شرح ألفاظ الأذان
ಅಝಾನ್ನ ಪದಗಳ ವಿವರಣೆ
ಅಝಾನ್ನ ಪದಗಳ ವಿವರಣೆ
ಇಸ್ಲಾಮೀ ವಿಷಯಗಳ ಭಾಷಾ ಸೇವಾ ಸಂಘದ ವೈಜ್ಞಾನಿಕ ಸಮಿತಿ
ಅಝಾನ್ ಮುಸಲ್ಮಾನನು ದಿನದಲ್ಲಿ ಐದು ಬಾರಿ ಆಲಿಸುವ ಒಂದು ದೈವಿಕ ಕರೆಯಾಗಿದ್ದು, ಅದು ಅವನಿಗೆ ಅಲ್ಲಾಹನ ಮಹೋನ್ನತೆಯನ್ನು ನೆನಪಿಸುತ್ತದೆ ಮತ್ತು ಒಳಿತು ಹಾಗೂ ಯಶಸ್ಸಿನೆಡೆಗೆ ಅವನನ್ನು ಆಹ್ವಾನಿಸುತ್ತದೆ. ಇದು ಮನುಷ್ಯ ಮತ್ತು ಅವನ ಸೃಷ್ಟಿಕರ್ತನ ನಡುವಿನ ಸಂಪರ್ಕದ ಕ್ಷಣವಾಗಿದೆ, ಇದರಲ್ಲಿ ಅವನು ಇಹಲೋಕದ ಗದ್ದಲಗಳಿಂದ ದೂರಾಗಿ ತನ್ನ ರಬ್ನೊಂದಿಗೆ ಗುಪ್ತ ಸಂಭಾಷಣೆ ನಡೆಸಲು ನಿಲ್ಲುತ್ತಾನೆ.
ಅಝಾನ್ ಉನ್ನತ ಅರ್ಥಗಳನ್ನು ಒಳಗೊಂಡಿದೆ, ಅದು ಅಲ್ಲಾಹನ ಮಹಿಮೆಯನ್ನು ಸಾರುವುದರೊಂದಿಗೆ ಆರಂಭವಾಗಿ ನಮಾಝಿನ ಕರೆಯೊಂದಿಗೆ ಕೊನೆಗೊಳ್ಳುತ್ತದೆ, ಅಲ್ಲಿ ಮುಸಲ್ಮಾನನು ತನ್ನ ಪ್ರಶಾಂತತೆಯನ್ನು ಕಂಡುಕೊಳ್ಳುತ್ತಾನೆ.
ಅಝಾನ್ನ ವಾಕ್ಯಗಳು:
ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್
"ಅಲ್ಲಾಹು ಅಕ್ಬರ್"
ಘನತೆವೆತ್ತ ಪದವಾದ "ಅಲ್ಲಾಹ್" ಎಂಬುದರ ಅರ್ಥ 'ಅಲ್-ಮಅ್ಲೂಹ್', ಅಂದರೆ ಆರಾಧನೆಗೆ ಅರ್ಹನಾದವನು. ಇದು ಮಹಾಮಹಿಮನಾದ ಪರಿಪಾಲಕ ಮತ್ತು ಸೃಷ್ಟಿಕರ್ತನ ಹೆಸರಾಗಿದೆ. ಉಳಿದೆಲ್ಲಾ ದೈವಿಕ ಹೆಸರುಗಳು ಈ ಹೆಸರಿಗೆ ಅಧೀನವಾಗಿವೆ ಮತ್ತು ಅದರ ಗುಣಲಕ್ಷಣಗಳಾಗಿವೆ. ಅಲ್ಲಾಹನು ಏಕೈಕನೂ ಅದ್ವಿತೀಯನೂ ಆಗಿದ್ದಾನೆ, ಅವನ ಯಾವ ಸಂತಾನವ ಇಲ್ಲ ಮತ್ತು ಅವನು ಯಾರ ಸಂತಾನವೂ ಅಲ್ಲ, ಮತ್ತು ಅವನು ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನು.
