الإسلام دين رب العالمين
منشور مختصر مفيد يجيب على عدة أسئلة مهمة لدى غير المسلمين، ومنها: من ربك؟ ما صفات رب العالمين؟ ما حق ربنا علينا؟ ما حق الناس على ربهم؟ كيف نعبد ربنا؟ ما الدين المقبول عند الرب جل جلاله؟ ما أصول هذا الدين (الإسلام) وأركانه؟ هل الإسلام دين لقوم أو جنس؟ إلى أن ختمه بالسؤال: إذا أراد الإنسان الدخول في الإسلام فماذا يعمل، وهل هناك طقوس يجب أن يعملها، أو أشخاص يجب أن يأذنوا له؟ فأجاب عن هذه الأسئلة بجواب جميل مخصر مفيد يقرب الحق إلى الناس ويدعوهم بذلك إلى الإسلام.
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ
ಇಸ್ಲಾಮ್ ಸರ್ವ ಲೋಕಗಳ ಪರಿಪಾಲಕ ಪ್ರಭುವಿನ ಧರ್ಮವಾಗಿದೆ.
ನಿಮ್ಮ ಪರಿಪಾಲಕ ಪ್ರಭು ಯಾರು?
ಇದು ಅತ್ಯಂತ ಮಹತ್ವದ ಪ್ರಶ್ನೆಯಾಗಿದೆ; ಈ ಮಹತ್ವದ ಪ್ರಶ್ನೆಗೆ ಉತ್ತರ ತಿಳಿಯುವುದು ಪ್ರತಿಯೊಬ್ಬ ಮನುಷ್ಯನಿಗೆ ಅಗತ್ಯವಾಗಿದೆ.
ನಮ್ಮ ಪರಿಪಾಲಕ ಪ್ರಭು ಭೂಮಿ ಮತ್ತು ಆಕಾಶಗಳನ್ನು ಸೃಷ್ಟಿಸಿದನು, ಆಕಾಶದಿಂದ ಮಳೆಯನ್ನು ಸುರಿಸಿದನು, ಆ ಮಳೆಯಿಂದ ಮರಗಿಡಗಳು ಮತ್ತು ಹಣ್ಣುಗಳನ್ನು ಬೆಳೆಸಿದನು, ಅವು ನಮಗೂ ಮತ್ತು ನಾವು ತಿನ್ನುವ ಪ್ರಾಣಿಗಳಿಗೂ ಆಹಾರವಾಗಿವೆ. ನಮ್ಮನ್ನು ಮತ್ತು ನಮ್ಮ ಪೂರ್ವಜರನ್ನು ಸೃಷ್ಟಿಸಿದವನು ಅವನೇ, ಅವನು ಎಲ್ಲವನ್ನೂ ಸೃಷ್ಟಿಸಿದವನು, ರಾತ್ರಿ ಮತ್ತು ಹಗಲನ್ನು ಸೃಷ್ಟಿಸಿದವನು ಅವನೇ, ರಾತ್ರಿಯನ್ನು ನಿದ್ರೆ ಮತ್ತು ವಿಶ್ರಾಂತಿಯ ಸಮಯವನ್ನಾಗಿ ಮಾಡಿದವನು ಅವನೇ, ಹಗಲನ್ನು ಆಹಾರ ಮತ್ತು ಜೀವನೋಪಾಯದ ಸಮಯವನ್ನಾಗಿ ಮಾಡಿದವನು ಅವನೇ. ಸೂರ್ಯ, ಚಂದ್ರ, ನಕ್ಷತ್ರಗಳು ಮತ್ತು ಸಮುದ್ರಗಳನ್ನು ನಮಗೆ ಅಧೀನಗೊಳಿಸಿದವನು ಅವನೇ, ಪ್ರಾಣಿಗಳನ್ನು ನಮಗೆ ಅಧೀನಗೊಳಿಸಿದವನು, ನಾವು ಅವುಗಳ ಮಾಂಸವನ್ನು ತಿನ್ನುತ್ತೇವೆ, ಅವುಗಳ ಹಾಲು ಮತ್ತು ಉಣ್ಣೆಯನ್ನು ಉಪಯೋಗಿಸುತ್ತೇವೆ
ಸರ್ವ ಲೋಕಗಳ ಒಡೆಯನ ಲಕ್ಷಣಗಳು ಯಾವುವು?
