شرح ألفاظ الأذان

شرح ألفاظ الأذان

كتاب ألفاظ الأذان شرح مختصر لمعاني ألفاظ الأذان بأسلوب يناسب غير المسلمين

Language: lang_kn
Prepared by: ವಿವಿಧ ಭಾಷೆಗಳಲ್ಲಿ ಇಸ್ಲಾಮೀ ವಿಷಯಗಳ ಸೇವಾ ಸಂಘದ ಜ್ಞಾನ ಸಮಿತಿ
Version: 1.1
Translations 39
Assamese Azerbaijani Bengali Bosnian +35
Attachments 7
PDF
Audio
Video
+3

ಅಝಾನ್ ಪದಗಳ ವಿವರಣೆ

ವಿವಿಧ ಭಾಷೆಗಳಲ್ಲಿ ಇಸ್ಲಾಮಿ ವಿಷಯಗಳ ಸೇವಾ ಸಮಿತಿಯ ಜ್ಞಾನ ಮಂಡಳಿ

ಅಝಾನ್ ಎಂಬುದು ಒಬ್ಬ ಮುಸ್ಲಿಮನು ದಿನಕ್ಕೆ ಐದು ಬಾರಿ ಆಲಿಸುವ ದೈವಿಕ ಕರೆಯಾಗಿದೆ. ಅದು ಅವನಿಗೆ ಅಲ್ಲಾಹನ ಹಿರಿಮೆಯನ್ನು ನೆನಪಿಸುತ್ತದೆ ಮತ್ತು ಒಳಿತು ಹಾಗೂ ವಿಜಯದ ಕಡೆಗೆ ಅವನನ್ನು ಆಹ್ವಾನಿಸುತ್ತದೆ. ಇದು ಮನುಷ್ಯ ಮತ್ತು ಅವನ ಸೃಷ್ಟಿಕರ್ತನ ನಡುವಿನ ಸಂಪರ್ಕದ ಕ್ಷಣವಾಗಿದೆ. ಇದರಲ್ಲಿ ಅವನು ಪ್ರಾಪಂಚಿಕ ಗದ್ದಲಗಳಿಂದ ಕಡಿದುಕೊಂಡು ತನ್ನ ರಬ್ಬ್ (ಒಡೆಯ) ನೊಡನೆ ಸಂಭಾಷಿಸಲು ನಿಲ್ಲುತ್ತಾನೆ. ಅಝಾನ್ ಕೇವಲ ನಮಾಝ್‌ನ ಸಮಯದ ಪ್ರಕಟಣೆಯಲ್ಲ, ಬದಲಾಗಿ ಅದು ನೆಮ್ಮದಿ, ನಂಬಿಕೆ ಮತ್ತು ಅಲ್ಲಾಹನೊಂದಿಗಿನ ಸಂಪರ್ಕವನ್ನು ನವೀಕರಿಸುವ ಕರೆಯಾಗಿದೆ. ಅಝಾನ್ ಅಲ್ಲಾಹನ ಹಿರಿಮೆಯನ್ನು ಸಾರುವುದರೊಂದಿಗೆ ಪ್ರಾರಂಭವಾಗಿ, ಮುಸ್ಲಿಮನು ನೆಮ್ಮದಿಯನ್ನು ಕಂಡುಕೊಳ್ಳುವ ನಮಾಝ್‌ನ ಕರೆಯೊಂದಿಗೆ ಕೊನೆಗೊಳ್ಳುವ ಉನ್ನತ ಅರ್ಥಗಳನ್ನು ಹೊಂದಿದೆ. ಪ್ರತಿ ಬಾರಿ ಅಝಾನ್ ಮೊಳಗಿದಾಗ, ನೈಜ ಜೀವನವು ಅಲ್ಲಾಹನ ಸಾಮೀಪ್ಯದಿಂದ ಪ್ರಾರಂಭವಾಗುತ್ತದೆ ಎಂದು ಅದು ಹೃದಯದಲ್ಲಿ ಪಿಸುಗುಟ್ಟುತ್ತದೆ.

ಅಝಾನ್‌ನ ಪದಗಳು:

ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್

ಅಲ್ಲಾಹು ಮಹಾನನು

"ಅಲ್ಲಾಹು" ಎಂದರೆ ಆರಾಧ್ಯ ಎಂದರ್ಥ, ಅಂದರೆ ಆರಾಧನೆಗೆ ಅರ್ಹನಾದವನು. ಇದು ಸೃಷ್ಟಿಕರ್ತನಾದ ರಬ್ಬ್‌ನ (ಒಡೆಯನ) ಹೆಸರಾಗಿದೆ. ಎಲ್ಲಾ ದೈವಿಕ ಹೆಸರುಗಳು ಈ ಹೆಸರಿಗೆ ಅಧೀನವಾಗಿವೆ ಮತ್ತು ಅದರ ಗುಣವಿಶೇಷಣಗಳಾಗಿವೆ. ಅಲ್ಲಾಹು ಏಕೈಕನು, ಅವನು ಯಾರಿಗೂ ಜನ್ಮ ನೀಡಿಲ್ಲ ಮತ್ತು ಅವನಿಗೂ ಯಾರೂ ಜನ್ಮ ನೀಡಿಲ್ಲ. ಅವನು ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನು.