"ಅಲ್ಲಾಹು ಅಕ್ಬರ್" ಎಂದು ಹೇಳುವುದರ ಅರ್ಥವೇನೆಂದರೆ, ಅಲ್ಲಾಹು ಎಲ್ಲಾ ವಸ್ತುಗಳಿಗಿಂತಲೂ ಪರಮೋಚ್ಛನು, ಮತ್ತು ಆತನ ಮಹಿಮೆ ಹಾಗೂ ಪರಿಪೂರ್ಣತೆಗೆ ಯೋಗ್ಯವಲ್ಲದುದನ್ನು ಆತನಿಗೆ ಆರೋಪಿಸುವುದಕ್ಕಿಂತಲೂ ಆತನು ಮಹಾಮಹಿಮನು."
"ಅಲ್ಲಾಹು ಅಕ್ಬರ್".. ಈ ವಾಕ್ಯವು ಮುಸ್ಲಿಮನಿಗೆ, ಈ ಜೀವನದಲ್ಲಿ ಯಾವುದೇ ವಸ್ತುವು ಅವನನ್ನು ತನ್ನ ಸೃಷ್ಟಿಕರ್ತನಿಂದ ವಿಮುಖಗೊಳಿಸಬಾರದು ಮತ್ತು ಮನುಷ್ಯನು ತನ್ನ ಜೀವನದಲ್ಲಿ ತನ್ನ ದೇಹೆಚ್ಚೇಗಳ ಪ್ರಕಾರವಲ್ಲದೆ, ಅಲ್ಲಾಹನ ಇಚ್ಛೆ ಮತ್ತು ಅವನ ಧರ್ಮಶಾಸನಕ್ಕೆ ಅನುಗುಣವಾಗಿ ಸಾಗಬೇಕು ಎಂಬುದನ್ನು ನೆನಪಿಸುತ್ತದೆ, ಏಕೆಂದರೆ ಅಲ್ಲಾಹು ಇಹಲೋಕದ ಎಲ್ಲಾ ವಸ್ತುಗಳಿಗಿಂತಲೂ ಪರಮೋಚ್ಛನು.
ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ಆರಾಧ್ಯನಿಲ್ಲ ಎಂದು ನಾನು ಸಾಕ್ಷ್ಯವಹಿಸುತ್ತೇನೆ, ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ಆರಾಧ್ಯನಿಲ್ಲ ಎಂದು ನಾನು ಸಾಕ್ಷ್ಯವಹಿಸುತ್ತೇನೆ.
ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ಆರಾಧ್ಯನಿಲ್ಲ ಎಂದು ನಾನು ಸಾಕ್ಷ್ಯವಹಿಸುತ್ತೇನೆ
ಇದು ಮೊದಲನೇ ಸಾಕ್ಷ್ಯವಚನವಾಗಿದೆ, ಮತ್ತು ಇದರ ಅರ್ಥವೇನೆಂದರೆ, ಅಲ್ಲಾಹನೇ ಪ್ರತಿಯೊಂದರ ಸೃಷ್ಟಿಕರ್ತ, ಪರಿಪಾಲಕ, ಮಾಲೀಕ ಮತ್ತು ನಿರ್ವಾಹಕನೆಂದು ದೃಢೀಕರಿಸುವುದು, ಆರಾಧನೆಯನ್ನು ಕೇವಲ ಅವನೊಬ್ಬನಿಗೆ ಮಾತ್ರ ಅರ್ಪಿಸಬೇಕು, ಮತ್ತು ಸತ್ಯವಾಗಿ ಆರಾಧನೆಗೆ ಅರ್ಹನಾದವನು ಅಲ್ಲಾಹನೊಬ್ಬನು ಮಾತ್ರ. ಅವನು ಏಕೈಕನು, ಅವನಿಗೆ ಯಾವುದೇ ಸಹಭಾಗಿಗಳಿಲ್ಲ, ಅವನಿಗೆ ಯಾವುದೇ ಸಂತಾನವಿಲ್ಲ ಮತ್ತು ಅವನಿಗೆ ಸಮಾನರಾದವರು ಯಾರೂ ಇಲ್ಲ; ಆದ್ದರಿಂದ ಅಲ್ಲಾಹು ಅಲ್ಲದವರಿಗೆ ಆರಾಧನೆಯನ್ನು ಅರ್ಪಿಸಬಾರದು ಮತ್ತು ಅಲ್ಲಾಹನ ಹೊರತು ಅನ್ಯರನ್ನು ಪ್ರಾರ್ಥಿಸಬಾರದು.