ಸಕಲ ಜೀವಿಗಳನ್ನು ಸೃಷ್ಟಿಸಿದವನು, ಅವರಿಗೆ ಸತ್ಯದ ಮಾರ್ಗವನ್ನು ತೋರಿಸುವವನು, ಎಲ್ಲಾ ಜೀವಿಗಳ ವ್ಯವಹಾರಗಳನ್ನು ನಿಯಂತ್ರಿಸುವವನು ಅವರಿಗೆ ಆಹಾರ ಕೊಡುವವನೇ ಪರಿಪಾಲಕ ಪ್ರಭುವಾಗಿದ್ದಾನೆ ಅವನೇ ಈ ಲೋಕ ಮತ್ತು ಪರಲೋಕದ ಪ್ರತಿಯೊಂದು ವಸ್ತುವಿನ ಒಡೆಯನು ಅವನು ಪ್ರತಿಯೊಂದು ವಸ್ತುವಿನ ಒಡೆಯನು ಅವನ ಹೊರತಾಗಿರುವ ಎಲ್ಲವೂ ಅವನ ಒಡೆತನಕ್ಕೆ ಸೇರಿದೆ. ಅವನು ಅಮರನು ಹಾಗೂ ಸದಾ ಜಾಗೃತನಾಗಿರುವವನು, ಎಲ್ಲ ಜೀವಿಗಳ ನಿರ್ವಹಕನು. ಅವನ ಕರುಣೆ ಎಲ್ಲವನ್ನೂ ಆವರಿಸಿಕೊಂಡಿದೆ. ಭೂಮಿಯಲ್ಲಾಗಲೀ ಆಕಾಶದಲ್ಲಾಗಲೀ ಏನೂ ಅವನಿಂದ ಮರೆಯಾಗುವುದಿಲ್ಲ. ಅವನಿಗೆ ಸಮಾನರಾದವರು ಯಾರೂ ಇಲ್ಲ. ಅವನು ಎಲ್ಲವನ್ನೂ ಕೇಳುವವನು ಮತ್ತು ನೋಡುವವನು. ಅವನು ಆಕಾಶಗಳ ಮೇಲೆಯಿರುವವನು. ಅವನು ತನ್ನ ಸೃಷ್ಟಿಗೆ ಅವಲಂಬಿತನಾಗಿಲ್ಲ, ಆದರೆ ಎಲ್ಲಾ ಸೃಷ್ಟಿಗಳು ಅವನಿಗೆ ಅವಲಂಬಿತವಾಗಿವೆ. ಅವನು ತನ್ನ ಸೃಷ್ಟಿಯಲ್ಲಿ ಲೀನನಾಗಿಲ್ಲ ಮತ್ತು ಸೃಷ್ಟಿಯ ಯಾವುದೇ ಅಂಶವೂ ಅವನೊಳಗೆ ಸೇರಿಲ್ಲ. ಈ ಗೋಚರ ಜಗತ್ತನ್ನು ಅದರ ಸಮತೋಲನಪೂರ್ಣ ವ್ಯವಸ್ಥೆಗಳೊಂದಿಗೆ ಸೃಷ್ಟಿಸಿದವನು ಅಲ್ಲಾಹನು. ಮಾನವನ ದೇಹ ಮತ್ತು ಇತರ ಪ್ರಾಣಿಗಳ ದೇಹದಲ್ಲಿ ಕಂಡುಬರುವ ವ್ಯವಸ್ಥೆಗಳು, ಸೂರ್ಯ, ನಕ್ಷತ್ರಗಳು ಹಾಗೂ ಇತರ ಎಲ್ಲಾ ಅಂಶಗಳೊಂದಿಗೆ ಕೂಡಿದ ಈ ವಿಶ್ವದ ವ್ಯವಸ್ಥೆಗಳೆಲ್ಲವೂ ಸಮತೋಲನಪೂರ್ಣ ವ್ಯವಸ್ಥೆಗಳ ಉದಾಹರಣೆಗಳಾಗಿವೆ.
ಅವನಿಗೆ ಸಮಾನರಾದವರು ಯಾರೂ ಇಲ್ಲ. ಅವನ ಹೊರತಾಗಿ ಆರಾಧಿಸಲ್ಪಡುವ ಎಲ್ಲವನ್ನೂ ನೋಡಿದಾಗ, ಅವು ತಮ್ಮನ್ನು ತಾವೇ ಉಪಯೋಗಕ್ಕೆ ತರಲಾರವು ಅಥವಾ ಹಾನಿಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲಾರವು. ಹಾಗಾದರೆ ಅಂತಹವುಗಳು ತಮ್ಮಆರಾಧಕರಿಗೆ ಹೇಗೆ ಲಾಭಕೊಡಬಲ್ಲವು? ಅಥವಾ ಅವನಿಗೆ ಬಂದ ಹಾನಿಯನ್ನು ಹೇಗೆ ತಡೆಯಬಲ್ಲವು?
ನಮ್ಮ ಮೇಲೆ ನಮ್ಮ ಪ್ರಭುವಿನ ಹಕ್ಕು ಏನು?
ಪ್ರತಿಯೊಬ್ಬರೂ ಅಲ್ಲಾಹನನ್ನು ಮಾತ್ರ ಆರಾಧಿಸಬೇಕು ಮತ್ತು ಅವನ ಜೊತೆಗೆ ಯಾರನ್ನೂ ಸಹಭಾಗಿಯನ್ನಾಗಿಸಬಾರದು ಎಂಬುದೇ ಅವನ ಹಕ್ಕು. ಜನರು ಅಲ್ಲಾಹನನ್ನು ಬಿಟ್ಟು ಯಾವ ಮನುಷ್ಯನನ್ನೂ, ಕಲ್ಲನ್ನೂ, ನದಿಯನ್ನೂ, ನಿರ್ಜೀವ ವಸ್ತುವನ್ನೂ, ಗ್ರಹವನ್ನೂ ಅಥವಾ ಬೇರೆ ಯಾವುದನ್ನೂ ಆರಾಧಿಸಬಾರದು. ಬದಲಾಗಿ, ಅವರು ಆರಾಧನೆಯನ್ನು ಪ್ರಪಂಚಗಳ ಒಡೆಯನಾದ ಅಲ್ಲಾಹನಿಗೆ ಮಾತ್ರವೇ ಅರ್ಪಿಸಬೇಕು.
ಮನುಷ್ಯರಿಗೆ ತಮ್ಮ ರಬ್ಬಿನ ಮೇಲಿರುವ ಹಕ್ಕು?