"ಅಲ್ಲಾಹು ಅಕ್ಬರ್" (ಅಲ್ಲಾಹು ಮಹಾನನು) ಎಂಬ ಮಾತಿನ ಅರ್ಥವೇನೆಂದರೆ, ಅಲ್ಲಾಹು ಎಲ್ಲದಕ್ಕಿಂತಲೂ ಶ್ರೇಷ್ಠನು, ಮತ್ತು ಅವನ ಭವ್ಯತೆ ಹಾಗೂ ಪರಿಪೂರ್ಣತೆಗೆ ಹೊಂದಿಕೆಯಾಗದ ಯಾವುದೇ ವಿಷಯವನ್ನು ಜನರು ಅವನಿಗೆ ಆರೋಪಿಸುವುದಕ್ಕಿಂತ ಅವನು ಎಷ್ಟೋ ಅತ್ಯುನ್ನತನು.

ಅಲ್ಲಾಹು ಅಕ್ಬರ್.. ಈ ವಾಕ್ಯವು ಮುಸ್ಲಿಮನಿಗೆ ಈ ಜೀವನದಲ್ಲಿ ಯಾವುದೂ ಅವನನ್ನು ಅವನ ಸೃಷ್ಟಿಕರ್ತನಿಂದ ವಿಚಲಿತಗೊಳಿಸಬಾರದು ಎಂಬುದನ್ನು ನೆನಪಿಸುತ್ತದೆ. ಮತ್ತು ಮನುಷ್ಯನು ತನ್ನ ಜೀವನದಲ್ಲಿ ತನ್ನ ಆಸೆಗಳು ಮತ್ತು ಇಚ್ಛೆಗಳ ಪ್ರಕಾರವಲ್ಲ, ಬದಲಾಗಿ ಅಲ್ಲಾಹನ ಇಚ್ಛೆ ಮತ್ತು ಅವನ ನಿಯಮಗಳ ಪ್ರಕಾರ ಸಾಗಬೇಕು, ಏಕೆಂದರೆ ಅಲ್ಲಾಹು ಪ್ರಪಂಚದಲ್ಲಿರುವ ಎಲ್ಲದಕ್ಕಿಂತಲೂ ಶ್ರೇಷ್ಠನಾಗಿದ್ದಾನೆ.

ಅಲ್ಲಾಹು ಅಕ್ಬರ್ ಎಂದು ಕೇಳಿದಾಗ, ಕಾರ್ಮಿಕನು ತನ್ನ ಕೆಲಸವನ್ನು ನಿಲ್ಲಿಸುತ್ತಾನೆ, ರೈತನು ತನ್ನ ಉಳುಮೆಯನ್ನು ನಿಲ್ಲಿಸುತ್ತಾನೆ, ವ್ಯಾಪಾರಿಯು ತನ್ನ ಅಂಗಡಿಯನ್ನು ಮುಚ್ಚುತ್ತಾನೆ, ಮತ್ತು ಶಿಕ್ಷಕನು ತನ್ನ ಪಾಠವನ್ನು ನಿಲ್ಲಿಸುತ್ತಾನೆ; ಏಕೆಂದರೆ ಅಲ್ಲಾಹು ಪ್ರತಿಯೊಂದು ಕೆಲಸ ಮತ್ತು ಉದ್ಯೋಗಕ್ಕಿಂತಲೂ ದೊಡ್ಡವನಾಗಿದ್ದಾನೆ. ಈ ನಿಲ್ಲಿಸುವಿಕೆ ಮತ್ತು ಆರಾಧನೆಯ ಕಡೆಗಿನ ತಿರುಗುವಿಕೆ, ಪ್ರಪಂಚದ ಎಲ್ಲಾ ಸುಖಭೋಗಗಳಿಗಿಂತ ಸತ್ಯವಿಶ್ವಾಸಿಯ ಹೃದಯದಲ್ಲಿ ಅಲ್ಲಾಹನೇ ಅತ್ಯಂತ ಮಹಾನನು ಎಂಬುದಕ್ಕೆ ಸಾಕ್ಷಿಯಾಗಿದೆ. ಎಲ್ಲಾ ವಿಪತ್ತುಗಳು, ಕಷ್ಟಗಳು ಮತ್ತು ಜೀವನದ ಯಾವುದೇ ಪರಿಸ್ಥಿತಿಗಿಂತಲೂ ಅಲ್ಲಾಹು ದೊಡ್ಡವನು. ಇದನ್ನು ನಂಬುವವನು ಬಿಕ್ಕಟ್ಟುಗಳನ್ನು ಸಣ್ಣದಾಗಿ ಕಾಣುತ್ತಾನೆ, ಮತ್ತು ಅವನ ಹೃದಯವು ನೆಮ್ಮದಿಯನ್ನು ಪಡೆಯುತ್ತದೆ. ಏಕೆಂದರೆ ಅವನು ಅಲ್ಲಾಹನೊಂದಿಗಿರುತ್ತಾನೆ, ಅವನ ತೀರ್ಪಿಗೆ ತೃಪ್ತನಾಗಿರುತ್ತಾನೆ, ಮತ್ತು ಅವನ ವಿವೇಚನೆ ಹಾಗೂ ನಿರ್ವಹಣೆಯಲ್ಲಿ ವಿಶ್ವಾಸವಿಡುತ್ತಾನೆ.

ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹ್, ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹ್

ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ನಾನು ಸಾಕ್ಷ್ಯವಹಿಸುತ್ತೇನೆ.

ಇದು ಮೊದಲನೇ ಸಾಕ್ಷ್ಯವಾಗಿದೆ. ಇದರ ಅರ್ಥವೇನೆಂದರೆ, ಅಲ್ಲಾಹು ಎಲ್ಲದರ ಸೃಷ್ಟಿಕರ್ತ, ಎಲ್ಲದರ ರಬ್ಬ್ (ಒಡೆಯ), ಎಲ್ಲದರ ಮಾಲೀಕ ಮತ್ತು ಎಲ್ಲದರ ನಿರ್ವಾಹಕ ಎಂದು ಒಪ್ಪಿಕೊಳ್ಳುವುದು, ಮತ್ತು ಅವನನ್ನು ಮಾತ್ರ ಆರಾಧಿಸುವುದು. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ಯಾರೂ ಇಲ್ಲ. ಅವನು ಏಕೈಕನು, ಅವನಿಗೆ ಯಾವುದೇ ಪಾಲುದಾರರಿಲ್ಲ, ಅವನಿಗೆ ಮಕ್ಕಳಿಲ್ಲ, ಮತ್ತು ಅವನಿಗೆ ಸಮಾನರಾದವರು ಯಾರೂ ಇಲ್ಲ. ಆದ್ದರಿಂದ ಅಲ್ಲಾಹನ ಹೊರತು ಬೇರೆ ಯಾರಿಗೂ ಆರಾಧನೆಯನ್ನು ಅರ್ಪಿಸಬಾರದು ಮತ್ತು ಅಲ್ಲಾಹನ ಹೊರತು ಬೇರೆ ಯಾರನ್ನೂ ಕರೆದು ಪ್ರಾರ್ಥಿಸಬಾರದು.

ಈ ಸಾಕ್ಷ್ಯವು ಅಸ್ತಿತ್ವದಲ್ಲಿರುವ ಅತಿದೊಡ್ಡ ಸಾಕ್ಷ್ಯವಾಗಿದೆ. ಇದು ಎಲ್ಲಾ ದೈವಿಕ ಸಂದೇಶಗಳ ನಂಬಿಕೆಯ ಮೂಲವಾಗಿದೆ. ನೂಹ್, ಇಬ್ರಾಹೀಂ, ಮೂಸಾ, ಈಸಾ ರಿಂದ ಹಿಡಿದು ಮುಹಮ್ಮದ್ (ಅವರೆಲ್ಲರ ಮೇಲೆ ಶಾಂತಿ ಇರಲಿ) ವರೆಗಿನ ಎಲ್ಲಾ ಪ್ರವಾದಿಗಳು, 'ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ಆರಾಧ್ಯರಿಲ್ಲ' (ಲಾ ಇಲಾಹ ಇಲ್ಲಲ್ಲಾಹ್) ಎಂಬುದನ್ನು ಒಪ್ಪಿಕೊಳ್ಳಲು, ಸ್ವೀಕರಿಸಲು ಮತ್ತು ನಂಬಲು ತಮ್ಮ ಸಮುದಾಯಗಳನ್ನು ಆಹ್ವಾನಿಸಿದರು. ಅಲ್ಲಾಹು ಸೃಷ್ಟಿಯನ್ನು ಸೃಷ್ಟಿಸಿದ್ದು ಇದೇ ವಚನಕ್ಕಾಗಿ, ಪ್ರವಾದಿಗಳನ್ನು ಕಳುಹಿಸಿದ್ದು ಇದನ್ನು ಸ್ಥಾಪಿಸುವುದಕ್ಕಾಗಿ, ಮತ್ತು ಗ್ರಂಥಗಳನ್ನು ಅವತೀರ್ಣಗೊಳಿಸಿದ್ದು ಇದನ್ನು ವಿವರಿಸುವುದಕ್ಕಾಗಿ. ಯಾರು ಶುದ್ಧ ಹೃದಯದಿಂದ ಇದರೊಂದಿಗೆ ಬರುತ್ತಾರೋ ಅವರಿಗೆ ಅಲ್ಲಾಹು ಸ್ವರ್ಗವನ್ನು ಪ್ರತಿಫಲವಾಗಿ ನೀಡುತ್ತಾನೆ, ಮತ್ತು ಇದನ್ನು ದೃಢವಾಗಿ ನಂಬಿಕೊಂಡು ಮರಣಹೊಂದುವವರಿಗೆ ಅವನು ನರಕವನ್ನು ನಿಷೇಧಿಸುತ್ತಾನೆ.

ಇದು ಸತ್ಯವಿಸ್ವಾಸದ (ಈಮಾನ್) ಕೀಲಿಕೈ, ವಿಮೋಚನೆಯ ದ್ವಾರ, ಧರ್ಮದ ಮೂಲ ಮತ್ತು ಏಕದೇವತ್ವದ (ತೌಹೀದ್) ಅಡಿಪಾಯವಾಗಿದೆ.