ಈ ಸಾಕ್ಷ್ಯವಚನವು ಅಸ್ತಿತ್ವದಲ್ಲಿರುವ ಅತ್ಯಂತ ದೊಡ್ಡ ಸಾಕ್ಷ್ಯವಾಗಿದೆ ಮತ್ತು ಇದು ಎಲ್ಲಾ ದೈವಿಕ ಸಂದೇಶಗಳಲ್ಲಿನ ವಿಶ್ವಾಸದ ಮೂಲವಾಗಿದೆ. ಆದ್ದರಿಂದ, ನೂಹ್, ಇಬ್ರಾಹೀಮ್, ಮೂಸಾ, ಈಸಾ ಅವರಿಂದ ಹಿಡಿದು ಮುಹಮ್ಮದ್ (ﷺ) ರವರೆಗಿನ ಎಲ್ಲಾ ಪ್ರವಾದಿಗಳು (ಅವರ ಮೇಲೆ ಶಾಂತಿಯಿರಲಿ) ತಮ್ಮ ಜನಾಂಗದವರನ್ನು 'ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ' ಎಂಬುದನ್ನು ಅಂಗೀಕರಿಸಲು, ಸ್ವೀಕರಿಸಲು ಮತ್ತು ವಿಶ್ವಾಸವಿಡಲು ಆಹ್ವಾನಿಸಿದರು. ಅಲ್ಲಾಹು ಸೃಷ್ಟಿಗಳನ್ನು ಸೃಷ್ಟಿಸಿದ್ದು ಇದೇ ವಚನಕ್ಕಾಗಿಯಾಗಿದೆ, ಸಂದೇಶವಾಹಕರನ್ನು ಕಳುಹಿಸಿದ್ದು ಇದನ್ನು ದೃಢಪಡಿಸುವುದಕ್ಕಾಗಿಯಾಗಿದೆ ಮತ್ತು ಗ್ರಂಥಗಳನ್ನು ಅವತೀರ್ಣಗೊಳಿಸಿದ್ದು ಇದನ್ನು ವಿವರಿಸುವುದಕ್ಕಾಗಿಯಾಗಿದೆ. ಅಲ್ಲದೆ, ಯಾರು ತನ್ನ ಹೃದಯಪೂರ್ವಕವಾಗಿ ನಿಷ್ಕಳಂಕತೆಯಿಂದ ಇದನ್ನು ಸ್ವೀಕರಿಸುತ್ತಾರೋ ಅವರಿಗೆ ಸ್ವರ್ಗವನ್ನು ಪ್ರತಿಫಲವಾಗಿ ನಿಗದಿಪಡಿಸಿದ್ದಾನೆ.
ಈ ವಚನಕ್ಕಾಗಿ ಜನರನ್ನು ಅವರ ಸಮಾಧಿಗಳಿಂದ ಎಬ್ಬಿಸಲಾಗುವುದು ಮತ್ತು ಪುನರುತ್ಥಾನ ದಿನದಂದು ಅವರ ವಿಚಾರಣೆ ಮಾಡಲಾಗುವುದು; ಆದ್ದರಿಂದ ಯಾರು ಅದರ ಮೇಲೆ ಜೀವಿಸುತ್ತಾರೋ ಮತ್ತು ಅದರೊಂದಿಗೆ ತಮ್ಮ ಜೀವನವನ್ನು ಅಂತ್ಯಗೊಳಿಸುತ್ತಾರೋ ಅವರು ಮಹಾನ್ ವಿಜಯವನ್ನು ಸಾಧಿಸುತ್ತಾರೆ, ಮತ್ತು ಯಾರು ಅದನ್ನು ತಿರಸ್ಕರಿಸುತ್ತಾರೋ ಹಾಗೂ ಅದನ್ನು ಉಚ್ಛರಿಸುವುದಿಲ್ಲವೋ ಅವರು ನರಕದಲ್ಲಿ ಶಾಶ್ವತವಾಗಿರಲು ಅರ್ಹರಾಗುತ್ತಾರೆ.