ಅವನನ್ನು (ಅಲ್ಲಾಹನನ್ನು) ಆರಾಧಿಸಿದರೆ, ಮನುಷ್ಯರಿಗೆ ಅವನಿಂದ ಒಳ್ಳೆಯ ಬದುಕನ್ನು ಪಡೆಯುವ ಹಕ್ಕು ದೊರೆಯುತ್ತದೆ. ಆ ಬದುಕಿನಲ್ಲಿ ಅವರು ಭದ್ರತೆ, ಶಾಂತಿ, ನೆಮ್ಮದಿ ಮತ್ತು ಸಂತೋಷವನ್ನು ಅನುಭವಿಸುತ್ತಾರೆ. ಅವರು ಮೃತಪಟ್ಟ ಬಳಿಕ, ಅಲ್ಲಾಹನು ಅವರನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ಅವರು ಶಾಶ್ವತವಾದ ಸುಖ ಹಾಗೂ ನಿರಂತರ ಜೀವನವನ್ನು ಸವಿಯುತ್ತಾರೆ.ಆದರೆ, ಯಾರಾದರೂ ಅವನಿಗೆ ಅವಿಧೇಯರಾಗಿ ಹಾಗೂ ಅವನ ಆಜ್ಞೆಗಳನ್ನು ಉಲ್ಲಂಘಿಸಿದರೆ, ಅಲ್ಲಾಹನು ಅವರ ಬದುಕನ್ನು ದುಃಖ, ತೊಂದರೆ ಮತ್ತು ಬಡತನದಿಂದ ತುಂಬಿಸುತ್ತಾನೆ . ಅವರು ಹೊರಗಿನಿಂದ ಸಂತೋಷದಲ್ಲಿರುವಂತೆ ತೋರಿದರೂ ಸಹ, ಅವರ ಮನಸ್ಸು ಮಾತ್ರ ಅಶಾಂತ ವಾಗಿರುತ್ತದೆ. ಮರಣಾನಂತರ, ಅಲ್ಲಾಹನು ಅವರನ್ನು ನರಕಕ್ಕೆ ಕಳುಹಿಸುತ್ತಾನೆ . ಅಲ್ಲಿಂದ ಅವರಿಗೆ ಎಂದಿಗೂ ಹೊರಬರಲು ಸಾದ್ಯವಾಗದು , ಶಾಶ್ವತವಾಗಿ ಶಿಕ್ಷೆ ಮತ್ತು ನರಕಯಾತನೆಯನ್ನು ಅನುಭವಿಸುತ್ತಾರೆ .
ನಮ್ಮ ಅಸ್ತಿತ್ವದ ಉದ್ದೇಶ ಏನು? ನಾವು ಯಾಕೆ ಸೃಷ್ಟಿಯಾಗಿದ್ದೇವೆ?
ಕರುಣಾಮಯನಾದ ಅಲ್ಲಾಹನು ನಮ್ಮನ್ನು ಒಂದು ಶ್ರೇಷ್ಠ ಉದ್ದೇಶಕ್ಕಾಗಿ ಸೃಷ್ಟಿಸಿದ್ದಾನೆ ಎಂಬುದನ್ನು ಅವನು ನಮಗೆ ತಿಳಿಸಿದ್ದಾನೆ. ಆ ಶ್ರೇಷ್ಠ ಉದ್ದೇಶವೆಂದರೆ – ಅವನನ್ನು ಮಾತ್ರ ಆರಾಧಿಸುವುದು ಮತ್ತು ಅವನೊಂದಿಗೆ ಯಾರನ್ನೂ ಸಹಭಾಗಿಯಾಗಿಸದೆ ಇರುವುದು . ಅಲ್ಲದೆ, ಈ ಭೂಮಿಯನ್ನು ಒಳ್ಳೆಯ ಕೆಲಸಗಳಿಂದ ಭರಿತವಾಗಿಸಲು ನಾವು ಹೊಣೆಗಾರರಾಗಿದ್ದೇವೆ. ಆದರೆ,ಅಲ್ಲಾಹನನ್ನು ಬಿಟ್ಟು ಇತರರನ್ನು ಆರಾಧಿಸುವವನು ತನ್ನ ಸೃಷ್ಟಿಯ ನಿಜವಾದ ಉದ್ದೇಶವನ್ನು ಅರ್ಥಮಾಡಿಕೊಳ್ಳದೆ, ತನ್ನ ಸೃಷ್ಟಿಕರ್ತನಿಗೆ ಸಲ್ಲಿಸಬೇಕಾದ ಕರ್ತವ್ಯವನ್ನು ಬಿಡುತ್ತಾನೆ. ಇದೇ ರೀತಿ, ಭೂಮಿಯಲ್ಲಿ ಹಾನಿ ತರುವವನು ಮತ್ತು ದುಷ್ಟತೆ ಹಬ್ಬಿಸುವವನು ಕೂಡಾ ತನ್ನ ಜವಾಬ್ದಾರಿ ಮರೆತುಬಿಡುತ್ತಾನೆ.
ನಾವು ನಮ್ಮ ಸೃಷ್ಟಿಕರ್ತನನ್ನು ಹೇಗೆ ಆರಾಧಿಸಬೇಕು?
