಟ್ಟಿದೆ.

ಏಕೆಂದರೆ ಅಲ್ಲಾಹನ ಪ್ರವಾದಿ ﷺ ಅವರು ಹೀಗೆ ಮಾಡಿದ್ದಾರೆ. ಆದರೆ ಇದು ಒಂದು ತಿಂಗಳ ಒಳಗೆ ಆಗಬೇಕು. ಒಂದು ತಿಂಗಳಿಗಿಂತ ಹೆಚ್ಚಿನ ವಿಳಂಬವಾದರೆ, ಇಂಥ ಜನಾಜಾ ನಮಾಝ್ ಓದುವುದು ಸರಿ ಅಲ್ಲ. ಏಕೆಂದರೆ ಅಲ್ಲಾಹನ ಪ್ರವಾದಿ ﷺ ರವರಿಂದ, ದಫನಾದ ಒಂದು ತಿಂಗಳ ನಂತರ ಸಮಾಧಿಯ ಬಳಿ ನಮಾಝ್ ಓದಿರುವುದಕ್ಕೆ ಯಾವುದೇ ದೃಢವಾದ ಸಾಕ್ಷ್ಯವಿಲ್ಲ.

ಹತ್ತನೇಯ ವಿಷಯ : ಮೃತ ವ್ಯಕ್ತಿಯ ಕುಟುಂಬದವರು ಜನರಿಗೆ ಊಟವನ್ನು ತಯಾರಿಸಿ ನೀಡುವುದು ಸಮ್ಮತಾರ್ಹವಲ್ಲ; ಏಕೆಂದರೆ ಮಹಾನ್ ಸಹಾಬಿ ಜರೀರ್ ಬಿನ್ ಅಬ್ದುಲ್ಲಾಹ್ ಅಲ್-ಬಜ್ಲೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ವರದಿಸುತ್ತಾರೆ: ಮೃತನನ್ನು ಸಮಾಧಿ ಮಾಡಿದ ನಂತರ, ಮೃತನ ಮನೆಯಲ್ಲಿಗೆ ಜನರು ಸೇರುವದು, ಊಟ ತಯಾರಿಸುವುದನ್ನು ನಾವು ನೊಹಾ (ಅನುಚಿತ ಶೋಕಾಚರಣೆ) ಎಂದು ಪರಿಗಣಿಸುತ್ತಿದ್ದೆವು.[9] ಇಮಾಮ್ ಅಹ್ಮದ್ ಅವರು ಇದನ್ನು ಹಸನ್ ಸನದಿನೊಂದಿಗೆ ರಿವಾಯತ್ ಮಾಡಿದ್ದಾರೆ. [9] ಇದನ್ನು ಇಬ್ನು ಮಾಜಾ (ಹದೀಸ್ ಸಂಖ್ಯೆ 1612), ಮತ್ತು ಇಮಾಮ್ ಅಹ್ಮದ್ (2/204) ವರದಿ ಮಾಡಿದ್ದಾರೆ.

ಮೃತಕನ ಕುಟುಂಬ ಮತ್ತು ಅವರ ಅತಿಥಿಗಳಿಗಾಗಿ ಆಹಾರ ತಯಾರಿಸುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ, ಅವರ ಸಂಬಂಧಿಕರು ಮತ್ತು ಪಕ್ಕದ ನೆರೆ-ಹೊರೆಯವರು ಅವರಿಗಾಗಿ ಆಹಾರ ತಯಾರಿಸುವುದು ‌ ಸಮ್ಮತಾರ್ಹ ಎಂದು ಹೇಳಬಹುದು. ಏಕೆಂದರೆ ಸೀರಿಯಾ ದೇಶದಲ್ಲಿ ಜಾಫರ್ ಇಬ್ನ್ ಅಬಿ ತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ)ಅವರ ಮರಣವಾದಾಗ, ಅಲ್ಲಾಹನ ಪ್ರವಾದಿ ﷺ ಅವರು ತಮ್ಮ ಕುಟುಂಬವನ್ನು ಆದೇಶ ನೀಡಿ, ಜಾಫರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರ ಕುಟುಂಬಕ್ಕಾಗಿ ಆಹಾರ ತಯಾರಿಸಲು ಹೇಳಿದರು: {ಅವರ ಮೇಲೆ ಅತಿ ದೊಡ್ಡ ದುಃಖ ಬಂದೆರಗಿದೆ ಅದು ಅವರನ್ನು ತಾತ್ಕಾಲಿಕವಾಗಿ ವ್ಯಸ್ತಗೊಳಿಸಿದೆ} [10]. [10] ಮುಸ್ಲಿಂ, ಅಲ್-ಜನಾಇಝ್ (976), ನಸಾಯಿ, ಅಲ್-ಜನಾಇಝ್ (2034), ಅಬು ದಾವೂದ್, ಅಲ್-ಜನಾಇಝ್ (3234), ಇಬ್ನ್‌ ಮಾಜಾ, ಅಲ್-ಜನಾಇಝ್ (1569), ಅಹ್ಮದ (2/441).