ಮುಹಮ್ಮದರು ಅಲ್ಲಾಹನ ಸಂದೇಶವಾಹಕರೆಂದು ನಾನು ಸಾಕ್ಷ್ಯವಹಿಸುತ್ತೇನೆ, ಮುಹಮ್ಮದರು ಅಲ್ಲಾಹನ ಸಂದೇಶವಾಹಕರೆಂದು ನಾನು ಸಾಕ್ಷ್ಯವಹಿಸುತ್ತೇನೆ
ಮುಹಮ್ಮದರು ಅಲ್ಲಾಹನ ಸಂದೇಶವಾಹಕರೆಂದು ನಾನು ಸಾಕ್ಷ್ಯವಹಿಸುತ್ತೇನೆ
ಈ ಸಾಕ್ಷ್ಯದ ಅರ್ಥ: ಅಲ್ಲಾಹನು ಮುಹಮ್ಮದರನ್ನು ದೈವಿಕ ಸಂದೇಶಗಳ ಅಂತಿಮ ಪ್ರವಾದಿಯಾಗಿ ಮತ್ತು ಮನುಕುಲಕ್ಕೆ ಅವರ ಒಡೆಯನ ಸಂದೇಶವನ್ನು ತಲುಪಿಸುವವರನ್ನಾಗಿ ಕಳುಹಿಸಿದ್ದಾನೆಂದು ಒಬ್ಬ ಮುಸ್ಲಿಮನು ಸಾಕ್ಷಿ ವಹಿಸಬೇಕು. ಮತ್ತು ಪ್ರವಾದಿ ﷺ ರವರನ್ನು ಸಂದೇಶವಾಹಕರೆಂದು ಸಾಕ್ಷಿ ವಹಿಸುವುದು, ಅವರನ್ನು ಅನುಸರಿಸುವುದು ಹಾಗೂ ಮಾದರಿಯಾಗಿರಿಸಿಕೊಳ್ಳುವುದು ಮತ್ತು ಪ್ರವಾದಿ ಮುಹಮ್ಮದ್ ﷺ ರವರು ತಲುಪಿಸಿದ ಧರ್ಮ ನಿಯಮಾವಳಿಗಳಂತೆ ಅಲ್ಲಾಹನನ್ನು ಆರಾಧಿಸುವುದರ ಮೂಲಕವೇ ಹೊರತು, ಅಲ್ಲಾಹನನ್ನು ಆರಾಧಿಸಲು ಮತ್ತು ಅವನ ಪ್ರಸನ್ನತೆಯನ್ನು ಪಡೆಯಲು ಬೇರೆ ಯಾವುದೇ ಮಾರ್ಗವಿಲ್ಲವೆಂದು ಮುಸ್ಲಿಮನು ದೃಢವಾಗಿ ವಿಶ್ವಾಸವಿಡಬೇಕು.
ಪ್ರವಾದಿ ﷺ ಅವರು ತಮಗಿಂತ ಮುಂಚೆ ಇಬ್ರಾಹೀಮ್, ಮೂಸಾ ಮತ್ತು ಈಸಾ (ಅವರ ಮೇಲೆ ಶಾಂತಿಯಿರಲಿ) ಮಾಡಿದಂತೆಯೇ ಜನರನ್ನು ತೌಹೀದ್ (ಏಕದೇವತ್ವ) ದೆಡೆಗೆ ಮರಳಿಸಲು ಬಂದಿದ್ದಾರೆಂದು ಸಾಕ್ಷ್ಯವಹಿಸುವುದು ಇದರಲ್ಲಿ ಒಳಗೊಂಡಿದೆ. ಅವರು ಸರ್ವ ಲೋಕಗಳ ಒಡೆಯನ ಸಂದೇಶವಾಹಕರಾಗಿದ್ದಾರೆ. ಎಲ್ಲಾ ಪ್ರವಾದಿಗಳು ತಮ್ಮ ಒಡೆಯನ ಸಂದೇಶಗಳನ್ನು ತಲುಪಿಸುವಲ್ಲಿ ಸಾಗಿದ ಮಾರ್ಗದಲ್ಲೇ ಅವರೂ ಸಾಗಿದ್ದಾರೆ, ಆದರೆ ಅವರ ನಂತರ ಬೇರೆ ಯಾವುದೇ ಪ್ರವಾದಿಯಿಲ್ಲ.