ಅಲ್ಲಾಹನು ನಮ್ಮನ್ನು ಸೃಷ್ಟಿಸಿ, ಮಾರ್ಗದರ್ಶನ ಮಾಡದೇ ನಮ್ಮನ್ನು ವ್ಯರ್ಥವಾಗಿ ಬಿಟ್ಟುಬಿಟ್ಟಿಲ್ಲ ಅಥವಾ ನಮ್ಮ ಜೀವನವನ್ನು ವ್ಯರ್ಥವಾಗಿ ಮಾಡಿಲ್ಲ. ಬದಲಾಗಿ, ಅವನು ಮಾನವರಲ್ಲಿ ಕೆಲವರನ್ನು ತನ್ನ ಸಂದೇಶವಾಹಕರಾಗಿ ಆರಿಸಿಕೊಂಡನು. ಅವರು ನೈತಿಕವಾಗಿ ಪರಿಪೂರ್ಣರು, ಆತ್ಮ ಶುದ್ಧಿಯೊಂದಿಗೆ ಮತ್ತು ಹೃದಯ ಶುದ್ಧಿಯುಳ್ಳವರಾಗಿದ್ದರು. ಅಲ್ಲಾಹನು ತನ್ನ ಸಂದೇಶಗಳನ್ನು ಇವರ ಮೂಲಕ ಕಳುಹಿಸಿದನು. ಈ ಸಂದೇಶವು ಅಲ್ಲಾಹನ ಬಗ್ಗೆ ಮತ್ತು ಪುನರುತ್ಥಾನದ ದಿನದ ಕುರಿತು ಮಾನವರು ತಿಳಿದುಕೊಳ್ಳಬೇಕಾದ ಎಲ್ಲಾ ವಿಷಯಗಳನ್ನು ಒಳಗೊಂಡಿತ್ತು. ಪುನರುತ್ಥಾನದ ದಿನವೇ ಲೆಕ್ಕಾಚಾರ ಮತ್ತು ಕರ್ಮದ ಫಲ ಪಡೆಯುವ ದಿನವಾಗಿದೆ. ಸಂದೇಶವಾಹಕರು ಜನರಿಗೆ ಸೃಷ್ಟಿಕರ್ತನನ್ನು ಹೇಗೆ ಆರಾಧಿಸಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರು. ಆರಾಧನೆಯ ವಿಧಾನಗಳು, ಸಮಯಗಳು, ಈ ಜಗತ್ತಿನಲ್ಲಿ ಮತ್ತು ಪರಲೋಕದಲ್ಲಿ ಸಿಗುವ ಪ್ರತಿಫಲಗಳ ಬಗ್ಗೆ ವಿವರಿಸಿದರು. ಅಲ್ಲದೆ, ದೇವರು ನಿಷೇಧಿಸಿದ ಆಹಾರ, ಪಾನೀಯ ಮತ್ತು ವಿವಾಹಗಳ ಬಗ್ಗೆ ಎಚ್ಚರಿಸಿದರು. ಒಳ್ಳೆಯ ನಡವಳಿಕೆಗಳನ್ನು ಅನುಸರಿಸಲು ಪ್ರೇರೇಪಿಸಿದರು ಮತ್ತು ಕೆಟ್ಟ ನಡವಳಿಕೆಗಳಿಂದ ದೂರವಿರಲು ಸಲಹೆ ನೀಡಿದರು.
ಅತ್ಯಂತ ಪವಿತ್ರವಾದ ಪರಿಪಾಲಕ ಪ್ರಭುವಿಗೆ ಸ್ವೀಕಾರಾರ್ಹವಾದ ಧರ್ಮ?
ಅಲ್ಲಾಹನಿಗೆ ಸ್ವೀಕಾರಾರ್ಹವಾದ ಧರ್ಮ ಎಂದರೆ ಇಸ್ಲಾಂ ಮಾತ್ರ. ಎಲ್ಲಾ ಪ್ರವಾದಿಗಳು ಇಸ್ಲಾಂ ಧರ್ಮವನ್ನು ತಲುಪಿಸಲು ಬಂದರು. ಕಿಯಾಮತ್ ದಿನದಂದು ಅಲ್ಲಾಹು ಇಸ್ಲಾಂ ಹೊರತುಪಡಿಸಿ ಬೇರೆ ಯಾವುದೇ ಧರ್ಮವನ್ನು ಸ್ವೀಕರಿಸುವುದಿಲ್ಲ. ಇಸ್ಲಾಂ ಹೊರತುಪಡಿಸಿ ಇತರ ಎಲ್ಲಾ ಧರ್ಮಗಳು ಸುಳ್ಳು ಮತ್ತು ಅವು ತಮ್ಮ ಅನುಯಾಯಿಗಳಿಗೆ ಈ ಜಗತ್ತಿನಲ್ಲಿ ಮತ್ತು ಪರಲೋಕದಲ್ಲಿ ನಷ್ಟವನ್ನುಂಟುಮಾಡುತ್ತವೆ.
ಈ ಧರ್ಮ (ಇಸ್ಲಾಂ)ದ ಮೂಲತತ್ವಗಳು ಮತ್ತು ಅದರ ಸ್ತಂಭಗಳು ಯಾವುವು?