ಈ ವಚನದ ಕಾರಣದಿಂದಾಗಿಯೇ ಜನರನ್ನು ಅವರ ಸಮಾಧಿಗಳಿಂದ ಎಬ್ಬಿಸಲಾಗುವುದು ಮತ್ತು ಪುನರುತ್ಥಾನದ ದಿನದಂದು ವಿಚಾರಣೆ ನಡೆಸಲಾಗುವುದು; ಯಾರು ಇದರೊಂದಿಗೆ ಜೀವಿಸಿ, ಇದರೊಂದಿಗೇ ತನ್ನ ಜೀವನವನ್ನು ಅಂತ್ಯಗೊಳಿಸುತ್ತಾನೋ ಅವನು ಮಹತ್ತರವಾದ ವಿಜಯವನ್ನು ಸಾಧಿಸುತ್ತಾನೆ. ಯಾರು ಇದನ್ನು ತಿರಸ್ಕರಿಸುತ್ತಾನೋ ಮತ್ತು ಇದನ್ನು ಉಚ್ಚರಿಸುವುದಿಲ್ಲವೋ, ಅವನು ನರಕದಲ್ಲಿ ಶಾಶ್ವತವಾಗಿರಲು ಅರ್ಹನಾಗುತ್ತಾನೆ.

ಅಶ್‌ಹದು ಅನ್ನ ಮುಹಮ್ಮದರ್ ರಸೂಲುಲ್ಲಾಹ್, ಅಶ್‌ಹದು ಅನ್ನ ಮುಹಮ್ಮದರ್ ರಸೂಲುಲ್ಲಾಹ್

ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ನಾನು ಸಾಕ್ಷ್ಯವಹಿಸುತ್ತೇನೆ

ಈ ಸಾಕ್ಷ್ಯದ ಅರ್ಥವೇನೆಂದರೆ, ಅಲ್ಲಾಹು ಮುಹಮ್ಮದ್ ﷺ ರನ್ನು ದೈವಿಕ ಸಂದೇಶಗಳ ಅಂತಿಮ ಪ್ರವಾದಿಯಾಗಿ, ಮತ್ತು ಜನರಿಗೆ ಅವರ ರಬ್ಬ್‌ನ (ಒಡೆಯನ) ಸಂದೇಶವನ್ನು ತಲುಪಿಸಿಕೊಡುವುದಕ್ಕಾಗಿ ಕಳುಹಿಸಿದ್ದಾನೆ ಎಂದು ಮುಸ್ಲಿಮನು ಸಾಕ್ಷಿ ನುಡಿಯುವುದು. ಪ್ರವಾದಿ ﷺ ರವರ ಪ್ರವಾದಿತ್ವಕ್ಕೆ ಸಾಕ್ಷಿ ನುಡಿಯುವ ಮೂಲಕ, ಅವರನ್ನು ಹಿಂಬಾಲಿಸಿ ಅನುಸರಿಸುವ ಮೂಲಕ, ಮತ್ತು ಅವರು ಕಲಿಸಿಕೊಟ್ಟ ನಿಯಮಗಳ ಪ್ರಕಾರ ಅಲ್ಲಾಹನನ್ನು ಆರಾಧಿಸುವುದರ ಮೂಲಕವಲ್ಲದೆ, ಅಲ್ಲಾಹನನ್ನು ಆರಾಧಿಸಲು ಮತ್ತು ಅವನ ಸಂತೃಪ್ತಿಯನ್ನು ಗೆಲ್ಲಲು ಬೇರೆ ಯಾವುದೇ ಮಾರ್ಗವಿಲ್ಲ ಎಂದು ಮುಸ್ಲಿಮನು ದೃಢವಾಗಿ ನಂಬುವುದು. ಪ್ರವಾದಿಯವರು ಕಲಿಸದಿರುವ ಆರಾಧನೆಯ ಮೂಲಕ ಮನುಷ್ಯನು ಅಲ್ಲಾಹನ ಸಾಮೀಪ್ಯವನ್ನು ಪಡೆಯಲು ಪ್ರಯತ್ನಿಸಿದರೆ, ಆ ಆರಾಧನೆ ನಿರರ್ಥಕವಾಗಿದೆ ಮತ್ತು ಇಹಲೋಕದಲ್ಲಾಗಲೀ ಪರಲೋಕದಲ್ಲಾಗಲೀ ಅದು ಅವನಿಗೆ ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ. ಬದಲಾಗಿ, ಅವನು ಅದಕ್ಕಾಗಿ ವಿಚಾರಣೆಗೆ ಒಳಪಡುತ್ತಾನೆ ಮತ್ತು ಶಿಕ್ಷಿಸಲ್ಪಡುತ್ತಾನೆ. ಏಕೆಂದರೆ ಅವನು ಪ್ರವಾದಿ ﷺ ರವರು ಕಲಿಸಿದ ವಿಧಾನವಲ್ಲದೆ ಬೇರೆ ರೀತಿಯಲ್ಲಿ ಅಲ್ಲಾಹನನ್ನು ಆರಾಧಿಸಿದ್ದಾನೆ.