ನಮಾಝ್ ನಿರ್ವಹಿಸಲು ಬನ್ನಿ, ನಮಾಝ್ ನಿರ್ವಹಿಸಲು ಬನ್ನಿ
"ನಮಾಝ್ ನಿರ್ವಹಿಸಲು ಬನ್ನಿ"
ವಾಕ್ಯದ ಅರ್ಥ: ಓ ವಿಶ್ವಾಸಿಗಳೇ, ನಿಮ್ಮ ಒಡೆಯನ ಆರಾಧನೆಯ ಕಡೆಗೆ ಮರಳಿರಿ, ಖಂಡಿತವಾಗಿಯೂ ಅವನು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು, ಅವನು ಪಶ್ಚಾತ್ತಾಪವನ್ನು ಸ್ವೀಕರಿಸುವನು ಮತ್ತು ಪಾಪಗಳನ್ನು ಕ್ಷಮಿಸುವನು.
ಇದು ನಮಾಝ್ನಲ್ಲಿ ತಮ್ಮ ಒಡೆಯನ ಸಮ್ಮುಖದಲ್ಲಿ ನಿಲ್ಲುವ ಸಮಯವು ಒದಗಿಬಂದಿದೆ ಎಂದು ವಿಶ್ವಾಸಿಗಳಿಗೆ ನೀಡಲಾಗುವ ಒಂದು ಕರೆಯಾಗಿದೆ ಮತ್ತು ನೆನಪಿಸುವಿಕೆಯಾಗಿದೆ.
ಹಯ್ಯ ಅಲಲ್ ಫಲಾಹ್, ಹಯ್ಯ ಅಲಲ್ ಫಲಾಹ್
ಹಯ್ಯ ಅಲಲ್ ಫಲಾಹ್
ಯಶಸ್ಸು ಎಂದರೆ ಇಹಲೋಕ ಮತ್ತು ಪರಲೋಕದಲ್ಲಿ ಸಂಪ್ರೀತಿ, ವಿಜಯ, ಸುರಕ್ಷತೆ ಮತ್ತು ಮುಕ್ತಿಯಾಗಿದೆ.
ಅದರ ಅರ್ಥಗಳಲ್ಲಿ ಅಲ್ಲಾಹನ ಸಂತೃಪ್ತಿಯನ್ನು ಪಡೆಯುವುದು, ಸ್ವರ್ಗ ಪ್ರಾಪ್ತಿ ಮತ್ತು ನರಕ ಮುಕ್ತಿಯೂ ಸೇರಿದೆ; ಏಕೆಂದರೆ ಯಾರು ವಿಶ್ವಾಸವಿಟ್ಟನೋ ಮತ್ತು ನಮಾಝ್ ನಿರ್ವಹಿಸಿದನೋ ಅವನು ಖಂಡಿತವಾಗಿಯೂ ಯಶಸ್ವಿಯಾದನು, ಮತ್ತು ಯಾರು ಯಶಸ್ವಿಯಾದನೋ ಅವನು ಖಂಡಿತವಾಗಿಯೂ ಪಾರಾಗುತ್ತಾನೆ ಹಾಗೂ ಸ್ವರ್ಗದಲ್ಲಿ ಶಾಶ್ವತವಾಗಿ ನೆಲೆಸುವ ವಿಜಯವನ್ನು ಪಡೆಯುತ್ತಾನೆ.
ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್, ಅಲ್ಲಾಹನ ಹೊರತು ಬೇರೆ ಆರಾಧ್ಯನಿಲ್ಲ
ತಕ್ಬೀರ್ ಮತ್ತು ತೌಹೀದ್ನೊಂದಿಗೆ ಮುಕ್ತಾಯ.