ಈ ಧರ್ಮವನ್ನು ಅಲ್ಲಾಹು ತನ್ನ ದಾಸರಿಗೆ ಸುಲಭಗೊಳಿಸಿದ್ದಾನೆ. ಈ ಧರ್ಮದ ಮುಖ್ಯ ಅಂಶಗಳು: ಅಲ್ಲಾಹನನ್ನು ಏಕೀಕರಿಸಿ ಆರಾಧನೆಗೆ ಅರ್ಹನೆಂದು ನಂಬುವುದು, ದೇವದೂತರನ್ನು, ಪವಿತ್ರ ಗ್ರಂಥಗಳನ್ನು, ಪ್ರವಾದಿಗಳನ್ನು, ಕಿಯಾಮತ್ ದಿನವನ್ನು, ಮತ್ತು ವಿಧಿಯನ್ನು ನಂಬುವುದು. "ಅಲ್ಲಾಹನೊಬ್ಬನೇ ಅವನ ಹೊರತು ಅನ್ಯ ದೇವರಿಲ್ಲ ಮತ್ತು ಮುಹಮ್ಮದ್(ಸ) ಅವನ ಸಂದೇಶವಾಹಕ" ಎಂದು ಘೋಷಿಸುವುದು, ನಮಾಜ್ ನಿರ್ವಹಿಸುವುದು, ನಿಗದಿತ ಸಂಪತ್ತಿದ್ದರೆ ಅದರ ಮೇಲೆ ಝಕಾತ್ ಪಾವತಿಸುವುದು, ರಂಜಾನ್ ತಿಂಗಳ ಉಪವಾಸ ಆಚರಿಸುವುದು, ಮತ್ತು ಅಲ್ಲಾಹನ ಆಜ್ಞೆಯಂತೆ ಇಬ್ರಾಹಿಂ ಅಲೈಹಿಸ್ಸಲಾಂ ನಿರ್ಮಿಸಿದ ಬೈತುಲ್ಲಾಹ್ ಎಂಬ ಪವಿತ್ರ ಭವನದ ಹಜ್ಜ್ ಮಾಡುವುದು (ಹೋಗಲು ಸಾಧ್ಯವಾದರೆ). ಅಲ್ಲಾಹನು ನಿಷೇಧಿಸಿರುವ ಶಿರ್ಕ್ (ಅಲ್ಲಾಹನಿಗೆ ಸಮಾನರನ್ನು ಕಲ್ಪಿಸುವುದು), ಜೀವಹತ್ಯೆ, ವ್ಯಭಿಚಾರ ಮತ್ತು ಹರಾಮ್ (ಧರ್ಮನಿಷೇದ) ಹಣವನ್ನು ತಿನ್ನುವುದು ಇತ್ಯಾದಿಗಳನ್ನು ಬಿಟ್ಟು, ಅಲ್ಲಾಹನಲ್ಲಿ ವಿಶ್ವಾಸವಿರಿಸಿ, ಅವನ ಆಜ್ಞೆಗಳ ಅನುಸರಣೆ ಮಾಡಿ, ನಿಷಿದ್ಧ ಕಾರ್ಯಗಳಿಂದ ದೂರವಿದ್ದು, ಈ ಜಗತ್ತಿನಲ್ಲಿ ಮುಸ್ಲಿಮನಾಗಿದ್ದರೆ, ಕಿಯಾಮತ್ ದಿನದಲ್ಲಿ ಅಲ್ಲಾಹನು ನಿಮಗೆ ಸ್ವರ್ಗದಲ್ಲಿ ಶಾಶ್ವತ ಸುಖವನ್ನು ನೀಡುತ್ತಾನೆ.
ಇಸ್ಲಾಂ ಒಂದು ಸಮುದಾಯದ ಅಥವಾ ಜನಾಂಗೀಯ ಧರ್ಮವೇ?
ಇಸ್ಲಾಂ ಅಲ್ಲಾಹನ ಧರ್ಮವಾಗಿದ್ದು, ಇದು ಎಲ್ಲ ಮಾನವರಿಗೂ ಸಮಾನವಾಗಿದೆ. ಧರ್ಮನಿಷ್ಠೆ ಮತ್ತು ಒಳ್ಳೆಯ ಕೆಲಸಗಳನ್ನು ಮಾಡುವುದೇ ಶ್ರೇಷ್ಟತೆಯ ಮೂಲಾಧಾರವಾಗಿರುತ್ತದೆ. ಇಸ್ಲಾಂ ಧರ್ಮದಲ್ಲಿ ಎಲ್ಲಾ ಮಾನವರು ಸಮಾನರು.
ಪ್ರವಾದಿಗಳು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಜವಾಗಿಯೂ ಅಲ್ಲಾಹನ ಸಂದೇಶವಾಹಕರು ಎಂದು ಜನರು ಹೇಗೆ ತಿಳಿಯುತ್ತಾರೆ?
ಮನುಷ್ಯರು ಪ್ರವಾದಿಗಳ ಸತ್ಯವನ್ನು ವಿವಿಧ ರೀತಿಯಲ್ಲಿ ಅರಿಯುತ್ತಾರೆ,ಅವುಗಳಲ್ಲಿ :
ಪ್ರವಾದಿಗಳು ತಂದ ಸತ್ಯ ಮತ್ತು ಮಾರ್ಗದರ್ಶನವನ್ನು ಮೇಧಾವಿ ಮನಸ್ಸುಗಳು ಸ್ವೀಕರಿಸುತ್ತವೆ ಮತ್ತು ಅದನ್ನು ಸತ್ಯವೂ, ಉತ್ತಮವೂ ಎಂದು ಒಪ್ಪಿಕೊಳ್ಳುತ್ತವೆ . ಇಂತಹ ಸತ್ಯ ಮತ್ತು ಮಾರ್ಗದರ್ಶನ ಇನ್ಯಾವುದೇ ಮೂಲದಿಂದ ಬರುವುದಿಲ್ಲ.
ಪ್ರವಾದಿಗಳು ತಂದ ಸಂದೇಶಗಳು ಜನರ ಧಾರ್ಮಿಕ ಹಾಗೂ ಲೌಕಿಕ ಜೀವನವನ್ನು ಸುಧಾರಿಸುತ್ತವೆ. ಅವರ ಬದುಕನ್ನು ಸಜ್ಜನರ ಮಾರ್ಗದಲ್ಲಿ ನಡೆಸುತ್ತವೆ, ಅವರ ಸಂಸ್ಕೃತಿಯನ್ನು ಉನ್ನತಗೊಳಿಸುತ್ತವೆ ಮತ್ತು ಅವರ ಧರ್ಮ, ಬುದ್ಧಿ, ಆಸ್ತಿ ಹಾಗೂ ಗೌರವವನ್ನು ರಕ್ಷಿಸುತ್ತವೆ.
ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಿಗೆ ಸನ್ಮಾರ್ಗವನ್ನು ತೋರಿಸಿದ್ದಕ್ಕಾಗಿ ಯಾವುದೇ ಪ್ರತಿಫಲವನ್ನು ಬೇಡುವುದಿಲ್ಲ. ಬದಲಾಗಿ, ಅವರು ತಮ್ಮ ಪ್ರತಿಫಲವನ್ನು ಕೇವಲ ಅಲ್ಲಾಹನ ಬಳಿ ನಿರೀಕ್ಷಿಸುತ್ತಾರೆ.
ಪ್ರವಾದಿಗಳು ತಂದ ಸಂದೇಶವು ಸತ್ಯವೂ ಖಚಿತವೂ ಆಗಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ; ಇದು ವಿರೋಧಾಭಾಸವನ್ನು ಹೊಂದಿಲ್ಲ ಹಾಗೂ ಕಾಲಾನುಗತಿಯಾಗಿ ಬದಲಾಗುವುದಿಲ್ಲ. ಪ್ರತಿಯೊಬ್ಬ ಪ್ರವಾದಿಯೂ ತನ್ನ ಹಿಂದಿನ ಪ್ರವಾದಿಗಳನ್ನು ಸತ್ಯವೆಂದು ನಂಬುತ್ತಾರೆ ಮತ್ತು ಅದೇ ದೈವಿಕ ಸಂದೇಶವನ್ನು ಮುಂದಿನ ಜನತೆಗೆ ತಲುಪಿಸುತ್ತಾರೆ.
ಖಂಡಿತವಾಗಿಯೂ ಅಲ್ಲಾಹು ತನ್ನ ಪ್ರವಾದಿಗಳ ಕೈಗಳಿಂದ ಜಾರಿಗೊಳಿಸುವ ಸ್ಪಷ್ಟವಾದ ದೃಷ್ಟಾಂತಗಳು ಮತ್ತು ಅದ್ಭುತವಾದ ಪವಾಡಗಳ ಮೂಲಕ ತನ್ನ ಪ್ರವಾದಿಗಳನ್ನು ಬೆಂಬಲಿಸುತ್ತಾನೆ. ಇದು ಅವರು ಅಲ್ಲಾಹನ ವತಿಯಿಂದ ಕಳುಹಿಸಲಾದ ಸಂದೇಶವಾಹಕರಾಗಿದ್ದಾರೆ ಎಂದು ಸತ್ಯ ಪುರಾವೆಯಾಗಲಿಕ್ಕಾಗಿದೆ ಮತ್ತು ಎಲ್ಲಾ ಪ್ರವಾದಿಗಳ ಅತ್ಯಂತ ದೊಡ್ಡ ಪವಾಡ ಅಂತಿಮ ಪ್ರವಾದಿ ಮುಹಮ್ಮದ್ (ಸ) ರವರ ಪವಾಡವಾಗಿದೆ ಅದುವೇ ಪವಿತ್ರ ಕುರ್ ಆನ್.
ಪವಿತ್ರ ಕುರ್ಆನ್ ಎಂದರೇನು?
ಕುರ್ಆನ್ ಎಂಬುದು ಸರ್ವ ಲೋಕಗಳ ಅಧಿಪತಿಯಾದ ಅಲ್ಲಾಹನ ಪವಿತ್ರ ಗ್ರಂಥವಾಗಿದೆ. ಜಿಬ್ರೀಲ್ (ಅವರ ಮೇಲೆ ಶಾಂತಿ ಇರಲಿ ) ರು ಇದನ್ನು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ)ರಿಗೆ ಇಳಿಸಿಕೊಟ್ಟರು. ಈ ಗ್ರಂಥದಲ್ಲಿ ಅಲ್ಲಾಹನು ತನ್ನ ಬಗ್ಗೆ, ದೇವಚರರ ಬಗ್ಗೆ, ಹಿಂದಿನ ಪವಿತ್ರ ಗ್ರಂಥಗಳ ಬಗ್ಗೆ, ತನ್ನ ಸಂದೇಶವಾಹಕರ ಬಗ್ಗೆ, ಪುನರುತ್ಥಾನ ದಿನದ (ಕಿಯಾಮತ್) ಬಗ್ಗೆ ಮತ್ತು ಮಾನವನ ಉತ್ತಮ ಹಾಗೂ ಕೆಟ್ಟ ಕರ್ಮಗಳ ವಿಧಿಯ ಬಗ್ಗೆ ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳನ್ನು ಸ್ಪಷ್ಟವಾಗಿ ವಿವರಿಸಿದ್ದಾನೆ. ಈ ಪವಿತ್ರ ಗ್ರಂಥವು ಕಡ್ಡಾಯವಾಗಿ ಪಾಲಿಸಬೇಕಾದ ಆರಾಧನೆಗಳನ್ನು, ತ್ಯಜಿಸಬೇಕಾದ ಧರ್ಮನಿಷಿದ್ಧ (ಹರಾಂ) ಕರ್ಮಗಳನ್ನು, ಶ್ಲಾಘನೀಯ ಮತ್ತು ತಿರಸ್ಕರಣೀಯ ನಡವಳಿಕೆಗಳನ್ನು ಹಾಗೂ ಜನರ ಧಾರ್ಮಿಕ, ಲೌಕಿಕ ಮತ್ತು ಪರಲೋಕದ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಮಾರ್ಗದರ್ಶನಗಳನ್ನು ಒಳಗೊಂಡಿದೆ. ಅಲ್ಲಾಹನು ಮಾನವರಿಗೆ ಸವಾಲು ಒಡ್ಡಿದ ಅದ್ಭುತ ಗ್ರಂಥವಾಗಿದೆ — ಇಂತಹ ಮತ್ತೊಂದು ಗ್ರಂಥವನ್ನು ತಂದು ತೋರಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಗ್ರಂಥವು ಇಳಿದ ಭಾಷೆಯಲ್ಲಿಯೇ (ಅರಬಿಯಲ್ಲಿ) ಕಿಯಾಮತ್ ದಿನದವರೆಗೂ ಸಂಪೂರ್ಣವಾಗಿ ಸಂರಕ್ಷಿಸಲಾಗುವುದು. ಇದರಲ್ಲಿ ಒಂದು ಅಕ್ಷರವೂ ಕಡಿಮೆಯಾಗಿಲ್ಲ ಅಥವಾ ಬದಲಾಗಿಲ್ಲ; ಇದು ಅಲ್ಲಾಹನ ರಕ್ಷಣೆಯಲ್ಲಿದೆ.