ಈ ಸಾಕ್ಷ್ಯವು, ಪ್ರವಾದಿ ﷺ ರವರು ಅಲ್ಲಾಹನ ದಾಸರು ಮತ್ತು ಸರ್ವಲೋಕಗಳ ಒಡೆಯನ ಸಂದೇಶವಾಹಕರು ಎಂಬ ನಂಬಿಕೆಯನ್ನು ಒಳಗೊಂಡಿದೆ. ಹಾಗೆಯೇ, ಪ್ರವಾದಿ ﷺ ರವರು ಪ್ರವಾದಿಗಳ (ಅವರೆಲ್ಲರ ಮೇಲೆ ಶಾಂತಿ ಇರಲಿ) ಶೃಂಖಲೆಯಲ್ಲಿ ಕೊನೆಯವರು, ಮತ್ತು ಅವರ ನಂತರ ಯಾವುದೇ ಪ್ರವಾದಿ ಬರಲಿಕ್ಕಿಲ್ಲ ಎಂಬ ನಂಬಿಕೆಯನ್ನೂ ಒಳಗೊಂಡಿದೆ. ಇದು, ಅವರು ತಂದಂತಹ ಇತರ ಎಲ್ಲಾ ದೃಷ್ಟಾಂತಗಳನ್ನು ನಂಬುವುದನ್ನು ಸಹ ಒಳಗೊಂಡಿದೆ. ಅದರಲ್ಲಿ ಅತ್ಯಂತ ಶ್ರೇಷ್ಠವಾದದ್ದು ಪವಿತ್ರ ಕುರ್‌ಆನ್. ಇದು ಅಂತಿಮ ದೈವಿಕ ಸಂದೇಶವಾಗಿದ್ದು, ಅದು ಅವತೀರ್ಣಗೊಂಡ ಭಾಷೆಯಲ್ಲಿಯೇ ಇಂದಿಗೂ ಅಸ್ತಿತ್ವದಲ್ಲಿದೆ. ಅದರಲ್ಲಿ ಯಾವುದೇ ಸೇರ್ಪಡೆ, ಕಡಿತ ಮತ್ತು ಬದಲಾವಣೆಯಾಗದಂತೆ ಅದು ಸಂರಕ್ಷಿಸಲ್ಪಟ್ಟಿದೆ. ಈ ಪವಿತ್ರ ಕುರ್‌ಆನ್‌ಗೆ ಅದರ ಸಾಹಿತ್ಯಿಕ ಸೌಂದರ್ಯ, ನಿಯಮಗಳು ಮತ್ತು ಮಾರ್ಗದರ್ಶನಗಳಲ್ಲಿ ಯಾವುದೂ ಸರಿಸಾಟಿಯಿಲ್ಲ. ಇದರಂತಹ ಒಂದೇ ಒಂದು ಸೂರ (ಅಧ್ಯಾಯ) ವನ್ನಾದರೂ ತರುವಂತೆ ಅಲ್ಲಾಹು ಇಡೀ ಮಾನವಕುಲಕ್ಕೆ ಸವಾಲು ಹಾಕಿದ್ದಾನೆ. ಆದರೆ ವರ್ಷಗಳು ಕಳೆದರೂ ಅವರು ಅದರಲ್ಲಿ ವಿಫಲರಾದರು. ಇಂದಿನವರೆಗೂ ಮಾನವಕುಲವು ಅದನ್ನು ಮಾಡಲು ಅಸಮರ್ಥವಾಗಿದೆ.

ಪ್ರವಾದಿ ﷺ ರವರು ಬಂದಿರುವುದು, ಅವರ ಮೊದಲು ಇಬ್ರಾಹೀಂ, ಮೂಸಾ ಮತ್ತು ಈಸಾ (ಅವರೆಲ್ಲರ ಮೇಲೆ ಶಾಂತಿ ಇರಲಿ) ಕರೆದಂತೆಯೇ ಕೇವಲ ಜನರನ್ನು ಏಕದೇವತ್ವದ (ತೌಹೀದ್) ಕಡೆಗೆ ಕರೆಯವುದಕ್ಕಾಗಿ ಮಾತ್ರ ಎಂಬ ನಂಬಿಕೆಯನ್ನೂ ಈ ಸಾಕ್ಷ್ಯವು ಒಳಗೊಂಡಿದೆ. ಅವರು ಸರ್ವಲೋಕಗಳ ಒಡೆಯನ ಸಂದೇಶವಾಹಕರು. ಎಲ್ಲಾ ಪ್ರವಾದಿಗಳು ತಮ್ಮ ರಬ್ಬ್‌ನ (ಒಡೆಯನ) ಸಂದೇಶಗಳನ್ನು ತಲುಪಿಸುವಲ್ಲಿ ನಡೆದ ಮಾರ್ಗದಲ್ಲೇ ಇವರೂ ನಡೆದರು. ಆದರೆ ವಿಶೇಷವೇನೆಂದರೆ ಇವರ ನಂತರ ಯಾವುದೇ ಪ್ರವಾದಿ ಬರಲಿಕ್ಕಿಲ್ಲ.