ಅದಾನ್ "ಅಲ್ಲಾಹು ಅಕ್ಬರ್" ಎಂಬ ವಾಕ್ಯವನ್ನು ಪುನರಾವರ್ತಿಸುವ ಮೂಲಕ ಮತ್ತು "ಲಾ ಇಲಾಹ ಇಲ್ಲಲ್ಲಾಹ್" ಎಂಬುದನ್ನು ದೃಢಪಡಿಸುವ ಮೂಲಕ ಮುಕ್ತಾಯಗೊಳ್ಳುತ್ತದೆ. ಈ ಎರಡು ವಾಕ್ಯಗಳು ಹಿಂದಿನ ಅರ್ಥಗಳ ದೃಢೀಕರಣವಾಗಿವೆ ಮತ್ತು ಇವುಗಳ ಮೇಲೆಯೇ ಮಾನವ ಅಸ್ತಿತ್ವವು ಅವಲಂಬಿಸಿದೆ. ಎಷ್ಟೇ ಕಾಲ ಕಳೆದರೂ, ಎಷ್ಟೇ ಘಟನೆಗಳು ಸಂಭವಿಸಿದರೂ ಈ ಸತ್ಯವು ಬದಲಾಗುವುದಿಲ್ಲ ಮತ್ತು ಮಾರ್ಪಾಡಾಗುವುದಿಲ್ಲ. ಆ ಸತ್ಯವೇನೆಂದರೆ: ಅಲ್ಲಾಹು ಎಲ್ಲಾ ವಸ್ತುಗಳಿಗಿಂತಲೂ ಪರಮೋಚ್ಛನು ಮತ್ತು ಪರಮ ಶ್ರೇಷ್ಠನು, ಅಲ್ಲಾಹು ಮಾತ್ರ ಸತ್ಯದೇವರಾಗಿದ್ದಾನೆ, ಅವನೊಬ್ಬನೇ ಆರಾಧನೆಗೆ ಅರ್ಹನಾಗಿದ್ದಾನೆ ಮತ್ತು ಅವನಲ್ಲದ ಇತರರ ಆರಾಧನೆಯು ಸುಳ್ಳಾಗಿದೆ.
ಅಂತಿಮವಾಗಿ: ಅಝಾನ್ ಕೇವಲ ನಮಾಝಿಗಾಗಿರುವ ಒಂದು ಕರೆಯಲ್ಲ, ಬದಲಾಗಿ ಅದು ಸಾಫಲ್ಯ, ವಿಜಯ ಮತ್ತು ಯಶಸ್ಸಿನ ಕರೆಯಾಗಿದೆ. ಅದು ಹೃದಯಗಳನ್ನು ಎಚ್ಚರಿಸಲು ಮತ್ತು ಅಲ್ಲಾಹನು ಸಮೀಪದಲ್ಲಿದ್ದಾನೆ ಎಂದು ನಮಗೆ ನೆನಪಿಸಲು, ಪ್ರತಿದಿನ ಐದು ಬಾರಿ ಮಸೀದಿಗಳಲ್ಲಿ ಮೊಳಗುವ ಒಂದು ಸಂದೇಶವಾಗಿದೆ.
ವಿಶ್ವಾಸಕ್ಕಾಗಿ ನಿನ್ನ ಹೃದಯವನ್ನು ತೆರೆ, ಮತ್ತು “ಅಲ್ಲಾಹನ ಹೊರತು ಅನ್ಯ ನೈಜ ಆರಾಧ್ಯನಿಲ್ಲ ಮತ್ತು ಮುಹಮ್ಮದರು ಅಲ್ಲಾಹನ ಸಂದೇಶವಾಹಕರಾಗಿದ್ದಾರೆಂದು ನಾನು ಸಾಕ್ಷ್ಯ ನುಡಿಯುತ್ತೇನೆ” ಎಂದು ಹೇಳು. ಇದರಿಂದ ನೀನು ಅಲ್ಲಾಹನ ಕರುಣೆಗೆ ಪಾತ್ರನಾಗುವೆ, ಇಹಲೋಕದಲ್ಲಿ ಸೌಭಾಗ್ಯ ಮತ್ತು ಪರಲೋಕದಲ್ಲಿ ರಕ್ಷಣೆಯನ್ನು ಪಡೆಯುವೆ ಹಾಗೂ ಪುನರುತ್ಥಾನ ದಿನದಂದು ವಿಶ್ವಾಸಿಗಳ ಸಮೂಹದಲ್ಲಿ ಎಬ್ಬಿಸಲ್ಪಡುವೆ.