ಮನುಷ್ಯರನ್ನು ಪುನಃ ಜೀವಂತಗೊಳಿಸುವಿಕೆ ಮತ್ತು ಲೆಕ್ಕಾಚಾರ ನಡೆಯುವುದು ಎಂಬುದಕ್ಕೆ ಸಾಕ್ಷಿ ಏನು?
ನೀವು ಬಂಜರ ಭೂಮಿಯನ್ನು ನೋಡಿಲ್ಲವೇ? ಅದು ಜೀವರಹಿತವಾಗಿರುತ್ತದೆ. ಆದರೆ ಅದರ ಮೇಲೆ ಮಳೆಯ ನೀರು ಸುರಿಸಿದಾಗ ಅದು ಕಂಪಿಸುತ್ತದೆ ಮತ್ತು ವಿಭಿನ್ನ ರೀತಿಯ ಸುಂದರ ಸಸ್ಯಗಳನ್ನು ಬೆಳೆಸುತ್ತದೆ. ಇದನ್ನು ಜೀವಂತಗೊಳಿಸಿದ ಅಲ್ಲಾಹನು ಮೃತರನ್ನು ಪುನಃ ಜೀವಂತಗೊಳಿಸಲು ನಿಶ್ಚಯವಾಗಿಯೂ ಸಮರ್ಥನಾಗಿದ್ದಾನೆ. ಅವನು ಮನುಷ್ಯನನ್ನು ತುಚ್ಛವಾದ ನೀರಿನ ಒಂದು ದ್ರವ್ಯದಿಂದ ಸೃಷ್ಟಿಸಿದನು, ಅವನು ಪುನರುತ್ಥಾನ ದಿನದಂದು ಅವನನ್ನು ಪುನಃ ಎಬ್ಬಿಸಿ ಅವನ ಕರ್ಮಗಳಂತೆ ಪರಿಪೂರ್ಣ ಪ್ರತಿಫಲ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಅವನು ಒಳಿತು ಮಾಡಿದ್ದರೆ ಒಳ್ಳೆಯ ಪ್ರತಿಫಲ ಮತ್ತು ಕೆಡುಕು ಮಾಡಿದ್ದರೆ ಕೆಟ್ಟ ಪ್ರತಿಫಲವನ್ನು ಪಡೆಯುತ್ತಾನೆ. ಆಕಾಶ, ಭೂಮಿ ಮತ್ತು ನಕ್ಷತ್ರಗಳನ್ನು ಸೃಷ್ಟಿಸಿದವನು ಮನುಷ್ಯನಿಗೆ ಪುನಃ ಜೀವನ ನೀಡಲು ಸಂಪೂರ್ಣ ಶಕ್ತಿಶಾಲಿಯಾಗಿದ್ದಾನೆ. ಏಕೆಂದರೆ ಮನುಷ್ಯನನ್ನು ಮರುಸೃಷ್ಟಿಸುವುದು, ಆ ಬೃಹತ್ ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸುವುದಕ್ಕಿಂತ ಸುಲಭವಾದ ಕಾರ್ಯವಾಗಿದೆ.
ಪುನರುತ್ಥಾನ ದಿನದಂದು ಏನು ಸಂಭವಿಸುವುದು?