ಹಯ್ಯ ಅಲಸ್ಸಲಾಹ್, ಹಯ್ಯ ಅಲಸ್ಸಲಾಹ್

ನಮಾಝ್‌ನ ಕಡೆಗೆ ಬನ್ನಿ

ಈ ವಾಕ್ಯದ ಅರ್ಥವೇನೆಂದರೆ, ಓ ಸತ್ಯವಿಶ್ವಾಸಿಗಳೇ, ನಿಮ್ಮ ರಬ್ಬ್‌ನ (ಒಡೆಯನ) ಆರಾಧನೆಯ ಕಡೆಗೆ ಬನ್ನಿ, ಖಂಡಿತವಾಗಿಯೂ ಅವನು ಕ್ಷಮಿಸುವವನೂ ಮತ್ತು ಕರುಣಾಮಯಿಯೂ ಆಗಿದ್ದಾನೆ. ಅವನು ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ ಮತ್ತು ಪಾಪಗಳನ್ನು ಮನ್ನಿಸುತ್ತಾನೆ.

ಮುಸ್ಲಿಮರು ಇರುವ ಪ್ರತಿಯೊಂದು ಸ್ಥಳದಲ್ಲೂ ಅಝಾನ್ ಕರೆಯನ್ನು ನೀಡಲು ಅಲ್ಲಾಹು ಮನುಷ್ಯನೊಬ್ಬನಿಗೆ ಆಜ್ಞಾಪಿಸುವುದು, ಮತ್ತು "ಬನ್ನಿ, ನಿಮ್ಮ ರಬ್ಬ್‌ನ (ಅಲ್ಲಾಹನ) ಆರಾಧನೆಯ ಕಡೆಗೆ ಬನ್ನಿ" ಎಂದು ಹೇಳುತ್ತಾ ದಿನಕ್ಕೆ ಐದು ಬಾರಿ ಅವರನ್ನು ಆಹ್ವಾನಿಸುವುದು ಎಷ್ಟು ದೊಡ್ಡ ಗೌರವವಾಗಿದೆ!

ಇದು ಸತ್ಯವಿಶ್ವಾಸಿಗಳಿಗೆ ಕರೆ ಮತ್ತು ನೆನಪಿಸುವಿಕೆಯಾಗಿದೆ. ಏನೆಂದರೆ ಅವರಿಗೆ ತಮ್ಮ ರಬ್ಬ್‌ನನ್ನು (ಒಡೆಯನನ್ನು) ಆರಾಧಿಸುವ ಸಮಯವಾಗಿದೆ ಮತ್ತು ಅವರು ಲೌಕಿಕ ವಿಷಯಗಳಲ್ಲಿ ತಲ್ಲೀನರಾಗುವುದನ್ನು ಬಿಟ್ಟು, ಆರಾಧನೆಯ ಕಡೆಗೆ ಬರಬೇಕು ಎಂದು ಇದು ತಿಳಿಸುತ್ತದೆ. ಅವರು ತಮ್ಮ ಕೈಯಲ್ಲಿರುವ ವ್ಯಾಪಾರ ಅಥವಾ ವ್ಯವಸಾಯವನ್ನು ಬಿಟ್ಟು ಅಲ್ಲಾಹನ ಕಡೆಗೆ ಬರಬೇಕು ಎಂದು ಇದು ತಿಳಿಸುತ್ತದೆ. ಇದು ಸತ್ಯವಿಶ್ವಾಸದ ಸತ್ಯತೆಗೆ ಸಾಕ್ಷಿಯಾಗಿದೆ, ಮತ್ತು ಪ್ರಪಂಚದ ಎಲ್ಲಾ ಸುಖಭೋಗಗಳಿಗಿಂತ ಇದಕ್ಕೆ ಪ್ರಾಮುಖ್ಯ ನೀಡಬೇಕಾಗಿದೆ ಎಂಬುದಕ್ಕೆ ಪುರಾವೆಯಾಗಿದೆ.

ಇದು ಜನರನ್ನು ನಮಾಝ್‌ನ ಕಡೆಗೆ ಆಹ್ವಾನಿಸುವ ಕರೆಯಾಗಿದೆ. ನಮಾಝ್ ಎಂಬುದು ಮನುಷ್ಯ ಮತ್ತು ಅವನ ಒಡೆಯನ ನಡುವಿನ ನೇರ ಸಂಪರ್ಕವಾಗಿದೆ. ಇದು ವರ್ಗ ಭೇದಭಾವಗಳನ್ನು ನಾಶಮಾಡುವ ಮತ್ತು ಜನರನ್ನು ತಮ್ಮ ಒಡೆಯನ ಮುಂದೆ ಸಮಾನರನ್ನಾಗಿಸುವ ಆರಾಧನೆಯಾಗಿದೆ.

ಹಯ್ಯ ಅಲಲ್-ಫಲಾಹ್, ಹಯ್ಯ ಅಲಲ್-ಫಲಾಹ್

ವಿಜಯದ ಕಡೆಗೆ ಬನ್ನಿ

ಫಲಾಹ್ (ವಿಜಯ) ಎಂದರೆ ಇಹಲೋಕ ಮತ್ತು ಪರಲೋಕದಲ್ಲಿನ ಸಂತೃಪ್ತಿ, ಯಶಸ್ಸು, ಸುರಕ್ಷತೆ ಮತ್ತು ವಿಮೋಚನೆ, ಹಾಗೂ ಶಾಶ್ವತ ಸಂತೋಷ, ಮತ್ತು ಸರಿಯಾದ ಮಾರ್ಗದ ಕಡೆಗಿನ ಮಾರ್ಗದರ್ಶನ.