ಆದರೆ, ಮೃತನ ಕುಟುಂಬಕ್ಕೆ ಆಹಾರದ ರೂಪದಲ್ಲಿ ಉಡುಗೊರೆ ಬಂದರೆ, ಅವರು ತಮ್ಮ ನೆರೆಹೊರೆಯವರನ್ನು ಆಹಾರಕ್ಕೆ ಆಹ್ವಾನಿಸುವಲ್ಲಿ ಯಾವುದೇ ತೊಂದರೆಯಿಲ್ಲ.ಮತ್ತು ನಮ್ಮ ತಿಳಿವಳಿಕೆಗೆ ಅನುಸಾರ, ಶರೀಯತ್ತಿನಲ್ಲಿ ಇದಕ್ಕೆ ಯಾವುದೇ ನಿಗದಿತ ಸಮಯವಿಲ್ಲ.

ಹನ್ನೊಂದನೇ ವಿಷಯ: ಹೆಣ್ಣು ಗರ್ಭವತಿ ಇರದಿದ್ದರೆ, ತನ್ನ ಪತಿ ಹೊರತುಪಡಿಸಿ ಯಾವುದೇ ವ್ಯಕ್ತಿಯ ಸಾವಿನ ಶೋಕವನ್ನು ಮೂರು ದಿನಗಳಿಗಿಂತ ಹೆಚ್ಚು ಸಮಯ ಇರಿಸಿಕೊಳ್ಳುವುದು ಶರಿಯತ್ ಪ್ರಕಾರ ಸಮ್ಮತಾರ್ಹವಲ್ಲ.

ಆಕೆ ಗರ್ಭಿಣಿಯಾಗಿಲ್ಲದಿದ್ದರೆ ತನ್ನ ಪತಿಗಾಗಿ ನಾಲ್ಕು ತಿಂಗಳು ಮತ್ತು ಹತ್ತು ದಿನಗಳ ಕಾಲ 'ಇಹ್ದಾದ್' ಮಾಡುವುದು ಕಡ್ಡಾಯವಾಗಿದೆ. ಗರ್ಭಿಣಿಯಾಗಿದ್ದರೆ, ಅವಳ ಇದ್ದತ್ ಮಗುವಿನ ಜನನದೊಂದಿಗೆ ಕೊನೆಗೊಳ್ಳುತ್ತದೆ. ಏಕೆಂದರೆ ಈ ಕುರಿತು ಪ್ರವಾದಿ(ಸ) ಅವರಿಂದ ದೃಢವಾದ ಸುನ್ನತ್ ಸ್ಥಾಪಿತವಾಗಿದೆ.

ಆದರೆ ಪುರುಷನು ತನ್ನ ಯಾವುದೇ ಸಂಬಂಧಿಕನ ಅಥವಾ ಆಪ್ತರ ಮರಣದ ಕುರಿತು ಶೋಕಾಚರಣೆ (ದುಃಖಸಂತಾಪ) ಮಾಡುವದು ಸಮ್ಮತಾರ್ಹವಲ್ಲ.

ಹನ್ನೆರಡನೇಯ ವಿಷಯ: ಪುರುಷರು ಸಮಾಧಿಗಳನ್ನು ಸಂದರ್ಶಿಸುವುದು (ಜಿಯಾರತ್ ಮಾಡುವುದು) —ಅದು ಸಮಯಾಂತರದಲ್ಲಿ— ಸತ್ತಿದವರಿಗಾಗಿ ದುಆ ಮಾಡುವುದು, ಅವರಿಗಾಗಿ ಅಲ್ಲಾಹ್‌ನ ಕೃಪೆ (ರಹ್ಮತ್) ಯಾಚಿಸುವುದು ಹಾಗೂ ಮರಣ ಮತ್ತು ಮರಣೋತ್ತರ ಜೀವನವನ್ನು ಸ್ಮರಿಸುವ ಉದ್ದೇಶದಿಂದಾದರೆ, ಅದು ಸುನ್ನತ್ ಆಗಿದೆ.