ಸರ್ವಶಕ್ತನಾದ ಅಲ್ಲಾಹು ಎಲ್ಲರನ್ನು ಅವರವರ ಸಮಾಧಿಯಿಂದ ಜೀವಂತವಾಗಿ ಎಬ್ಬಿಸುವನು ಮತ್ತು ಅವರ ಕರ್ಮಗಳ ವಿಚಾರಣೆ ಮಾಡುವನು. ಸತ್ಯ ವಿಶ್ವಾಸ ಸ್ವೀಕರಿಸಿ ಪ್ರವಾದಿಗಳನ್ನು ದೃಢೀಕರಿಸಿದವರಿಗೆ ಅವನು ಶಾಶ್ವತವಾದ, ಅನುಗ್ರಹಭರಿತ ಸ್ವರ್ಗದಲ್ಲಿ ಪ್ರವೇಶಿಸುವನು.ಆ ಸ್ವರ್ಗವು ಮಾನವನ ಮನಸ್ಸು ಊಹಿಸಲೂ ಸಾಧ್ಯವಾಗದ ಅದ್ಭುತ ಸ್ಥಳವಾಗಿದೆ. ಸತ್ಯನಿಷೇಧವೆಸಗಿದವರಿಗೆ ಅವನು ಶಾಶ್ವತವಾದ ಯಾತನೆಯಾಗಿರುವ ನರಕದಲ್ಲಿ ಪ್ರವೇಶಿಸುವನು ನರಕವು ಮನುಷ್ಯನು ಊಹಿಸಲೂ ಸಾಧ್ಯವಾಗದ ಭಯಾನಕ ಸ್ಥಳವಾಗಿದೆ. ಯಾರು ಸ್ವರ್ಗ ಅಥವಾ ನರಕ ಪ್ರವೇಶಿಸುತ್ತಾರೋ, ಅವರು ಮತ್ತೆ ಎಂದಿಗೂ ಮರಣ ಹೊಂದುವುದಿಲ್ಲ ಒಂದೋ ಅವರು ಶಾಶ್ವತವಾದ ಅನುಗ್ರಹಗಳಲ್ಲಿರುವರು ಅಥವಾ ನರಕದ ಯಾತನೆಯಲ್ಲಿರುವರು.
ಯಾರಾದರೂ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಇಚ್ಛಿಸಿದರೆ, ಅವನು ಏನು ಮಾಡಬೇಕು? ಅವನು ಕೆಲವು ವಿಧಿವಿಧಾನಗಳನ್ನು (ಅನುಷ್ಠಾನಗಳನ್ನು) ಕೈಗೊಳ್ಳಬೇಕೆ? ಅಥವಾ ಕೆಲವು ವ್ಯಕ್ತಿಗಳ ಅನುಮತಿಯನ್ನು ಪಡೆಯಬೇಕೆ?
ಒಬ್ಬ ವ್ಯಕ್ತಿ ಇಸ್ಲಾಂ ಧರ್ಮವೇ ಸತ್ಯ ಧರ್ಮವೆಂದು ಹಾಗೂ ಅದು ಪ್ರಪಂಚದ ಸೃಷ್ಟಿಕರ್ತನ ಧರ್ಮವೆಂದು ಅರಿತಾಗ ಅವನು ತಕ್ಷಣ ಇಸ್ಲಾಂ ಧರ್ಮವನ್ನು ಸ್ವೀಕರಿಸಬೇಕು. ಏಕೆಂದರೆ ಬುದ್ಧಿವಂತ ವ್ಯಕ್ತಿಗೆ ಸತ್ಯ ಸ್ಪಷ್ಟವಾದಾಗ, ಅದನ್ನು ಸ್ವೀಕರಿಸುವುದು ತಡ ಮಾಡುವುದು ಅಥವಾ ಹಿಂಜರಿಯುವುದು ಸೂಕ್ತವಲ್ಲ. ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಇಚ್ಛಿಸಿದವರು, ಯಾವುದೇ ವಿಧಿವಿಧಾನ (ಅನುಷ್ಠಾನ)ಗಳನ್ನು ನೆರವೇರಿಸುವ ಅವಶ್ಯಕತೆ ಇಲ್ಲ ಮತ್ತು . ಜನರ ಸಮ್ಮುಖದಲ್ಲೇ ಸ್ವೀಕರಿಸಬೇಕೆಂಬ ಅಗತ್ಯವೂ ಇಲ್ಲ. ಆದರೆ ಓರ್ವ ಮುಸ್ಲಿಮ್ ವ್ಯಕ್ತಿಯ ಸಮ್ಮುಖದಲ್ಲಿ ಅಥವಾ ಇಸ್ಲಾಮಿಕ್ ಕೇಂದ್ರದಲ್ಲಿ ಇಸ್ಲಾಂ ಸ್ವೀಕರಿಸಿದರೆ, ಅದು ಅತ್ಯುತ್ತಮವಾಗಿದೆ. ಅದು ಸಾಧ್ಯವಾಗದಿದ್ದರೆ:(ಅಶ್ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವ ಅಶ್ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್ : ಅಲ್ಲಾಹನ ಹೊರತು ಯಾರೂ ಆರಾಧನೆಗೆ ಅರ್ಹರಿಲ್ಲ ಮತ್ತು ಮುಹಮ್ಮದ್ (ಸ) ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದು ನಾನು ಸಾಕ್ಷ್ಯ ವಹಿಸುತ್ತೇನೆ) ಎಂದು ಹೇಳಿದರೆ ಸಾಕು ಅದರ ಅರ್ಥವನ್ನು ಅರಿಯುತ್ತಾ ಅದರ ಮೇಲೆ ವಿಶ್ವಾಸವಿರಿಸುತ್ತಾ ಅವನು ಹೀಗೆ ಮುಸ್ಲಿಮನಾಗುತ್ತಾನೆ. ನಂತರ ಅವನು ಅಲ್ಲಾಹು ಕಡ್ಡಾಯಗೊಳಿಸಿರುವ ನಿಯಮಗಳನ್ನು ನಿರ್ವಹಿಸಲು ಇಸ್ಲಾಮಿನ ಉಳಿದ ನಿಯಮಗಳನ್ನು ಕ್ರಮೇಣ ಕಲಿಯಬೇಕು.
ಹೆಚ್ಚಿನ ಮಾಹಿತಿಗಾಗಿ ನೀವು ಈ ವಿಳಾಸವನ್ನು ಸಂದರ್ಶಿಸಬಹುದು :