ಅಲ್ಲಾಹನ ಸಂತೃಪ್ತಿಯನ್ನು ಗಳಿಸುವುದು, ಸ್ವರ್ಗವನ್ನು ಗೆಲ್ಲುವುದು ಮತ್ತು ನರಕದಿಂದ ಪಾರಾಗುವುದು ಕೂಡ ಇದರ ಅರ್ಥಗಳಲ್ಲಿ ಸೇರಿವೆ. ಏಕೆಂದರೆ ಯಾರು ವಿಶ್ವಾಸವಿಟ್ಟು ನಮಾಝ್ ಮಾಡುತ್ತಾನೋ ಅವನು ವಿಜಯಶಾಲಿಯಾಗುತ್ತಾನೆ, ಮತ್ತು ಯಾರು ವಿಜಯಶಾಲಿಯಾಗುತ್ತಾನೋ ಅವನು ರಕ್ಷಿಸಲ್ಪಡುತ್ತಾನೆ ಮತ್ತು ಸ್ವರ್ಗದಲ್ಲಿ ಶಾಶ್ವತ ಜೀವನವನ್ನು ಗೆಲ್ಲುತ್ತಾನೆ.

ಪ್ರತಿಯೊಂದು ನಮಾಝ್‌ನ ಸಂದರ್ಭದಲ್ಲೂ ಮುಅದ್ದಿನ್ (ಅಝಾನ್ ನೀಡುವವನು) ಸತ್ಯವಿಶ್ವಾಸಿಗಳಿಗೆ, ಶಾಂತಿ, ಭದ್ರತೆ, ಹೃದಯದ ನೆಮ್ಮದಿ, ಆತ್ಮದ ಪರಿಶುದ್ಧತೆ, ಮತ್ತು ಇಹಲೋಕ ಹಾಗೂ ಪರಲೋಕದ ಸಂತೋಷದ ಕಡೆಗೆ ಬನ್ನಿ ಎಂದು ನೆನಪಿಸುತ್ತಾನೆ.

ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್, ಲಾ ಇಲಾಹ ಇಲ್ಲಲ್ಲಾಹ್

ತಕ್ಬೀರ್ ಮತ್ತು ತೌಹೀದ್‌ನೊಂದಿಗೆ ಮುಕ್ತಾಯ

ಅಝಾನ್ ಅನ್ನು "ಅಲ್ಲಾಹು ಅಕ್ಬರ್" ವಾಕ್ಯವನ್ನು ಪುನರಾವರ್ತಿಸುವ ಮೂಲಕ ಮತ್ತು "ಲಾ ಇಲಾಹ ಇಲ್ಲಲ್ಲಾಹ್" ಅನ್ನು ದೃಢೀಕರಿಸುವ ಮೂಲಕ ಮುಕ್ತಾಯಗೊಳಿಸಲಾಗುತ್ತದೆ. ಈ ಎರಡು ವಾಕ್ಯಗಳು ಹಿಂದಿನ ಅರ್ಥಗಳ ದೃಢೀಕರಣವಾಗಿವೆ, ಮತ್ತು ಮಾನವ ಅಸ್ತಿತ್ವದ ಕಕ್ಷೆಯು ಇವುಗಳ ಮೇಲೆಯೇ ಆಧಾರಿತವಾಗಿದೆ. ಈ ಸತ್ಯವು ಅತ್ಯಂತ ನೈಜವಾದ ಸಾರ್ವಲೌಕಿಕತೆಯ ಮತ್ತು ಅಸ್ತಿತ್ವದ ಸತ್ಯವಾಗಿದೆ. ಮನುಷ್ಯನು ಇದನ್ನು ಗ್ರಹಿಸಿದರೂ ಅಥವಾ ಗ್ರಹಿಸದಿದ್ದರೂ, ತಿಳಿದರೂ ಅಥವಾ ತಿಳಿಯದಿದ್ದರೂ ಸಹ. ಕೆಲವು ಜನರ ಅಜ್ಞಾನವು ದೊಡ್ಡ ಸತ್ಯಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ. ಕಾಲ ಎಷ್ಟೇ ಕಳೆದರೂ, ಮತ್ತು ಎಷ್ಟೇ ಘಟನೆಗಳು ಸಂಭವಿಸಿದರೂ ಈ ಸತ್ಯವು ಬದಲಾಗುವುದಿಲ್ಲ ಮತ್ತು ಮಾರ್ಪಾಡಾಗುವುದಿಲ್ಲ. ಆ ಸತ್ಯವೇನೆಂದರೆ: ಅಲ್ಲಾಹು ಎಲ್ಲದಕ್ಕಿಂತಲೂ ಮಹಾನನು, ಅಲ್ಲಾಹನೇ ಸತ್ಯ ದೇವನು, ಮತ್ತು ಅವನು ಮಾತ್ರ ಆರಾಧನೆಗೆ ಅರ್ಹನು. ಅವನನ್ನು ಹೊರತುಪಡಿಸಿ ಬೇರೆ ಯಾವುದನ್ನೇ ಆರಾಧಿಸಿದರೂ ಅದು ನಿಷ್ಫಲವಾಗಿದೆ.