ಏಕೆಂದರೆ ಪ್ರವಾದಿ ﷺ ರವರು ಹೇಳಿದರು: { ಸಮಾಧಿಗಳನ್ನು ಭೇಟಿಯಾಗಿರಿ, ಏಕೆಂದರೆ ಅವು ನಿಮಗೆ ಪರಲೋಕರ ನೆನಪನ್ನು ತಂದುಕೊಡುತ್ತವೆ } [11] ಇದನ್ನು ಮುಸ್ಲಿಂ ತಮ್ಮ ಸಹೀಹ್‌ನಲ್ಲಿ ವರದಿ ಮಾಡಿದ್ದಾರೆ. [11] ಇಬ್ನು ಮಾಜಾ (ಹದೀಸ್ ಸಂಖ್ಯೆ 1569). ಇಮಾಮ್ ಅಲ್ಬಾನಿ ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ.

ಅಲ್ಲಾಹನ ಪ್ರವಾದಿ ﷺ ತಮ್ಮ ಸಹಾಬಿಗಳಿಗೆ ಸಮಾಧಿಗಳನ್ನು ಭೇಟಿಯಾಗುವಾಗ ಈ ದುಆವನ್ನು ಹೇಳಬೇಕೆಂದು ಕಲಿಸುತ್ತಿದ್ದರು: {ಮೂಮಿನ್ ಮತ್ತು ಮುಸ್ಲಿಮ್ ಸಮಾಧಿ ವಾಸಿಗಳೇ!ನಿಮ್ಮ ಮೇಲೆ ಶಾಂತಿ ಇರಲಿ, ಅಲ್ಲಾಹು ಇಚ್ಛಿಸಿದರೆ, ನಾವು ನಿಶ್ಚಯವಾಗಿ ನಿಮ್ಮ ಬಳಿ ಬರುತ್ತೇವೆ, ನಾವು ನಮ್ಮ ಹಾಗೂ ನಿಮ್ಮ ಹಿತಕ್ಕಾಗಿ ಅಲ್ಲಾಹ್‌ನ ರಕ್ಷಣೆ (ಆಫಿಯತ್) ಕೋರುತ್ತೇವೆ. ನಮ್ಮಲ್ಲಿ ಮುಂಚಿತವಾಗಿ ಹೊರಟವರು ಮತ್ತು ನಂತರ ಬರುವವರು ಎಲ್ಲರಿಗೂ ಅಲ್ಲಾಹು ಕರುಣೆ ತೋರಲಿ} [12 [12] ಮುಸ್ಲಿಮ್ (ಹದೀಸ್ ಸಂಖ್ಯೆ (975).

ಮಹಿಳೆಯರಿಗೆ ಸಮಾಧಿಗಳನ್ನು ಸಂದರ್ಶಿಸಲು ಅನುಮತಿಯಿಲ್ಲ; ಏಕೆಂದರೆ ಪ್ರವಾದಿ (ﷺ) ರವರು ಸಮಾಧಿಗಳನ್ನು ಸಂದರ್ಶಿಸುವ ಮಹಿಳೆಯರನ್ನು ಶಪಿಸಿದ್ದಾರೆ ಮತ್ತು ಅವರು ಸಂದರ್ಶಿಸುವುದರಿಂದ ಫಿತ್ನಾ ಹಾಗೂ ತಾಳ್ಮೆಯ ಕೊರತೆ ಉಂಟಾಗುವ ಭಯವಿದೆ. ಅದೇ ರೀತಿ, ಅವರಿಗೆ ಜನಾಝಾಗಳನ್ನು ಕಬರಸ್ಥಾನಕ್ಕೆ ಹಿಂಬಾಲಿಸಲು ಅನುಮತಿಯಿಲ್ಲ; ಏಕೆಂದರೆ ಪ್ರವಾದಿ (ﷺ) ರವರು ಅವರಿಗೆ ಅದನ್ನು ನಿಷೇಧಿಸಿದ್ದಾರೆ. ಆದರೆ, ಮಸೀದಿಯಲ್ಲಿ ಅಥವಾ ಮುಸಲ್ಲಾದಲ್ಲಿ ಜನಾಝ ನಮಾಝನ್ನು ನಿರ್ವಹಿಸುವುದು ಪುರುಷರಿಗೂ ಮತ್ತು ಮಹಿಳೆಯರಿಗೂ ಶರಿಯತ್‌ನಲ್ಲಿ ಅನುಮೋದಿಸಲಾಗಿದೆ.

ಈ ಪುಸ್ತಕದಲ್ಲಿ ಈಷ್ಟೇ ಸಂಗ್ರಹಿಸಿ ಬರೆಯಲು ಸಾಧ್ಯವಾಯಿತು. ನಮ್ಮ ಪ್ರವಾದಿ ಮುಹಮ್ಮದ್ (ಸ) ಮತ್ತು ಅವರ ಕುಟುಂಬ ಹಾಗೂ ಅವರ ಎಲ್ಲಾ ಸಹಚರರ ಮೇಲೆ ಅಲ್ಲಾಹು ಶಾಂತಿ ಮತ್ತು ಕರುಣೆ ವರ್ಷಿಸಲಿ.