ಇದು, ಅಲ್ಲಾಹು ಯಾವುದನ್ನು ಮಹತ್ವಪೂರ್ಣವಾಗಿಸಿದ್ದಾನೋ ಅದನ್ನು ಮಹತ್ವಪೂರ್ಣವಾಗಿ ಕಾಣುವ ಕರೆಯಾಗಿದೆ. ಅಲ್ಲಾಹು ತನಗಾಗಿ ನುಡಿದಿರುವ ಸಾಕ್ಷ್ಯವನ್ನು ಒಪ್ಪಿಕೊಳ್ಳುವ, ಪ್ರವಾದಿಗಳು (ಅವರೆಲ್ಲರ ಮೇಲೆ ಶಾಂತಿ ಇರಲಿ) ಅವನಿಗಾಗಿ ನೀಡಿದ ಸಾಕ್ಷ್ಯವನ್ನು ಒಪ್ಪಿಕೊಳ್ಳುವ, ಮತ್ತು ಸತ್ಯವಿಶ್ವಾಸಿಗಳು ನೀಡಿದ ಸಾಕ್ಷ್ಯವನ್ನು ಒಪ್ಪಿಕೊಳ್ಳುವ ಕರೆಯಾಗಿದೆ.

ಕೊನೆಯದಾಗಿ: ಅಝಾನ್ ಕೇವಲ ನಮಾಝ್‌ನ ಕರೆಯಲ್ಲ, ಬದಲಾಗಿ ಅದು ವಿಜಯ, ಗೆಲುವು ಮತ್ತು ಯಶಸ್ಸಿನ ಕರೆಯಾಗಿದೆ. ಇದು ಹೃದಯಗಳನ್ನು ಜಾಗೃತಗೊಳಿಸಲು ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ಮೊಳಗುವ ಸಂದೇಶವಾಗಿದೆ. ಅಲ್ಲಾಹನು ಸಮೀಪದಲ್ಲಿದ್ದಾನೆ, ನೆಮ್ಮದಿಯು ಸಾಧ್ಯವಿದೆ, ಮತ್ತು ವಿಜಯದ ಮಾರ್ಗವು ನಮಾಝ್ ಮತ್ತು ಮನುಷ್ಯ ಹಾಗೂ ಅವನ ಸೃಷ್ಟಿಕರ್ತನ ನಡುವಿನ ಸಂಪರ್ಕದಿಂದ ಪ್ರಾರಂಭವಾಗುತ್ತದೆ ಎಂಬುದನ್ನು ಇದು ನಮಗೆ ನೆನಪಿಸುತ್ತದೆ.

ಆದ್ದರಿಂದ ಮುಅದ್ದಿನ್‌ನೊಂದಿಗೆ ನೀವೂ ಹೇಳಿರಿ: ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್ ಲಾ ಇಲಾಹ ಇಲ್ಲಲ್ಲಾಹ್. ಏಕದೇವತ್ವದ (ತೌಹೀದ್) ಸಾಕ್ಷ್ಯವನ್ನು ಪುನರುಚ್ಚರಿಸಿರಿ, ಮತ್ತು ಅಲ್ಲಾಹು ತನಗಾಗಿ ನೀಡಿದ ಸಾಕ್ಷ್ಯಕ್ಕೆ, ಮತ್ತು ಅವನ ಸಂದೇಶವಾಹಕರು ತಂದಿರುವ ಸತ್ಯಕ್ಕೆ ಸಾಕ್ಷಿಯಾಗಿರಿ. ಆಗ ನೀವು ವಿಜಯಶಾಲಿಗಳಲ್ಲಿ ಮತ್ತು ಏಕದೇವತ್ವವನ್ನು ನಂಬುವ ಮುಸ್ಲಿಮರಲ್ಲಿ ಸೇರುವಿರಿ.

ಸತ್ಯವಿಶ್ವಾಸಕ್ಕಾಗಿ ನಿಮ್ಮ ಹೃದಯವನ್ನು ತೆರೆಯಿರಿ, ಮತ್ತು ಹೇಳಿರಿ: "ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹ್, ವ‌ಅಶ್‌ಹದು ಅನ್ನ ಮುಹಮ್ಮದರ್ ರಸೂಲುಲ್ಲಾಹ್" (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ಆರಾಧ್ಯರಿಲ್ಲವೆಂದು ನಾನು ಸಾಕ್ಷಿ ನುಡಿಯುತ್ತೇನೆ ಮತ್ತು ಮುಹಮ್ಮದ್ ﷺ ರವರು ಅಲ್ಲಾಹನ ಸಂದೇಶವಾಹಕರೆಂದು ನಾನು ಸಾಕ್ಷಿ ನುಡಿಯುತ್ತೇನೆ). ಇದರಿಂದ ನೀವು ಅಲ್ಲಾಹನ ಕಾರುಣ್ಯದೊಳಗೆ ಪ್ರವೇಶಿಸುವಿರಿ, ಇಹಲೋಕದಲ್ಲಿ ಸಂತೋಷವನ್ನು ಗೆಲ್ಲುವಿರಿ, ಪರಲೋಕದಲ್ಲಿ ವಿಮೋಚನೆಯನ್ನು ಪಡೆಯುವಿರಿ ಮತ್ತು ಪುನರುತ್ಥಾನದ ದಿನದಂದು ಸತ್ಯವಿಶ್ವಾಸಿಗಳ ಗುಂಪಿನಲ್ಲಿ ಎಬ್ಬಿಸಲ್ಪಡುವಿರಿ.